The Public Spot
ರಾಜಕೀಯ

ಗ್ಯಾರಂಟಿಗೆ ಮಾರು ಹೋಗ್ಬೇಡಿ.. ಸಾವಿನ ಹತ್ತಿರ ಹೋಗಿ ಬಂದಿದ್ದೇನೆ.. ಇದು ಸತ್ಯ

ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದು ಸುಮಾರು 3 ವರ್ಷ ಆಗುತ್ತಿದೆ. ಮುಂದಿನ ಒಂದು ಒಂದೂವರೆ ವರ್ಷದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಎದುರಾಗಲಿದೆ. ಈಗಾಗಲೇ ಜೆಡಿಎಸ್‌, ಬಿಜೆಪಿ ಮೈತ್ರಿ ಪಕ್ಷಗಳು ಚುನಾವಣೆಗೆ ಸಜ್ಜಾಗುವ ಸಿದ್ಧತೆಯಲ್ಲಿವೆ. ತುಮಕೂರಿನ ರಾಗಿ ಮುದ್ದನಹಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ವರ್ಷದಲ್ಲಿ ಗ್ಯಾರಂಟಿಗಳ ವೆಚ್ಚ ಬರೋಬ್ಬರಿ 50 ಸಾವಿರ ಕೋಟಿ ಆಗಿದೆ. ಸಾಲ 1.25 ಲಕ್ಷ ಕೋಟಿ ಆಗಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. 2 ಸಾವಿರ ಹಣಕ್ಕೆ ಮರುಳಾಗಬೇಡಿ ಎಂದು ಮಹಿಳೆಯರಿಗೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ರಾಗಿ ಮುದ್ದೇನಹಳ್ಳಿಯ ಆದಿಶಕ್ತಿ ಮಾರಮ್ಮ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, 2 ಸಾವಿರಕ್ಕೆ ಮರುಳಾಗಬೇಡಿ, ಐದು ವರ್ಷಕ್ಕೆ ಒಂದು ಅವಕಾಶ ಕೊಡಿ ಎಂದು ಜನರ ಮುಂದೆ ಮನವಿ ಮಾಡಿದ್ದಾರೆ. ಈ ಗ್ಯಾರಂಟಿಗಳು ನಿಮ್ಮ ಬದುಕಿಗೆ ಶಾಶ್ವತ ಪರಿಹಾರ ಅಲ್ಲ. ಕಾಂಗ್ರೆಸ್ ಸರ್ಕಾರದ ಮೋಸಕ್ಕೆ ಬಲಿಯಾಗಬೇಡಿ, ಈ ಐದು ಗ್ಯಾರಂಟಿಗಳು ನಿಮಗೆ ತಾತ್ಕಾಲಿಕ ಉಪಶಮನ ಅಷ್ಟೆ. ಇವುಗಳಿಂದ ಏನು ಉಪಯೋಗ ಇಲ್ಲ. ಇದಕ್ಕಾಗಿ ವರ್ಷಕ್ಕೆ 50 ಸಾವಿರ ಕೋಟಿ ಹಣವನ್ನು ಸರ್ಕಾರ ಖರ್ಚು ಮಾಡುತ್ತಿದೆ. ನೀವು ಕಟ್ಟುವ ತೆರಿಗೆ ಹಣವನ್ನೇ ನಿಮಗೆ ನೀಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ವಾರ್ಷಿಕ 1 ರಿಂದ 1.25 ಲಕ್ಷ ಕೋಟಿ ಸಾಲ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಈ ಸಾಲವನ್ನು ಗ್ಯಾರಂಟಿ ಕೊಟ್ಟವರು ತೀರಿಸಲ್ಲ. ನೀವೇ ತೀರಿಸಬೇಕು ಎಂದು ಜನರಿಗೆ ತಿಳಿಸಿದ್ದಾರೆ. ಇಡೀ ರಾಜ್ಯದಲ್ಲಿ ಈ ಸರ್ಕಾರ ಮದ್ಯದ ಹೊಳೆ ಹರಿಸುತ್ತಿದೆ. ಹಳ್ಳಿ ಹಳ್ಳಿಯಲ್ಲಿ ಕಿರಾಣಿ ಅಂಗಡಿಗಳಲ್ಲಿ ಕೂಡ ಮದ್ಯ ದೊರೆಯುತ್ತಿದೆ. ಸಿ.ಎಲ್. 07 ಮದ್ಯ ಪರವಾನಗಿಯನ್ನು ದೊಡ್ಡ ಪ್ರಮಾಣದಲ್ಲಿ ನೀಡುತ್ತಿದ್ದಾರೆ. ಇಂಥ ಒಂದು ಲೈಸೆನ್ಸ್ ಕೊಡುವುದಕ್ಕೆ ಇತ್ತೀಚೆಗೆ ಅಬಕಾರಿ ಅಧಿಕಾರಿಗಳು 2.50 ಕೋಟಿ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ನಿಮ್ಮ ಗಂಡಂದಿರಿಗೆ ಚೆನ್ನಾಗಿ ಕುಡಿಸಿ ಅವರನ್ನು ಹಾಳು ಮಾಡಿ ನಿಮಗೆ 2 ಸಾವಿರ ಗೃಹಲಕ್ಷ್ಮೀ ಹಣ ಕೊಟ್ಟರೆ ಉಪಯೋಗ ಏನು..? ಎಂದು ಪ್ರಶ್ನಿಸಿದ್ದಾರೆ. ನಿಮ್ಮ ಹಣ ಕಿತ್ತುಕೊಂಡು ನಿಮಗೆ ಅದರಲ್ಲಿ ಅಲ್ಪ ಮೊತ್ತ ನೀಡುತ್ತಿದ್ದಾರೆ. ಎರಡು ಸಾವಿರಕ್ಕೆ ಮರುಳಾಗಾದೆ ಐದು ವರ್ಷಕ್ಕೆ ಒಂದು ಅವಕಾಶ ಕೊಡಿ ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ನಾನು ಐದು ಬಾರಿ ಸಾವಿನ ಹತ್ತಿರಕ್ಕೆ ಹೋಗಿ ಬಂದಿದ್ದೇನೆ. ದೇವರ ಆಶೀರ್ವಾದದಿಂದಲೇ ನಾನು ಇನ್ನೂ ಬದುಕಿದ್ದೇನೆ. ನಾವು ಜೆಡಿಎಸ್ – ಬಿಜೆಪಿ ಸರ್ಕಾರ ಅಲ್ಲ, ಆರೂವರೆ ಕೋಟಿ ಕನ್ನಡಿಗರ ಸರ್ಕಾರ ತರುತ್ತೇವೆ. ಅದಕ್ಕೆ ಅವಕಾಶ ಮಾಡಿ ಕೊಡಿ. ಈಗಾಗಲೇ ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೆ. ನಾನು ಜನತೆಗೆ ದ್ರೋಹ ಬಗೆಯದೇ ಕೆಲಸ ಮಾಡಿದ್ದೇನೆ. ನನ್ನ ಆತ್ಮಕ್ಕೆ ತೃಪ್ತಿಯಾಗುವ ರೀತಿಯಲ್ಲಿ ನಾನು ಜನರ ಸೇವೆ ಮಾಡಿದ್ದೇನೆ. ಬೇರೆಯವರ ಕುತಂತ್ರದಿಂದ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಲು ಆಗಲಿಲ್ಲ. ನನ್ನ ತಪ್ಪಿನಿಂದ ಆಗಿದ್ದಲ್ಲ. ಅವಕಾಶ ಸಿಕ್ಕಿದಾಗ ಸಾಕಷ್ಟು ಕೆಲಸ ಮಾಡಿದ್ದೇನೆ. ಎರಡೂ ಅವಧಿಯಲ್ಲೂ ಸಾಲ ಮನ್ನಾ ಮಾಡಿದ್ದೇನೆ. ಕೇಂದ್ರ ಸಹಕಾರ ಕೊಡುವುದಿಲ್ಲ ಎನ್ನುವುದು ತಪ್ಪು. ನಮ್ಮ ನಡವಳಿಕೆ ಮೇಲೆ ಎಲ್ಲವೂ ನಿಂತಿರುತ್ತದೆ. ನಾನು ಎರಡು ಬಾರಿ ಸಾಲ ಮನ್ನಾ ಮಾಡಿದಾಗಲೂ ನಾನು ಕೇಂದ್ರದ ಕಡೆ ನೋಡಲಿಲ್ಲ. ರಾಜ್ಯದ ಖಜಾನೆಯಿಂದ ಹಣ ನೀಡಿ ಸಾಲ ಮನ್ನಾ ಮಾಡಿದ್ದೇನೆ. ಇವರು ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸುತ್ತಾರೆ ಇದು ಸರಿಯಲ್ಲ ಎಂದಿದ್ದಾರೆ.

