ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ಆಲದ ಮರದ ರೆಂಬೆ ಬಿದ್ದು, 24 ವರ್ಷದ ಯುವತಿ ಕೀರ್ತನಾ ಸಾವನ್ನಪ್ಪಿದ್ದಾರೆ. ಫೈನಲ್ ಇಯರ್ ಇಂಜಿನಿಯರಿಂಗ್ ಓದುತ್ತಿದ್ದ ಯುವತಿ ಕೀರ್ತನಾ, ಸ್ಯಾಂಡಲ್ವುಡ್ ಪ್ರೀಮಿಯರ್ ಲೀಗ್ ಪಂದ್ಯ ವೀಕ್ಷಣೆ ಮಾಡಿಕೊಂಡು ಮನೆಗೆ ವಾಪಸ್ ಆಗುವಾಗ ಜಿಟಿಜಿಟಿ ಮಳೆ ಬರ್ತಿತ್ತು. ಐವರು ಸ್ನೇಹಿತರು ಮೂರು ಬೈಕ್ಗಳಲ್ಲಿ ಮನೆಗಳಿಗೆ ವಾಪಸ್ ಆಗ್ತಿದ್ರು. ಈ ವೇಳೆ ಆಲದ ಮರದ ಕೆಲಗೆ ಹೋಗುವಾಗ ರೆಂಬೆ ಬಿದ್ದಿದ್ದು, ಯುವತಿ ಕೀರ್ತನಾ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಮೂರು ಆಸ್ಪತ್ರೆ ಸೇರಿದ್ದು, ಪರಿಸ್ಥಿತಿ ಗಂಭೀರ ಆಗಿದೆ ಎಂದಿದ್ದಾರೆ ವೈದ್ಯರು. ಇನ್ನೊಬ್ಬರು ಅಪಾಯದಿಂದ ಪಾರಾಗಿದ್ದಾರೆ.

ಸೋಲದೇವನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿದ್ದ ಆಲದ ಮರ ಒಣಗಿದ್ದು, 6 ತಿಂಗಳ ಹಿಂದೆಯೂ ಕೂಡಾ ಇದೇ ಮರದ ಕೊಂಬೆಯೊಂದು ಮುರಿದು ಬಿದ್ದಿತ್ತು. ಹೀಗಾಗಿ ಒಣಮರವನ್ನು ತೆರವು ಮಾಡುವಂತೆ ಸಾಕಷ್ಟು ಬಾರಿ ಅರಣ್ಯ ಇಲಾಖೆಗೆ ಅರ್ಜಿ ಕೊಟ್ಟಿದ್ರಂತೆ. ಸ್ಥಳೀಯರು ಅಷ್ಟೇ ಅಲ್ಲದೆ ಗ್ರಾಮ ಪಂಚಾಯ್ತಿ ವತಿಯಿಂದಲೂ ಒಣ ಮರವನ್ನು ತೆರವು ಮಾಡಲು ಮನವಿ ಮಾಡಿದ್ದರು ಎನ್ನಲಾಗಿದೆ. ಆದರೂ ಅರಣ್ಯ ಇಲಾಖೆ ಮರವನ್ನು ತೆರವು ಮಾಡದೆ ನಿರ್ಲಕ್ಷ್ಯ ವಹಿಸಿತ್ತು. ಯಾವಾಗ ಭಾನುವಾರ ರಾತ್ರಿ ಮರದ ಕೊಂಬೆ ಬಿದ್ದು ಕೀರ್ತನಾ ಜೀವ ಹೋಯ್ತೋ ಆಗ ಎಚ್ಚೆತ್ತುಕೊಂಡು ರಾತ್ರೋರಾತ್ರಿ ಮರ ತೆರವು ಮಾಡಿಕೊಂಡು ಹೋಗಲಾಗಿದೆ.

