ಪಂಚರಾಜ್ಯ ಚುನಾವಣಾ ಫಲಿತಾಂಶಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಮೇ 4ರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ಸಾಕಷ್ಟು ಸಮೀಕ್ಷೆಗಳು ತಮಗೆ ತೋಚಿದಂತೆ ಫಲಿತಾಂಶವನ್ನು ನಿರೀಕ್ಷೆ ಮಾಡಿವೆ. ಆದರೆ ಎಲ್ಲಾ ಪಕ್ಷಗಳು ತಾವೇ ಗೆಲ್ಲುತ್ತೇವೆ ಎಂದು ಹೇಳಿಕೆಗಳನ್ನು ನೀಡುತ್ತಿವೆ. ಈಗಾಗಲೇ ಜನರ ಮತ ಇವಿಎಂ ಮೆಷಿನ್ನಲ್ಲಿ ಭ ದ್ರವಾಗಿದೆ. ಸ್ಟ್ರಾಂಗ್ ರೂಮ್ನಲ್ಲಿ ಎವಿಎಂ ಮಷಿನ್ಗಳನ್ನು ಇಟ್ಟು ಟೈಟ್ ಸೆಕ್ಯೂರಿಟಿ ಕೊಟ್ಟು ಭದ್ರತೆ ಮಾಡಲಾಗಿದೆ. ಆದರೆ ಮೊನ್ನೆಯಷ್ಟೇ ಪಶ್ಚಿಮ ಬಂಗಾಳದಲ್ಲಿ 2ನೇ ಹಂತದ ಚುನಾವಣೆ ಮುಕ್ತಾಯ ಆಗಿತ್ತು. ನಿನ್ನೆ ರಾತ್ರಿ ಸ್ಟ್ರಾಂಗ್ ಓಪನ್ ಮಾಡಿ ಮತಗಳ ತಿದ್ದುಪಡಿ ಮಾಡಲಾಗ್ತಿದೆ ಎಂದು ಟಿಎಂಸಿ ಆರೋಪ ಮಾಡಿದೆ.

ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಲತ್ತಾದಲ್ಲಿ ಇವಿಎಂಗಳನ್ನ ಬೇರೆ ಕಡೆಗೆ ಶಿಫ್ಟ್ ಮಾಡಲಾಗ್ತಿದೆ ಅನ್ನೋ ಆರೋಪ ಕೇಳಿ ಬಂದಿದ್ದು, ಟಿಎಂಸಿ ಕಾರ್ಯಕರ್ತರು ಪ್ರತಿಭಟನೆ ಮಾಡಿರುವ ಪ್ರಸಂಗ ನಡೆದಿದೆ. ಇವಿಎಂಗಳನ್ನ ಬೇರೆ ಕಡೆಗೆ ಸಾಗಿಸ್ತಿದ್ದಾರೆ ಅಂತ TMC ಕಾರ್ಯಕರ್ತರು, ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಸ್ಟ್ರಾಂಗ್ ರೂಂ ಬಳಿ ಹೈಡ್ರಾಮ ಸೃಷ್ಟಿಸಿದ್ದಾರೆ. ಈ ಬಗ್ಗೆ TMC ಸಿಸಿಟಿವಿ ವಿಡಿಯೋ ಕೂಡ ರಿಲೀಸ್ ಮಾಡಿದ್ದು, ಸ್ಥಳಕ್ಕೆ ಬಿಜೆಪಿ ಕಾರ್ಯಕರ್ತರೂ ಭೇಟಿ ನೀಡಿದ್ದಾರೆ. ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಆದರೆ ಟಿಎಂಸಿ ಪ್ರಕಾರ ಬ್ಯಾಲಟ್ ಬಾಕ್ಸ್ಗಳನ್ನು ಟ್ಯಾಂಪರಿಂಗ್ ಮಾಡಲಾಗ್ತಿದೆ ಎನ್ನಲಾಗಿದೆ. ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿರುವ ಭದ್ರತಾ ಕೊಠಡಿ ಒಳಗೆ ಹೋಗಿರುವ ದೃಶ್ಯಗಳನ್ನು ಟಿಎಂಸಿ ಬಿಡುಗಡೆ ಮಾಡಿದೆ. ಮುಖ್ಯವಾದ ಸ್ಟ್ರಾಂಗ್ ರೂಮ್ಗೆ ಏನೂ ಆಗಿಲ್ಲ. ಲಾಕ್ ಆಗಿದೆ, ಸೇಫ್ ಆಗಿದೆ. ಪೋಸ್ಟಲ್ ಮತಗಳನ್ನು ಪ್ರತ್ಯೇಕಿಸುವ ಕೆಲಸ ಮಾಡುತ್ತಿದ್ದೆವು. ಈ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳಿಗೂ ಮಾಹಿತಿ ನೀಡಲಾಗಿತ್ತು ಎಂದು ಪಶ್ಚಿಮ ಬಂಗಾಳ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ.

