ರಾಜ್ಯ ವಿಧಾನ ಪರಿಷತ್ನ 7 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ವಿಧಾನ ಸೌಧಕ್ಕೆ ಆಗಮಿಸಿದ ಜೆಡಿಎಸ್ ಶಾಸಕರು ಮತದಾನ ಮಾಡಿದ್ದಾರೆ. ವಿಧಾನಸೌಧದಲ್ಲಿ ವಿಶೇಷ ಬಸ್ನಲ್ಲಿ ಆಗಮಿಸಿದ 15 ಜೆಡಿಎಸ್ ಶಾಸಕರು ಮತದಾನ ಮಾಡಿದ್ರು. ದೇವನಹಳ್ಳಿಯ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದ ಜೆಡಿಎಸ್ ಶಾಸಕರು ನೇರವಾಗಿ ವಿಧಾನಸೌಧಕ್ಕೆ ಆಗಮಿಸಿ ಮತ ಚಲಾಯಿಸಿದ್ರು. ಇದಕ್ಕೂ ಮೊದಲೇ ಒಬ್ಬಂಟಿಯಾಗಿ ಮತ ಚಲಾಯಿಸಿದ್ರು ಶಾಸಕ ಜಿ.ಟಿ ದೇವೇಗೌಡ. ಜೆಡಿಎಸ್ನಿಂದ ಅಂತರ ಕಾಯ್ದುಕೊಂಡಿರುವ ಜಿ.ಟಿ ದೇವೇಗೌಡರು, ಆತ್ಮಸಾಕ್ಷಿಗೆ ಮತದಾನ ಮಾಡಿದ್ದೇನೆ ಎಂದಿದ್ದಾರೆ.

ಜಿ.ಟಿ ದೇವೇಗೌಡರು ಜೆಡಿಎಸ್ಗೆ ಮತ ಹಾಕಿದ್ದಾರಾ..? ಇಲ್ವಾ ಅನ್ನೋ ಬಗ್ಗೆ ಭಾರೀ ಚರ್ಚೆ ಆಗಿದೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾವೆಲ್ಲಾ 18 ಶಾಸಕರು ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದೇವೆ. ಮೈತ್ರಿ ಪಕ್ಷ ಬಿಜೆಪಿಯ ಹೆಚ್ಚುವರಿ ಮತಗಳು ನಮಗೆ ಬಂದಿವೆ. ಖಂಡಿತ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವ ವಿಶ್ವಾಸ ಇದೆ. ಜಿ.ಟಿ ದೇವೇಗೌಡರಿಗೆ ಆರೋಗ್ಯ ಸರಿ ಇರಲಿಲ್ಲ. ಅದಕ್ಕಾಗಿ ಅವರು ಪ್ರತ್ಯೇಕವಾಗಿ ಬಂದು ಮತ ಹಾಕಿದ್ದಾರೆ ಅಷ್ಟೇ ಎಂದಿದ್ದಾರೆ.

ಜೆಡಿಎಸ್ ಶಾಸಕ ಜಿ.ಡಿ ಹರೀಶ್ ಗೌಡ ತಮ್ಮ ತಂದೆ ಜಿ.ಟಿ ದೇವೇಗೌಡರ ಮತದ ಬಗ್ಗೆ ಮಾತನಾಡಿದ್ದಾರೆ. NDA ಅಭ್ಯರ್ಥಿಗೆ ಮತ ಹಾಕಿರುವ ಬಗ್ಗೆ ನಾನು ಮಾಧ್ಯಮದಲ್ಲಿ ನೋಡಿದೆ. ಅವರ ಬಗ್ಗೆ ಅನುಮಾನ ವ್ಯಕ್ತಪಡಿಸೋದು ಸರಿಯಲ್ಲ ಎಂಬುದು ನನ್ನ ಭಾವನೆ. ಜಿ.ಟಿ ದೇವೇಗೌಡರ ಜೊತೆ ನಮ್ಮೆಲ್ಲ ವರಿಷ್ಠರು ಚರ್ಚೆ ಮಾಡಿದ್ದಾರೆ. ಅವರೇ ಹೇಳಿಕೆ ಕೊಟ್ಟ ಮೇಲೆ ಅಡ್ಡಮತದಾನದ ಪ್ರಶ್ನೆ ಉದ್ಬವ ಆಗೋದಿಲ್ಲ. ನಾವೆಲ್ಲಾ 18 ಶಾಸಕರು ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದೇವೆ ಎಂದಿದ್ದಾರೆ.
