ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನಿಜಗುಣಾನಂದ ಸ್ವಾಮೀಜಿ, ಲಿಂಗಾಯತ ಧರ್ಮಕ್ಕೆ ಜಯವಾಗಬೇಕು. ಬಸವ ಸಂಸ್ಕೃತಿ ಅಭಿಯಾನಕ್ಕೆ ಮುಳ್ಳಾಗಿದ್ದವರು ನಮ್ಮ ಸಮಾಜದಲ್ಲಿಯೇ ಹುಟ್ಟಿದ ಮಠಾಧಿಪತಿಗಳು. ಬಸವಣ್ಣನವರನ್ನು ನಂಬಿದವರು ಕೆಟ್ಟಿಲ್ಲ. ಕೆಟ್ಟವರು ಬಸವಣ್ಣನ ನಂಬಿಲ್ಲ. ಯಂತ್ರ ತಂತ್ರ ಮಂತ್ರ ಮೂಢನಂಬಿಕೆ ಬೆಳೆಸುವ ಮಠಾಧಿಪತಿಗಳಿಗಾಗಿ ಬಸವಣ್ಣ ಹುಟ್ಟಿದ್ದಲ್ಲ. 21 ನೇ ಶತಮಾನದಲ್ಲಿಯೇ ಬಸವ ತತ್ವಕ್ಕೆ ಇಷ್ಟು ತೊಂದರೆ ಇರುವಾಗ ಅವತ್ತು ಬಸವಣ್ಣನಿಗೆ ಎಷ್ಟು ತೊಂದರೆ ಆಗಿರಬಹುದು ಎಂದಿದ್ದಾರೆ. ಬಹಳ ಜನರಿಗೆ ಬಸವಣ್ಣ ಅಂದ್ರೆ ಅಲರ್ಜಿ, ಬಸವಣ್ಣನವರನ್ನು ಕೆಲವರು ಕರಿಬೇವು ಸೊಪ್ಪು ಮಾಡಿಕೊಂಡಿದ್ದಾರೆ. ಮಠಾಧಿಪತಿಗಳು ಬಸವಣ್ಣನ ಒಪ್ಪದಿದ್ದರೆ ಭಕ್ತರೇ ಮಠಾಧಿಪತಿಗಳನ್ನು ದೂರ ಇಡುತ್ತಾರೆ ಎಂದು ಎಚ್ಚರಿಸಿದ್ದಾರೆ.

ಭಾರತೀಯ ಸಂಸ್ಕೃತಿಯ ಒಳಗೆ ಬಸವ ಸಂಸ್ಕೃತಿ ಭಿನ್ನವಾಗಿದೆ, ಮಠಾಧಿಪತಿಗಳ ಒಕ್ಕೂಟವನ್ನು ನಾವು ಉಳಿಸಿ ಬೆಳೆಸಬೇಕು. ನಮ್ಮ ಧರ್ಮಗುರು ಬಸವಣ್ಣ, ನಮ್ಮ ಧರ್ಮಗ್ರಂಥ ವಚನ ಸಾಹಿತ್ಯ, ಕಲ್ಯಾಣ ರಾಜ್ಯವೇ ನಮ್ಮ ಗುರಿ ಎಂದಿದ್ದಾರೆ ಸ್ವಾಮೀಜಿ. ನಿವೃತ್ತ ನ್ಯಾ. ಹೆಚ್. ಎಸ್ ನಾಗಮೋಹನ್ ದಾಸ್ ಮಾತನಾಡಿ, ನನ್ನ ಅಧ್ಯಕ್ಷತೆಯಲ್ಲಿ ರಚನೆಯಾದ ಸಮಿತಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡಿತ್ತು. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ಶಿಫಾರಸು ಆದ ಬಳಿಕ ಯಾವುದೇ ಕಾರಣ ನೀಡದೇ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿದೆ. ಮತ್ತೊಂದು ಸಲ ರಾಜ್ಯ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡಿ ಕೇಂದ್ರಕ್ಕೆ ಕಳುಹಿಸಬೇಕು ಎಂದಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತ ಮಾನ್ಯತೆ ಲಿಂಗಾಯತ ಧರ್ಮಕ್ಕೆ ಸಿಗುವುದಿಲ್ಲವೋ ಅಲ್ಲಿ ತನಕ ಹೋರಾಟ ನಡೆಯಬೇಕು. ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕು, ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ಸಿಗಬೇಕು ಎಂದಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿಒ ಮೊದಲು ಮಿತ್ರರು ಯಾರು..? ಶತ್ರುಗಳು ಯಾರು..? ಎಂದು ಗುರುತಿಸಬೇಕು. ಶತ್ರುಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಹೋರಾಟ ಮಾಡಿದರೆ ಗೆಲುವು ಸಿಗುವುದಿಲ್ಲ ಎಂದು ಕಿವಿ ಮಾತು ಹೇಳಿದ್ದಾರೆ. ಶತ್ರುಗಳನ್ನು ಹೊರಗಡೆ ಇಟ್ಟು ಹೋರಾಟ ಮಾಡಬೇಕು ಎಂದಿದ್ದಾರೆ. ಬೀದರ್ ಭಾಲ್ಕಿ ಶ್ರೀಗಳು ಮಾತನಾಡಿ, ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಅನುಭವ ಮಂಟಪದಲ್ಲಿ ಮುದ್ರೆ ಬಿದ್ದಿತ್ತು. ಅದಾದ ನಂತರ ಸರ್ಕಾರದಲ್ಲಿ ಬಸವ ಧರ್ಮ ಸ್ವತಂತ್ರ ಧರ್ಮ ಅಂತ ಮುದ್ರೆ ಒತ್ತಿದವರು ಸಿದ್ದರಾಮಯ್ಯ. ಬಸವಣ್ಣನ ಚರಿತ್ರೆ ಎಲ್ಲೀವರೆಗೂ ಇರುತ್ತೋ ಅಲ್ಲಿವರೆಗೂ ಸಿದ್ದರಾಮಯ್ಯ ಹೆಸರು ಅಜರಾಮರ. ನಾಗಮೋಹನ್ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಿ ಮುದ್ರೆ ಒತ್ತಿ ಕೇಂದ್ರಕ್ಕೆ ಕಳುಹಿಸಿದ್ದಾರೆ. ಅದು ಇಂದಲ್ಲಾ ನಾಳೆ ಆಗಿಯೇ ಆಗುತ್ತದೆ. ನಿಜಲಿಂಗಪ್ಪ ರೀತಿ ಸಿದ್ದರಾಮಯ್ಯ ಕಳಂಕರಹಿತ ರಾಜಕಾರಣಿ ಎಂದಿದ್ದಾರೆ.
