ಬೀದರ್ನಲ್ಲಿ ಕಳೆದ ವರ್ಷ ಸಿಎಂಎಸ್ ATM ಸಿಬ್ಬಂದಿ ಹತ್ಯೆ & ದರೋಡೆ ಪ್ರಕರಣದ ಆರೋಪಿಗಳನ್ನು ಬೀದರ್ಗೆ ಕರೆತಂದಿದ್ದು, ಬೀದರ್ ಎಸ್ಪಿ ಪ್ರದೀಪ್ ಗುಂಟಿ ರಣರೋಚಕ ಮಾಹಿತಿ ನೀಡಿದ್ದಾರೆ. ದರೋಡೆಕೋರರ ಬಂಧನ ಕಾರ್ಯಾಚರಣೆಯ ರೋಚಕತೆ ಬಿಚ್ಚಿಟ್ಟಿದ್ದಾರೆ ಎಸ್ಪಿ ಪ್ರದೀಪ್ ಗುಂಟಿ. ಇಬ್ಬರು ಆರೋಪಿಗಳು ಬಿಹಾರ ರಾಜ್ಯದ ವೈಶಾಲಿ ಜಿಲ್ಲೆಗೆ ಸೇರಿದವರು. ಒಬ್ಬನು ಮಹಿಶಾರ್ & ಇನ್ನೊಬ್ಬ ಪತ್ತೆಪೂರ್ ಪುಲ್ವಾನಿ ಗ್ರಾಮಕ್ಕೆ ಸೇರಿದವನು. ಕಳೆದ ವರ್ಷ ಜನವರಿ 20ರಂದೇ ಗ್ರಾಮದಿಂದ ಕುಟುಂಬಸ್ಥರನ್ನ ಖಾಲಿ ಮಾಡಿಸಿದ್ರು ಅನ್ನೋ ಮಾಹಿತಿ ಗೊತ್ತಾಗಿದೆ.
ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ, ಜಾರ್ಖಂಡ್, ರಾಜಸ್ಥಾನದಲ್ಲಿ ಇರಬಹುದು ಅಂತಾ ಅನೇಕ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿದ್ದೇವೆ. 20 ದಿನಗಳ ಹಿಂದೆ ಸ್ವಂತ ಗ್ರಾಮಕ್ಕೆ ಬರಬಹುದು ಅಂತಾ ಮಾಹಿತಿ ಸಿಕ್ಕಿತ್ತು. ಹೀಗಾಗಿ, ನಮ್ಮ 20 ಸದಸ್ಯರ ತಂಡವನ್ನ ವೈಶಾಲಿ ಜಿಲ್ಲೆಗೆ ಕಳುಹಿಸಲಾಗಿತ್ತು. ಆಗಸ್ಟ್ 5ರಂದು ಒಂದು ಗ್ರಾಮದಲ್ಲಿ ಇರುವ ಬಗ್ಗೆ ಮಾಹಿತಿ ಇತ್ತು. ನಮ್ಮ ಸಿಬ್ಬಂದಿ ನೋಡಿ ಬಂದಿದ್ರು. ಆಗಸ್ಟ್ 10ರಂದು ಎರಡನೇ ಬಾರಿಗೆ ಬಂದಾಗ ನಮ್ಮ ಸಿಬ್ಬಂದಿ 40 ಕಿ.ಮೀ ವರೆಗೆ ಬೆನ್ನತ್ತಿದ್ರು. ಆದ್ರೆ, ದರೋಡೆಕೋರರಿಗೆ ನಾವು ಎನ್ನುವುದು ಗೊತ್ತಾಗಿಲ್ಲ. ಆಗ ನಮಗೆ ದರೋಡೆಕೋರರು ಬಿಹಾರದಲ್ಲೇ ಇದ್ದಾರೆ ಎನ್ನುವುದು ಗೊತ್ತಾಯಿತು ಎಂದಿದ್ದಾರೆ.
ಆಗಸ್ಟ್ 12ರಂದು ಇಂತಹ ಜಾಗಕ್ಕೆ ಬರುತ್ತಾರೆ ಎಂಬ ಖಚಿತ ಮಾಹಿತಿ ಸಿಕ್ಕಿತ್ತು. ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಸೆಕ್ಯೂರಿಟಿ ಪ್ಲ್ಯಾನ್ ಮಾಡಿಕೊಂಡು ಬಂಧನಕ್ಕೆ ಯೋಜನೆ ರೂಪಿಸಿದ್ದೆವು. ದಾಮೋದರ್ಪುರ ಎಂಬ ಗ್ರಾಮದ ಪಕ್ಕದಲ್ಲಿರುವ ಅರಣ್ಯ ಪ್ರದೇಶದಲ್ಲಿ ಹುಡುಕಾಡಿದ್ರೂ ಸಿಗಲಿಲ್ಲ. ಅರಣ್ಯದೊಳಗೆ ಹೋದವನು ಒಂದು ಬಾರಿಯಾದರೂ ಹೊರಗೆ ಬರ್ತಾನೆ ಅಂತಾ ಊಹೆ ಮಾಡಿ, ಎರಡು ಕಾರು, ಎರಡು ಬೈಕ್ನಿಂದ ಅರಣ್ಯ ಪ್ರದೇಶದ ಸುತ್ತಲೂ ಪಟ್ರೋಲಿಂಗ್ ಮಾಡಿದೆವು. ಪಟ್ರೊಲಿಂಗ್ ಮಾಡುವಾಗ ಡಿವೈಎಸ್ಪಿ ನೇತೃತ್ವದ ಒಂದು ತಂಡಕ್ಕೆ ಇವರು ಕಾಣಿಸಿಕೊಂಡರು. ಬೈಕ್ ಗೊತ್ತಾಯಿತು. ಇಬ್ಬರು ಕಪ್ಪು ಹೆಲ್ಮೆಟ್ ಧರಿಸಿದ್ರು, ಇವರೇ ಇರಬಹುದು ಅಂತಾ ಊಹೆ ಮಾಡಿದ್ವಿ ಎಂದಿದ್ದಾರೆ.
