ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಕನ್ನಡ ಚಲನಚಿತ್ರೋದ್ಯಮ ಕಂಡಂತಹ ಅತ್ಯಂತ ವಿಶೇಷ ವ್ಯಕ್ತಿತ್ವ. ನಂಬಿದವರ ಪಾಲಿನ ಆಪ್ತಮಿತ್ರನಾಗಿ ವಿಷ್ಣುವರ್ಧನ್ ಕಂಡವರು ಅದೆಷ್ಟೋ ಜನ. ಸೂರ್ಯವಂಶದ ಯಜಮಾನ ಇನ್ಮುಂದೆ ಕರ್ನಾಟಕ ರತ್ನ ಡಾ ವಿಷ್ಣುವರ್ಧನ್ ಆಗಿದ್ದಾರೆ. ಕರ್ನಾಟಕ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನ ಡಾ.ವಿಷ್ಣುವರ್ಧನ್ಗೆ ನೀಡಲು ಕ್ಯಾಬಿನೆಟ್ನಲ್ಲಿ ಸಮ್ಮತಿ ಸೂಚಿಸಿದೆ, ಈ ಬಗ್ಗೆ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಮಾಹಿತಿ ನೀಡಿದ್ದು, ಒಕ್ಕೋರಲಿನಿಂದ ಈ ನಿರ್ಧಾರ ಮಾಡಿದ್ದಾಗಿ ತಿಳಿಸಿದ್ದಾರೆ.
ಕೋಟ್ಯಂತರ ಅಭಿಮಾನಿಗಳ ಪಾಲಿನ ಅಭಿನವ ಬಾರ್ಗವ ಡಾ. ವಿಷ್ಣುವರ್ಧನ್ಗೆ ಕರ್ನಾಟಕ ರತ್ನ ನೀಡಬೇಕು ಎಂಬುದು ಅಭಿಮಾನಿಗಳ ಬೇಡಿಕೆಯಾಗಿತ್ತು. ಕನ್ನಡ ಚಿತ್ರರಂಗದ ವತಿಯಿಂದಲೂ ಸಹ ಈ ಬಗ್ಗೆ ದನಿ ಎತ್ತಿದ್ರು.. ನಟಿ ತಾರಾ, ಸುಧಾರಾಣಿ, ಜಯಮಾಲಾ, ಶೃತಿ ಕೃಷ್ಣ, ಮಾಳವಿಕ ಅವಿನಾಶ್ ಸೇರಿದಂತೆ ಹಿರಿಯ ನಟಿಯರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ವಿಷ್ಣುದಾದನ ಸೇವೆ ಪರಿಗಣಿಸಿ ಕರ್ನಾಟಕ ರತ್ನ ನೀಡಬೇಕು ಅಂತ ಮನವಿ ಮಾಡಿದ್ದರು. ಇದೀಗ ರಾಜ್ಯ ಸರ್ಕಾರ ಕರ್ನಾಟಕ ರತ್ನ ಘೋಷಣೆ ಮಾಡಿದೆ.

ಡಾ.ವಿಷ್ಣುವರ್ದನ್ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಸಚಿವ ಸಂಪುಟದಲ್ಲಿ ನಿರ್ಧಾರ ಆಗಿರುವ ವಿಚಾರವಾಗಿ ನಟ ಅನಿರುದ್ದ್ ಮಾತನಾಡಿ, ತುಂಬಾ ಸಂತೋಷ ಆಗ್ತಿದೆ, ಈ ಘಳಿಗೆಯನ್ನ ಮಾತು, ಪದಗಳಲ್ಲಿ ಹೇಳೋದು ಅಸಾಧ್ಯ. ಕರ್ನಾಟಕ ಸರ್ಕಾರ, ಮುಖ್ಯಮಂತ್ರಿಗಳು, ಅಭಿಮಾನಿಗಳು, ಕಲಾವಿದರಿಗೆ ಅಭಿನಂದನೆ ಸಲ್ಲಿಸ್ತೀನಿ. ಇವತ್ತು ನಕಾರಾತ್ಮಕ ಮಾತುಗಳನ್ನ ಆಡೋದಿಲ್ಲ. ಕರ್ನಾಟಕ ರತ್ನ ಬಂದಿರೋದಕ್ಕೆ ಸಂತೋಷ ಆಗ್ತಿದೆ ಎಂದಿದ್ದಾರೆ. ರಾಜ್ಯ ಸರ್ಕಾರದ ಈ ನಡೆಗೆ ನಾನು ಅಭಿನಂದನೆ ಸಲ್ಲಿಸ್ತೀನಿ. ಎರಡು ದಿನಗಳಲ್ಲಿ ಗೊತ್ತಾಗುತ್ತದೆ, ಎಲ್ಲಿ ಪ್ರಶಸ್ತಿ ಕೊಡ್ತಾರೆ ಅನ್ನುವುದು. ಶಾರೀರಿಕವಾಗಿ ಅವರು ನಮ್ಮ ಜೊತೆ ಇರುವಾಗಲೇ ಇದು ಬರಬೇಕಾಗಿತ್ತು, ತಡ ಆಗಿದೆ, ಆದ್ರೂ ನಮಗೆ ಸಂತೋಷ ಇದೆ ಎಂದಿದ್ದಾರೆ.

ಸಾಹಸ ಸಿಂಹ ವಿಷ್ಣುವರ್ಧನ್ ಜೊತೆ ಜೊತೆಗೆ ಹಿರಿಯ ನಟಿ ಬಿ.ಸರೋಜಾ ದೇವಿಗೂ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನ ಕರ್ನಾಟಕ ಸರ್ಕಾರ ಘೋಷಿಸಿದೆ. ದಿಗ್ಗಜರಾದ ಎನ್ಟಿಆರ್, ಎಂಜಿಆರ್, ರಾಜ್ ಕುಮಾರ್ ಸೇರಿದಂತೆ ಹಲವು ಸೂಪರ್ ಸ್ಟಾರ್ ನಟರ ಜೊತೆಗೆ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಸರೋಜಾದೇವಿ. ಕನ್ನಡ ನಾಡಿಗೆ ಕೀರ್ತಿ ತಂದುಕೊಟ್ಟಿದ್ದ ಮೇರು ನಟಿಗೆ ಕರ್ನಾಟಕ ಸರ್ಕಾರದ ಅತ್ಯುತ್ತನ್ನತ ಪ್ರಶಸ್ತಿ ಲಭಿಸಿದೆ. ಇನ್ನೂ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿ ಕನ್ನಡಕ್ಕೆ ಮೊದಲ ಜ್ಞಾನಪೀಠ ತಂದುಕೊಟ್ಟ ಕುವೆಂಪು ಅವರಿಗೆ ಮರಣೋತ್ತರ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಚಿವ ಸಂಪುಟ ಸಭೆ ನಿರ್ಧಾರ ಮಾಡಿದೆ.


