ರಾಜ್ಯಾದ್ಯಂತ ಮೇ 29ರವರೆಗೆ ಭಾರಿ ಮಳೆಯಾಗುವ ಮನ್ಸೂಚನೆ ಕೊಡಲಾಗಿದೆ. ಇವತ್ತು 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಹಾಗೂ 2 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕೊಪ್ಪಳ, ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಭಾರಿ ಮಳೆಯ ಮುನ್ಸೂಚನೆಯಿದೆ. ಮುಂದಿನ 48 ಗಂಟೆಗಳ ಕಾಲ ಬೆಂಗಳೂರಿನಲ್ಲಿ ಸಾಧಾರಣ ಮಳೆ ಆಗಲಿದ್ದು, ಬೆಂಗಳೂರಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಯಾದಗಿರಿ, ರಾಯಚೂರು, ಬಾಗಲಕೋಟೆ, ಬಳ್ಳಾರಿ, ವಿಜಯ ನಗರ, ದಾವಣಗೆರೆ ಸೇರಿದಂತೆ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕೋಲಾರ ಜಿಲ್ಲೆಯಲ್ಲಿ ಮಳೆಯಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾವಿರಾರು ಎಕರೆ ಬೆಳೆ ನಾಶವಾಗಿದೆ. ಮುಳಬಾಗಿಲು ತಾಲೂಕಿನ ಕೀಲಗಾಣಿ ಗ್ರಾಮದಲ್ಲಿ ಬೀನ್ಸ್, ಬಾಳೆ ಬೆಳೆದಿದ್ದ ರೈತರು ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೀಲಗಾಣಿ ಗ್ರಾಮದ ರೈತ ಮಹಿಳೆ ಮಂಜುಳಾ ಎಂಬುವರು 1 ಎಕರೆ ಜಾಗದಲ್ಲಿ ಒಂದೂವರೆ ಲಕ್ಷ ಬಂಡವಾಳ ಹಾಕಿ ಬೀನ್ಸ್ ಬೆಳೆದಿದ್ದರು. ಇದೀಗ ಮಳೆಯಿಂದ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಒಂದು ಕೆಜಿ ಬೀನ್ಸ್ ಬೆಲೆ 80 ರೂಪಾಯಿ ಇದ್ದು, ಬೆಳೆ ನಾಶದಿಂದ ರೈತರು ಕಂಗಾಲಾಗಿದ್ದಾರೆ. ಗ್ರಾಮದಲ್ಲಿ ಹತ್ತಾರು ಎಕರೆಯಲ್ಲಿ ರೈತರು ಏಲಕ್ಕಿ ಬಾಳೆ ಬೆಳೆ ಬೆಳೆದಿದ್ದು, ಬಿರುಗಾಳಿ ಸಹಿತ ಭಾರೀ ಮಳೆಗೆ ಬೆಳೆ ನೆಲಕ್ಕುರುಳಿದೆ. ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.

ಗದಗ ಜಿಲ್ಲೆಯಲ್ಲಿ ಭಾರೀ ಗಾಳಿ, ಮಳೆಗೆ ಬಾಳೆ ಬೆಳೆ ಸರ್ವನಾಶವಾಗಿದೆ. ಗದಗ ತಾಲೂಕಿನ ಕಳಸಾಪೂರ ಗ್ರಾಮದಲ್ಲಿ, ರೈತ ನಜೀರ್ ಅಹ್ಮದ್, ಶೌಕತ್ ಪೆಂಡಾರಿ ಎಂಬುವವರು 4 ಎಕರೆ ಬೆಳೆಯಲ್ಲಿ ಬೆಳೆದಿದ್ದ ಬಾಳೆ ಬೆಳೆ ಮಣ್ಣುಪಾಲಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬಾಳೆ ಕಟಾವು ಹಂತಕ್ಕೆ ಬಂದಿತ್ತು. ಆದ್ರೆ ಏಕಾಏಕಿ ಸುರಿದ ಬಿರುಗಾಳಿ ಸಹಿತ ಮಳೆಗೆ ನಾಶವಾಗಿದೆ.
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಿಂದ ರೈತರಿಗೆ ಸಂಕಷ್ಟ ಶುರುವಾಗಿದೆ. ಚಾಮರಾಜನಗರ ಜಿಲ್ಲೆಯಲ್ಲೂ ಮಳೆಯಿಂದ ಭಾರೀ ನಷ್ಟವಾಗಿದ್ದು, ರೈತರು ಕಣ್ಣೀರು ಹಾಕ್ತಿದ್ದಾರೆ. ಜಿಲ್ಲೆಯ ಹೆಗ್ಗವಾಡಿಪುರ, ದೇಶವಳ್ಳಿ, ಬಸವಟ್ಟಿ ಗ್ರಾಮಗಳಲ್ಲಿ, ರೈತರು ಬೆಳೆದಿದ್ದ ಬಾಳೆ ಬೆಳೆ ಸಂಪೂರ್ಣವಾಗಿ ಮಣ್ಣುಪಾಲಾಗಿದೆ. 2 ಲಕ್ಷಕ್ಕೆ ತಾಳಿ ಅಡವಿಟ್ಟು ಬಾಳೆ ಬೆಳೆ ಬೆಳೆದಿದ್ದೇವೆ. ಆದರೆ ಬಿರುಗಾಳಿ ಮಳೆಗೆ ಬೆಳೆ ಸಂಪೂರ್ಣ ನಾಶವಾಗಿದೆ ಎಂದು ಕಣ್ಣೀರು ಹಾಕುತ್ತಿದ್ದಾರೆ.
ಹಾವೇರಿಯಲ್ಲೂ ಭಾರೀ ಬಿರುಗಾಳಿ ಮಳೆಗೆ, ಭತ್ತದ ಬೆಳೆ ನಾಶವಾಗಿದೆ. ಜಿಲ್ಲೆಯ ಹೀರೆಬಿದರಿ, ಸೋಮಲಾಪುರ, ವೈಟಿ ಮೇಡ್ಲರಿಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದ ಭತ್ತ ನೆಲಕ್ಕಚ್ಚಿದೆ. ಹೆಂಡ್ತಿ ತಾಳಿ ಅಡವಿಟ್ಟು ಭತ್ತ ಬೆಳೆದಿದ್ದೇವೆ. ನಮ್ಮ ಗಂಜಿಯನ್ನೇ ಮಳೆ ಕಿತ್ತುಕೊಂಡಿದೆ ಅಂತ ರೈತರು ಕಣ್ಣೀರು ಹಾಕ್ತಿದ್ದಾರೆ.
ದಾವಣಗೆರೆಯಲ್ಲೂ ಮಳೆ ಅಬ್ಬರಿಸಿದೆ. ಮಳೆ ಅಬ್ಬರಕ್ಕೆ ಮಾಗಾನಹಳ್ಳಿ, ಅಮೃತನಗರ, ಕಡ್ಲೆಬಾಳ್, ಅರಸಾಪು ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ, ಭತ್ತದ ಬೆಳೆ ನಾಶವಾಗಿದೆ. ಇನ್ನೇನು ಮೂರು ನಾಲ್ಕು ದಿನಗಳಲ್ಲಿ ಭತ್ತ ಕಟಾವು ಮಾಡಬೇಕಿದ್ದ ರೈತ ಈಗ ತಲೆ ಮೇಲೆ ಕೈಹೊತ್ತು ಕೂತಿದ್ದಾರೆ. ಬೆಳೆ ನಾಶಕ್ಕೆ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.


