ಬಾಗಲಕೋಟೆ ಜಿಲ್ಲೆಯ ಕಾರ್ ಬ್ಲಾಸ್ಟ್ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಇದು ಆಕಸ್ಮಿಕ ಸ್ಫೋಟ ಅಲ್ಲ, ಪ್ರಿ ಪ್ಲಾನ್ ಬ್ಲಾಸ್ಟ್ ಅನ್ನೋದು ಬಯಲಾಗಿದೆ. ಒಂದೇ ಒಂದು ಮೆಸೇಜ್ನಿಂದ ಪೊಲೀಸರ ಬಲೆಗೆ ಬಿದ್ದ ಘಟನೆ ನಡೆದಿದೆ. ಸ್ಫೋಟದ ಹಿಂದಿನ ಸಂಚು ಬಯಲಾಗಿದ್ದು, ಬಾರ್ ಮಾಲೀಕನ ಮರ್ಡರ್ಗಾಗಿ ಕಾರ್ ಬ್ಲಾಸ್ಟಿಂಗ್ ಪ್ಲಾನ್ ನಡೆದಿತ್ತು ಅನ್ನೋದು ಗೊತ್ತಾಗಿದೆ. ಒಂದೇ ಒಂದು ಸುಳಿವು ಸಿಗದಂತೆ ಕಾರು ಸ್ಫೋಟ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಸ್ಫೋಟಕ್ಕೆ ಸುಮಾರು 800 ಜಿಲಿಟಿನ್ ಕಡ್ಡಿ, ಕ್ಯಾಪಸಿಟರ್, ಡಿಟೋನೆಟರ್ ಖರೀದಿ ಮಾಡಿದ್ದರು. ಸುಮಾರು 30 ಜಿಲಿಟಿನ್ ಕಡ್ಡಿ ಬಳಸಿ ಕಾರ್ ಬ್ಲಾಸ್ಟ್ ಮಾಡಲಾಗಿತ್ತು.
ಕಬ್ಬಿನ ಗದ್ದೆಯಿಂದ ಬಂದು ಕಾರ್ ಟೈರ್ ಕೆಳಗೆ ಸ್ಫೋಟಕ ಇಟ್ಟು ಬ್ಲಾಸ್ಟ್ ಮಾಡಲಾಗಿದೆ. A1 ಆರೋಪಿ 7ನೇ ತರಗತಿಯಿಂದಲೇ ಸ್ಫೋಟಕ ತಯಾರಿಕೆ ಕಲಿತಿದ್ದ ಅನ್ನೋ ವಿಚಾರವೂ ಬಯಲಾಗಿದೆ. 5 ಎಕೆರೆ ಜಮೀನು ವಿಚಾರವೇ ದ್ವೇಷಕ್ಕೆ ಕಾರಣವಾಗಿದ್ದು, ಕಾರು ಬ್ಲಾಸ್ಟ್ ಪ್ಲಾನ್ ರೂಪಿಸಲು ಕಾರಣವಾಗಿತ್ತು. 40 ಲಕ್ಷ ಬಡ್ಡಿ ಸಾಲ ವಾಪಸ್ ನೀಡದ ಹಿನ್ನೆಲೆಯಲ್ಲಿ ಬಾರ್ ಮಾಲೀಕ ಜಮೀನು ವಶಕ್ಕೆ ಪಡೆದಿದ್ದನು. A1 ಆರೋಪಿ ಶಿವಾನಂದ ಜೆಲ್ಲಿ, ರೇವಣಪ್ಪ ಜೆಲ್ಲಿ, ಮಾದೇವ ಸಂಗಾಪುರ, ಮಲ್ಲಿಕಾರ್ಜುನ ಬದ್ರಪ್ಪನವರ ಎಂಬ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಮತ್ತೋರ್ವ ಆರೋಪಿ ಗಜಾನನಗಾಗಿ ಶೋಧ ಕಾರ್ಯ ಮಾಡಲಾಗ್ತಿದೆ.
ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ನಡೆದಿದ್ದ ಕಾರು ಬ್ಲಾಸ್ಟ್ ಬಳಿಕ ಬಾರ್ ಮಾಲೀಕನಿಗೆ ಬೆದರಿಕೆ ಮೆಸೇಜ್ ಹಾಕಿ ಆಸಾಮಿಗಳು ಬಲೆಗೆ ಬಿದ್ದಿದ್ದಾರೆ. ಯುವರಾಜ್ ಬಾರ್ ಮಾಲೀಕ ಹಣಮಂತ ಅಥಣಿ ಕೊಲೆಗೆ ಸ್ಕೆಚ್ ಹಾಕಿದ್ದರು. ಜುಲೈ 25 ರ ರಾತ್ರಿ 10:45ಕ್ಕೆ ಬ್ಲಾಸ್ಟ್ ನಡೆದಿತ್ತು. ಪ್ರಕರಣ ತನಿಖೆಗೆ ಜಮಖಂಡಿ ಸಿಪಿಐ ಮಲ್ಲಿಕಾರ್ಜುನ ಮಡ್ಡಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಎಸ್ಪಿ ಸಿದ್ದಾರ್ಥ ಗೊಯಲ್ ಮಾರ್ಗದರ್ಶನದಲ್ಲಿ ರೋಚಕ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧನ ಮಾಡಲಾಗಿದೆ.
ಕಾರ್ ಬ್ಲಾಸ್ಟ್ ಪ್ರಕರಣದಲ್ಲಿ ಎಸ್ಪಿ ಸಿದ್ದಾರ್ಥ ಗೊಯಲ್ ಮಾತನಾಡಿ, ಜುಲೈ 25 ರಂದು ರಾತ್ರಿ 10, 45 ಸುಮಾರಿಗೆ ಕಾರ್ ಬ್ಲಾಸ್ಟ್ ಆಗಿತ್ತು. ನಾವು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ವಿ. ಬಾಂಬ್ ನಿಷ್ಕ್ರಿಯದಳ, ಎಫ್ ಎಸ್ ಎಲ್ ತಂಡದಿಂದ ತನಿಖೆ ಮಾಡಿದ್ವಿ. ಪ್ರಾಥಮಿಕವಾಗಿ ಎಫ್ ಎಲ್ ರಿಪೋರ್ಟ್ ಪ್ರಕಾರ ಸ್ಫೋಟಕ ಬಳಸಿದ್ದು ಗೊತ್ತಾಗಿತ್ತು. ಆದ್ರೆ ಪ್ರಕರಣದ ಆರೋಪಿಗಳ ಪತ್ತೆಯಾಗೋವರಗೆ ನಾವು ಮಾಹಿತಿ ನೀಡಿರಲಿಲ್ಲ. ಜನರು ಇದರಿಂದ ಪ್ಯಾನಿಕ್ ಆಗೋ ಸಾಧ್ಯತೆ ಇತ್ತು. ಬಾರ್ ಮಾಲೀಕ ಹಣಮಂತ ಅಥಣಿ ಕೊಲೆಗೆ ಪ್ಲಾನ್ ಮಾಡಲಾಗಿತ್ತು ಎಂದಿದ್ದಾರೆ.
ಪ್ರಕರಣದ A1 ಆರೋಪಿ ಶಿವಾನಂದ ಅವರ ದೊಡ್ಡಪ್ಪನಿಗೆ ಹನಮಂತ 40 ಲಕ್ಷ ಸಾಲ ಕೊಟ್ಟಿರ್ತಾರೆ. ಸಾಲ ವಾಪಸ್ ಕೊಡದೇ ಇರೋದಕ್ಕೆ ಶಿವಾನಂದ ಅವರ 5 ಎಕರೆ ಜಮೀನು ತಮ್ಮ ಹೆಸರಿಗೆ ಮಾಡಿಕೊಂಡಿರ್ತಾರೆ. ಅದೇ ಜಮೀನನ್ನು ಶಿವಾನಂದ ಲೀಸ್ ಪಡೆದು ವರ್ಷಕ್ಕೊಂದರಂತೆ ಕಂತು ರೂಪದಲ್ಲಿ ಸಾಲ ತೀರಿಸುತ್ತೇನೆ ಅಂತ ಹೇಳಿರ್ತಾರೆ. ಒಮ್ಮೆ ಸ್ವಲ್ಪ ಹಣ ವಾಪಸ್ ಕೊಟ್ಟಿರ್ತಾರೆ. ಆದ್ರೆ ಬಡ್ಡಿ ಜಾಸ್ತಿ ಆಗಿ ಒಟ್ಟು 67 ಲಕ್ಷ ಆಗಿರುತ್ತೆ. ಇದರಿಂದ ಹನಮಂತನನ್ನ ಕೊಲೆ ಮಾಡಿದ್ರೆ ಜಮೀನು ನಮಗೆ ಸಿಗುತ್ತೆ ಅಂತ ಪ್ಲಾನ್ ಮಾಡ್ತಾರೆ. ಶಿವಾನಂದಗೆ ಬಾವಿಗಳಲ್ಲಿ ಸ್ಫೋಟ ಮಾಡಲು ಸ್ಫೋಟಕ ತಯಾರಿಸೋದು ಗೊತ್ತಿರುತ್ತದೆ ಎಂದಿದ್ದಾರೆ.
