ಕರ್ನಾಟಕದಲ್ಲಿ ತನ್ನದೇ ಶೈಲಿಯಲ್ಲಿ ಹಾಡುಗಾರಿಕೆ ಮಾಡುವ ಮೂಲಕ ಖ್ಯಾತಿ ಪಡೆದಿರುವ ರಘು ದೀಕ್ಷಿತ್ ಮತ್ತೊಮ್ಮೆ ಹಸೆಮಣೆ ಏರುತ್ತಿದ್ದಾರೆ. ಕಾರಣಾಂತರಗಳಿಂದ ಮೊದಲ ಪತ್ನಿ ಮಯೂರಿಯಿಂದ ವಿಚ್ಛೇದನ ಪಡೆದು ಏಕಾಂಗಿಯಾಗಿದ್ದ ಕನ್ನಡದ ಕಂಚಿನ ಕಂಠದ ಗಾಯಕ ಮದುವೆ ಅನ್ನೋ ಮುಹೂರ್ತಕ್ಕೆ ಸಿದ್ಧತೆ ನಡೆಸಿದ್ದಾರೆ. ಮಾದೇಶ್ವರ ಅನ್ನೋ ಹಾಡಿನ ಮೂಲಕ ಕರುನಾಡಿನ ಮನೆ ಮಾತಾದ ರಘುದೀಕ್ಷಿತ್ 50ನೇ ವಯಸ್ಸಿನಲ್ಲಿ ಗಾಯಕಿ ವಾರಿಜಶ್ರೀ ಜೊತೆ ಸಪ್ತಪದಿ ತುಳಿಯೋದಕ್ಕೆ ರೆಡಿಯಾಗಿದ್ದಾರೆ. ಅಥವಾ ಈಗಾಗಲೇ ಸಪ್ತಪದಿ ತುಳಿದು ಆಗಿದೆ. ಮದುವೆ ಆರತಕ್ಷತೆ ಜೊತೆಗೆ ಸತ್ಯನಾರಾಯಣ ಪೂಜೆಗೆ ಇಬ್ಬರೂ ಜೊತೆಯಾಗಿ ಆಹ್ವಾನ ನೀಡುವ ಮೂಲಕ ಸಪ್ತಪದಿಗೆ ಅಧಿಕೃತ ಮುದ್ರೆ ಒತ್ತುತ್ತಿದ್ದಾರೆ.

ಜಸ್ಟ್ ಮಾತ್ ಮಾತಲ್ಲಿ ಅಂತಾ ಶುರುವಾದ ಸ್ನೇಹ ಈಗ ಪ್ರೀತಿಗೆ ತಿರುಗಿ ತುಂಬಾ ಸಮಯವೇ ಆಗಿದೆ. ಅದೇ ಪ್ರೀತಿ ಈಗ ಹಸೆಮಣೆ ತನಕ ಇಬ್ಬರನ್ನೂ ತಂದು ನಿಲ್ಲಿಸಿದೆ. 2019ರಲ್ಲಿ ಗಾಯಕ ರಘುದೀಕ್ಷಿತ್ ಬಾಳಲ್ಲಿ ಬಿರುಗಾಳಿ ಬೀಸಿತ್ತು. ಡ್ಯಾನ್ಸರ್ ಆಗಿದ್ದ ಪತ್ನಿ ಮಯೂರಿ ಜೊತೆಗಿನ ಮದ್ವೆ ಸಂಬಂಧ ಮುರಿದು ಬೀಳ್ತಿದ್ದಂತೆ ಗಂಡ ಹೆಂಡತಿ ದೂರವಾಗಿದ್ರು. ಅಂದಿನಿಂದ ಒಬ್ಬಂಟಿಯಾಗಿದ್ದ ರಘು ದೀಕ್ಷಿತ್ ಮ್ಯೂಸಿಕ್ ನೈಟ್ಗಳಿಗೆ ತಮ್ಮನ್ನ ತಾವು ಸಮರ್ಪಿಕೊಂಡಿದ್ರು.. ಮುಂದಿನ ಬದುಕನ್ನ ಒಬ್ಬಂಟಿಯಾಗಿ ಕಳೆಯೋ ನಿಶ್ಚಯ ಕೂಡ ಮಾಡಿಕೊಂಡಿದ್ರು. ಆದರೆ ಇದೀಗ ರಘು ದೀಕ್ಷಿತ್ ಬಾಳಲ್ಲಿ ವಾರಿಜಶ್ರೀ ಸುಮಧುರ ಸಂಗೀತ ಶುರು ಮಾಡಲು ಬರ್ತಿದ್ದಾರೆ.

ಗ್ರ್ಯಾಮಿ ಅವಾರ್ಡ್ ನಾಮನಿರ್ದೇಶಿತ ಸಂಗೀತಗಾರ್ತಿ, ಕೊಳಲು ವಾದಕಿ ವಾರಿಜಶ್ರೀ ಜತೆ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯೋದಕ್ಕೆ ಸಜ್ಜಾಗಿದ್ದಾರೆ. ಗಾಯಕ ರಘು ದೀಕ್ಷಿತ್ ಹಾಗೂ ವಾರಿಜಶ್ರೀ ಸಾಕಷ್ಟು ಆಲ್ಬಂ ಸಾಂಗ್ಗಳಲ್ಲಿ ಒಟ್ಟೊಟ್ಟಿಗೆ ಕೆಲಸ ಮಾಡಿದ್ದಾರೆ. ಆಗ ಶುರುವಾಗಿದ್ದ ಸ್ನೇಹ ಸಪ್ತಪದಿ ಹಂತಕ್ಕೆ ಬಂದು ನಿಂತಿದೆ. ಅಕ್ಟೋಬರ್ 26, 2025ರಂದು ಬೆಂಗಳೂರಿನ ಜಯನಗರದಲ್ಲಿರುವ ಶ್ರೀ ಸಾಯಿ ಕನ್ವೆನ್ಷನ್ ಹಾಲ್ನಲ್ಲಿ ಮದುವೆ ಆರತಕ್ಷತೆ ನಡೆಯಲಿದೆ. ಆ ಬಳಿಕ ಸತ್ಯನಾರಾಯಣ ಪೂಜೆ ಹಮ್ಮಿಕೊಳ್ಳಲಾಗಿದೆ.



