ಜಾತಿ ಗಣತಿ ಬಗ್ಗೆ ಗೊಂದಲ ಉಂಟಾಗಿರುವ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದ್ದು, ಸಮೀಕ್ಷೆಯನ್ನು ಮುಂದೂಡಿಕೆ ಮಾಡುವ ಬಗ್ಗೆ ಸಮಾಲೋಚನೆ ಮಾಡಲಾಗಿದೆ ಎನ್ನಲಾಗಿದೆ. ಸಮೀಕ್ಷೆ ಮುಂದೂಡಿಕೆ ಮಾಡಿದರೆ ಹೇಗೆ ಎಂಬ ಬಗ್ಗೆ ಸಂಪುಟ ಸಭೆಯಲ್ಲಿ ನಡೆದಿದೆ. ಹೆಚ್ಚುವರಿ ಜಾತಿಗಳು ಸೇರ್ಪಡೆಯಾಗಿವೆ. ಒಟ್ಟು 331 ಜಾತಿಗಳು ಹೆಚ್ಚುವರಿಯಾಗಿ ಸೇರ್ಪಡೆ ಆಗಿವೆ. ಇದನ್ನು ಪರಿಗಣಿಸುವುದು ಹೇಗೆ..? ಇದನ್ನ ಮುಂದಿಟ್ಟುಕೊಂಡು ಸಮೀಕ್ಷೆ ಮಾಡುವುದಕ್ಕೆ ಸಾಧ್ಯ ಇಲ್ಲ. ಸಮೀಕ್ಷೆಯನ್ನೇ ಮುಂದೂಡಿಕೆ ಮಾಡಿ ಎಂದು ಸಚಿವರು ಆಗ್ರಹ ಮಾಡಿದ್ದಾರೆ.

ಜಾತಿಗಣತಿ ಗೊಂದಲದ ಬಗ್ಗೆ ಸ್ವತಃ ಸಿದ್ದರಾಮಯ್ಯ ಕೂಡ ಬೇಸರ ಹೊರಹಾಕಿದ್ದು, ನನ್ನ ಮೇಲೆ ಜಾತಿವಾದಿ ಅಂತ ಪಟ್ಟ ಕಟ್ಟುತ್ತಿದ್ದಾರೆ. ಎಲ್ಲಾ ಜಾತಿಯಲ್ಲೂ ಬಡವರಿದ್ದಾರೆ. ಅದನ್ನ ಸರಿಪಡಿಸಲು ಸಮೀಕ್ಷೆ ಮಾಡ್ತಿರೋದು. ಆದರೆ ಇದು ಕೇವಲ ಜಾತಿ ಸಮೀಕ್ಷೆ ಎಂದು ಬಿಂಬಿಸುತ್ತಿದ್ದಾರೆ ಎಂದು ಸಂಪುಟ ಸಭೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಇದಕ್ಕೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ ನೀಡಿ, ಜಾತಿಗಣತಿ ಕಾಲಂಗಳಲ್ಲಿ ಸಂಪೂರ್ಣವಾಗಿ ಗೊಂದಲ ಮಾಡಿದ್ದಾರೆ. ಇದರಿಂದ ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ಆಗುತ್ತದೆ. ಈ ಗೊಂದಲ ಪರಿಹರಿಸಿ ಎಂದು ಮನವಿ ಮಾಡಿದ್ದಾರೆ.