ಎರಡು ಅಂಗಡಿಗಳಲ್ಲಿ ಜಿಲೆಟಿನ್ ಕಡ್ಡಿ ಖರೀದಿ ಮಾಡಿ, ಜಮೀನಿನಲ್ಲಿ ಪ್ರಯೋಗ ಮಾಡಿರ್ತಾರೆ. ಸುಮಾರು 800 ಜಿಲೆಟಿನ್ ಕಡ್ಡಿ ಕೆಪಾಸಿಟರ್, ಡಿಟೋನೆಟ್ ಖರೀದಿ ಮಾಡಿರ್ತಾರೆ. ಅದರಲ್ಲಿ 25 ರಿಂದ 30 ಕಡ್ಡಿ ಬಳಸಿ ಸ್ಪೋಟಕ ತಯಾರಿಸಿ ಕಾರ್ ಕೆಳಗೆ ಇಟ್ಟಿರ್ತಾರೆ. 100 ಮೀಟರ್ ದೂರದಲ್ಲಿ ಕೂತು, ಕಾರ್ ಹತ್ತುವಾಗ ಬ್ಲಾಸ್ಟ್ ಮಾಡ್ತಾರೆ. ಬಳಿಕ ಸ್ಥಳದಲ್ಲಿ ಉಳಿದ ವಯರ್ ಸೇರಿದಂತೆ ಸ್ಫೋಟಕ ಅವಶೇಷಗಳನ್ನ ತೆಗೆದುಕೊಂಡು ಹೋಗಿರ್ತಾರೆ. ಸಿಸಿಟಿವಿ ಕ್ಯಾಮೆರಾ, ಮತ್ತು ಮೊಬೈಲ್ಗಳಲ್ಲಿ ಸುಳಿವು ಸಿಗದಂತೆ ಪ್ಲಾನ್ ಮಾಡಿರ್ತಾರೆ. ಮಾರನೇ ದಿನ ಟಿವಿ ನೋಡಿ ಹನಮಂತಗೆ ಏನೂ ಆಗಿಲ್ಲ ಅಂತ ಗೊತ್ತಾಗುತ್ತೆ. ಬಳಿಕ 6ನೆ ತಾರೀಕು ವಾಟ್ಸಪ್ ಮೆಸೇಜ್ ಮಾಡಿ ಬೆದರಿಕೆ ಹಾಕ್ತಾರೆ. ನಂಬರ್ ಪತ್ತೆಗಾಗಿ ತನಿಖೆ ಶುರು ಮಾಡಿದಾಗ, ಒಂದು ಡೈರಿ ಫಾರ್ಮ್ನಲ್ಲಿ ಸಿಸಿಟಿವಿ ಕ್ಯಾಮೆರಾ ಕಳ್ಳತನ ಮಾಡಿ ಅದರಲ್ಲಿನ ಸಿಮ್ ಬಳಸಿ, ಅಥಣಿಯಲ್ಲಿ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿ ಮಾಡಿ ಮೆಸೇಜ್ ಮಾಡಿದ್ದು ತಿಳಿಯುತ್ತದೆ. ಬಳಿಕ ನಾಲ್ಕು ಆರೋಪಿಗಳನ್ನ ಪತ್ತೆ ಮಾಡಲಾಗಿದೆ ಎಂದಿದ್ದಾರೆ.


