ಬೆಂಗಳೂರಿನಲ್ಲಿ ನಿನ್ನೆ ಸಂಜೆ ಸುರಿದ ಭಾರೀ ಮಳೆ ಬೆಂಗಳೂರು ನಗರದಾದ್ಯಂತ ಹತ್ತಾರು ಸಮಸ್ಯೆಗಳನ್ನು ಸೃಷ್ಟಿಸಿದ್ದು, ಬರೋಬ್ಬರಿ 10 ಜನರನ್ನು ಬಲಿ ಪಡೆದಿದೆ. ಬೌರಿಂಗ್ ಆಸ್ಪತ್ರೆ ಕಾಂಪೌಂಟ್ ಕುಸಿದು 7 ಜನರು ಸಾವನ್ನಪ್ಪಿದ್ದು, ಶಿವಾಜಿನಗರದಲ್ಲಿ ವಿದ್ಯುತ್ ಶಾಕ್ಗೆ ಯುವಕ ಸಾವನ್ನಪ್ಪಿದ್ರೆ, ಜೆ.ಪಿನಗರದಲ್ಲೂ ಮತ್ತೋರ್ವ ಯುವಕ ವಿದ್ಯುತ್ ಕಂಬ ಟಚ್ ಆಗಿ ದುರ್ಮರಣ ಹೊಂದಿದ್ದಾನೆ. ಇನ್ನೂ ಕಸ್ತೂರ ಬಾ ನಗರದಲ್ಲಿ ತಗಡು ಶೀಟ್ ಬಿದ್ದು ಯುವಕ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದ್ದು, ಕಾರು, ಬೈಕ್ಗಳು ನೀರಿನಲ್ಲಿ ಮುಳುಗಿದ್ದವು. ಬೌರಿಂಗ್ ಆಸ್ಪತ್ರೆ ಬಳಿ ಕಾಂಪೌಡ್ ಕುಸಿತವಾಗಿ 7 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಆ ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಳೆಗೆ ಗೋಡೆ ಕುಸಿದು 7 ಜನರ ಸಾವಾಗಿದೆ. ಗೋಡೆ ಪಕ್ಕದಲ್ಲಿ ವ್ಯಾಪಾರ ಮಾಡುತ್ತಿದ್ದವರು, ಕೆಲವು ದಾರಿಹೋಕರು, ಪ್ರವಾಸಿಗರ ಸಾವಾಗಿದೆ.. ಮೃತರ ಕುಟುಂಬಕ್ಕೆ ಸರ್ಕಾರದಿಂದ ತಲಾ 5 ಲಕ್ಷ ಪರಿಹಾರ ನೀಡಲಾಗುತ್ತೆ. ಗಾಯಾಳುಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ.. ಘಟನೆ ಬಗ್ಗೆ ತನಿಖೆ ಮಾಡಲು ಸೂಚನೆ ನೀಡಿದ್ದು, ನಿರ್ಲಕ್ಷ್ಯ ಮಾಡಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಬಿದ್ದ ಸ್ಥಳದಿಂದ 100 ಮೀಟರ್ ಅಂತರದಲ್ಲೇ ಮತ್ತೊಂದು ಸಾವು ಸಂಭವಿಸಿದೆ. ಬಟ್ಟೆ ಖರೀದಿ ಮಾಡಲು ಶಿವಾಜಿನಗರಕ್ಕೆ ತಾಯಿ ಜೊತೆಗೆ ಆಗಮಿಸಿದ್ದ ಸೂಫಿಯನ್, ಗಾಡಿ ಪಾರ್ಕಿಂಗ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಸಾವು ಸಂಭವಿಸಿದೆ. ಗೋಡೆ ಬಿದ್ದ ಪರಿಣಾಮ ವಿದ್ಯುತ್ ಕಂಬಕ್ಕೆ ಹಾನಿಯಾಗಿ ವಿದ್ಯುತ್ ಶಾಕ್ ಹೊಡೆದಿದೆ. ಇವರ ಕುಟುಂಬ ಕೆ ಜಿ ಹಳ್ಳಿಯಲ್ಲಿ ವಾಸವಿತ್ತು. ಮಗ ಸತ್ತಿರುವ ಸುದ್ದಿ ಕೇಳಿ ತಾಯಿ ಕೂಡ ಆಘಾತಕ್ಕೆ ಒಳಗಾಗಿ ಬೌರಿಂಗ್ ಆಸ್ಪತ್ರೆ ಸೇರಿದ್ದಾರೆ. ನಮ್ಮನ್ನು ಯಾರೂ ಕೂಡ ಏನಾಗಿದೆ ಅಂತ ಕೇಳುತ್ತಿಲ್ಲ ಎಂದು ಸೂಫಿಯನ್ ಸಂಬಂಧಿ ಅಮನ್ ಹೇಳಿದ್ದಾರೆ.

