ಮಾಜಿ ಸಚಿವ ಕೆ.ಎನ್ ರಾಜಣ್ಣ ಯಾವುದಕ್ಕೂ ತಲೆ ಕೆಡಿಸಿಕೊಳ್ಳುವ ವ್ಯಕ್ತಿತ್ವ ಅಲ್ಲ ಅನ್ನೋದು ಸಾಕಷ್ಟು ಜನರಿಗೆ ಗೊತ್ತಿರೋ ವಿಚಾರ. ಈ ನಡುವೆ ಕೆ.ಎನ್ ರಾಜಣ್ಣ ಬಿಜೆಪಿ ಹೋಗುವ ತಯಾರಿಯಲ್ಲಿ ಇದ್ದಾರೆ. ಈಗಾಗಲೇ ಬಿಜೆಪಿ ನಾಯಕರ ಜೊತೆಗೆ ಚರ್ಚೆ ನಡೆಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇಲ್ಲದೆ ಇದ್ದಿದ್ದರೆ ಇಷ್ಟೊತ್ತಿಗೆ ಬಿಜೆಪಿ ಸೇರ್ತಿದ್ರು. ಆದರೆ ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರೋ ಕಾರಣಕ್ಕೆ ಸ್ವಲ್ಪ ದಿನ ಉಳಿದಿದ್ದಾರೆ ಎನ್ನುವ ಮೂಲಕ ಮಾಗಡಿ ಶಾಸಕ ಹೆಚ್ಸಿ ಬಾಲಕೃಷ್ಣ ಹೊಸ ಬಾಂಬ್ ಹಾಕಿದ್ದರು. ಈ ಮಾತಿಗೆ ಕೆಎನ್ ರಾಜಣ್ಣ ಪುತ್ರ ರಾಜೇಂದ್ರ ತಿರುಗೇಟು ಕೂಡ ನೀಡಿದ್ದರು.
ಸೆಪ್ಟೆಂಬರ್ ಕ್ರಾಂತಿ ಎಂದು ರಾಜಣ್ಣ ಈ ಹಿಂದೆ ಹೇಳಿದ್ರು. ಒಂದು ವೇಳೆ ಮುಖ್ಯಮಂತ್ರಿ ಮಾಡ್ತೀವಿ ಅಂದ್ರೆ ಇವರ ಗ್ಯಾಂಗ್ ಬಿಜೆಪಿ ಹೋಗುತ್ತದೆ ಅನ್ನೋ ಮೂಲಕ ಡಿಸಿಎಂ ಡಿ.ಕೆ ಶಿವಕುಮಾರ್ ಟೀಂ ಎಂದು ಪರೋಕ್ಷವಾಗಿ ಕುಟುಕಿದ್ರು. ಇದೀಗ ಸ್ವತಃ ಕೆ.ಎನ್ ರಾಜಣ್ಣ ಬಾಲಕೃಷ್ಣ ಸೇರಿದಂತೆ ರಾಜೀನಾಮೆಗೆ ಕಾರಣಕರ್ತ ಎಂದುಕೊಂಡಿರುವ ಡಿಸಿಎಂ ಡಿ.ಕೆ ಶಿವಕುಮಾರ್ಗೆ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಇರುವ ತನಕ ನನ್ನ ಭವಿಷ್ಯಕ್ಕೆ ಏನೂ ಸಮಸ್ಯೆ ಇಲ್ಲ ಎನ್ನುವ ಮೂಲಕ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ನನಗೆ ಗಾಡ್ ಫಾದರ್ ಇದ್ದಂತೆ. ಅವರು ಇದ್ದಾಗ ಅಭಿವೃದ್ಧಿ ಮಾಡಲು ಸಚಿವ ಸ್ಥಾನವೇ ಬೇಕಾ..? ಎಂದು ಸಚಿವ ಸ್ಥಾನ ಇಲ್ಲದೇ ಇದ್ದರೂ ಅಭಿವೃದ್ಧಿ ಮಾಡ್ತೇನೆ ಎಂದಿದ್ದಾರೆ.

