ದೇಶದಲ್ಲಿ ದಿನದಿಂದ ದಿನಕ್ಕೆ ದುನಿಯಾ ಸುಬಾರಿ ಆಗುತ್ತಿದೆ. ಚಿನ್ನದ ಆಮದು ಸುಂಕ ಹೆಚಚ್ಚಳದ ಬಳಿಕ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ. ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ. ಪ್ರತಿ ಲೀಟರ್ಗೆ ಸುಮಾರು 4 ರೂಪಾಯಿಯಷ್ಟು ದರ ಹೆಚ್ಚಾಗಿದೆ. ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ಪೆಟ್ರೋಲ್ ₹106.21ಕ್ಕೆ ಏರಿದೆ. ಪ್ರತಿ ಲೀಟರ್ ಡೀಸೆಲ್ ₹94.10ಗೆ ಏರಿಕೆ ಆಗಿದೆ. ಪರಿಷ್ಕೃತ ದರ ನಿನ್ನೆಯಿಂದಲೇ ಜಾರಿಯಾಗಿದೆ.

ಪೆಟ್ರೋಲ್ ಡೀಸೆಲ್ ದರ ಏರಿಕೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗುತ್ತಿರುವ ತಲ್ಲಣವೇ ಕಾರಣ ಎನ್ನಲಾಗ್ತಿದೆ. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯಿಂದ ಸಮಸ್ಯೆಯಾಗಿದೆ. ತೈಲ ಪೂರೈಕೆ ಸರಿಯಾಗಿಲ್ಲದ ಕಾರಣ ಸಮಸ್ಯೆ ಎದುರಿಸುವಂತಾಗಿದೆ. ಇನ್ನೊಂದೆಡೆ ತೈಲ ಕಂಪನಿಗಳಿಗೆ ಪ್ರತಿನಿತ್ಯ ಭಾರಿ ನಷ್ಟ ಆಗ್ತಿರೋದನ್ನು ತಪ್ಪಿಸಲು ದರ ಏರಿಕೆ ಅನಿವಾರ್ಯ ಎನ್ನಲಾಗ್ತಿದೆ. ಇನ್ನು ಪೆಟ್ರೋಲ್ ಡೀಸೆಲ್ ದರ ಏರಿಕೆಯಿಂದಾಗಿ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ದರವೂ ಏರಿಕೆಯಾಗುವ ಸಾಧ್ಯತೆ ಇದೆ.

ಪೆಟ್ರೋಲ್ ಡೀಸೆಲ್ ದರ ಏರಿಕೆಯಾಗ್ತಿದ್ದಂತೆ ಖಾಸಗಿ ಬಸ್ ದರವೂ ಗಗನಕ್ಕೇರಿದೆ. ಮಧ್ಯರಾತ್ರಿಯಿಂದಲೇ ಬಸ್ ಟಿಕೆಟ್ ದರ ಏರಿಕೆ ಜಾರಿಯಾಗಿದೆ. ಶೇಕಡ 20 ರಿಂದ ಶೇಕಡ 30ರಷ್ಟು ಟಿಕೆಟ್ ದರ ಏರಿಕೆ ಮಾಡುವುದಾಗಿ ಖಾಸಗಿ ಬಸ್ ಮಾಲಿಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮ ತಿಳಿಸಿದ್ದಾರೆ. ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳ ಮಾಡೋದು ಅನಿವಾರ್ಯವಾಗಿದೆ. ಕೆಲವು ಮಾರ್ಗಗಲ್ಲಿ ಟಿಕೆಟ್ ದರ ಏರಿಕೆಯ ವ್ಯತ್ಯಯ ಆಗಲಿದೆ. ಯಾರು ಮೊದಲೇ ರಿಸರ್ವೇಷನ್ ಮಾಡಿದ್ದಾರೋ ಅವರಿಗೆ ಅದೇ ದರ ಇರುತ್ತದೆ. ರಿಸರ್ವೇಷನ್ ಮಾಡಿಸಿಲ್ಲವೋ ಅವರಿಗೆ ನಿನ್ನೆ ರಾತ್ರಿಯಿಂದಲೇ ದರ ಏರಿಕೆ ಬಿಸಿ ತಟ್ಟಿದೆ. ಈ ಮೊದಲು ಬೆಂಗಳೂರಿಂದ ಬೆಳಗಾವಿಗೆ 1,000 ರೂಪಾಯಿ ಟಿಕೆಟ್ ಬೆಲೆಯಿತ್ತು. ಇದೀಗ 1200ಕ್ಕೆ ಏರಿಕೆ ಆಗಿದೆ.

ಪೆಟ್ರೋಲ್ ಡೀಸೆಲ್ ದರ ಏರಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಕೇಂದ್ರದಲ್ಲಿ ಮೋದಿ ಅಧಿಕಾರಕ್ಕೆ ಬಂದ ಮೇಲೆ ಅನೇಕ ಬಾರಿ ಬೆಲೆ ಏರಿಕೆ ಆಗಿದೆ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ಜನರ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ರೈತರು, ಬಡವರು, ಕಾರ್ಮಿಕರ ಮೇಲೆ ಪರಿಣಾಮ ಬೀರುತ್ತದೆ. ಬೆಲೆ ಏರಿಕೆಯನ್ನ ನಾವು ಖಂಡಿಸುತ್ತೇವೆ ಎಂದಿದ್ದಾರೆ. ಇನ್ನು ಗೃಹ ಸಚಿವ ಪರಮೇಶ್ವರ್ ಮಾತನಾಡಿ, ಕೇಂದ್ರ ಸರ್ಕಾರ ಜನಪರವಾಗಿಲ್ಲ ಅನ್ನೋದು ಈಗ ಮತ್ತೊಮ್ಮೆ ಸಾಬೀತಾಗಿದೆ ಎಂದಿದ್ದಾರೆ.
ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ವಿಚಾರವಾಗಿ ಸಚಿವ ಎಂ ಸಿ ಸುಧಾಕರ್ ಮಾತನಾಡಿ, ಇದು ಸಂತೋಷದ ವಿಚಾರ, ಮೋದಿ ಏನೇ ಮಾಡಿದ್ರು ಸಂತೋಷಪಡ್ತಾರೆ. ಮೊನ್ನೆ ಚಿನ್ನ ಖರೀದಿ ಮಾಡಬೇಡಿ ಅಂದಾಗ ಸಪೊರ್ಟ್ ಮಾಡಿದ್ರು. ವಾಹನ ಬಳಸಬೇಡಿ ಅಂದಾಗ ಓಡಾಡಲ್ಲ ಅಂದ್ರು. ಮೋದಿಯವರು ಹೇಳೊದನ್ನ ಎಲ್ಲಾ ಕಡೆ ಕೇಳ್ತಾರೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಆಗಿರೋದಕ್ಕೆ ಅವರೆಲ್ಲರಿಗೂ ಸಂತೋಷ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.