ಜಾತಿ ಜನಗಣತಿ ಸಮೀಕ್ಷೆ ಗೊಂದಲ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಸಚಿವರ ತುರ್ತು ಸಭೆ ನಡೆಯಿತು.. ವಿಧಾನಸೌಧದಲ್ಲಿ ಸಚಿವ ಹೆಚ್.ಕೆ ಪಾಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವ ಮಹದೇವಪ್ಪ, ಮುನಿಯಪ್ಪ, ಭೈರತಿ ಸುರೇಶ್, ಎಂ.ಬಿ ಪಾಟೀಲ್, ಈಶ್ವರ್ ಖಂಡ್ರೆ ಸೇರಿದಂತೆ ಹಲವು ಸಚಿವರು ಭಾಗಿಯಾಗಿದ್ರು..ಕುಲಶಾಸ್ತ್ರೀಯ ಅಧ್ಯಯನ ಮಾಡದೇ ಜಾತಿ ಸಮೀಕ್ಷೆ ಮಾಡಲು ಅಸಾಧ್ಯ ಅನ್ನೋ ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.. ಆದರೆ ಈ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಲಿಲ್ಲ.
ರಾಜ್ಯದಲ್ಲಿ ಸೆಪ್ಟೆಂಬರ್ 22ರಿಂದ ಜಾತಿ ಜನಗಣತಿ ಆರಂಭ ಆಗೋದು ಡೌಟ್ ಎನ್ನಲಾಗ್ತಿದೆ. ಕುಲಶಾಸ್ತ್ರೀಯ ಅಧ್ಯಯನ ಮಾಡದೇ ಜಾತಿ ಸಮೀಕ್ಷೆ ಅಸಾಧ್ಯ, ಈಗ ಮಾಡುವ ಜಾತಿ ಸಮೀಕ್ಷೆ ಕೂಡ ವ್ಯರ್ಥ ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗಿದೆ. ಹಿರಿಯ ಸಚಿವರ ಸಭೆಯಲ್ಲಿ ಒಮ್ಮತದ ನಿಲುವು ವ್ಯಕ್ತವಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಗಮನಕ್ಕೆ ತರಲು ತೀರ್ಮಾನ ಮಾಡಲಾಗಿದೆ. ಜನಾಂಗ, ಕುಲದ ಬಗ್ಗೆ ವೈಜ್ಞಾನಿಕ ಅಧ್ಯಯನ ಆಗ್ಬೇಕು. ಕುಲ ಅಧ್ಯಯನ ಮಾಡದೆ ಜಾತಿ ಸಮೀಕ್ಷೆ ಸಾಧ್ಯವಿಲ್ಲ ಎನ್ನಲಾಗಿದ್ದು, ಜಾತಿ ಜನಗಣತಿ ಸಮೀಕ್ಷೆಗೆ ಬಹುತೇಕ ತಡೆ ನೀಡುವ ಸಾಧ್ಯತೆಯಿದೆ.

ಜಾತಿ ಜನಗಣತಿ ಗೊಂದಲದ ಬಗ್ಗೆ ಸಿಎಂ ಸಿದ್ದರಾಮಯ್ಯ ಚರ್ಚೆ ಮಾಡಿದ್ದು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು, ಸಚಿವರ ಜೊತೆಗೂ ಚರ್ಚೆ ಮಾಡಿದ್ದಾರೆ. ಡಿಸಿಎಂ ಡಿಕೆಶಿ ನೇತೃತ್ವದ ಸಚಿವರ ಅಭಿಪ್ರಾಯದ ವರದಿ ಮಂಡಿಸಿರುವ ಸಚಿವ ಶಿವರಾಜ್ ತಂಗಡಗಿ, ಯಾಕೆ ಇಷ್ಟೆಲ್ಲ ಗೊಂದಲ ಆಯ್ತು, ಕಳೆದ ಬಾರಿಯ ಸಮೀಕ್ಷೆಗೂ ಈ ಬಾರಿಯ ಸಮೀಕ್ಷೆಗೂ ವ್ಯತ್ಯಾಸ ಏನು ಕಂಡು ಬಂದಿದೆ..? ಹೆಚ್ಚುವರಿ ಸೇರ್ಪಡೆಗೊಂಡ 331 ಉಪ ಜಾತಿಗಳ ಬಗ್ಗೆ ಎದ್ದಿರುವ ಆಕ್ಷೇಪ ಏನು..? ಅದನ್ನು ತೆಗೆಯಬೇಕೆಂಬ ಸಚಿವರ ನಿಲುವಿನ ಬಗ್ಗೆ ಚರ್ಚೆ ಮಾಡಲಾಗಿದೆ. ಮುಂದೆ ಕಾನೂನು ತಜ್ಞರ ಜೊತೆಗೂ ಚರ್ಚಿಸಿ ಸೂಕ್ತ ನಿರ್ಣಯಕ್ಕೆ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ಗೊಂದಲ ಸರಿಪಡಿಸಲು ಸ್ವಲ್ಪ ಕಾಲಾವಕಾಶ ಬೇಕಿರುವ ಕಾರಣಕ್ಕೆ ಸೆಪ್ಟೆಂಬರ್ 22ರ ಬದಲಿಗೆ ಮುಂದಕ್ಕೆ ಹಾಕುವುದು ಸೂಕ್ತವೆ ಅನ್ನೋ ಬಗ್ಗೆ ಇವತ್ತು ಬೆಳಗ್ಗೆ ಮತ್ತೊಮ್ಮೆ ಸಭೆ ಮಾಡಿ ಅಂತಿಮ ತೀರ್ಮಾನ ಮಾಡುವ ಸಾಧ್ಯತೆಯಿದೆ.


