ವಿಜಯಪುರದ ಭೀಮಾ ತೀರದಲ್ಲಿ ಸದಾ ಕಾಲ ನೆತ್ತರು ಹರಿಯುವುದರಿಂದಲೇ ಕುಖ್ಯಾತಿ ಪಡೆದಿತ್ತು. ಇದೀಗ ಬೇರೆ ವಿಚಾರಕ್ಕೂ ಭಾರೀ ಸುದ್ದಿ ಆಗ್ತಿದೆ. ವಿಜಯಪುರ ಜಿಲ್ಲೆ ಚಡಚಣದ ಎಸ್ಬಿಐ ಬ್ಯಾಂಕ್ ಲೂಟಿ ಮಾಡಲಾಗಿದೆ. ನಿನ್ನೆ ಸಂಜೆ ಚಡಚಣ ಪಟ್ಟಣದ SBI ಬ್ಯಾಂಕ್ ಕೆಲಸ ಮುಗಿಸಿ ಇನ್ನೇನು ಲೆಕ್ಕಾಚಾರದ ಬಳಿಕ ಮನೆ ಕಡೆಗೆ ಹೊರಡಲು ಸಿಬ್ಬಂದಿ ಸಜ್ಜಾಗುತ್ತಿದ್ದರು. ಈ ವೇಳೆ ಬ್ಯಾಂಕ್ಗೆ ನುಗ್ಗಿದ 10ಕ್ಕೂ ಹೆಚ್ಚು ಮುಸುಕುಧಾರಿ ದರೋಡೆಕೋರರು, ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ದರೋಡೆ ಮಾಡಿಕೊಂಡು ಎಸ್ಕೇಪ್ ಆಗಿದ್ದಾರೆ.

ಆರೋಪಿಗಳ ಪತ್ತೆಗೆ ವಿಶೇಷ ಟೀಂ ರಚನೆ!
ಮೊದಲಿಗೆ ಕಂಟ್ರಿ ಮೇಡ್ ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳನ್ನು ತೋರಿಸಿ ಬ್ಯಾಂಕ್ ಸಿಬ್ಬಂದಿಯನ್ನು ಕಟ್ಟಿಹಾಕಿದ್ದಾರೆ ಎನ್ನಲಾಗಿದ್ದು, ಆ ಬಳಿಕ ಮುಸುಕುಧಾರಿ ಆರೋಪಿಗಳು ಬ್ಯಾಂಕ್ನಲ್ಲಿ ಇದ್ದ ಸುಮಾರು 50 ಕೆಜಿಗೂ ಹೆಚ್ಚು ಚಿನ್ನಾಭರಣ ಹಾಗೂ ಸುಮಾರು 8 ಕೋಟಿ ರೂಪಾಯಿ ನಗದು ಹಣವನ್ನು ದೋಚಿಕೊಂಡು ಎಸ್ಕೇಪ್ ಆಗಿದ್ದಾರೆ. ಸ್ಥಳದಲ್ಲೇ ಚಡಚಣ ಪೊಲೀಸರು ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ದಳ ಸಿಬ್ಬಂದಿ ಆಗಮಿಸಿ ಪರೀಕ್ಷೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ದುಷ್ಕೃತ್ಯದ ಮಾಹಿತಿ ಸಂಗ್ರಹ ಮಾಡಿದ್ದಾರೆ. ಜೊತೆಗೆ ಆರೋಪಿಗಳನ್ನು ಪತ್ತೆ ಮಾಡಲು ವಿಶೇಷ ಟೀಂ ರಚನೆ ಮಾಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಒಂದೂವರೆ ಗಂಟೆಗಳ ಕಾಲ ಸರ್ಚಿಂಗ್!!
ನಿನ್ನೆ ಸಂಜೆ ಬ್ಯಾಂಕ್ ವಹಿವಾಟು ಮುಗಿದು ಗ್ರಾಹಕರು ಯಾರು ಬರುತ್ತಿಲ್ಲ ಅನ್ನೋದನ್ನು ಗಮನಿಸಿದ ಗ್ಯಾಂಗ್ ಬ್ಯಾಂಕ್ಗೆ ಎಂಟ್ರಿ ಆಗಿತ್ತು. ಸಂಜೆ 6 ಗಂಟೆಗೆ SBI ಬ್ಯಾಂಕ್ ಒಳಕ್ಕೆ ಎಂಟ್ರಿಯಾಗಿದ್ದ ಲೂಟಿಕೋರರ ತಂಡ ಸರಿ ಸುಮಾರು ಒಂದೂವರೆ ಗಂಟೆಗಳ ಕಾಲ ಬ್ಯಾಂಕ್ ಒಳಗೆ ಶೋಧ ನಡೆಸಿ, ಕೈಗೆ ಸಿಕ್ಕಿದ್ದೆಲ್ಲವನ್ನೂ ಚೀಲಗಳಲ್ಲಿ ತುಂಬಿಕೊಂಡು ಸಂಜೆ 7.30ರ ಸುಮಾರಿಗೆ ಬ್ಯಾಂಕ್ನಿಂದ ಹೊರಬಂದು ಎಸ್ಕೇಪ್ ಆಗಿದ್ದಾರೆ. ನಗನಾಣ್ಯ ದೋಚಿ ಪರಾರಿ ಆಗಿರುವ ಖದೀಮರ ಕೈಗೆ ಕೋಳ ಹಾಕಲು, ಸ್ವತಃ ಎಸ್ಪಿ ಲಕ್ಷ್ಮಣ ನಿಂಬರಗಿ ಮಹಾರಾಷ್ಟ್ರಕ್ಕೆ ತೆರಳಿದ್ದಾರೆ.