‘ಯಾವುದೇ ಅಕ್ರಮ ಚಟುವಟಿಕೆಗಳು ನಡೆದಿಲ್ಲ’. EVM ಸ್ಟ್ರಾಂಗ್ ರೂಂ ಒಳಗೆ ಯಾವುದೇ ವ್ಯತ್ಯಾಸಗಳಾಗಿಲ್ಲ. ಅಕ್ರಮ ನಡೆದಿದೆ ಎನ್ನುವ ಆರೋಪಗಳ ಬಗ್ಗೆ ಪರಿಶೀಲಿಸಿದ್ದೇವೆ ಎಂದು ಪಶ್ಚಿಮ ಬಂಗಾಳ ಚುನಾವಣಾ ಅಧಿಕಾರಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೂ ಹೈಡ್ರಾಮಾವೇ ನಡೆದಿದ್ದು, TMC- BJP ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಕುನಾಲ್ ಘೋಷ್, ಶಶಿ ಪಂಜಾ ಧರಣಿ ಮಾಡಿದ್ದಾರೆ. ಟಿಎಂಸಿ ಅಭ್ಯರ್ಥಿಗಳಿಂದ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದೆ. ಕೋಲ್ಕತ್ತಾದ ಖುದಿರಾಮ್ ಕೇಂದ್ರದ ಎದುರು ಧರಣಿ ಮಾಡಲಾಗಿದೆ.
ಪಶ್ಚಿಮ ಬಂಗಾಳ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ರಾತ್ರಿಯೇ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದು, ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಆದರೂ ಚುನಾವಣೆ ಮುಗಿದ ಮೇಲೆ ಚುನಾವಣಾ ಎಣಿಕೆ ದಿನ ಮತಗಳನ್ನು ಇರಿಸುವ ಸ್ಟ್ರಾಂಗ್ ರೂಂ ಓಪನ್ ಮಾಡುತ್ತಾರೆ. ಆದರೆ ಕೋಲ್ಕತ್ತಾದಲ್ಲಿ ಚುನಾವಣೆ ಮುಗಿದ ಮರು ದಿನ ಸ್ಟ್ರಾಂಗ್ ರೂಂ ಓಪನ್ ಮಾಡುವುದು ತಪ್ಪಲ್ಲವೇ..? ಅಂಚೆ ಮತಗಳನ್ನು ಪ್ರತ್ಯೇಕಿಸುವ ಕೆಲಸ ಮಾಡುತ್ತಿದ್ದೆವು ಎನ್ನುವುದು ಸರಿಯೇ ಇರಬಹುದು. ಆದರೂ ರಾತ್ರಿ ವೇಳೆ ಓಪನ್ ಮಾಡಿದ್ದು ತಪ್ಪಲ್ಲವೇ..? ಬಿಜೆಪಿ ಗೆದ್ದರೂ ಅನುಮಾನ ಉಳಿಯುವುದಿಲ್ಲವೇ..?