ತುಮಕೂರು ಜಿಲ್ಲೆ ಮಧುಗಿರಿಯ ಕೊಡಿಗೇನಹಳ್ಳಿಯಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎನ್.ರಾಜಣ್ಣ, ನಿನ್ನೆ ಮೊನ್ನೆಯಿಂದ ಟಿವಿಗಳಲ್ಲಿ ನಾನು ಬಿಜೆಪಿ ಸೇರ್ಪಡೆ ಆಗ್ತೇನೆ ಅಂತ ತೋರಿಸಿದ್ದಾರೆ. ನಾನು ಯಾಕೆ ಬಿಜೆಪಿಗೆ ಸೇರಲಿ..? ಎಂದು ಪ್ರಶ್ನಿಸಿರುವ ಕೆ.ಎನ್ ರಾಜಣ್ಣ, ಸೇರೋನು ಸೇರ್ತಾನೆ.. ನನಗೆ ಬಿಜೆಪಿಗೆ ಸೇರುವ ಅವಶ್ಯಕತೆ ಏನಿಲ್ಲ ಎಂದಿದ್ದಾರೆ. ನಾನು ಯಾವ ಪಾರ್ಟಿಯಿಂದ ನಿಂತ್ರು ಜನ ವೋಟ್ ಹಾಕ್ತಾರೆ. ಇಂಡಿಪೆಂಡೆಂಟ್ ಅಗಿ ನಿಂತ್ರು ಮತ ಹಾಕ್ತಾರೆ. ಸಿದ್ದರಾಮಯ್ಯ ಇರೋ ತನಕ ನನ್ನ ಭವಿಷ್ಯಕ್ಕೆ ಸಮಸ್ಯೆ ಇಲ್ಲ ಎಂದಿದ್ದಾರೆ. ಇಂತದ್ರಲ್ಲಿ ನಾನು ಯಾಕೆ ಪಾರ್ಟಿ ಬಿಡೋಕೆ ಹೋಗ್ಲಿ..? ನಂಗೇನು ಕಡಿಮೆ ಮಾಡಿದೆ ಪಾರ್ಟಿ..? ಎಂದು ಪ್ರಶ್ನೆ ಮಾಡಿದ್ದಾರೆ.
ನಾನು ಈ ಜಿಲ್ಲೆಯಲ್ಲಿ ನಿಮ್ಮ ಆಶೀರ್ವಾದದಿಂದ ಗೆದ್ದಿದ್ದೇನೆ. ಪ್ರತಿ ಕ್ಷೇತ್ರದಲ್ಲಿ ಯಾರನ್ನ ಬೇಕಾದ್ರೂ ಗೆಲ್ಲಿಸಬಹುದು, ಯಾರನ್ನ ಬೇಕಾದ್ರು ಸೋಲಿಸುವ ಶಕ್ತಿಯೂ ನನಗಿದೆ ಎನ್ನುವ ಮೂಲಕ ಮುಂದಿನ ಬಾರಿ ಸಾಕಷ್ಟು ಜನರು ನನ್ನ ಲಿಸ್ಟ್ನಲ್ಲಿ ಇದ್ದಾರೆ ಅನ್ನೋದನ್ನು ಸೂಚ್ಯವಾಗಿ ಹೇಳಿದ್ದಾರೆ. ಆದ್ದರಿಂದ ನಾನು ಯಾವತ್ತೂ ರಾಜಕೀಯದಲ್ಲಿ ಬೆನ್ನು ತೋರಿಸಲ್ಲ, ಎದೆ ಕೊಟ್ಟು ಎದುರಿಸುತ್ತೇನೆ ಹೊರತು ಬೆನ್ನು ತೋರುವನು ನಾನಲ್ಲ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನ ತೊರೆಯುವುದೂ ಇಲ್ಲ. ರಾಹುಲ್ ಗಾಂಧಿಯವರ ವೋಟ್ ಚೋರಿ ಆರೋಪಕ್ಕೆ ನನ್ನ ಬೆಂಬಲವೂ ಇದೆ. ಊಹಾಪೋಹಗಳಿಗೆ ಯಾರೂ ಮಾನ್ಯತೆ ಕೊಡಬಾರದು ಎಂದಿದ್ದಾರೆ.