ಮತದಾನ ಬಳಿಕ ಶಾಸಕ ಹೆಚ್.ಡಿ ರೇವಣ್ಣ ಮಾತನಾಡಿ, ನಾನು ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದೇನೆ. ಜಿ.ಟಿ ದೇವೇಗೌಡರು ಯಾರಿಗೆ ಮತ ಹಾಕಿದ್ರು ಅನ್ನೋದು ನನಗೆ ಗೊತ್ತಿಲ್ಲ. ಬಿಜೆಪಿಯವರು ಏನು ಪ್ಲ್ಯಾನ್ ಮಾಡಿದ್ರೋ ಅದೂ ನನಗೆ ಗೊತ್ತಿಲ್ಲ. ಕುಮಾರಣ್ಣ, ದೇವೇಗೌಡರು ಪಕ್ಷ ಕಟ್ಟೋಕೆ ಈಗಲೂ ಸಬಲರಿದ್ದಾರೆ. ಈ ಪರಿಷತ್ ಚುನಾವಣೆ ಎಲ್ಲಾ ಮುಖ್ಯ ಅಲ್ಲ. ಮುಂದಿನ 2028ರ ವಿಧಾನಸಭೆ ಚುನಾವಣೆಯಲ್ಲಿ ನೋಡೋಣ. ನಮಗೆ 2028ರ ಚುನಾವಣೆಯೇ ಮುಖ್ಯ ಈ ಚುನಾವಣೆ ಅಲ್ಲ. ನಾವು ಈಗ 2028ರ ಚುನಾವಣೆ ಹೇಗೆ ಗೆಲ್ಬೇಕು ಅಂತ ಯೋಚನೆ ಮಾಡ್ತಿದ್ದೇವೆ ಎಂದಿದ್ದಾರೆ.
ಪರಿಷತ್ ಚುನಾವಣೆಗೆಲ್ಲಾ ತಲೆಕೆಡಿಸಿಕೊಳ್ಳುವುದು ಬೇಡ, 2028ಕ್ಕೆ ನೋಡೋಣ. ನಮ್ಮ ಪಕ್ಷದ ಸಿದ್ಧಾಂತದ ಪ್ರಕಾರ ಕುಮಾರಣ್ಣ ನಿರ್ದೇಶನ ಕೊಟ್ಟಿದ್ದಾರೆ. ಕುಮಾರಣ್ಣ ಹಾಗೂ ದೇವೇಗೌಡರ ಬಳಿ ರಾಜಕೀಯ ಕಲಿಯೋದು ಬಹಳಷ್ಟು ಇದೆ. ನಮ್ಮ ಪಕ್ಷದ ಪರಿಸ್ಥಿತಿ ಏನಿದೆ ಅನ್ನೋದನ್ನ ಲೆಕ್ಕಾಚಾರ ಹಾಕಬೇಕಲ್ಲ. ಮುಂದಿನ 2028ಕ್ಕೆ ಈಗ ಇಲ್ಲಿಂದಲೇ ರೆಡಿಯಾಗಬೇಕಲ್ಲ. ಜಿಟಿ ದೇವೇಗೌಡರ ಬಗ್ಗೆ ನನಗೆ ಗೊತ್ತಿಲ್ಲ. ಮೈತ್ರಿ ಪಕ್ಷ ಬೆಂಬಲ ಕೊಟ್ಟಿದ್ದಾರ ಎಂಬ ಪ್ರಶ್ನೆಗೆ ರಾಷ್ಟ್ರಮಟ್ಟದಲ್ಲಿ ಪಕ್ಷಗಳು ತೀರ್ಮಾನ ಮಾಡಿದ್ದಾರೆ. ಕುಮಾರಸ್ವಾಮಿ, ದೇವೇಗೌಡರ ನೇತೃತ್ವದಲ್ಲಿ 2028ಕ್ಕೆ ಪಕ್ಷ ಸಂಘಟನೆಗೆ ಪ್ರಾಮಾಣಿಕ ಪ್ರಯತ್ನ ಮಾಡ್ತೇವೆ. ದೇವೇಗೌಡ್ರು ಯಾವತ್ತು ಅಧಿಕಾರಕ್ಕೋಸ್ಕರ ಯಾರ ಮನೆ ಬಾಗಿಲಿಗೂ ಹೋದವರಲ್ಲ. ಪ್ರಧಾನ ಮಂತ್ರಿ ಹುದ್ದೆಯನ್ನೇ ತ್ಯಾಗ ಮಾಡಿದವರು. ಸೀತಾರಾಮ್ ಕೇಸರಿ ಅವರಿಗೆ ಕ್ಷಮೆ ಕೇಳಿದರೆ 5 ವರ್ಷ ಕಂಟಿನ್ಯೂ ಆಗ್ತಿದ್ರು. ಆದರೆ ಅಂಥದ್ದನ್ನೇ ಬಿಟ್ಟು ಬಂದಿದ್ದಾರೆ ಎಂದಿದ್ದಾರೆ.
ಜೆಡಿಎಸ್ ಶಾಸಕ ಎ ಮಂಜು ಮಾತನಾಡಿ, ಜಿ.ಟಿ ದೇವೇಗೌಡರು ಆತ್ಮಸಾಕ್ಷಿ ಮತ ಹಾಕಿದ್ದೇನೆ ಎಂದಿದ್ದಾರೆ. ಜೆಡಿಎಸ್ ಚಿಹ್ನೆಯಡಿ ಗೆದ್ದಿದ್ದಾರೆ, ಹಾಗಾಗಿ ಜೆಡಿಎಸ್ಗೆ ಆತ್ಮಸಾಕ್ಷಿ ಮತ ಹಾಕಿರುತ್ತಾರೆ. ನಮ್ಮ NDA ಒಡೆಯಲು ಕಾಂಗ್ರೆಸ್ ಪ್ಲಾನ್ ಮಾಡಿದೆ. ನಾವು ಒಗ್ಗಟ್ಟಿಗಾಗಿ ಅಭ್ಯರ್ಥಿ ಹಾಕಿದ್ದೇವೆ ಎಂದಿದ್ದಾರೆ. ಜೆಡಿಎಸ್ ಶಾಸಕರೂ ಬರೋಕು ಮುನ್ನವೇ ಮತದಾನ ಮಾಡಿದ ಜಿ.ಟಿ ದೇವೇಗೌಡರು, ನನಗೆ ಆರೋಗ್ಯ ಸರಿ ಇರಲಿಲ್ಲ. ಬೆಳಗ್ಗೆಯೇ ಮಾತ್ರ ತಗೊಂಡೆ. ಹೀಗಾಗಿ ಬೇಗ ಹೋಗಿ ಮತ ಹಾಕಿ ಬಂದಿದ್ದೇನೆ. ಆತ್ಮಸಾಕ್ಷಿಯ ಮತ ಹಾಕಿದ್ದೇನೆ. ನಮ್ಮ ಅಭ್ಯರ್ಥಿ ಗೆಲ್ತಾರೆ. ಯಾರು ಅಡ್ಡಮತದಾನ ಮಾಡಿದ್ದಾರೆ ಅಂತಿದ್ದಾರೆ. ಅವರು ಸಾಬೀತು ಮಾಡಲಿ ಎಂದಿದ್ದಾರೆ. ನನನ್ನೂ ಯಾರೂ ಸಂಪರ್ಕ ಮಾಡಿಲ್ಲ. ಆದರೂ ಹುಷಾರಿಲ್ಲದ ಕಾರಣ ಬೇಗ ಹೋಗಿ ಮತ ಹಾಕಿ ಬಂದಿದ್ದೇನೆ ಎಂದಿದ್ದಾರೆ.


