ಚಾಮರಾಜನಗರದಲ್ಲಿ ಮೂವರು ಬೇಟೆಗಾರರ ಹತ್ಯೆ ಮಾಡಲಾಗಿದೆ. ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಪೀಠೋಪಕರಣಗಳ ಧ್ವಂಸ ಮಾಡಿದ್ದಾರೆ. ಬೇಟೆಗಾರರನ್ನು ಸೆರೆಹಿಡಿದು ನಂತರ ಅವರನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಅರಣ್ಯ ಇಲಾಖೆ ಕ್ರಮದ ವಿರುದ್ಧ ರೊಚ್ಚಿಗೆದ್ದ ಸ್ಥಳೀಯರು, ಉಪವಲಯ ಅರಣ್ಯಾಧಿಕಾರಿಗಳ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಶಾಗ್ಯ ಗ್ರಾಮದಲ್ಲಿನ ಅರಣ್ಯ ಇಲಾಖೆ ಕಚೇರಿಯನ್ನು ಧ್ವಂಸ ಮಾಡಲಾಗಿದೆ. ಬೈಕ್ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ ಸ್ಥಳೀಯರು. ಅರಣ್ಯಾಧಿಕಾರಿಗಳು ಸುಳ್ಳು ಹೇಳ್ತಿದ್ದಾರೆ. ಅವರನ್ನುಹಿಡಿದು ಹತ್ತಿರದಿಂದ ಶೂಟ್ ಮಾಡಿ ಕೊಂದಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮೂವರು ಬೇಟೆಗಾರರ ಶೂಟ್ಔಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಗ್ಯ ಗ್ರಾಮದಲ್ಲಿ ತೋಮಿಯಾರ್ ಪಾಳ್ಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಅರಣ್ಯ ಇಲಾಖೆ ವಸತಿ ಗೃಹಕ್ಕೆ ಹಾನಿ ಮಾಡಿದ್ದು, ಪೀಠೋಪಕರಣ ದ್ವಂಸ ಮಾಡಲಾಗಿದೆ. ಗ್ರಾಮದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮರಿಯಮಂಗಲ ಗ್ರಾಮಸ್ಥರೂ ಆಕ್ರೋಶ ವ್ಯಕ್ತಪಡಿಸಿದ್ದು, ಕಾವೇರಿ ವನ್ಯಧಾನದ ಕಳ್ಳಬೇಟೆ ತಡೆ ಶಿಬಿರಕ್ಕೆ ನುಗ್ಗಿ ದಾಂಧಲೆ ಮಾಡಿ, ಪೀಠೋಪಕರಣ ದ್ವಂಸ ಮಾಡಿದ್ದಾರೆ. ಬಾಗಿಲು ಕಿಟಕಿ ಗಾಜು ಪುಡಿಪುಡಿ ಮಾಡಿದ್ದಾರೆ.
ಎನ್ಕೌಂಟರ್ ಖಂಡಿಸಿ ಸಂಬಂಧಿಕರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಹನೂರು ಪಟ್ಟಣ ಪೊಲೀಸ್ ಠಾಣೆ ಹಾಗು ಅರಣ್ಯ ಇಲಾಖೆ ಮುಂದೆ ಪ್ರತಿಭಟನೆ ಮಾಡಿದ್ದು, ಮರಿಯಮಂಗಲ, ತೋಮಿಯರ್ ಪಾಳ್ಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹದೇಶ್ವರಬೆಟ್ಟದ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತ ಆಗಿದೆ. ಎನ್ಕೌಂಟರ್ ಮಾಡಿದ ಅರಣ್ಯಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ. ಇದಕ್ಕೂ ಮೊದಲು ಉಪ ವಲಯ ಅರಣ್ಯಾಧಿಕಾರಿ ಹಾಗೂ ಕಳ್ಳಬೇಟೆ ಶಿಬಿರ ಗ್ರಾಮಸ್ಥರು ಧ್ವಂಸಗೊಳಿಸಿದ್ದರು. ಇದೀಗ ಮೂವರ ಸಾವಿಗೆ ನ್ಯಾಯ ಕೊಡಿಸುವಂತೆ ಒತ್ತಾಯ ಮಾಡಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಗಿದೆ.
