ರಾಜ್ಯ ಬಿಜೆಪಿ ನಿಯೋಗ ಹಿಂದುಳಿದ ಆಯೋಗಕ್ಕೆ ಮನವಿ ನೀಡಿದ್ದು, 15 ಎಸ್ಸಿ ಉಪಜಾತಿಗಳಿಗೆ ಕ್ರಿಶ್ಚಿಯನ್ ಟ್ಯಾಗ್ ಕೂಡಲೆ ಕೈ ಬಿಡಬೇಕು ಬಿಜೆಪಿ ನಿಯೋಗ ಆಗ್ರಹ ಮಾಡಿದೆ. ಎರಡು ತಿಂಗಳ ಹಿಂದೆ ನಾಗಮೋಹನ್ ದಾಸ್ ವರದಿ ನೀಡಿದ್ದು, ಹಿಂದುಳಿದ ಮತ್ತು ದಲಿತ ಜಾತಿಗಳ ಜೊತೆಗೆ 15 ಕ್ರಿಶ್ಚಿಯನ್ ಜಾತಿಗಳನ್ನು ಸೇರಿಸಿರಲಿಲ್ಲ. ಹೀಗಾಗಿ ಅಧಿಕೃತವಾಗಿ ಪಟ್ಟಿ ಕೈಬಿಡಿ ಎಂದು ಆಗ್ರಹ ಮಾಡಲಾಗಿದೆ. ಎಸ್ಸಿ ಸಮೀಕ್ಷೆ ಮತ್ತೆ ನಡೆಸೋದು ಬೇಡ ಎಂದು ಮನವಿ ಮಾಡಿದ್ದಾರೆ. ಆಯೋಗದ ಅಧ್ಯಕ್ಷ ಮಧುಸೂಧನ್ ನಾಯಕ್ ಮೇಲೆ ಬಿಜೆಪಿ ನಾಯಕರು ಗರಂ ಆಗಿದ್ದು, ಮಾಜಿ ಸಚಿವ ಎನ್. ಮಹೇಶ್, ಮಾಜಿ ಸಂಸದ ಮುನಿಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.

ಉಪಜಾತಿಗಳನ್ನ ಕ್ರಿಶ್ಚಿಯನ್’ಗೆ ಟ್ಯಾಗ್ ಮಾಡಿದ್ದಕ್ಕೆ ಆಕ್ರೋಶ ಹೊರ ಹಾಕಿದ್ದು, ಇನ್ನೊಂದು ಧರ್ಮಕ್ಕೆ ಟ್ಯಾಗ್ ಮಾಡಿದ್ರಿ..? ನಿಮ್ಮ ಉದ್ದೇಶವೇನು ಎಂದು ಕಿಡಿಕಾರಿದ್ದಾರೆ. ಈ ವೇಳೆ ಇಬ್ಬರನ್ನು ಸಮಾಧಾನಪಡಿಸಿದ ಚಲವಾದಿ ನಾರಾಯಣಸ್ವಾಮಿ, ಆಯೋಗದ ಉದ್ದೇಶ, ನಿಲುವು ಏನೆಂದು ಕೇಳೋಣ. ಸುಮಾರು ಒಂದು ಗಂಟೆಗಳಿಂದ ಚರ್ಚೆ ಮಾಡಿ ಲೋಪದೋಷಗಳನ್ನು ಸರಿಪಡಿಸಲು ಮನವಿ ಮಾಡಿದೆ ಬಿಜೆಪಿ ನಿಯೋಗ. ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಮೀಕ್ಷೆ ಆರಂಭವಾಗಿದೆ. ಈ ಸಮೀಕ್ಷೆಯು ಒಂದು ಗೊಂದಲದ ಗೂಡಾಗಿದೆ. ಹಲವಾರು ರೀತಿಯ ಗೊಂದಲಗಳಿವೆ. ಗೊಂದಲಗಳ ಪರಿಹಾರಕ್ಕಾಗಿ ಅಧ್ಯಕ್ಷರ ಭೇಟಿ ಆಗಿದ್ದೆವು.

