ದಕ್ಷಿಣಕನ್ನಡ ಜಿಲ್ಲೆಗೆ ಮುಂಗಾರು ಮಳೆ ಎಂಟ್ರಿ ಕೊಟ್ಟಿದೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ 35 ಮಂದಿ NDRF ಸಿಬ್ಬಂದಿ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿಳಿದಿದ್ದಾರೆ. ಭಾರೀ ಮಳೆ ಮುನ್ಸೂಚನೆ ಇರುವ ಹಿನ್ನಲೆಯಲ್ಲಿ ಜಿಲ್ಲೆಗೆ NDRF ತಂಡ ಆಗಮಿಸಿದ್ದು, ಪುತ್ತೂರಿನಲ್ಲಿ ಮೊಕ್ಕಾಂ ಹೂಡಿದೆ. ಒಟ್ಟು 30 ಸದಸ್ಯರ NDRF ತಂಡ, ಎಲ್ಲಾ ರೀತಿಯ ಸನ್ನಿವೇಶಗಳನ್ನು ಎದುರಿಸಲು ಸಿದ್ಧವಾಗಿದೆ. ಬೆಂಗಳೂರಿನಿಂದ ಪುತ್ತೂರಿಗೆ ಆಗಮಿಸಿರುವ ತಂಡ ಕೇರಳದ ವಯನಾಡು ದುರಂತದಲ್ಲಿ ಈ ಹಿಂದೆ ಭಾಗಿಯಾಗಿತ್ತು.

ಗದಗ ಜಿಲ್ಲೆಯ ಹಲವಡೆ ಮಳೆ ಆರ್ಭಟಿಸಿದೆ. ಮಳೆ ಆರ್ಭಟಕ್ಕೆ ನಗರದ ರಸ್ತೆಗಳು ಕೆರೆಯಂತಾಗಿವೆ. ಗದಗ ನಗರದ ಪಂಚರ ಹೊಂಡ ಬಳಿ ರಸ್ತೆ ಕೆರೆಯಂತಾಗಿತ್ತು. ರಸ್ತೆಯಲ್ಲಿ ಎರಡ್ಮೂರು ಅಡಿ ನೀರು ನಿಂತಿದ್ದು, ವಾಹನ ಸವಾರರು ಸಂಚಾರ ಮಾಡಲು ಸಾಧ್ಯವಾಗದೆ ಪರದಾಟ ನಡೆಸಿದ್ದಾರೆ. ಪ್ರತಿಬಾರಿ ಮಳೆ ಬಂದಾಗಲೂ ಇದೇ ರಗಳೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚರಂಡಿಗಳು ಬ್ಲಾಕ್ ಆಗಿ, ರಸ್ತೆ ತುಂಬೆಲ್ಲಾ ನೀರು ಹರಿದಿದೆ. ಮಾರ್ಕೆಟ್ ಗೆ ಹೋಗುವ ರಸ್ತೆ ಕೆರೆಯಾಗಿ ಮಾರ್ಪಟ್ಟಿತ್ತು. ನಗರಸಭೆ ನಿರ್ಲಕ್ಷ್ಯ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಹಾವೇರಿಯ ರಾಣೇಬೆನ್ನೂರಲ್ಲೂ ವರುಣ ಅಬ್ಬರ ಜೋರಾಗಿತ್ತು. ರಾಣೇಬೆನ್ನೂರು ಪಟ್ಟಣದಲ್ಲಿ ರಸ್ತೆಗಳೆಲ್ಲಾ ಸಂಪೂರ್ಣ ಜಲಾವೃತ ಆಗಿದ್ದವು. ಗ್ರಾಮೀಣ ಪೊಲೀಸ್ ಠಾಣೆಯ ಮುಂಭಾಗದ ರಸ್ತೆ ಜಲಾವೃತ ಆಗಿತ್ತು. ಕೆರೆಯತಾಂದ ರಸ್ತೆಯಲ್ಲಿ ವಾಹನ ಸವಾರರು ಪರದಾಟ ನಡೆಸಿದ್ರು. ಮಳೆ ನೀರಿನಿಂದ ಒಂದು ಬದಿಯಲ್ಲಿ 2 ಕಿಲೋ ಮೀಟರ್ ಉದ್ದಕ್ಕೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸುಮಾರು ಎರಡೂ ಗಂಟೆಗಳ ಕಾಲ ನಗರದಲ್ಲಿ ಟ್ರಾಫಿಕ್ ಜಾಮ್ ಎದುರಾಗಿದ್ರಿಂದ ನಗರಸಭೆಯ ವಿರುದ್ಧ ವಾಹನ ಸವಾರರು ಆಕ್ರೋಶ ಹೊರಹಾಕಿದ್ರು.

