ಮೈಸೂರಿನ ನಾಡಹಬ್ಬ ದಸರಾ ಉದ್ಘಾಟನೆ ಬಗ್ಗೆ ಸೃಷ್ಟಿಯಾಗಿದ್ದ ವಿವಾದಕ್ಕೆ ಹೈಕೋರ್ಟ್ ತೆರೆ ಎಳೆದಿದೆ. ಬುಕರ್ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡಬಾರದು, ಸರ್ಕಾರದ ನಿರ್ಧಾರಕ್ಕೆ ತಡೆ ಕೊಡಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಸಲ್ಲಿಸಿದ್ದ PIL ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಪ್ರತಾಪ್ ಸಿಂಹ ಸೇರಿದಂತೆ ಮೂವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ನೇತೃತ್ವದ ದ್ವಿಸದಸ್ಯ ಪೀಠ, ಅರ್ಜಿಗಳನ್ನು ವಜಾಗೊಳಿಸಿದೆ.

ಸಂವಿಧಾನದ ಆಶಯಗಳನ್ನು ಹೇಳುತ್ತಲೇ ವಿಜಯ ದಶಮಿ ಬಗ್ಗೆಯೂ ಅರ್ಜಿದಾರರಿಗೆ ಹೈಕೋರ್ಟ್ ಪಾಠ ಹೇಳಿದೆ. ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ಇಲ್ಲ. ದೇಶದಲ್ಲಿ ತಮ್ಮ ಅಭಿಪ್ರಾಯವನ್ನು ಹೇಳುವುದೂ ತಪ್ಪಲ್ಲ. ನಿಮ್ಮೆಲ್ಲರ ಅಭಿಪ್ರಾಯಗಳನ್ನು ಸೂಕ್ತ ವೇದಿಕೆಯಲ್ಲಿ ಹೇಳಬಹುದು ಎಂದಿದೆ ಹೈಕೋರ್ಟ್.
ಸಾಹಿತಿ ಬಾನು ಮುಷ್ತಾಕ್ ಉದ್ಘಾಟನೆ ವಿಚಾರದಲ್ಲಿ ತಪ್ಪು ಏನಿದೆ..? ಸಂವಿಧಾನ ನೀಡಿರುವ ಯಾವ ಹಕ್ಕು ಉಲ್ಲಂಘನೆ ಆಗಿದೆ..? ಎಂದು ಪ್ರಶ್ನಿಸಿದೆ. ಪೂಜಾರಿಯ ಪೂಜೆ ಹಕ್ಕನ್ನು ಕಿತ್ತುಕೊಂಡಿದ್ದರೆ ನೀವು ಪ್ರಶ್ನಿಸಬಹುದು. ಯಾವುದೇ ವ್ಯಕ್ತಿಯ ಆಸ್ತಿಯನ್ನು ಕಿತ್ತುಕೊಂಡಿದ್ದರೆ ಪ್ರಶ್ನಿಸಬಹುದು. ದಸರಾ ಉದ್ಘಾಟನೆ ವಿಚಾರದಲ್ಲಿ ನಿಮ್ಮ ಯಾವ ಹಕ್ಕನ್ನು ಕಿತ್ತುಕೊಳ್ಳಲಾಗಿದೆ..? ಹೇಳಿ ಎಂದ ನ್ಯಾಯಮೂರ್ತಿಗಳು, ವಿಜಯದಶಮಿ ಎಂದರೇನು..? ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯ. ದೇಶಾದ್ಯಂತ ವಿಜಯದಶಮಿ ಆಚರಿಸುವಾಗ ನಿಮ್ಮ ತಕರಾರು ಸರಿಯಲ್ಲ ಎಂದು ಚಾಟಿ ಬೀಸಿದೆ.

