ರಾಜ್ಯ ಸಚಿವ ಸಂಪುಟ ಪುನಾರಚನೆ ಆಗುವ ಎಲ್ಲಾ ಸಾಧ್ಯತೆಗಳು ತೆರೆದುಕೊಂಡಿವೆ. ಬಿಹಾರ ಚುನಾವಣಾ ಪ್ರಕ್ರಿಯೆ ಮುಂದಿನ ತಿಂಗಳು ನವೆಂಬರ್ 14ರಂದು ಮುಗಿಯಲಿದ್ದು, ಸರ್ಕಾರ ರಚನೆ ಪ್ರಕ್ರಿಯೆ ನವೆಂಬರ್ 20ರ ಒಳಗೆ ಮುಕ್ತಾಯ ಆಗಲಿದೆ. ಇದೇ ಸಮಯದಲ್ಲಿ ಕರ್ನಾಟಕದಲ್ಲೂ ಭಾರೀ ಬದಲಾವಣೆ ನಡೆಯುವ ನಿರೀಕ್ಷೆ ಎದುರಾಗಿದೆ. ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಯಾರೊಬ್ಬರೂ ಇಲ್ಲೀವೆಗೆ ಗುಟ್ಟು ಬಿಟ್ಟುಕೊಡುತ್ತಿಲ್ಲ. ಆದರೆ ಹಾಲಿ ಸಚಿವರನ್ನು ಕೈಬಿಟ್ಟು ಅಧಿಕಾರದಿಂದ ಹೊರಗಿರುವ ಶಾಸಕರನ್ನು ಸಚಿವರನ್ನಾಗಿ ಮಾಡುವ ಮೂಲಕ ಸಮತೋಲನ ಮಾಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಿದೆ ಎನ್ನಲಾಗ್ತಿದೆ. ಈ ಬಗ್ಗೆ ನಿನ್ನೆ ಮಾತನಾಡಿದ್ದ ಕಂದಾಯ ಸಚಿವ ಕೃಷ್ಣಬೈರೇಗೌಡ, ಇದರಲ್ಲಿ ಅಚ್ಚರಿಯ ವಿಚಾರವೇನು ಇಲ್ಲ. ಸರ್ಕಾರ ಜಾರಿಯಾದ ಸಂದರ್ಭದಲ್ಲೇ ಸಚಿವ ಸಂಪುಟ ಪುನಾರಚನೆ ಬಗ್ಗೆ ನಿರ್ಧಾರ ಆಗಿತ್ತು. ಎರಡೂವರೆ ವರ್ಷ ಆದ ಬಳಿಕ ಬದಲಾವಣೆ ನಿಶ್ಚಿತ ಎಂದಿದ್ದಾರೆ.

ನವೆಂಬರ್ ಕ್ರಾಂತಿ ಚರ್ಚೆ ಬೆನ್ನಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್ ನೀಡಿರುವ ಡೆಡ್ಲೈನ್ ಬಗ್ಗೆ ಕುತೂಹಲ ಮೂಡಿಸಿದೆ. ಸಚಿವರು, ಶಾಸಕರು, ಡಿಸಿಸಿ ಅಧ್ಯಕ್ಷರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪತ್ರ ಬರೆದಿದ್ದು, ರಾಜ್ಯದ ಎಲ್ಲಾ ಡಿಸಿಸಿ, ಬಿಸಿಸಿಗಳು ಸ್ವಂತ ಕಚೇರಿ ಹೊಂದಲು ಸೂಚನೆ ಕೊಟ್ಟಿದ್ದಾರೆ. ನವೆಂಬರ್ 20ರೊಳಗೆ ಭವನ ನಿರ್ಮಾಣ ಪ್ರಕ್ರಿಯೆ ಪೂರ್ಣಗೊಳಿಸಿ, ನವೆಂಬರ್ 20ಕ್ಕೆ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರ್ಣ ಆಗುವ ಹಿನ್ನಲೆಯಲ್ಲಿ ಗಡುವು