Related posts

ಕಾಂಗ್ರೆಸ್​ನಲ್ಲಿ ಡಿನ್ನರ್​ ಪಾಲಿ‘ಟ್ರಿಕ್ಸ್​’ ಡಿಕೆಶಿ ಉದ್ದೇಶ ಏನು..? ಸಿಎಂ ಆಗ್ತಾರಾ..?

Publicspot

ಇ-ಖಾತಾ ನಿಮ್ಮ ಆಸ್ತಿ, ನಿವೇಶನಗಳ ಮಾಲೀಕತ್ವಕ್ಕೆ ಇರುವ ಅಧಿಕೃತ ದಾಖಲೆ

admin

ಮಹಾರಾಷ್ಟ್ರದಲ್ಲಿ ವಿಮಾನ ಅಪಘಾತವೋ.. ಉದ್ದೇಶ ಪೂರ್ವಕ ದುರಂತವೋ..?

Publicspot

ಬಿಜೆಪಿ ಗೆಲ್ಲಿಸಲು ಅಖಾಡಕ್ಕೆ ಇಳಿದ ಕೇಂದ್ರ ಸಚಿವ ಕುಮಾರಣ್ಣ!

Publicspot

Cabinet Decision revoke Criminal case: ಸತ್ಯವಂತರ ಮೇಲೆ ದಾಖಲಿಸಿದ್ದ ಕೇಸ್​ ವಾಪಸ್..​

Publicspot

DCM DKS Apologize: ಡಿಕೆ ಶಿವಕುಮಾರ್​​ ಕ್ಷಮಾಪಣೆ ಕೇಳುತ್ತಲೇ ಮೂರ್ಖರು ಎಂದಿದ್ಯಾಕೆ..?

Publicspot