ರಾಜ್ಯದಲ್ಲಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ 2.O ಅಸ್ತಿತ್ವಕ್ಕೆ ಬರ್ತಿದ್ದ ಹಾಗೆ RSS ವಿರುದ್ಧ ಸಮರ ಸಾರುವ ಮುನ್ಸೂಚನೆ ನೀಡಲಾಗಿತ್ತು. ಕರ್ನಾಟಕ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ಗೆ ಪತ್ರ ಬರೆದು, RSS ನೋಂದಣಿ ದಾಖಲೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದ್ದರು. ಆ ವಿಚಾರವಾಗಿ ಮೋಹನ್ ಭಾಗವತ್ ಕೂಡ ಪ್ರತಿಕ್ರಿಯೆ ನೀಡಿ, ಭಾರತ ದೇಶದಲ್ಲಿ ಹಿಂದೂ ಧರ್ಮ ಕೂಡ ನೋಂದಣಿ ಆಗಿಲ್ಲ. ನಾವು ಸರ್ಕಾರದಿಂದ ಯಾವುದೇ ಅನುದಾನ ಪಡೆದುಕೊಳ್ಳುವುದಿಲ್ಲ. ಹೀಗಾಗಿ ನೋಂದಣಿ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದು ಮೊನಚು ಮಾತುಗಳಿಂದ ತಿರುಗೇಟು ನೀಡಿದ್ದರು. ಇದೀಗ ಸರ್ಕಾರ ಕಾನೂನು ಮೂಲಕ ಮಾತನಾಡುತ್ತಿದೆ.

ಈ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ವಿಧೇಯಕದ ಬಗ್ಗೆ ಚರ್ಚೆ ಆಗಿದೆ. ಕರ್ನಾಟಕದಲ್ಲಿ RSS ಕಾರ್ಯಚಟುವಟಿಕೆ ಸೇರಿದಂತೆ ನೋಂದಾವಣಿ ಆಗದೆ ಇರುವ ಸಂಘಟನೆಗಳಿಗೆ ಪರೋಕ್ಷವಾಗಿ ಕಡಿವಾಣ ಹಾಕಲು ನಿರ್ಧಾರ ಮಾಡಿದಂತಿದೆ. ಕರ್ನಾಟಕ ರಾಜ್ಯ ಸಾರ್ವಜನಿಕ ಪ್ರದೇಶ, ಪ್ರವೇಶ ನಿಯಂತ್ರಣ ವಿಧೇಯಕ 2026 ಜಾರಿ ಮಾಡಲು ಚರ್ಚೆ ನಡೆಸಲಾಗಿದೆ. ಕಲಬುರಗಿಯ ಚಿತ್ತಾಪುರದಲ್ಲಿ ಪಥಸಂಚಲನ ವೇಳೆ ಅನುಮತಿ ಪಡೆಯುವ ವಿಚಾರಕ್ಕೆ RSS ಹೈಕೋರ್ಟ್ ಮೆಟ್ಟಿಲೇರಿತ್ತು. ಆಗ ಕಾನೂನು ಸಂಘರ್ಷದಲ್ಲಿ ಹೈಕೋರ್ಟ್ನಿಂದ ಅನುಮತಿ ಪಡೆದು RSS ಪಥ ಸಂಚಲನ ಕಾರ್ಯಕ್ರಮ ಆಯೋಜನೆ ಮಾಡಿತ್ತು.
ಕರ್ನಾಟಕದಲ್ಲಿ RSS ಸೇರಿದಂತೆ ಕೆಲ ಸಂಘನೆಗಳು ಸಾರ್ವಜನಿಕ ಕಾರ್ಯಕ್ರಮ ರೂಪಿಸುವುದನ್ನು ನಿರ್ಬಂಧಿಸಲು ಕಾನೂನು ರೂಪಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ನಿನ್ನೆ ನಡೆದ ಸಚಿವ ಸಂಪುಟದಲ್ಲಿ ಚರ್ಚೆ ನಡೆದು ಅನುಮೋದನೆ ಪಡೆಯಲಾಗಿದೆ. ಕಳೆದ ವರ್ಷ ಅಕ್ಟೋಬರ್ 18 ರಂದು ಸರಕಾರ RSS ಚಟುವಟಿಕೆ ನಿರ್ಬಂಧಿಸಿ ಆದೇಶ ಹೊರಡಿಸಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಸೇರುವುದಕ್ಕೆ ಅನುಮತಿ ಕಡ್ಡಾಯಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಆದರೆ ಈ ಆದೇಶಕ್ಕೆ ಧಾರವಾಡ ಹೈಕೋರ್ಟ್ ಪೀಠ ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ರಾಜ್ಯ ಸರ್ಕಾರ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶವನ್ನು ದ್ವಿಸದಸ್ಯ ಪೀಠದ ಮುಂದೆ ಪ್ರಶ್ನಿಸಿತ್ತು. ಆದರೆ ರಾಜ್ಯ ಸರ್ಕಾರ RSS ನಿಯಂತ್ರಣಕ್ಕೆ ಕಾಯ್ದೆಯನ್ನೇ ಜಾರಿಗೆ ತರಲು ಮುಂದಾಗಿದೆ. ಇದೇ ಅಧಿವೇಶನಲ್ಲಿ ವಿಧೇಯಕ ಮಂಡನೆಗೆ ಕ್ಯಾಬಿನೆಟ್ನಲ್ಲಿ ಒಪ್ಪಿಗೆ ಕೂಡ ಸಿಕ್ಕಿದೆ. ಈ ಬಗ್ಗೆ ಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ನೀವೆ ಆಗಲಿ, ನಾವೇ ಆಗಲಿ ರಸ್ತೆಯಲ್ಲಿ ಪರ್ಮಿಷನ್ ತಗೊಂಡು ಕಾರ್ಯಕ್ರಮ ಮಾಡಬೇಕು. ಎಲ್ಲದಕ್ಕೂ ಒಂದು ಲೆಕ್ಕಾಚಾರ ಇರಬೇಕು. ಎಲ್ಲದಕ್ಕೂ ಒಂದು ಲೆಕ್ಕ ಇರಲಿ ಅಂತಾ ಹೇಳ್ತಾ ಇದ್ದೀವಿ ಅಂತಾ ಕರ್ನಾಟಕ ರಾಜ್ಯ ಸಾರ್ವಜನಿಕ ಪ್ರದೇಶ ಪ್ರವೇಶ ನಿಯಂತ್ರಣ ಕಾಯ್ದೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.