ಎರಡನೇ ಬಾರಿಗೆ ಯೂಟರ್ನ್ ತೆಗೆದುಕೊಂಡು ಬಂದು ಬೈಕ್ಗೆ ಅಡ್ಡ ಹಾಕಿದ್ವಿ, ಅವರು ವಾಹನ ದಾಟಿಕೊಂಡು ಹೋಗ್ಬೇಕು ಅಂತಾ ಟ್ರೈ ಮಾಡಿದ್ರು. ಹಾಗೆ ಹೋಗುವಾಗ ನಮ್ಮ ವಾಹನಕ್ಕೆ ಟಚ್ ಮಾಡಿದ್ರು. ವಾಹನಕ್ಕೆ ಟಚ್ ಆಗಿ ಬೈಕ್ನಿಂದ ಬಿದ್ದಾಗ ಪೊಲೀಸರು ಹೆಲ್ಮೆಟ್ ತೆಗೆದು ಮುಖ ನೋಡಿದ್ರು. ಆಗ ಅಲೋಕ್ಕುಮಾರ್ & ಅಮನ್ಕುಮಾರ್ ಎಂಬುವುದು ಗೊತ್ತಾಯ್ತು. ಅರೆಸ್ಟ್ ಮಾಡಿಕೊಂಡೆವು. ದರೋಡೆಕೋರರನ್ನ ಬಂಧಿಸಿ ಬಿಹಾರದಿಂದ ಬೇಗ ಹೊರಗೆ ಬರ್ಬೇಕು ಅಂತಾ ಬರುವಾಗ, ದಾಮೋದರ್ಪುರ ಗ್ರಾಮದಲ್ಲಿ 100ಕ್ಕೂ ಹೆಚ್ಚು ಜನರು ನಮ್ಮ ಮೇಲೆ ಅಟ್ಯಾಕ್ ಮಾಡಿದ್ರು.
ಸ್ಥಳೀಯರ ದಾಳಿಯಿಂದ ನಮ್ಮ ಎಎಸ್ಐ ಅಮಿತ್ ಅವರಿಗೆ ಗಾಯವಾಗಿದೆ. ನಮ್ಮನ್ನ ಕಿಡ್ನ್ಯಾಪರ್ಸ್ ಅಂತಾ ಅಂದುಕೊಂಡಯು ದಾಳಿ ಮಾಡಿದ್ರು. ಬಿಹಾರದಿಂದ ಬೀದರ್ಗೆ ದರೋಡೆಕೋರರನ್ನ ಕರೆತಂದು ನ್ಯಾಯಲಯಕ್ಕೆ ಹಾಜರು ಪಡಿಸುತ್ತಿದ್ದೇವೆ ಅಂತಾ ತಿಳಿಸಿದ್ದಾರೆ. ಆದರೆ ಸಾಮಾನ್ಯವಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯದಲ್ಲಿ ಕಾರ್ಯಾಚರಣೆ ಮಾಡುವಾಗ ಸ್ಥಳೀಯ ಪೊಲೀಸರಿಗೆ ತಿಳಿಸಬೇಕು ಅನ್ನೋ ನಿಯಮವಿದೆ. ಅದು ಅಗತ್ಯವೂ ಹೌದು. ಆದರೆ ಕೆಲವೊಂದು ಪ್ರಕರಣಗಳನ್ನು ಗೌಪ್ಯವಾಗಿಯೇ ಮುಗಿಸಿಕೊಂಡು ಬರಲಾಗುತ್ತದೆ. ಒಂದು ವೇಳೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಸಿಕ್ಕಿಬಿಟ್ಟರೆ, ಬಂಧನ ಪ್ರಕ್ರಿಯೆ ವಿಳಂಬ ಹಾಗೂ ಮಾಹಿತಿ ಸೋರಿಕೆ ಆಗಿ ಆರೋಪಿಗಳ ಪತ್ತೆ ಕಷ್ಟ ಆಗಬಹುದು ಅನ್ನೋ ಕಾರಣಕ್ಕೆ ಗೌಪ್ಯ ಕಾರ್ಯಾಚರಣೆ ಮಾಡಲಾಗುತ್ತದೆ. ಈ ಪ್ರಕರಣದಲ್ಲಿ ಗೌಪ್ಯತೆ ಕಾಯ್ದುಕೊಳ್ಳಲಾಗಿದೆ.