ಬೆಂಗಳೂರಲ್ಲಿ ಮರಗಳು, ಗುಮಡಿಗಳಿಂದ ಪದೇ ಪದೇ ಸಾವು ಸಂಭವಿಸುತ್ತಲೇ ಇದೆ. ಒಂದು ವರ್ಷದಲ್ಲೇ ಮರದ ಕೊಂಬೆ ಬಿದ್ದು ಬರೋಬ್ಬರಿ ಆರು ಮಂದಿ ದುರಂತ ಅಂತ್ಯ ಕಂಡಿದ್ದಾರೆ. ಆದರೂ ಅರಣ್ಯ ಇಲಾಖೆ, ಬಿಬಿಎಂಪಿ (GBA) ಈ ಬಗ್ಗೆ ಗಮನಹರಿಸುತ್ತಿಲ್ಲ. ಮಾರ್ಚ್ 23 ರಂದು ಪುಲಿಕೇಶಿ ನಗರದಲ್ಲಿ 3 ವರ್ಷದ ಮಗು ಸಾವನ್ನಪ್ಪಿತ್ತು. ಮೇ 1ರಂದು ಕತ್ರಿಗುಪ್ಪೆಯಲ್ಲಿ ಆಟೋ ಚಾಲಕರೊಬ್ಬರು ಪ್ರಾಣ ಕಳೆದುಕೊಂಡಿದ್ರು. ಮೇ 21ರಂದು ಕೋರಮಂಗಲದಲ್ಲಿ ಮೂಡಲಗಿರಿಯಪ್ಪ ಎಂಬುವರ ಪ್ರಾಣ ಹಾನಿಯಾಗಿತ್ತು. ಜೂನ್ 19ರಂದು ಹನುಮಂತನಗರದಲ್ಲಿ ಅಕ್ಷಯ್ ಎಂಬಾತ ಮನೆ ಬಳಿ ಹೋಗುವಾಗ ಕೊಂಬೆ ಬಿದ್ದು ಸಾವನ್ನಪ್ಪಿದ್ದನು. 2024 ರ ಆಗಸ್ಟ್ 16 ರಂದು ವಿಜಯನಗರದಲ್ಲಿ ಶಿವರುದ್ರಯ್ಯ ಎಂಬುವರು ಸಾವನ್ನಪ್ಪಿದ್ರು. 2024ರ ಸೆಪ್ಟೆಂಬರ್ 5ರಂದು ಜಯನಗರದಲ್ಲಿ ಆಟೋ ಚಾಲಕನ ಜೀವ ಹೋಗಿತ್ತು.

ಕೀರ್ತನಾ ಜೊತೆಗಿದ್ದ ಸುದರ್ಶನ್, ಭಾಸ್ಕರ್ ಹಾಗೂ ರಾಧಾಗೂ ಗಂಭೀರ ಗಾಯಗಳಾಗಿದ್ದು, ರಕ್ಷಿತಾ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಉಳಿದವರ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯಲಾಗ್ತಿದೆ. ಕೀರ್ತನಾಳ ಮೃತದೇಹವನ್ನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಶವಗಾರದ ಮುಂದೆ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ಕೀರ್ತನಾ ಸಹೋದರ ಮಾಧ್ಯಮಗಳ ಎದುರು ಮಾತನಾಡಿದ್ದು, ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯವನ್ನು ಆಡುವುದಕ್ಕೆ ಸ್ಟಾರ್ಗಳು ಬಂದಿರುತ್ತಾರೆ ಅನ್ನೋ ಕಾರಣಕ್ಕೆ ಹೋಗಿದ್ದಳು, ಆದರೆ ಇದೀಗ ಈ ರೀತಿ ಆಗಿದೆ. ಇದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಉತ್ತರ ಕೊಡಬೇಕಿದ್ದ GBA ಆಯುಕ್ತ ಮಹೇಶ್ವರ್ ರಾವ್ ಸಮಸ್ಯೆ ಪರಿಹಾರ ಮಾಡಲು ಚಿಂತನೆ ಮಾಡ್ತೇವೆ ಎಂದಿದ್ದಾರೆ.


