ಚಾಮರಾಜನಗರದಲ್ಲಿ ಮೂವರು ಬೇಟೆಗಾರರ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ನನ್ನ ಪತಿ ಜಮೀನಿನಲ್ಲಿ ಮಲಗಿದ್ದರು. ಜೋಳ ಕಾಯಲು ಹೋಗಿದ್ದರು. ಜಮೀನಿನಿಂದ ಕರೆದೊಯ್ದು ಗುಂಡಿಟ್ಟು ಸಾಯಿಸಿದ್ದಾರೆ ಎಂದು ಹತ್ಯೆಯಾದ ಅಂತೋಣಿಸ್ವಾಮಿ ಪತ್ನಿ ಲೂರ್ದುಮೇರಿ ಗಂಭೀರ ಆರೋಪ ಮಾಡಿದ್ದಾರೆ. ನನಗೆ ನನ್ನ ಗಂಡಬೇಕು. ಶೂಟ್ ಮಾಡಲು ಪರ್ಮಿಷನ್ ಕೊಟ್ಟವರು ಯಾರು..? ಶೂಟ್ ಮಾಡಿದವನನ್ನುಇಲ್ಲಿಗೆ ಕರೆಸಬೇಕು. ನನಗೆ ನ್ಯಾಯ ಬೇಕು ಎಂದು ಮೃತ ಆಂತೋಣಿಸ್ವಾಮಿ ಪತ್ನಿ ಲೂರ್ದುಮೇರಿ ಆಗ್ರಹ ಮಾಡಿದ್ದಾರೆ.

ಮೂವರು ಬೇಟೆಗಾರರ ಎನ್ಕೌಂಟರ್ ಪ್ರಕರಣದಲ್ಲಿ ಮೂವರು ತಪ್ಪು ಮಾಡಿದ್ದರೆ ಸ್ಟೇಷನ್ಗೆ ಕರೆತರಬೇಕಿತ್ತು. ಶೂಟ್ ಮಾಡಲು ಪರ್ಮಿಷನ್ ಕೊಟ್ಟವರು ಯಾರು..? ನನಗೆ ನ್ಯಾಯ ಬೇಕು. ನನ್ನ ಗಂಡ ಏನ್ ಮಾಡಿದ್ದಾನೆ ಅಂತ ಗುಂಡಿಟ್ಟು ಕೊಂದಿದ್ದಾರೆ. ಅರಣ್ಯಕ್ಕೆ ಹೋಗಿದ್ದರೆ ಅಲ್ಲಿಯೇ ಶವ ಇರಿಸಬೇಕಿತ್ತು. ಪೊಲೀಸರನ್ನು ಕರೆದೊಯ್ದು ತೋರಿಸಬೇಕಿತ್ತು. ಮೈಸೂರಿಗೆ ಏಕೆ ತೆಗೆದುಕೊಂಡು ಹೋದರು..? ಮಲಗಿದ್ದವರ ಮೇಲೆ ಶೂಟ್ ಮಾಡಿದ್ದಾರೆ. ನನಗೆ ನ್ಯಾಯಬೇಕು. ನನ್ನ ಮಕ್ಕಳಿಗೆ ಯಾರು ಗತಿ..? ಎಂದು ಮೃತ ಕುಮಾರ್ ಪತ್ನಿ ಡೋಮಿನಾ ಅಳಲು ತೋಡಿಕೊಂಡಿದ್ದಾರೆ.
ಪ್ರತಿಭಟನಾನಿರತ ಮರಿಯಮಂಗಲ ಗ್ರಾಮಸ್ಥರೊಡನೆ ಹನೂರು ಶಾಸಕರು ಸಭೆ ನಡೆಸಿದ್ದು, ಹಸು ಹುಡುಕೊಂಡು ಹೋದವರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಎನ್ಕೌಂಟರ್ ಮಾಡಿದವರು ಹಾಗು ಎನ್ಕೌಂಟರರ್ಗೆ ಆದೇಶ ಮಾಡಿದ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕು. ಮೃತ ಕುಟುಂಬಗಳಿಗೆ ತಲಾ ಎರಡು ಕೋಟಿ ರೂಪಾಯಿ ಪರಿಹಾರ ನೀಡಬೇಕು. ಮೃತರ ಕುಟುಂಬ ವರ್ಗದವರಿಗೆ ಕಾಯಂ ಸರ್ಕಾರಿ ಉದ್ಯೋಗ ನೀಡಬೇಕು. ಮೃತರ ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನು ಸರ್ಕಾರವೇ ಹೊರಬೇಕು ಎಂದು ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ.
ಹನೂರಿನಲ್ಲಿ ಗ್ರಾಮಸ್ಥರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಮಲೇ ಮಹದೇಶ್ವರ ಬೆಟ್ಟ, ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿದ್ದಾರೆ. ಹೆದ್ದಾರಿಗೆ ಕಲ್ಲನ್ನು ಜೋಡಿಸಿ ರಸ್ತೆ ತಡೆ ನಡೆಸಿದ್ದಾರೆ. ಮಲೆ ಮಹದೇಶ್ವರ ಬೆಟ್ಟ, ತಮಿಳುನಾಡಿಗೆ ಹೋಗುವ ಪ್ರಯಾಣಿಕರು ಪರದಾಡುವಂತಾಗಿತ್ತು. ಇನ್ನೂ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದಾಗ ಗಾಯಗೊಂಡ ಮತ್ತೊಬ್ಬ ಬೇಟೆಗಾರ ಮಹಿಮಾದಾಸ್, ಮೈಸೂರಿನ ನಾರಾಯಣ ಹೃದಯಾಲಕ್ಕೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಕೊಡಿಸಲಾಗ್ತಿದೆ. ಅರಣ್ಯ ಸಿಬ್ಬಂದಿ ಉದ್ದೇಶಪೂರ್ವಕವಾಗಿಯೇ ಗುಂಡು ಹಾರಿಸಿದ್ರು ಅನ್ನೋದು ಬಹುತೇಕ ಸತ್ಯ ಎನ್ನುವ ಮಾಹಿತಿ ಹೊರಬಿದ್ದಿದೆ.


