ಕೊಡಗು ಜಿಲ್ಲೆ ತಡಿಯಾಂಡ ಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿದ್ದ ಯುವತಿ ಕಣ್ಮರೆಯಾಗಿದ್ದ ಪ್ರಕರಣದಲ್ಲಿ ರಾಜ್ಯ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಆದಿವಾಸಿಗಳ ಸಹಕಾರದಿಂದ ಯುವತಿ ಶರಣ್ಯಳ ಪತ್ತೆ ಮಾಡಲಾಗಿದೆ. ಶರಣ್ಯ ಪತ್ತೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿದ್ದ ಅರಣ್ಯ ಇಲಾಖೆ, ಶರಣ್ಯ ಪತ್ತೆ ಬಳಿಕ ಬೆನ್ನು ತಟ್ಟಿಕೊಳ್ಳುವ ಕೆಲಸ ಮಾಡಿದೆ. ಅರಣ್ಯ ಇಲಾಖೆ ಕಾರ್ಯ ಮಾನವೀಯತೆ ಪ್ರಕಾರ ಉತ್ತಮ ಕೆಲಸ ಅಭಿನಂದನೆ ಸಲ್ಲಿಸುವುದು ಸೂಕ್ತ. ಆದರೆ ಕೇರಳಂ ಯುವತಿಯ ರಕ್ಷಣೆ ವಿಚಾರದಲ್ಲಿ ಅನಗತ್ಯವಾಗಿ ಕೇರಳಂ ಕಾಂಗ್ರೆಸ್ ಮುಖಂಡ ಕೆ.ಸಿ ವೇಣುಗೋಪಾಲ್ ಅವರನ್ನು ಎಳೆದು ತರವು ಮೂಲಕ ಕಾಂಗ್ರೆಸ್ ಈ ವಿಚಾರದಲ್ಲೂ ರಾಜಕೀಯ ಲಾಭ ಪಡೆಯುವ ಪ್ರಯತ್ನ ಮಾಡಿದೆ ಅನ್ನೋದು ಬೇಸರದ ಸಂಗತಿ.
ಕೇರಳದಿಂದ ಕೊಡಗು ಭಾಗದಲ್ಲಿ ಚಾರಣ ಮಾಡಲು ಬಂದಿದ್ದ 15 ಮಂದಿಯ ತಂಡದಲ್ಲಿದ್ದ ಶರಣ್ಯ, ಕಾಡಿನ ನಡುವೆ ನಾಪತ್ತೆ ಆಗಿದ್ದರು. ಚಾರಣಕ್ಕಾಗಿ ಕೇರಳದಿಂದ ಒಬ್ಬಂಟಿಯಾಗಿ ಆಗಮಿಸಿದ್ದ ಯುವತಿ ಶರಣ್ಯ, ಕಕ್ಕಬ್ಬೆ ಗ್ರಾಮದಲ್ಲಿ ಖಾಸಗಿ ಹೋಂ ಸ್ಟೇನಲ್ಲಿ ತಂಗಿದ್ದರು. ಆ ನಂತರ ಏಪ್ರಿಲ್ 2ರ ಮಧ್ಯಾಹ್ನ ಟ್ರೆಕ್ಕಿಂಗ್ಗೆ ತೆರಳಿದ್ದ ವೇಳೆ ಗುಂಪಿನಿಂದ ಕಣ್ಮರೆಯಾಗಿದ್ದರು. ಯುವತಿ ನಾಪತ್ತೆ ವಿಚಾರ ತಿಳಿದ ಕೂಡಲೇ ಒಟ್ಟು 9 ತಂಡ ರಚನೆ ಮಾಡಿ, ಪತ್ತೆ ಕಾರ್ಯಾಚರಣೆ ನಡೆಸಲಾಗಿತ್ತು. ಪೊಲೀಸರು, ನಕ್ಸಲ್ ನಿಗ್ರಹದಳ, ಶ್ವಾನದಳ ಮತ್ತು ಅರಣ್ಯ ಸಿಬ್ಬಂದಿ ನಿಯೋಜಿಸಲಾಗಿತ್ತು. ಚಾರಣಕ್ಕೆ ಹೋಗಿ ಕಣ್ಮರೆಯಾಗಿದ್ದ ಶರಣ್ಯ ಪತ್ತೆಗೆ 40 ಸಿಬ್ಬಂದಿಯ ಹೆಚ್ಚುವರಿ ತಂಡ, ಡ್ರೋನ್ ಮೂಲಕ ಶೋಧ ಕಾರ್ಯಾಚರಣೆ ಮಾಡಲಾಗಿತ್ತು. ಅಂತಿಮವಾಗಿ ಯಶಸ್ಸು ಸಿಕ್ಕಿದ್ದು, ಯುವತಿಯನ್ನು ರಕ್ಷಣೆ ಮಾಡಲಾಗಿದೆ.