ಮೂವರು ಬೇಟೆಗಾರರ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಕೌಂಟರ್ ಖಂಡಿಸಿ ಹನೂರಿನಲ್ಲಿ ರಸ್ತೆ ತಡೆ, ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡಲಾಗಿದೆ. ಸ್ಥಳಕ್ಕೆ ಹನೂರು ಶಾಸಕ ಮಂಜುನಾಥ್ ಭೇಟಿ ನೀಡಿ, ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ. ಅರಣ್ಯಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದಕ್ಕೆ ಶೂಟ್ ಮಾಡಿದ್ದಾಗಿ ಹೇಳಿದ್ದಾರೆ. ಸದ್ಯ ಓರ್ವ ಅರಣ್ಯ ಸಿಬ್ಬಂದಿ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಕೊಡುವ ಮಾಹಿತಿ ಆಧಾರದ ಮೇಲೆ ಸತ್ಯಾಸತ್ಯತೆ ತಿಳಿಯಬೇಕು. ಅರಣ್ಯಾಧಿಕಾರಿಗಳ ಒಂದು ಗನ್ ವಶಕ್ಕೆ ಪಡೆದಿರುವುದಾಗಿ ಮಾಹಿತಿ ನೀಡಿದ್ದಾರೆ. ಸತ್ತವರ ಕುಟುಂಬಕ್ಕೆ ಪರಿಹಾರ ಕೊಡುವ ವಿಚಾರವಾಗಿ ಟೆಕ್ನಿಕಲ್ ಸಮಸ್ಯೆ ಇದೆ ಎಂದಿದ್ದಾರೆ. ಇವರುಗಳು ಕಾಡಿಗೆ ಹೋಗಿರುವ ಕಾರಣ ಸಮಸ್ಯೆ ಇದೆ. ಸಚಿವರ ಜೊತೆ ಮಾತನಾಡಿ ಇದನ್ನ ಬಗೆಹರಿಸುತ್ತೇವೆ ಎಂದಿದ್ದಾರೆ.
ಮೂವರು ಬೇಟೆಗಾರರ ಶೂಟೌಟ್ ಪ್ರಕರಣದ ಬಗ್ಗೆ ಸಚಿವ ಪುಟ್ಟರಂಗಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ಬೆಳಗ್ಗೆ 5.20ಕ್ಕೆ ಶೂಟೌಟ್ ನಡೆದಿದೆ. ಘಟನೆ ಬಗ್ಗೆ ಪರಿಶೀಲನೆ ಮಾಡ್ತೀವಿ. ಕುತ್ತಿಗೆಗೆ ಗುಂಡೇಟು ಬಿದ್ದಿದೆ ಎಂಬ ಮಾಹಿತಿ ಸಿಕ್ಕಿದೆ. ಅರಣ್ಯ ಇಲಾಖೆ ಪ್ರಕಾರ ಬೇಟೆಗೆ ಬಂದಿದ್ದರು, ಮಾಂಸ ಇತ್ತು ಎಂದಿದ್ದಾರೆ. ಅದಕ್ಕೆ ಪುರಾವೆ ಬೇಕಿದೆ. ಬೇರೆ ಬೇರೆ ಮಾಹಿತಿ ಬರುತ್ತಿದೆ. ಪರಿಶೀಲನೆ ಮಾಡ್ತೀವಿ, ಹಿಡಿದು ಶೂಟ್ ಮಾಡಿದ್ದಾರೆ ಅಂತಾ ಗ್ರಾಮಸ್ಥರು ಆರೋಪ ಮಾಡ್ತಿದ್ದಾರೆ. ಅರಣ್ಯ ಇಲಾಖೆಯವರು ನಮ್ನನ್ನು ಶೂಟೌಟ್ ಮಾಡಲು ಬಂದಿದ್ರು ಅಂತಿದ್ದಾರೆ. ಘಟನೆ ಬಗ್ಗೆ ಸತ್ಯಾಸತ್ಯತೆ ಪರಿಶೀಲನೆ ನಡೆಯುತ್ತದೆ. ಕುತ್ತಿಗೆಗೆ ಹೊಡೆದು ಎನ್ ಕೌಂಟರ್ ಮಾಡಲೂ ಯಾರು ಪರ್ಮಿಷನ್ ಕೊಟ್ಟಿದ್ದಾರೆ..? ಅರಣ್ಯ ಇಲಾಖೆ ನಿಯಮದಲ್ಲಿ ಆ ರೀತಿ ಇದೆಯಾ? ಎಂದು ಪ್ರಶ್ನಿಸಿದ್ದಾರೆ. ಪ್ರಾಣಿಗಳಿಗಾಗಿ ಮನುಷ್ಯರನ್ನು ಕೊಂದಿದ್ದು ಎಷ್ಟು ಸರಿ? ಎಂದು ಸಚಿವ ಪುಟ್ಟರಂಗಶೆಟ್ಟಿ ಅಸಮಧಾನ ವ್ಯಕ್ತಪಡಿಸಿದ್ದಾರೆ.