ರಣ ಭೀಕರ ಮಳೆಗೆ ಮತ್ತೊಂದು ಬೆಂಗಳೂರಲ್ಲಿ ಮತ್ತೊಬ್ಬರು ಸಾವನ್ನಪ್ಪಿದ್ದು, ಗೋಡಾನ್ ಶೀಟ್ ಗಳು ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದಾರೆ. ಮನೆಯಲ್ಲಿದ್ದ ವ್ಯಕ್ತಿ ಮೇಲೆ ಸಿಮೆಂಟ್ ಶೀಟ್ ಬಿದ್ದ ಪರಿಣಾಮ ಮಂಜು ಎಂಬಾತ ಸಾವನ್ನಪ್ಪಿದ್ದಾರೆ. ಮೈಸೂರು ರಸ್ತೆ ಕಸ್ತೂರ ಬಾ ನಗರ ಅಶ್ವತ್ಥ್ ಕಟ್ಟೆ ರಸ್ತೆಯಲ್ಲಿ ಘಟನೆ ನಡೆದಿದ್ದು, ಕುಟುಂಬದ ಜೊತೆ ಮನೆ ಒಳಗೆ ಇದ್ದಾಗಲೇ ಈ ದುರ್ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ರಣ ಮಳೆಗೆ ಜೆ ಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಬಲಿಯಾಗಿದೆ. 15ನೇ ಕ್ರಾಸ್ ಬಳಿಯ ಮಿನಿ ಫಾರೆಸ್ಟ್ ಬಳಿ ರಘು ಎಂಬಾತ ಸಾವನ್ನಪ್ಪಿದ್ದಾರೆ. ವಿದ್ಯುತ್ ಕಂಬ ಹಿಡಿದವ ಅಲ್ಲೇ ಸಾವು ಸಂಭವಿಸಿದೆ. ಸ್ಥಳಕ್ಕೆ ಜೆಪಿ ನಗರ ಪೊಲೀಸ್ರು ಭೇಟಿ ಪರಿಶೀಲನೆ ನಡೆಸಿದ್ದಾರೆ. ರಘು ಜೆಪಿ ನಗರ ಜಿಡಿ ಮರದ ನಿವಾಸಿ ಆಗಿದ್ದು, ಚಮ್ಮಾರಿಕೆ ಕೆಲಸ ಮಾಡುತ್ತಿದ್ದರು. ಹೊರಗಡೆ ಹೋಗಿ ಬರುವುದಾಗಿ ಹೇಳಿದ್ದ ರಘು, ವಿದ್ಯುತ್ ಕಂಬ ತಗುಲಿ ಸಾವನ್ನಪ್ಪಿದ್ದಾರೆ.

ಕನಕಪುರದಲ್ಲಿ ಸಭೆ ನಡೆಸುತ್ತಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ದುರಂತ ನಡೆಯುತ್ತಿದ್ದ ಹಾಗೆ ಬೌರಿಂಗ್ ಆಸ್ಪತ್ರೆ ಬಳಿಗೆ ಡಿಸಿಎಂ ಡಿಕೆಶಿ ಧಾವಿಸಿ ಬಂದು ಪರಿಸ್ಥಿತಿ ಪರಿಶೀಲಿಸಿದ್ರು. ನಾನು ಕನಕಪುರಲ್ಲಿದ್ದೆ, GBA ಕಮಿಷನರ್ ಮಾಹಿತಿ ಕೊಟ್ಟರು. ಬಹಳ ದೊಡ್ಡ ಅನಾಹುತವಾಗಿದೆ. ಕನಕಪುರ ಮಾರ್ಗವಾಗಿ ಬರುವಾಗ ಬಹಳ ಮರಗಳ ಕೊಂಬೆಗಳು ಬಿದ್ದಿದ್ದವು. ಬೆಂಗಳೂರಲ್ಲಿ ನಾನು ಇಂತಹ ದೊಡ್ಡ ಮಳೆಯನ್ನು ನೋಡಿಯೇ ಇರಲಿಲ್ಲ. ಮಳೆಯಿಂದ ಮರಗಳು ಬಿದ್ದಿವೆ. ಇಂದಿನಿಂದ ಡೀಪ್ ಬ್ರಾಂಚಸ್ ಕತ್ತರಿಸಲು ಸೂಚಿಸ್ತೇನೆ ಎಂದಿದ್ದಾರೆ.
ಬೌರಿಂಗ್ ಆಸ್ಪತ್ರೆಗೆ ವಿಪಕ್ಷ ನಾಯಕ ಆರ್ ಅಶೋಕ್ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಏಳು ಜನರ ಸಾವಾಗಿದೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ.. ಮೂರು ಜನ ಕೇರಳದವರು, ನಾಲ್ವರು ಇಲ್ಲಿಯವರು.. ಕೇರಳಕ್ಕೆ ಬಾಡಿ ರವಾನೆ ಬಗ್ಗೆ ಮಾತುಕತೆ ನಡೀತಿದೆ.. ಅಲ್ಲಿನ ಎಸ್ಪಿ ಜೊತೆ ಮಾತಾಡಿದ್ದಾರೆ.. ಮಳೆಗೆ ಈ ರೀತಿ ಆಗಾಗ ಆಗ್ತಾನೆ ಇರುತ್ತೆ.. ಅಧಿಕಾರಿಗಳ ಅಜಾಗೃತೆ ಹಿನ್ನೆಲೆ ಈ ರೀತಿ ಆಗುತ್ತದೆ. ಕಳೆದ ಬಾರಿ ಮಹದೇವಪುರ, ಕೆ ಆರ್ ಪುರಂ ಬಳಿ ಆಗಿತ್ತು. ನಂತರ ಆರ್ಸಿಬಿ ವೇಳೆ ಹನ್ನೊಂದು ಜನ ಸಾವನ್ನಪ್ಪಿದ್ರು. ಈಗ ಇಲ್ಲಿ ಏಳು ಜನ ಸಾವನ್ನಪ್ಪಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ, ಸರ್ಕಾರದ ನಿರ್ಲಕ್ಷ್ಯ ಇದು. ಬಿನ್ನಿಮಿಲ್ ಬಳಿ ಕೂಡ ಕಾಂಪೌಂಡ್ ಬಿದ್ದಿದೆ.. ಪದೇ ಪದೇ ಈ ರೀತಿ ಘಟನೆಗಳು ನಡೀತಿವೆ ಎಂದು ಟೀಕಿಸಿದ್ದಾರೆ.