ಕ್ರೈಸ್ತರು, ಒಕ್ಕಲಿಗ ಕ್ರೈಸ್ತರು, ಲಿಂಗಾಯತ ಕ್ರೈಸ್ತರು ಹೀಗೆ ದಲಿತರನ್ನು ಬ್ರಾಹ್ಮಣರಿಗೆ ಸೇರಿಸಿದ್ದಾರೆ. ಇದಕ್ಕೆ ಹೋರಾಟಕ್ಕೆ ಇಳಿದಾಗ, ಅದನ್ನು ಕೈ ಬಿಟ್ಟಿದ್ದೇವೆ ಅಂದ್ರು. ಆದರೆ ಇನ್ನೂ ಅವರನ್ನು ಕೈ ಬಿಟ್ಟಿಲ್ಲ. ಇವಾಗ ಅವ್ರು ಸುತ್ತು ಬಳಸಿ ಮಾತಾಡ್ತಿದ್ದಾರೆ. ಕ್ರೈಸ್ತ ಜಾತಿಯಿಂದ ಮತಾಂತರಗೊಂಡವರು ಹಾಗೆಯೇ ಉಳಿಯುತ್ತಾರೆ ಅಂತಾರೆ. ಈ ಆಯೋಗದಲ್ಲಿ ಇರೋರು ಇದನ್ನು ನಡೆಸುತ್ತಿಲ್ಲ. ಆದರೆ ಇದನ್ನು ಕಂಟ್ರೋಲ್ ಮಾಡೋರೆ ಬೇರೆ ಕಡೆ ಇದ್ದಾರೆ. ಈ ಜಾತಿಗಳೇ ಮತಾಂತರಗೊಂಡರು ಆ ಜಾತಿ ಇರಲ್ಲ. ಇದೆ ರೀತಿ ಕೇರಿಗಳಲ್ಲಿ ಮಾಹಿತಿ ಪಡೆಯಲು ಬಂದರೆ, ನಮ್ಮವರು ಸುಮ್ಮನೆ ಬಿಡುವುದಿಲ್ಲ. ಇದು ಒಟ್ಟಾರೆ ಷಡ್ಯಂತ್ರದ ಭಾಗವಾಗಿದೆ. ಅಧ್ಯಕ್ಷರು ಕರೆದು ತೀರ್ಮಾನ ಮಾಡೋದಾಗಿ ಸಭೆ ಹೇಳಿದ್ದಾರೆ. ತೀರ್ಮಾನ ತಗೊಂಡಿಲ್ಲ ಅಂದರೆ ಮುಂದೆ ಆಗುವ ಪರಿಣಾಮ ನೀವೆ ಹೊಣೆಯಾಗಬೇಕಾಯಿತು ಎಂದು ಎಚ್ಚರಿಸಿದ್ದಾರೆ.