ಯುವತಿ ಶರಣ್ಯ ಪತ್ತೆ ಕಾರ್ಯಾಚರಣೆ ಬಗ್ಗೆ ಸ್ವತಃ ಅರಣ್ಯ ಸಚಿವ ಈಶ್ವರ ಖಂಡ್ರೆ ತುರ್ತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದಾರೆ. ಕೊಡಗಿನಲ್ಲಿ ನಾಪತ್ತೆಯಾಗಿದ್ದ ಕೇರಳದ ಯವತಿ ಪತ್ತೆ ಮಾಡಲಾಗಿದೆ. 15 ಜನರ ತಂಡದೊಂದಿಗೆ ಶರಣ್ಯ ಚಾರಕ್ಕೆ ಹೋಗಿದ್ರು. ಒಟ್ಟು ನಾಲ್ಕು ಕಿಲೋ ಮೀಟರ್ ಚಾರಣಕ್ಕೆ ಯೋಜನೆ ಮಾಡಿಕೊಂಡಿದ್ರು. ಆಗ ನಾಪತ್ತೆ ಆಗಿದ್ದರು. ಈಗ ಪತ್ತೆ ಮಾಡಿದ್ದೇವೆ. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಕೂಡ ನನಗೆ ಸೂಚನೆ ಕೊಟ್ಟಿದ್ರು. AICC ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ನನಗೆ ಕರೆ ಮಾಡಿ, ಯುವತಿಯನ್ನು ಪತ್ತೆ ಮಾಡಲೇಬೇಕು ಎಂದು ಒತ್ತಡ ಹೇರಿದ್ರು. ಸ್ಥಳೀಯ ಬುಡಕಟ್ಟು ಜನಾಂಗದ ಜೊತೆಗೂಡಿ ಕಾರ್ಯಾಚರಣೆ ಮಾಡಿದ್ದೇವೆ. ನಮ್ಮ ಉಸ್ತುವಾರಿಯಲ್ಲೇ ಶರಣ್ಯ ಅವರನ್ನು ಮನೆಗೆ ತಲುಪಿಸುತ್ತೇವೆ. ಅವರಿಗೆ ಯಾವುದೇ ತೊಂದರೆ ಇಲ್ಲ ಆರೋಗ್ಯವಾಗಿದ್ದಾರೆ. 15 ಜನ ತಂಡದ ಚಾರಣದಲ್ಲಿ ವಾಪಸ್ 14 ಜನ ಬಂದಿದ್ದರು. ಬಳಿಕ ಶರಣ್ಯ ಅವರೇ ಕಾಲ್ ಮಾಡಿ ದಾರಿ ತಪ್ಪಿದ ಬಗ್ಗೆ ಮಾಹಿತಿ ಕೊಟ್ಟಿದ್ರು. ಆ ಬಳಿಕ ಅವರ ಮೊಬೈಲ್ ಫೋನ್ ಚಾರ್ಜ್ ಖಾಲಿಯಾಗಿ ಸ್ವಿಚ್ ಆಫ್ ಆಗಿತ್ತು ಎಂದಿದ್ದಾರೆ.

ಯುವತಿಯ ರಕ್ಷಣೆ ಮಾಡಲಾಗಿದೆ ಸತ್ಯ. ಕರ್ನಾಟಕ ಅರಣ್ಯ ಸಿಬ್ಬಂದಿ ಕೆಲಸ ಮಾಡಿದ್ದಾರೆ ಅನ್ನೋದು ಸತ್ಯ. ಆದರೆ ಕೇರಳದಲ್ಲಿ ಚುನಾವಣಾ ಲಾಭ ಪಡೆಯುವ ಉದ್ದೇಶದಿಂದ ಕೆ.ಸಿ ವೇಣುಗೋಪಾಲ್ ಕರೆ ಮಾಡಿದ್ರು. ಒತ್ತಡ ಹೇರಿದ್ರು, ಪತ್ತೆ ಮಾಡಲೇಬೇಕು ಅಂತ ತಿಳಿಸಿದ್ರು ಅನ್ನೋದು ಸರ್ಕಾರದ ಮಟ್ಟದಲ್ಲಿ ನಾಚಿಕೆಗೇಡು ಎನಿಸುತ್ತದೆ. ಕಳೆದ ಬಾರಿಯೂ ಆನೆಯಿಂದ ಕೇರಳದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ರು ಅನ್ನೋ ವಿಚಾರದಲ್ಲಿ ಕೇರಳದ ವ್ಯಕ್ತಿಗೆ ಕರ್ನಾಟಕ ಸರ್ಕಾರ ಪರಿಹಾರ ಕೊಟ್ಟಿತ್ತು. ಅದಕ್ಕೆ ಕಾರಣ ಆ ಆನೆ ಕರ್ನಾಟಕದ್ದು ಅನ್ನೋದು. ವಿಷಯ ಅದಲ್ಲ, ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ವಯನಾಡು ಲೋಕಸಭಾ ಕ್ಷೇತ್ರದ ವ್ಯಕ್ತಿ ಅನ್ನೋ ಕಾರಣಕ್ಕೆ ಕರ್ನಾಟಕ ಸರ್ಕಾರದಿಂದ ಹಣ ನೀಡಲಾಗಿತ್ತು. ಮಾನವೀತೆ ಆಧಾರದಲ್ಲಿ ಏನೇ ಮಾಡಿದರೂ ಸರಿಯಷ್ಟೆ. ಆದರೆ ರಾಜಕೀಯಕ್ಕೆ ಬಳಕೆ ಮಾಡುವುದು ನೀಚತನ ಎಂದರೆ ತಪ್ಪಾಗಲಾರದು.