ರಾಜ್ಯ ಸರ್ಕಾರ ಬಾನು ಮುಷ್ತಾಕ್ ಆಹ್ವಾನಿಸಿದ್ದು ಸರಿಯಲ್ಲ. ಹಿಂದೂ ವಿರೋಧಿ, ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ. ಕನ್ನಡಮ್ಮ ಭುವನೇಶ್ವರಿ, ಕನ್ನಡ ಬಾವುಟದ ಬಗ್ಗೆ ಅವಮಾನಕರ ಮಾತನಾಡಿದ್ದಾರೆ. ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡುವುದು ಸಂಪ್ರದಾಯ. ಹಿಂದೂ ಸಂಸ್ಕೃತಿಯಲ್ಲಿ ಮೂರ್ತಿ ಪೂಜೆಗೆ ಮಹತ್ವವಿದೆ. ಕೆಂಪು, ಹಳದಿ ಬಣ್ಣದ ಬಗ್ಗೆಯೂ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಧಾರ್ಮಿಕ ಆಚರಣೆ ಬಗ್ಗೆಯೂ ನಂಬಿಕೆ ಇಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದರು.
ಈ ಹಿಂದೆ ನಿಸಾರ್ ಅಹ್ಮದ್ ಉದ್ಘಾಟಿಸಿದಾಗ ಪ್ರತಾಪ್ ಸಿಂಹ ಇದ್ದರು. ಮುಸ್ಲಿಂ ಮಹಿಳೆ ಎಂಬ ಕಾರಣಕ್ಕೆ ವಿರೋಧ ಸರಿಯಲ್ಲ. ಲೇಖಕಿಯನ್ನು ಹಿಂದೂ ವಿರೋಧಿ ಎನ್ನುವುದು ಸರಿಯಲ್ಲ. ಚಾಮುಂಡಿ ಬೆಟ್ಟಕ್ಕೆ ಹೋಗಬೇಕೆಂದು ಅವರಿಗೂ ಇಚ್ಚೆ ಇದೆ. ಧರ್ಮದ ಆಧಾರದಲ್ಲಿ ತಾರತಮ್ಯಕ್ಕೆ ಅವಕಾಶಗಳಿಲ್ಲ, ದೇವಾಲಯಗಳಿಗೆ ಯಾರು ಬೇಕಾದರೂ ಬರಲು ಅವಕಾಶವಿದೆ. ತಾರತಮ್ಯ ಮಾಡುವಂತಿಲ್ಲ ಎಂದು ಮುಜರಾಯಿ ಇಲಾಖೆ ಸುತ್ತೋಲೆ ಇದೆ ಎಂದು ಸರ್ಕಾರ ವಾದಿಸಿತು. ಆದರೇ ಹೈಕೋರ್ಟ್ ಆದೇಶದ ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿ, ಸಂವಿಧಾನದ ಬಗ್ಗೆ ಗೊತ್ತಿಲ್ಲದ ಮಾಜಿ ಸಂಸದರೊಬ್ಬರು ಮೂರ್ಖ ಎಂದು ಛೇಡಿಸಿದ್ದಾರೆ.

ಬಾನು ಮುಷ್ತಾಕ್ ಆಯ್ಕೆ ವಿರುದ್ಧ ಹೈಕೋರ್ಟ್ನಲ್ಲಿ ಮುಖಭಂಗ ಆದ ಬಳಿಕ ಬಿಜೆಪಿ ನಾಯಕರು ಮಾತನಾಡಿ, ಪ್ರತಾಪ್ ಸಿಂಹ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಬಹುಮತದ ಸರ್ಕಾರ ಇದೆ ಎಂಬ ಕಾರಣಕ್ಕೆ ಏನು ಬೇಕಾದ್ರೂ ಮಾಡಬಹುದಾ ಎಂದು ಪ್ರಶ್ನೆ ಮಾಡಿದ್ದಾರೆ ಪ್ರತಿಪಕ್ಷ ನಾಯಕರ ಆರ್. ಅಶೋಕ್. ಅಧಿಕಾರ ಶಾಶ್ವತ ಅಲ್ಲ, ಎರಡೂವರೆ ವರ್ಷಗಳ ಬಳಿಕ ಏನು ಬೇಕಾದ್ರೂ ಆಗುತ್ತದೆ. ಬಿಜೆಪಿ ಸರ್ಕಾರ ಬಂದಾಗ ಎಲ್ಲಾ ಕಾನೂನುಗಳನ್ನು ಬದಲಿಸುತ್ತೇವೆ ಎಂದಿದ್ದಾರೆ. ದಸರಾ ಉದ್ಘಾಟಕರ ಆಯ್ಕೆ ವಿಚಾರಕ್ಕಾಗೇ ಪ್ರತ್ಯೇಕ ಕಾನೂನು ತರುವ ಸುಳಿವು ಕೊಟ್ಟಿದ್ದಾರೆ ಆರ್. ಅಶೋಕ್. ಒಟ್ಟಾರೆ ಹಾಲಿ ಸರ್ಕಾರದ ನಿರ್ಧಾರಕ್ಕೆ ಮೇಲುಗೈ ಆಗಿದೆ. ಹೀಗಾಗಿ ದಸರಾ ಉದ್ಘಾಟನೆಗೆ ಇದ್ದ ವಿರೋಧ ಕಾನೂನು ಪ್ರಕಾರ ಇತ್ಯರ್ಥ ಆಗಿದೆ ಎನ್ನಬಹುದು.