ಆದಿ ಆಂಧ್ರ ಕ್ರಿಶ್ಚಿಯನ್, ಹೊಲಯ ಕ್ರಿಶ್ಚಿಯನ್, ಲಂಬಾಣಿ, ಮಾದಿಗ ಕ್ರಿಶ್ಚಿಯನ್, ವಾಲ್ಮೀಕಿ ಕ್ರಿಶ್ಚಿಯನ್ ಅಂತಾನೇ ಇದೆ. ಇದನ್ನು ಸಹಿಸಿಕೊಂಡು ನಾವು ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ. ಒಕ್ಕಲಿಗ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್ ತೆಗೆದಿದ್ದೇ ಆದಲ್ಲಿ, ಇದನ್ನು ಕೂಡ ತೆಗೆಯಬೇಕು. ಹೆಚ್ಚುವರಿ ಜಾತಿ ಪಟ್ಟಿಯನ್ನು ಪ್ರಬಲ ಸಮುದಾಯಗಳು ವಿರೋಧಿಸಿದಾಗ ಅದನ್ನು ಹೈಡ್ ಮಾಡಿದ್ದೇವೆ ಎಂದು ಹೇಳಿದರು. ದಲಿತ ಸಮುದಾಯಕ್ಕೆ ಟ್ಯಾಗ್ ಮಾಡಿರುವ ಧರ್ಮವನ್ನು ಹೈಡ್ ಮಾಡಿಲ್ಲ. ಆಯೋಗವನ್ನು ನಿಯಂತ್ರಣ ಮಾಡುವ ರಿಮೋಟ್ ಕಂಟ್ರೋಲ್ ಬೇರೆ ಕಡೆ ಇದೆ. ಕ್ರಿಶ್ಚಿಯನ್ ಧರ್ಮಕ್ಕೆ ಸೇರ್ಪಡೆ ಹಿಂದೂ ಧರ್ಮಕ್ಕೆ ಮಾತ್ರ ಸೀಮಿತವೇ..? ಇದು ಹಿಂದುತ್ವ ವಿರೋಧಿ ನೀತಿ ಎಂಬುದು ಸ್ಪಷ್ಟವಾಗಿದೆ. ಇದೇ ರೀತಿ ಮುಂದುವರಿಸಿ ಕೇರಿಗಳಲ್ಲಿ ಬಂದರೆ ಅಲ್ಲಿ ನಮ್ಮ ಜನ ಬಿಡುವುದಿಲ್ಲ. ನೀವು ಆಗ ಏನೂ ಬರೆದುಕೊಳ್ಳಲು ಆಗುವುದಿಲ್ಲ. ಯಾವ ಆಯೋಗದಲ್ಲೂ ಇಲ್ಲದ ಕ್ರಿಶ್ಚಿಯನ್ ಈಗ ಯಾಕೆ ಹುಟ್ಟಿತು..? ಎಂದು ಪ್ರಶ್ನಿಸಿದ್ದಾರೆ.

ಕೇಂದ್ರದ ಮಾಜಿ ಸಚಿವ ಎ. ನಾರಾಯಣ ಸ್ವಾಮಿ ಮಾತನಾಡಿ, ಕ್ರಿಶ್ಚಿಯನ್ಗೆ ಮತಾಂತರ ಆದ ಹಿಂದೂಗಳನ್ನು ಮೂಲ ಜಾತಿಗಳ ಪಟ್ಟಿಯಿಂದ ತೆಗೆಯೋದಾಗಿ ಆಯೋಗದ ಅಧ್ಯಕ್ಷರು ಹೇಳಿದ್ದಾರೆ. ಕೇಂದ್ರಕ್ಕೆ ಶಿಫಾರಸು ಕಳಿಸ್ತೇವೆ ಅಂತ ಆಯೋಗದ ಅಧ್ಯಕ್ಷರು ಹೇಳಿದ್ದಾರೆ. ಹಿಂದೂಗಳ ಸಂಖ್ಯೆ ಕಡಿಮೆ ಮಾಡುವ ಷಡ್ಯಂತ್ರ ಇದರಲ್ಲಿದೆ. ಪರಿಶಿಷ್ಟ ಜಾತಿಗಳ ಸಂಖ್ಯೆ ಕುಂಠಿತ ಮಾಡುವ ಸಂಚು ಮಾಡಲಾಗಿದೆ. ಕ್ರಿಶ್ಚಿಯನ್ ಧರ್ಮಕ್ಕೆ ದಲಿತರನ್ನು ಸೇರಿಸಿ ಮೀಸಲಾತಿ ಕಸಿಯುವ ಹುನ್ನಾರವೂ ಇದರಲ್ಲಿದೆ. ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸಲು ಈ ಹುನ್ನಾರ ಮಾಡ್ತಿದೆ ಸರ್ಕಾರ. ದಲಿತರು ಎಚ್ಚೆತ್ತುಕೊಳ್ಳಬೇಕು ಎಂದು ಮಾಜಿ ಸಂಸದ ಮುನಿಸ್ವಾಮಿ ಕರೆ ನೀಡಿದ್ದಾರೆ.
