ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇತ್ತೀಚಿಗೆ ಚುನಾವಣಾ ಆಯೋಗದ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ರು. ಜೊತೆಗೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಅಕ್ರಮ ಹೇಗೆಲ್ಲಾ ನಡೆದಿದೆ ಅನ್ನೋ ಬಗ್ಗೆ ದಾಖಲೆಗಳನ್ನೂ ರಿಲೀಸ್ ಮಾಡಿದ್ರು. ಒಂದೇ ಮನೆಯಲ್ಲಿ 68 ವೋಟ್ ಹೇಗೆ ಸಾಧ್ಯ..? ಒಂದೇ ಕಮರ್ಷಿಯಲ್ ಬಿಲ್ಡಿಂಗ್ನಲ್ಲಿ ಹತ್ತಾರು ಮತಗಳು ಹೇಗೆ ಬಂದವು..? ಎಂದು ಪ್ರಶ್ನಿಸಿದ್ದರು. ಚುನಾವಣಾ ಆಯೋಗವೇ ಬಿಜೆಪಿ ಏಜೆಂಟ್ ರೀತಿಯಲ್ಲಿ ಕೆಲಸ ಮಾಡಿದೆ ಅಂತಾನೂ ಆರೋಪ ಮಾಡಿದ್ರು. ಆದರೆ ಬೆಂಗಳೂರಲ್ಲಿ ಚುನಾವಣಾ ಆಯೋಗಕ್ಕೆ ದೂರು ಕೊಡಲಾಗುತ್ತದೆ ಎನ್ನುವ ಮಾಹಿತಿ ಇತ್ತು. ಆದರೆ ಚುನಾವಣಾ ಆಯೋಗ ಮಧ್ಯದಲ್ಲಿ ಒಂದು ಅಡ್ಡಗಾಲು ಹಾಕಿತ್ತು. ಅಂದೇ ಎಚ್ಚರಿಕೆಯ ಹೆಜ್ಜೆ ಇಟ್ಟ ಕಾಂಗ್ರೆಸ್ ದೂರನ್ನು ನೀಡುವ ಕಾರ್ಯಕ್ರಮವನ್ನೇ ರದ್ದು ಮಾಡಿತ್ತು. ಆ ಬಳಿಕ ಚುನಾವಣಾ ಆಯೋಗಕ್ಕೆ ದೂರು ನೀಡುವ ಬದಲು ಮನವಿ ಪತ್ರ ಕೊಟ್ಟು ಬಂದಿದ್ದರು. ಇದೀಗ ಚುನಾವಣಾ ಆಯೋಗ ಕ್ರಮಕ್ಕೆ ಮುಂದಾಗಿದೆ.

ರಾಹುಲ್ ಗಾಂಧಿ ಆರೋಪದ ಬಗ್ಗೆ ಚುನಾವಣಾ ಆಯೋಗ ಪ್ರಾಥಮಿಕ ತನಿಖೆ ಮಾಡಿದ್ದು, ರಾಹುಲ್ ಮಾಡಿರುವ ಎಲ್ಲಾ ಆರೋಪಗಳು ಸುಳ್ಳು ಎಂದಿದೆ. ಪ್ರಾಥಮಿಕ ತನಿಖೆ ಮಾಡಿರುವ ಚುನಾವಣಾ ಆಯೋಗ. ರಾಹುಲ್ ಮಾಡಿದ್ದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಹೀಗಾಗಿ ರಾಹುಲ್ ಗಾಂಧಿ ಮಾಡಿರುವ ಆರೋಪಗಳಿಗೆ ಸೂಕ್ತ ದಾಖಲೆಗಳನ್ನು ನೀಡುವಂತೆ ನೋಟಿಸ್ ಜಾರಿ ಮಾಡಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿದ್ದು, ಚುನಾವಣಾ ಆಯೋಗದ ಯಾವ ದಾಖಲೆಗಳನ್ನೂ ರಾಹುಲ್ಗೆ ಕೊಟ್ಟಿಲ್ಲ, ಆಯೋಗದ ಯಾವೊಬ್ಬ ಅಧಿಕಾರಿಗಳೂ ದಾಖಲೆಗಳನ್ನು ನೀಡಿರುವುದಿಲ್ಲ. ರಾಹುಲ್ ಹೇಳಿದಂತೆ ಯಾವ ದಾಖಲೆಗಳೂ ಆಯೋಗದಿಂದ ಕೊಟ್ಟಿದ್ದಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇನ್ನು ರಾಹುಲ್ ಹೇಳಿದಂತೆ ಶಕುನ್ ರಾಣಿ ಎಂಬುವರು ಎರಡು ಕಡೆ ಮತದಾನ ಮಾಡಿಲ್ಲ. ಎರಡು ಕಡೆ ಮತದಾನ ಮಾಡಿರುವವರ ವಿವರಗಳನ್ನು ದಾಖಲೆ ಸಹಿತ ನೀಡಿ, ನಿಮ್ಮ ಮಾಹಿತಿ ಮೇಲೆ ಸುದೀರ್ಘ ಹಾಗೂ ಸಮಗ್ರ ತನಿಖೆ ಮಾಡುತ್ತೇವೆ ಅಂತಾನೂ ತಿಳಿಸಿದೆ.

ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿಯಿಂದ ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ ಚುನಾವಣಾ ಆಯೋಗದ ಮೇಲೆ ಮಾಡಿರುವ ಆರೋಪಗಳ ದಾಖಲೆ ನೀಡುವಂತೆ ಹರಿಯಾಣ ಚುನಾವಣಾ ಆಯೋಗವೂ ನೋಟಿಸ್ ಜಾರಿ ಮಾಡಿದೆ. ರಾಹುಲ್ ಗಾಂಧಿ ಮಾಡಿರುವ ಆರೋಪಗಳೆಲ್ಲವೂ ಸುಳ್ಳು ಎಂದಿರುವ ಚುನಾವಣಾ ಆಯೋಗ, 10 ದಿನಗಳ ಒಳಗಾಗಿ ಸಹಿ ಮಾಡಿರುವ ಪ್ರಮಾಣ ಪತ್ರ ಸಲ್ಲಿಸಲು ಗಡುವು ಕೊಡಲಾಗಿದೆ. ದೂರಿನ ಆಧಾರದಲ್ಲಿ ಅಕ್ರಮಗಳ ಬಗ್ಗೆ ತನಿಖೆ ನಡೆಸುತ್ತೇವೆ ಎಂದಿದೆ ಹರಿಯಾಣ ಚುನಾವಣಾ ಆಯೋಗ. ಕರ್ನಾಟಕದ ಜೊತೆಗೆ ಹರಿಯಾಣ ರಾಜ್ಯ ಮುಖ್ಯ ಚುನಾವಣಾಧಿಕಾರಿಯಿಂದಲೂ ನೋಟಿಸ್ ಆಗಿದ್ದು, ರಾಹುಲ್ ಗಾಂಧಿ ಸೂಕ್ತ ಉತ್ತರ ಕೊಡಬೇಕಿದೆ. ಇಲ್ಲದಿದ್ರೆ ಕಾನೂನು ಕ್ರಮ ತೆಗೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಕಾರಣವೇನು ಎಂದರೆ ಈಗಾಗಲೇ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಆರೋಪ ಮಾಡುತ್ತಿದ್ದಂತೆ ದೆಹಲಿಯ ಚುನಾವಣಾ ಆಯೋಗದ ಮೂಲಗಳು ಆಕ್ರೋಶ ವ್ಯಕ್ತಪಡಿಸಿ ಕ್ರಮದ ಮಾತನಾಡಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು.
ರಾಹುಲ್ ಗಾಂಧಿ ಚುನಾವಣಾ ಆಯೋಗದ ಮೇಲೆ ಮಾಡಿರುವ ಆರೋಪಗಳ ಬಗ್ಗೆ ಬಹಿರಂಗವಾಗಿ ಚುನಾವಣಾ ಆಯೋಗವನ್ನು ಕ್ಷಮೆ ಕೇಳಬೇಕು. ಅಥವಾ ತಮ್ಮ ಆರೋಪಗಳ ಬಗ್ಗೆ ಅಫಿಡವಿಟ್ ಸಲ್ಲಿಕೆ ಮಾಡಬೇಕು ಎಂದು ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ ಎನ್ನುವ ಬಗ್ಗೆ ವರದಿ ಆಗಿತ್ತು. ಒಂದು ವೇಳೆ ಅಫಿಡವಿಟ್ ಸಲ್ಲಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೂರು ನೀಡಿದ್ದರೆ, ಕಾನೂನು ಮೂಲಗ ಸಂಕಷ್ಟ ಎದುರಾಗುವ ಮುನ್ಸೂಚನೆ ಸಿಕ್ಕಿದ ಕಾರಣಕ್ಕೇ ರಾಹುಲ್ ಗಾಂಧಿ ದೂರು ಸಲ್ಲಿಸುವ ಕಾರ್ಯಕ್ರಮವನ್ನೇ ರದ್ದು ಮಾಡಿದರು ಅನ್ನೋ ಮಾತುಗಳು ಅಂದೇ ಹರಿದಾಡಿದವು. ರಾಹುಲ್ ಗಾಂಧಿ ಮತಗಳವು ಆರೋಪ ಮಾಡಿ, ತಾನೇ ಸುಮ್ಮನಾದರೂ ಚುನಾವಣಾ ಆಯೋಗ ಮಾತ್ರ ನೋಟಿಸ್ ಕೊಡುವ ಮೂಲಕ ಕಾನೂನು ಕ್ರಮದ ಸುಳಿವು ನೀಡಿದೆ. ಮುಂದಿನ ದಿನಗಳಲ್ಲಿ ಮತಗಳವು ಆರೋಪ ಪ್ರಕರಣ ಯಾವ ಮಜಲನ್ನು ತಲುಪುತ್ತದೆ ಕಾದು ನೋಡ್ಬೇಕು.


