ಕರ್ನಾಟಕದಲ್ಲಿ ಬರ ತಾಂಡವಾಡ್ತಿದ್ದು, ಈ ನಡುವೆ ತಮಿಳುನಾಡಿಗೆ 4 ಟಿಎಂಸಿ ಕಾವೇರಿ ನೀರು ಬಿಡಬೇಕು ಅಂತ CWMA ನೀಡಿರುವ ಆದೇಶದ ವಿರುದ್ಧ ಕನ್ನಡ ಪರ ಸಂಘಟನೆಗಳು ಸಿಡಿದೆದ್ದಿವೆ. CWMA ನಿರ್ಧಾರ ಖಂಡಿಸಿ ಆಗಸ್ಟ್ 13 ರಂದು ಕರ್ನಾಟಕ ಬಂದ್ಗೆ ಕರೆ ಕೊಟ್ಟಿವೆ. ಬೆಂಗಳೂರಿನಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ವಿವಿಧ ಕನ್ನಡ ಸಂಘಟನೆಗಳ ನಾಯಕರ ಸಭೆಯಲ್ಲಿ, ಬಂದ್ ನಡೆಸುವ ಬಗ್ಗೆ ಒಮ್ಮತದ ನಿರ್ಧಾರ ಘೋಷಣೆ ಮಾಡಲಾಗಿದೆ.

ಆಗಸ್ಟ್ 13ರಂದು ಕರ್ನಾಟಕ ಬಂದ್ಗೆ ಖಾಸಗಿ ಶಾಲೆಗಳ ಒಕ್ಕೂಟ ಕೂಡ ಸಂಪೂರ್ಣ ಬೆಂಬಲ ಸೂಚಿಸಿದೆ. ಕ್ಯಾಮ್ಸ್ ಹಾಗೂ ರೂಪ್ಸಾ ಖಾಸಗಿ ಶಾಲೆಗಳ ಒಕ್ಕೂಟದಿಂದ ಬೆಂಬಲ ಘೋಷಣೆ ಮಾಡಲಾಗಿದೆ. ಶಾಲೆಗಳನ್ನ ಬಂದ್ ಮಾಡಿ ಬಂದ್ಗೆ ಸಹಕರಿಸ್ತೇವೆ ಅಂತಾ ಕ್ಯಾಮ್ಸ್ ಒಕ್ಕೂಟದ ಶಶಿಕುಮಾರ್ ಹೇಳಿದ್ದಾರೆ.

ಕರ್ನಾಟಕ ಬಂದ್ಗೆ ಆದರ್ಶ್ ಆಟೋ ಯೂನಿಯನ್ ಕೂಡ ಬೆಂಬಲ ವ್ಯಕ್ತಪಡಿಸಿದೆ. ನಾವು ಕರ್ನಾಟಕ ಬಂದ್ಗೆ ಸಂಪೂರ್ಣ ಬೆಂಬಲ ಕೊಡ್ತೇವೆ. ಇದು ನಮ್ಮ ಆಟೋ ಚಾಲಕರ ಬದುಕಿನ ಪ್ರಶ್ನೆ ಕೂಡ ಆಗಿದೆ. ನಮ್ಮ ಸಂಘಟನೆಯಲ್ಲಿ 16 ಸಾವಿರ ಆಟೋಗಳಿದ್ದು, ಆಗಸ್ಟ್ 13ಕ್ಕೆ ಕರ್ನಾಟಕ ಸಂಪೂರ್ಣ ಸ್ವಬ್ಧ ಆಗುತ್ತದೆ ಅಂತ ಆದರ್ಶ್ ಆಟೋ ಯೂನಿಯನ್ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.

ತಮಿಳುನಾಡಿಗೆ 4 ಟಿಎಂಸಿ ಕಾವೇರಿ ನೀರು ಬಿಡಬೇಕು ಅನ್ನೋ CWMA ಆದೇಶ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟಕ್ಕಿಳಿದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಆ ಬಳಿಕ ಕೆಆರ್ಎಸ್ಗೆ ಮುತ್ತಿಗೆ ಯತ್ನ ಕೂಡ ನಡೆಸಿದ್ರು. ಪೊಲೀಸರ ಸರ್ಪಗಾವಲಿನ ನಡುವೆ KRS ಜಲಾಶಯ ಪ್ರವೇಶಿಸಲು ಯತ್ನಿಸಿದ್ರು. ಈ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತಳ್ಳಾಟ ನೂಕಾಟ ನಡೀತು. ಬಳಿಕ ಕಾರ್ಯಕರ್ತರನ್ನ ಪೂಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದಾರೆ.
ಪ್ರತಿಭಟನೆ ವೇಳೆ ಮಾತನಾಡಿದ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ, ಕಾಂಗ್ರೆಸ್ ಮುಖ್ಯಮಂತ್ರಿ ಖುರ್ಚಿ ಕಾಳಗದಲ್ಲಿ ರೈತರ ಹಿತ ಮರೆತಿದ್ದಾರೆ. ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂಗೆ ಎಂದು ವ್ಯಂಗ್ಯವಾಡಿದ್ದು, ಈಗ ಸರ್ವಪಕ್ಷ ಸಭೆ ಕರೆದಿದ್ದಾರೆ ಅಂತ ಆಕ್ರೋಶ ಹೊರಹಾಕಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರಕ್ಕೆ ಕರ್ನಾಟಕ ಬಂದ್ ಮಾಡಲು ಕರೆ ನೀಡಿರುವ ವಿಚಾರಕ್ಕೆ ಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ಆಗಸ್ಟ್ 13ರಂದು ಕರ್ನಾಟಕ ಬಂದ್ ಬೇಡ ಎಂದು ಮನವಿ ಮಾಡಿದ್ದಾರೆ. ಬಂದ್ನಿಂದ ಯಾವುದೇ ಪ್ರಯೋಜನೆ ಆಗಲ್ಲ. ಕೆಲವ್ರು ಪ್ರತಿಭಟನೆ ಮಾಡಬಹುದು, ಅದಕ್ಕೆ ತಕರಾರಿಲ್ಲ. ವಾಸ್ತವ ಸ್ಥಿತಿ ಅರ್ಥಮಾಡಿಕೊಂಡು ಪ್ರತಿಭಟನೆ ಕೈಬಿಡಬೇಕು ಎಂದು ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.