ಇಡೀ ರಾಜ್ಯದ ದಲಿತ ಜನರನ್ನು ಸಿದ್ದರಾಮಯ್ಯ ಕ್ರಿಶ್ಚಿಯನ್ ಮಾಡಲು ಹೊರಟಿದ್ದಾರೆ. ಹಿಂದುಳಿದ ವರ್ಗಗಳ ಆಯೋಗವನ್ನು ಗುಲಾಮರಾಗಿ ಮಾಡಿಕೊಂಡಿದ್ದಾರೆ. ಹಿಂದೆ ಏಸು ಬೆಟ್ಟದಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಪ್ರೋತ್ಸಾಹ ಮಾಡಿದ್ರು. ಈಗ 1.5 ಕೋಟಿ ದಲಿತರನ್ನು ಕ್ರಿಶ್ಚಿಯನ್ ಮಾಡಲು ಹೊರಟಿದ್ದಾರೆ. ಸರ್ಕಾರದ ಈ ಸಮೀಕ್ಷೆಯನ್ನು ದಲಿತರು ಬಹಿಷ್ಕರಿಸಬೇಕು. ಸಮೀಕ್ಷೆಗೆ ಬಂದವರಿಗೆ ಕಪ್ಪು ಬಟ್ಟೆ ತೋರಿಸಿ ಗೋಬ್ಯಾಕ್ ಅಂತ ದಲಿತರು ಹೇಳಬೇಕು. ದಲಿತರ ಜತೆ ಇರುವ ಕ್ರಿಶ್ಚಿಯನ್ ಹೆಸರು ಕೈಬಿಡದಿದ್ದಲ್ಲಿ ಆಯೋಗದ ಕಚೇರಿಗೆ ಬೀಗ ಹಾಕುತ್ತೇನೆ, ರಾಜ್ಯಾದ್ಯಂತ ಹೋರಾಟ ಮಾಡ್ತೇವೆ ಎಂದು ಕಿಡಿಕಾರಿದ್ದಾರೆ ಮಾಜಿ ಸಂಸದ ಮುನಿಸ್ವಾಮಿ.

ಬೆಂಗಳೂರಿನಲ್ಲಿ ಶಾಸಕ ಸುನೀಲ್ ಕುಮಾರ್ ಮಾತನಾಡಿ, ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಯಲ್ಲಿ ಗೊಂದಲದ ಬಗ್ಗೆ ಮನವಿ ಸಲ್ಲಿಸಿದ್ದೆವು. ಹಿಂದೂ ಉಪಜಾತಿಗಳಿಗೆ ಕ್ರಿಶ್ಚಿಯನ್ ನಾಮಕರಣ ಕೈ ಬಿಡಬೇಕೆಂದು ಒತ್ತಾಯಿಸಲಾಗಿದೆ. ಮನವಿ ಮಾಡಿದರೂ ಇನ್ನೂ ಆಯೋಗ ಸ್ಪಷ್ಟಪಡಿಸಿಲ್ಲ, 33 ಉಪ ಜಾತಿಗಳನ್ನು ಕೈ ಬಿಡಲು ನನಗೆ ರಾಜಕೀಯ ಒತ್ತಡ ಇತ್ತು ಎಂದು ಆಯೋಗದ ಅಧ್ಯಕ್ಷರು ಹೇಳುತ್ತಾರೆ. ಗೊಂದಲದ ವಾತಾವರಣವನ್ನು ಆಯೋಗವೇ ಸೃಷ್ಟಿ ಮಾಡಿದೆ. ರಾಜಕೀಯ ಉಪಯೋಗಕ್ಕೆ ಈ ಸಮೀಕ್ಷೆ ಬಳಕೆಯಾಗಬಾರದು. ಸಿದ್ದರಾಮಯ್ಯನವರ ರಾಜಕೀಯ ಉಪಯೋಗಕ್ಕೆ ಸಮೀಕ್ಷೆ ಬಳಕೆಯಾಗುವಂತೆ ಕಾಣುತ್ತಿದೆ. ಆಯೋಗದ ಅಧ್ಯಕ್ಷರನ್ನು ಇನ್ಯಾರೋ ನಿಯಂತ್ರಣ ಮಾಡುತ್ತಿದ್ದಾರೆ. ಸಮೀಕ್ಷಾ ವರದಿಯನ್ನು ನಿರ್ಲಕ್ಷ್ಯ ಮಾಡುವಂತಹ ಕೆಲಸ ಸರ್ಕಾರ ಮಾಡುತ್ತಿದೆ. ಜನರು ಆಕ್ರೋಶದಿಂದ ಪ್ರತಿಭಟನೆಗೆ ಇಳಿಯುವ ಮೊದಲು ಕೈ ಬಿಡಿ ಎಂದು ಹೇಳಿದರು. ಪ್ರತಿಭಟನೆಗೆ ಆಯೋಗ ಅವಕಾಶ ಕೊಡಬಾರದು. ಇಡೀ ಮೀಸಲಾತಿಯನ್ನು ಏರು ಪೇರು ಮಾಡುವ ಹುನ್ನಾರವನ್ನು ಆಯೋಗ ಮಾಡುತ್ತಿದೆ ಎಂದು ದೂರಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ಮಾತನಾಡಿ, ಸಾಮಾಜಿಕ ಆರ್ಥಿಕ ಸಮೀಕ್ಷೆ ಶುರುವಾಗಿದೆ, ಚೆನ್ನಾಗಿ ನಡೀತಿದೆ. ಗೊಂದಲ, ತಾಂತ್ರಿಕ ಸಮಸ್ಯೆ ಬಗ್ಗೆ ನಿರ್ವಹಿಸಲು ಸದಸ್ಯ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿದ್ದೇವೆ. ಬಿಜೆಪಿ ನಿಯೋಗ ಭೇಟಿ ಮಾಡಿದೆ. 14 ಪರಿಶಿಷ್ಟ ಜಾತಿಗಳ ಹೆಸರು ಕ್ರಿಶ್ಚಿಯನ್ ಜತೆ ಇದೆ, ಯಾಕೆ ತೆಗೆದುಹಾಕಿಲ್ಲ ಅಂತ ಕೇಳಿದ್ರು. ಬಿಜೆಪಿಯವರು ತಪ್ಪು ಕಲ್ಪನೆ ಮಾಡಿಕೊಂಡು ಬಂದಿದ್ರು. ಅವರು ತೋರಿಸಿದ 14 ಜಾತಿಗಳು ಕ್ರಿಶ್ಚಿಯನ್ ಜತೆ ಸೇರಿಸಿಲ್ಲ. ಈಗ ತುರ್ತು ಸಭೆ ಕರೆದು ಇದರ ಬಗ್ಗೆ ವಿಮರ್ಶೆ ಮಾಡಿದ್ದೇವೆ. ಬಿಜೆಪಿಯವರು ಹೇಳಿರುವ ಕ್ರಿಶ್ಚಿಯನ್ ಜೋಡಿತ ಪಟ್ಟಿಯೇ ಇಲ್ಲ. ಇವು ಯಾವುವೂ ನಮ್ಮ ಪಟ್ಟಿಯಲ್ಲಿ ಇಲ್ಲ. ನಮ್ಮ ಪಟ್ಟಿಯಲ್ಲೇ ಇಲ್ಲ ಅಂದ ಮೇಲೆ ತೆಗೆದುಹಾಕುವ ಪ್ರಶ್ನೆಯೇ ಇಲ್ಲ. ಇದರ ಬಗ್ಗೆ ಆಯೋಗದಿಂದ ಮಾಧ್ಯಮ ಪ್ರಕಟಣೆ ಹೊರಡಿಸ್ತೇವೆ ಎಂದಿದ್ದಾರೆ.