ಹುಬ್ಬಳ್ಳಿಯಲ್ಲೂ ಧಾರಾಕಾರ ಮಳೆ ಸುರಿದಿದೆ.. ಒಂದು ಗಂಟೆ ಕಾಲ ಸುರಿದ ಮಳೆಯಿಂದ ತಗ್ಗು ಪ್ರದೇಶದಲ್ಲಿನ ರಸ್ತೆಗಳು ಜಲಾವೃತ ಆಗಿವೆ.. ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆ ಬಳಿ ಇರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಚೇರಿಯ ಅವರಣದಲ್ಲಿ ಮರದ ಕೊಂಬೆ ಮುರಿದುಬಿದ್ದಿದೆ.. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ..
ಕಲಬುರಗಿ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಜೋರಾಗಿದೆ. ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಸೇಡಂ ತಾಲೂಕಿನಾದ್ಯಂತ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಭಾರಿ ಮಳೆಗೆ ರಸ್ತೆಗಳು ನದಿಯಂತಾಗಿ ಹರಿದಿವೆ. ಸೇಡಂ ಪಟ್ಟಣದ ಅಂಬೇಡ್ಕರ್ ಸರ್ಕಲ್, ರೈಲು ನಿಲ್ದಾಣ ರಸ್ತೆ ಜಲಾವೃತವಾಗಿದ್ದು, ಹನುಮಾನ್ ದೇವಸ್ಥಾನಕ್ಕೂ ಮಳೆ ನೀರು ನುಗ್ಗಿದೆ. ಚಿಂಚೋಳಿ ತಾಲೂಕಿನ ಬೆಡಕಪಳ್ಳಿ ಗ್ರಾಮದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ, ದವಸ ಧಾನ್ಯಗಳು ನೀರು ಪಾಲಾಗಿವೆ.
ರಾಯಚೂರು ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗಿದೆ. ಮಸ್ಕಿ ತಾಲೂಕಿನ ಅಡವಿಬಾವಿ ತಾಂಡ ಗ್ರಾಮದಲ್ಲಿ ಸರ್ಕಾರಿ ಶಾಲೆ ಜಲಾವೃತಗೊಂಡಿದೆ. ಮೊಣಕಾಲುದ್ದ ನೀರಿನಲ್ಲೇ ಶಾಲೆಗೆ ಹೋಗಿದ್ದಾರೆ ಮಕ್ಕಳು.. ಗ್ರಾಮದಲ್ಲಿ ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ ಶಾಲಾ ಆವರಣಕ್ಕೆ ನೀರು ನುಗ್ಗಿದೆ.. ಮಸ್ಕಿ ಕ್ಷೇತ್ದ ಶಾಸಕ ಬಸನಗೌಡ ತುರ್ವಿಹಾಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಅಂತ ಪೋಷಕರ ಆಕ್ರೋಶ ಹೊರ ಹಾಕಿದ್ದಾರೆ
ಧಾರವಾಡದಲ್ಲಿ ಅರ್ಧ ಗಂಟೆಗಳ ಕಾಲ ಗುಡುಗು ಸಹಿತ ಮಳೆ ಬಂದಿದೆ. ಕೃಷಿ ಚಟುವಟಿಕೆಗಳಿಗೆ ಪೂರಕ ವಾತಾವರಣ ಶುರುವಾಗ್ತಿದೆ. ಮಳೆಗಾಗಿ ಕಾಯುತ್ತಿದ್ದ ರೈತ ವರ್ಗ ಖುಷಿ ಪಡ್ತಿದೆ. ಯಾದಗಿರಿಯಲ್ಲೂ ವರುಣನ ಆರ್ಭಟ ಜೋರಾಗಿದೆ.. ಹುಣಸಗಿನಿಂದ ಕೆಂಭಾವಿ ಕಡೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಜಲಾವೃತ ಆಗಿ ವಾಹನ ಸವಾರರು ಪರದಾಡಿದ್ದಾರೆ. ಬಾಗಲಕೋಟೆಯಲ್ಲಿ ಭರ್ಜರಿ ಮಳೆ ಆಗಿದ್ದು, ವಿದ್ಯಾಗಿರಿಯಲ್ಲಿ ಬಿವಿವಿ ಸಂಘಧ ಕಾಲೇಜು ಮೈದಾನ ಕೆರೆಯಂತಾಗಿದೆ.. ಮಳೆಯಲ್ಲಿಯೇ ಯುವಕರು, ಪುಟ್ಬಾಲ್, ಕ್ರಿಕೆಟ್ ಆಡಿ ಸಂಭ್ರಮಿಸಿದ್ದಾರೆ..


