ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ದಿನಗಳು ಕಳೆದರೂ ಖಾತೆ ಹಂಚಿಕೆ ಗೊಂದಲಕ್ಕೆ ಪರಿಹಾರ ಸಿಕ್ಕಿಲ್ಲ. ಪ್ರಬಲ ಖಾತೆಗಳಿಗಾಗಿ ಹಿರಿಯ ಸಚಿವರ ನಡುವೆ ಹಗ್ಗಜಗ್ಗಾಟ ಮುಂದುವರಿದಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಮಲಿಂಗಾರೆಡ್ಡಿ ಅವರ ಮನವೊಲಿಕೆ ಸರ್ಕಸ್ ನಡೆಯುತ್ತಲೇ ಇದೆ. ರಾಜ್ಯ ಕಾಂಗ್ರೆಸ್ ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ 2ನೇ ಬಾರಿ ಸಂಧಾನ ಸಭೆ ಮಾಡಿದ್ದಾರೆ. ರಾಜೀನಾಮೆ ಹಿಂಪಡೆದು ಕೆಲಸ ಮಾಡುತ್ತ ಸರ್ಕಾರಕ್ಕೆ ಸಹಕಾರ ನೀಡಲು ಮನವಿ ಮಾಡಿದ್ದಾರೆ.

ರಾಮಲಿಂಗಾರೆಡ್ಡಿ ಜೊತೆಗಿನ ಸಭೆ ಬಳಿಕ ಮಾತಾಡಿದ ರಣದೀಪ್ ಸಿಂಗ್ ಸುರ್ಜೇವಾಲ, ರಾಮಲಿಂಗಾರೆಡ್ಡಿ ಹಿರಿಯ ನಾಯಕರು. ರಾಮಲಿಂಗಾರೆಡ್ಡಿ ಕಾಂಗ್ರೆಸ್ ಪಕ್ಷದ ಆಸ್ತಿ ಇದ್ದಂತೆ. 1990ರ ದಶಕದಿಂದಲೂ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ. ರಾಮಲಿಂಗಾರೆಡ್ಡಿ ರಾಜೀನಾಮೆ ಹಿಂಪಡೆಯುತ್ತಾರೆ ಎಂದು ಹೇಳಿದ್ದಾರೆ. ಸಚಿವ ಸಂಪುಟದಲ್ಲಿ ರಾಮಲಿಂಗಾರೆಡ್ಡಿ ಮುಂದುವರಿಯಲಿದ್ದಾರೆ ಎಂದು ಉಸ್ತುವಾರಿ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ. ಆದರೆ ಖಾತೆ ಬದಲಾವಣೆ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಜಲಸಂಪನ್ಮೂಲ ಖಾತೆಯೇ ಇರುತ್ತದೆ ಎನ್ನಲಾಗಿದೆ.

ಇದಕ್ಕೂ ಮೊದಲು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಕೂಡ ಸಚಿವ ರಾಮಲಿಂಗಾರೆಡ್ಡಿ ಜೊತೆಗೆ ಸಂಧಾನ ಮಾತುಕತೆ ನಡೆಸಿದ್ದರು. ಸಂಧಾನ ಸಭೆ ಬಳಿಕ ಮಾತಾಡಿರೋ ಬಿ.ಕೆ ಹರಿಪ್ರಸಾದ್, ಗಂಭೀರವಾದ ಸಮಸ್ಯೆ ಏನಿಲ್ಲ. ಕಮ್ಯುನಿಕೇಶನ್ ಗ್ಯಾಪ್ ಆಗಿದೆ ಅಷ್ಟೆ. ರಾಮಲಿಂಗಾರೆಡ್ಡಿ ಹಾಗೂ ನಾನು ಕಷ್ಟ ಕಾಲದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದವರು. ರಾಮಲಿಂಗಾರೆಡ್ಡಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿದವರು. ಕೆಲವು ವಿಚಾರದಲ್ಲಿ ರಾಮಲಿಂಗಾರೆಡ್ಡಿಗೆ ಬೇಸರ ಆಗಿದೆ. ಈಗಾಗಲೇ ನೀಡಿರುವ ರಾಜೀನಾಮೆ ಅಂಗಿಕಾರ ಮಾಡಬಾರದೆಂದು ನಾನು ಸಿಎಂ ಡಿ.ಕೆ ಶಿವಕುಮಾರ್ಗೆ ಒತ್ತಾಯ ಮಾಡಿದ್ದೇನೆ ಎಂದಿದ್ದಾದ್ದಾರೆ.

ರಾಮಲಿಂಗಾರೆಡ್ಡಿ ಮಾತ್ರ ತಮ್ಮ ನಿರ್ಧಾರ ಪ್ರಕಟ ಮಾಡಿಲ್ಲ. ಆದರೆ ಬಹುತೇಕ ಜಲಸಂಪನ್ಮೂಲ ಖಾತೆಯಲ್ಲೇ ಉಳಿಯುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಜಲಸಂಪನ್ಮೂಲ ಖಾತೆ ಬೇಡ, ಬೆಂಗಳೂರು ನಗರಾಭಿವೃದ್ಧಿ ಖಾತೆಯೇ ಬೇಕು. ಈ ಹಿಂದೆ ನನಗೆ ಮಾತು ಕೊಟ್ಟಿದ್ದರು. ಆ ಮಾತನ್ನು ತಪ್ಪಿದ್ದಾರೆ. ಆತ್ಮಸಾಕ್ಷಿಗೆ ವಿರುದ್ಧವಾಗಿ ನಾನು ಕೆಲಸ ಮಾಡಲ್ಲ. ನಾನು ಕೇವಲ BTM ಲೇಔಟ್ ಶಾಸಕನಾಗಿ ಮುಂದುವರಿಯುತ್ತೇನೆ ಎಂದಿದ್ದರು. ಇದೀಗ ಸಂಧಾನದ ಬಳಿಕ ಜಲಸಂಪನ್ಮೂಲ ಖಾತೆಯಲ್ಲೇ ಮುಂದುವರಿಯುವುದಾದರೆ ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಲು ಸಾಧ್ಯವೇ..? ರಾಜೀನಾಮೆ ನೀಡಿದ ಉದ್ದೇಶ ಈಡೇರಿದಂತೆ ಆಗಿಲ್ಲ ಅಲ್ಲವಾ..? ಅನ್ನೋದು ಸಾಮಾನ್ಯ ಜನರ ಪ್ರಶ್ನೆ ಆಗಿದೆ.


