ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡುವ ಅಗತ್ಯವಿದೆ. ಅದೇ ಕಾರಣಕ್ಕೆ ಕಳೆದ ವಾರ ಸಿಎಂ ಡಿ.ಕೆ ಶಿವಕುಮಾರ್ ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜೊತೆಗೆ ಚರ್ಚೆ ನಡೆಸಿದ್ದರು. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಕೆಲವೊಂದು ಸಚಿವ ಸ್ಥಾನಗಳ ಮೇಲೆ ಕಣ್ಣಿಟ್ಟು, ತನ್ನ ಆಪ್ತರನ್ನು ಆ ಸ್ಥಾನಗಳಿಗೆ ಕೂರಿಸುವ ಪ್ರಯತ್ನದಲ್ಲಿ ಇದ್ದಾರೆ. ಅದೇ ಕಾರಣಕ್ಕೆ ಸಚಿವ ಸಂಪುಟ ವಿಸ್ತರಣೆ ಅನ್ನೋದು ಹಾಗೇ ಉಳಿದುಕೊಂಡಿದೆ. ಈ ನಡುವೆ ಡಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ನಲ್ಲಿ ಹೇಳಿಕೆಗಳು, ಪ್ರತಿಭಟನೆಗಳು ಜೋರಾಗಿ ನಡೆಯುತ್ತಿವೆ.

ಸಿಎಂ ಡಿ.ಕೆ ಶಿವಕುಮಾರ್ ಆಪ್ತ ಶಿವಗಂಗಾ ಬಸವರಾಜ್, ಸಚಿವ ಸ್ಥಾನ ಸಿಗುವ ಭರವಸೆಯ ಮಾತುಗಳನ್ನಾಡಿದ್ದಾರೆ. ಮಂತ್ರಿ ಸ್ಥಾನ ಪಡೆದೇ ದಾವಣಗೆರೆಗೆ ಬರ್ತೀರಿ ಅಂದುಕೊಂಡಿದ್ವಿ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್, ಅದೇ ಕಾರಣಕ್ಕೆ ನಾನು ಇನ್ನೂ ಚನ್ನಗಿರಿಗೆ ಹೋಗಿಲ್ಲ ಎಂದಿದ್ದಾರೆ. ಹೊಸದಾಗಿ ಆಯ್ಕೆಯಾದ ಶಾಸಕರಿಂದ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿರುವ ವಿಚಾರದ ಬಗ್ಗೆ ಮಾತನಾಡಿ, ಬೇಡಿಕೆ ಇಟ್ಟಿದ್ವಿ, ಮನವಿನೂ ಮಾಡಿದ್ದೀವಿ. ಆ್ಯಕ್ಟೀವ್ ಇರೋ ಹೊಸ ಶಾಸಕರಿಗೆ ಸಚಿವ ಸ್ಥಾನ ನೀಡಿದ್ರೆ ಅನುಕೂಲ ಆಗುತ್ತದೆ. ಹಳೆ ಬೇರು ಹೊಸ ಚಿಗುರು ಎಂಬಂತೆ ಉತ್ತಮ ಆಡಳಿತಕ್ಕೆ ಅನುಕೂಲ ಎಂದಿದ್ದಾರೆ.

ಯುವಕರಿಗೆ ಜವಾಬ್ದಾರಿ ನೀಡಿದ್ರೆ ಪಕ್ಷಕ್ಕೆ ಅನುಕೂಲ ಆಗುತ್ತದೆ ಎಂಬುದು ನನ್ನ ಭಾವನೆ. ನಾನು ಜಿಲ್ಲಾ ಕೋಟಾ, ಜಾತಿ ಕೋಟಾದಡಿ ಸಚಿವ ಸ್ಥಾನ ಕೇಳಿಲ್ಲ. ನಾನು ರೈತ ಹೋರಾಟದಿಂದ ಬಂದಂತವನು. ಜೆ.ಹೆಚ್.ಪಟೇಲ್ರ ಬಳಿಕ ಚನ್ನಗಿರಿ ಕ್ಷೇತ್ರಕ್ಕೆ ಅವಕಾಶ ಸಿಕ್ಕಿಲ್ಲ. ಚನ್ನಗಿರಿ ಕ್ಷೇತ್ರಕ್ಕೆ ಮಂತ್ರಿ ಸ್ಥಾನ ಸಿಕ್ಕರೆ 25 ವರ್ಷದ ಅಜ್ಞಾತವಾಸ ಅಂತ್ಯವಾಗುತ್ತದೆ. ಯುವಕರಿಗೆ ಅವಕಾಶ ನೀಡಿದ್ರೆ, ನನಗೆ ಅವಕಾಶ ಸಿಗುತ್ತದೆ ಎಂಬ ಭರವಸೆ ಇದೆ ಎಂದಿದ್ದಾರೆ ಶಾಸಕ ಶಿವಗಂಗಾ ಬಸವರಾಜ್. ಇತ್ತ ಜಮೀರ್ ಪರವಾಗಿ ಅಭಿಮಾನಿಗಳು ಚಲೋ ನಡೆಸಿದ್ದು, ಅತ್ತ ಸತೀಶ್ ಜಾರಕಿಹೊಳಿ ಜಮೀರ್ ಪರ ಬ್ಯಾಟಿಂಗ್ ಮಾಡಿದ್ದಾರೆ.
ಜಮೀರ್ ಅಹ್ಮದ್ಗೆ ಸಚಿವ ಸ್ಥಾನ ಕೊಡಿ ಅಂತಾ ಹೇಳಿದ್ದೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ನಾನು ಸಿಎಂ ಡಿ.ಕೆ ಶಿವಕುಮಾರ್ ಭೇಟಿ ಮಾಡಿದಾಗ ಅಭಿಪ್ರಾಯ ಹೇಳಿದ್ದೇನೆ. ಮುಸ್ಲಿಂ ಸಮುದಾಯವೇ ನಮಗೆ ಹೆಚ್ಚು ಮತ ಹಾಕೋದು. ಹೀಗಾಗಿ ಜಮೀರ್ ಹಾಗೂ ಮುಸ್ಲಿಂ ಸಮುದಾಯದಿಂದ ಮತ್ತೊಬ್ಬರಿಗೆ ಅವಕಾಶ ನೀಡಿ ಎಂದು ಹೇಳಿದ್ದೇನೆ. ಈ ಹಿಂದೆ ಇಬ್ಬರಿಗೆ ಕೊಟ್ಟಿದ್ರು, ಈಗ ಮೂವರಿಗೆ ಅವಕಾಶ ಕೊಡಿ ಅಂತಾ ಹೇಳಿದ್ದೇನೆ ಎಂದಿದ್ದಾರೆ.
ಇನ್ನೂ ಸ್ಪೀಕರ್ ರುದ್ರಪ್ಪ ಲಮಾಣಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಹಾವೇರಿ ನಗರದಲ್ಲಿ ಬಂಜಾರ ಸಮುದಾಯದಿಂದ ಬೃಹತ್ ಪ್ರತಿಭಟನೆ ಮಾಡಲಾಗಿದೆ. MM ಸರ್ಕಲ್ನಿಂದ ಜಿಎಚ್ ಪಾಟೀಲ್ ಸರ್ಕಲ್ವರೆಗೆ ಕಾಲ್ನಡಿಗೆ ಜಾಥಾ ಮಾಡಿದ್ದು, ಬಂಜಾರ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ನ್ಯಾಯ ನೀಡುವಂತೆ ಒತ್ತಾಯ ಮಾಡಲಾಗಿದೆ. ಸಮುದಾಯದ ಏಕೈಕ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಅನ್ನೋದು ಪ್ರತಿಭಟನಾಕಾರರ ಆಗ್ರಹ. ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ. ಸಮುದಾಯದ ನಿರ್ಲಕ್ಷ್ಯ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದು, ಸಚಿವ ಸ್ಥಾನ ಸಿಗದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.