50 ಕೆಜಿ ಚಿನ್ನ, 8 ಕೋಟಿ ನಗದು ಕಳವು?
ಕಂಟ್ರಿ ಪಿಸ್ತೂಲ್, ಮಾರಕಾಸ್ತ್ರ ಹಿಡಿದುಕೊಂಡಿದ್ದ ಗ್ಯಾಂಗ್ ₹8 ಕೋಟಿ ಹಣ, 50 ಕೆ.ಜಿ.ಗೂ ಹೆಚ್ಚು ಚಿನ್ನಾಭರಣ ದರೋಡೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಬ್ಯಾಂಕ್ ಎದುರು ಗ್ರಾಹಕರು ಆತಂಕದಿಂದ ಜಮಾವಣೆಗೊಂಡಿದ್ದರು. ಚಡಚಣ SBI ಬ್ಯಾಂಕ್ ದರೋಡೆ ಬಳಿಕ ಖದೀಮರು ಮಹಾರಾಷ್ಟ್ರಕ್ಕೆ ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ. ಮಹಾರಾಷ್ಟ್ರದತ್ತ ಎಸ್ಕೇಪ್ ಆಗಿರೋ ದರೋಡೆಕೋರರನ್ನು ಹಿಡಿಯಲು ಹುಲಜಂತಿ ಮಾರ್ಗವಾಗಿ ಪೊಲೀಸರ ತಂಡ ಹಿಂಬಾಲಿಸಿ ಹೋಗಿದೆ. ಮಹಾರಾಷ್ಟ್ರದ ಸೊಲ್ಲಾಪುರದ ಮಂಗಳವೇಡ ತಾಲೂಕಿನ ಹುಲಜಂತಿ ಬಳಿ ದರೋಡೆಕೋರರ ಕಾರು ಕುರಿಗಳಿಗೆ ಡಿಕ್ಕಿಯಾಗಿದೆ.

ಕುರಿಗಳಿಗೆ ಡಿಕ್ಕಿಯಾದ ಕಾರು ಬಿಟ್ಟು ಎಸ್ಕೆಪ್!
ಕಾರು ಕುರಿಗಳಿಗೆ ಡಿಕ್ಕಿಯಾದದ್ದನ್ನ ಗ್ರಾಮಸ್ಥರು ಪ್ರಶ್ನಿಸಿದ್ದು, ಪಿಸ್ತೂಲ್ ಹಿಡಿದು ಗ್ರಾಮದ ಜನರಿಗೆ ಬೆದರಿಕೆ ಹಾಕಿ ಪರಾರಿ ಆಗಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. ಕಾರಿನಲ್ಲಿದ್ದ ಓರ್ವನ ಕೈಯಲ್ಲಿ ಪಿಸ್ತೂಲ್ ಇತ್ತು. KA 24 DH 2456 ಕಾರಿನಲ್ಲಿದ್ದ ಓರ್ವ ದರೋಡೆಕೋರ ಇದ್ದ ಎನ್ನಲಾಗಿದೆ. ಇನ್ನೂ ಅದೇ ಕಾರಿನಲ್ಲೇ ಅಲ್ಪಸ್ವಲ್ಪ ಚಿನ್ನಾಭರಣವೂ ಬಿದ್ದಿದೆ. ಚಡಚಣದಿಂದ ಕೇವಲ ಏಳೆಂಟು ಕಿ. ಮೀ. ದೂರವಿರುವ ಮಹಾರಾಷ್ಟ್ರದ ಗಡಿ ಹಾಗೂ ಚಡಚಣದಿಂದ ಸುಮಾರು 13 ರಿಂದ 15 ಕಿ. ಮೀ. ದೂರವಿರುವ ಹುಲಜಂತಿ ಗ್ರಾಮದಲ್ಲಿ ಕಾರು ಪತ್ತೆಯಾಗಿದೆ. ಖದೀಮರು ಸಿಗದೆ ಗ್ರಾಹಕರಿಗೆ ನೆಮ್ಮದಿಯಿಲ್ಲ ಎನ್ನುವಂತಾಗಿದೆ.