ಯಾರ್ಯಾರೋ ಏನೇನೋ ಮಾತಾಡ್ತಿದ್ದಾರೆ ಯಾಕ್ ಮಾಡ್ತಿದ್ದಾರೆ..? ಏನ್ ಮಾಡ್ತಿದ್ದಾರೆ..? ಎಂಬುದು ನನಗೆ ಗೊತ್ತಿದೆ.
ಒಂದಷ್ಟು ಜನ ದೆಹಲಿಗೆ ಹೋಗ್ಬೇಕು ಅಂತ ಚರ್ಚೆ ಮಾಡ್ತಿದ್ದಾರೆ. ನಾನು ಅವರಲ್ಲಿ ಮನವಿ ಮಾಡ್ತೇನೆ ದೆಹಲಿಗೆ ಹೋಗುವಂತಹ ಅಗತ್ಯತೆ ಇಲ್ಲ. ರಾಜ್ಯದಲ್ಲಿ ಎಲ್ಲಿಯವರೆಗೆ ಸಿದ್ದರಾಮಯ್ಯ ಅಧಿಕಾರ ಹಿಡಿದಿರುತ್ತಾರೋ ಅಲ್ಲಿಯವರೆಗೂ ನನ್ನ ಭವಿಷ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಘೋಷಣೆ ಮಾಡಿದ್ದಾರೆ. ಮಾಜಿ ಸಚಿವ ಅಂದಾಕ್ಷಣಕ್ಕೆ ನಿಮ್ಮ ಪ್ರೀತಿ ವಿಶ್ವಾಸ ಏನು ಕಡಿಮೆ ಆಗಿಲ್ಲ. ಇನ್ನೂ ಜಾಸ್ತಿ ಆಗಿದೆ.. ಸಚಿಗ ಸ್ಥಾನ ಇದ್ರೂ ಒಂದೇ ಇಲ್ದೇ ಇದ್ರೂ ಒಂದೆ ಎಂದಿರುವ ರಾಜಣ್ಣ, ಕೆಲಸ ಮಾಡೋದಕ್ಕೆ ಸಚಿವ ಆಗಲೇ ಬೇಕಂತೇನಿಲ್ಲ, ಎಂಎಲ್ಎ ಕೂಡ ಆಗಬೇಕಿಲ್ಲ. ಸಚಿವ ಸ್ಥಾನ ಹೋದ ಬಳಿಕವೂ ಈಗ ಚುನಾವಣೆ ಬಂದ್ರೂ ಕಳೆದ ಬಾರಿಗಿಂತಾ ಎರಡು ಸಾವಿರ ಹೆಚ್ಚು ಮತಗಳಿಂದ ಗೆಲ್ಲುತ್ತೇನೆ. ಎಲ್ಲಾ ಜನರ ಸಹಾನುಭೂತಿ ನನ್ನಕಡೆ ಇದೆ ಎಂದಿದ್ದಾರೆ. ಇವತ್ತು ನನ್ನ ಸಚಿವ ಸ್ಥಾನವನ್ನ ಕಳೆದಿರಬಹುದು. ನಾನೇನು ಭ್ರಷ್ಟಾಚಾರ ಮಾಡಿಲ್ಲ, ಅದಕ್ಷನಾಗಿ ಇಲಾಖೆ ನಡೆಸಿಲ್ಲ ಎಂದಿದ್ದಾರೆ.