ಬಸವಣ್ಣನ ಅನುಭವ ಮಂಟಪ ಸ್ಥಾವರ, ಅಲ್ಲಿ ಜಂಗಮತ್ವ ಬೆಳೆಯಬೇಕು ಅಂದ್ರೆ ವಚನ ವಿವಿ ಆರಂಭಿಸಬೇಕು. ಜನಪದ, ಸಂಸ್ಕೃತ, ಸಂಗೀತ ವಿವಿಗಳ ಮಾದರಿಯಲ್ಲಿ ವಚನ ವಿವಿ ಸ್ಥಾಪಿಸಿ. ಅಲ್ಲಿ ಸಂಶೋಧನೆ, ಚಿಂತನೆ ನಡೆಯುತ್ತದೆ ಅಷ್ಟೇ. ವಚನ ವಿವಿ ಸ್ಥಾಪಿಸಿದ್ರೆ ಇನ್ನೊಂದು ಇತಿಹಾಸ ಸೃಷ್ಟಿಯಾಗುತ್ತದೆ. ಪುರೋಹಿತ ಶಾಹಿಗಳು ಶರಣರನ್ನು ಕೊಲೆ ಮಾಡಿದ್ದಾರೆ. ಅವರ ತ್ಯಾಗ ಬಲಿದಾನಕ್ಕೆ ಬೆಲೆ ತರಬೇಕಾದ್ರೆ ವಚನ ವಿವಿ ಸ್ಥಾಪಿಸಬೇಕು. ಸಚಿವ ಎಂ.ಬಿ ಪಾಟೀಲ್ ವಿಜಯಪುರಕ್ಕೆ ಭಗೀರಥವನ್ನೇ ಹರಿಸಿದ್ದಾರೆ. ಹಳಕಟ್ಟಿಯವರನ್ನ ಶಾಶ್ವತವಾಗಿ ಉಳಿಸಿದ್ರೆ ಅದು ಎಂ.ಬಿ.ಪಾಟೀಲ್ ಎಂದಿದ್ದಾರೆ. ಇನ್ನು ಬಸವ ಸಂಸ್ಕೃತಿ ಅಭಿಯಾನ ಸಮಾರಂಭದಲ್ಲಿ ಪಂಚ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ ಶರಣರು.
ಲಿಂಗಾಯತರು ಮೊದಲು ಭಾರತೀಯರು, ಲಿಂಗಾಯತ ಧರ್ಮ, ಕನ್ನಡ ಧರ್ಮ, ಧರ್ಮಕ್ಕಿಂತ ಮೊದಲು ದೇಶ. ನಾವೆಲ್ಲ ಭೌಗೋಳಿಕವಾಗಿ ಹಿಂದೂಗಳು. ಲಿಂಗಾಯತರಿಗೆ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ, ಸವಲತ್ತು ಕೊಡುವ ತನಕ ಈ ಹೋರಾಟ ಮುಂದುವರಿಸಬೇಕು. ಲಿಂಗಾಯತ ಉಪಪಂಗಡಗಳು, ಉಪಜಾತಿಗಳ ಮಧ್ಯೆ ವೈವಾಹಿಕ ಸಂಬಂಧ ಬೆಳೆಸುವುದು. ಲಿಂಗಾಯತ ಧರ್ಮೀಯರು ಜನನದಿಂದ ಮರಣದವರೆಗೆ ಶರಣ ಸಂಸ್ಕೃತಿ ಪಾಲಿಸಬೇಕು ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸನ್ಮಾನ ಸ್ವೀಕರಿಸಿ ಮುಂದಿನ ವರ್ಷ ವಚನ ವಿವಿ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.