ಮುಗಿಯುವುದರ ಒಳಗೆ ಎಲ್ಲಾ ಪ್ರಕ್ರಿಯೆ ಮುಗಿಸಿ ಎಂದು ಡಿಸಿಎಂ ಸೂಚನೆ ಕೊಟ್ಟಿದ್ದಾರೆ. ತಮ್ಮ ಅವಧಿಯಲ್ಲೇ ನೂರು ಕಾಂಗ್ರೆಸ್ ಭವನಗಳ ಶಂಕುಸ್ಥಾಪನೆ ನೆರವೇರಿಸಿ ಉದ್ಘಾಟನೆ ಮಾಡಿದೆ ಎಂಬ ಕೀರ್ತಿಗೆ ಪಾತ್ರರಾಗುವ ತವಕದಲ್ಲಿ ಇದ್ದಾರೆ. ಜೊತೆಗೆ ದೆಹಲಿಗೆ ತೆರಳಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಮಹತ್ವದ ಮಾತುಕತೆ ನಡೆಸಲಿದ್ದಾರೆ ಅನ್ನೋ ಮಾತುಗಳಿವೆ.
ಸಚಿವ ಸಂಪುಟ ಪುನರ್ ರಚನೆ ವಿಚಾರವಾಗಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಪಕ್ಷದಿಂದ ನಾವೇ ಹೊರತು ನಮ್ಮಿಂದ ಪಕ್ಷ ಅಲ್ಲ. ಪಕ್ಷದ ಆದೇಶವನ್ನ ನಾವೆಲ್ಲರೂ ಪಾಲನೆ ಮಾಡಲೇಬೇಕು. ಪಕ್ಷ ಸೂಚನೆ ಕೊಟ್ಟರೆ ಸಚಿವ ಸ್ಥಾನ ತ್ಯಾಗ ಅಲ್ಲ, ಆದೇಶವನ್ನ ಪಾಲಿಸುತ್ತೇನೆ ಎಂದಿದ್ದಾರೆ. ಇನ್ನೂ ಡಾ. ಯತೀಂದ್ರ ನಾವು ಪಕ್ಷದ ಶಿಸ್ತನ್ನ ಪಾಲಿಸುತ್ತೇವೆ. ನೀವು ಕೇಳಿರುವುದಕ್ಕೆ ಐದು ವರ್ಷ ಸಿದ್ದರಾಮಯ್ಯನವ್ರೇ ಅಂತ ಹೇಳಿದ್ದಾರೆ. ಅದ್ರಲ್ಲಿ ತಪ್ಪೇನಿದೆ ಎಂದಿದ್ದಾರೆ. ಯಾವುದೇ ವಿಚಾರ ಇರಲಿ, ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಪಕ್ಷ ಏನು ಹೇಳುತ್ತದೋ ಅದನ್ನೇ ನಾವು ಮಾಡುತ್ತೇವೆ. ಅದು ತ್ಯಾಗ ಅಲ್ಲ, ಫಾಲೋವಿಂಗ್ ದಿ ಆರ್ಡರ್ ಅಷ್ಟೆ. ಬಿ ಫಾರಂ ಬೇಕಾದಾಗ ಪಕ್ಷ ಬೇಕು, ಚುನಾವಣೆ ಗೆಲ್ಲಬೇಕು ಅಂದಾಗ ಪಕ್ಷ ಬೇಕು. ಪಕ್ಷ ಹೇಳಿದಾಗ ಎಲ್ಲ ಕೆಲಸಕ್ಕೂ ನಾವು ಸಿದ್ದರಿದ್ದೇವೆ. ನಾನೇ ಇರಬಹುದು, ಕೃಷ್ಣ ಭೈರೇಗೌಡ ಇರಬಹುದು ದಿನೇಶ್ ಇರಬಹುದು. ಪಕ್ಷ ಸೂಚನೆ ಕೊಟ್ಟರೆ ಎಲ್ಲ ಕೆಲಸವನ್ನೂ ಮಾಡಬೇಕಾಗುತ್ತದೆ. ನಾಳೆ ಚಿತ್ತಾಪುರ ಬೇಡ ಉತ್ತರ ಕನ್ನಡದಿಂದ ಸ್ಪರ್ಧೆ ಮಾಡು ಅಂದ್ರೆ ನಾನು ಅದಕ್ಕೂ ಸಿದ್ದವಾಗಿ ಇರಬೇಕಾಗುತ್ತದೆ ಎಂದಿದ್ದಾರೆ.

ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆ ಆದರೆ ಹಳಬರು ಹೋಗಿ ಹೊಸಬರು ಬರ್ತಾರೆ. ಮೂವತ್ತು ತಿಂಗಳ ಬಳಿಕ ಸಂಪುಟ ಪುನರ್ ರಚನೆ ಮಾಡಬೇಕು ಅಂತ ಇತ್ತು. ಈ ಚರ್ಚೆ ಈಗ ಅಂತಿಮ ಹಂತಕ್ಕೆ ಬಂದಿರಬೇಕು. ಯಾರಿಗೆ ಕೋಕ್ ಕೊಡ್ತಾರೆ ಅಂತ ಅವರಿಗೆ ಬಿಟ್ಟಿದ್ದು. ನಮ್ಮ ಹಂತದಲ್ಲಿ ಏನ್ ಚರ್ಚೆ ಆಗಿಲ್ಲ. ದೆಹಲಿ ಮಟ್ಟದಲ್ಲಿ ಚರ್ಚೆ ಆದರೂ ಆಗಿರಬಹುದು. ಸಚಿವ ಸ್ಥಾನ ತ್ಯಾಗದ ಬಗ್ಗೆ ಕೃಷ್ಣ ಬೈರೆಗೌಡ ಹೇಳಿಕೆ ವಿಚಾರವಾಗಿ ಮಾತನಾಡಿ, ಹೈಕಮಾಂಡ್ ಹೇಳಿದ್ರೆ ಪಾಲನೆ ಮಾಡಬೇಕು. ಸಚಿವ ಸ್ಥಾನದಿಂದ ಬಿಟ್ಟವರು ಪಕ್ಷದ ಕೆಲಸ ಮಾಡಬೇಕು. ಸಚಿವರಾದವರು ಜನರ ಕೆಲಸ ಮಾಡಬೇಕು. ಯಾವ ಮಾನದಂಡ ಅನ್ನೋ ಬಗ್ಗೆ ಹೈಕಮಾಂಡ್ ತಿರ್ಮಾನ ಮಾಡುತ್ತದೆ. 2028ರ ಚುನಾವಣೆ ವಿಚಾರವಾಗಿ ಪಕ್ಷ ಸಂಘಟನೆ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ. ನಿನ್ನೆ ಮೊದಲ ಸಹ ಸಿಎಂ ಸಿದ್ದರಾಮಯ್ಯ ಬಹಿರಂಗವಾಗಿ ಹೇಳಿದ್ದಾರೆ. ಸಿಎಂ, ಡಿಸಿಎಂ ಹಾಗೂ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಆಗಬೇಕು. ಸಂಪುಟ ಪುನರ್ ರಚನೆ ಮೊದಲೇ ಎರಡು ಭಾಗದಲ್ಲಿ ಮಾಡಬೇಕು ಅಂತ ಇತ್ತು. ಹೈಕಮಾಂಡ್ ತೀರ್ಮಾನವೇ ಅಂತಿಮ ಅಂದಿದ್ದಾರೆ. ಅಂದರೆ ಸಂಪುಟ ವಿಸ್ತರಣೆ ಫಿಕ್ಸ್ ಅನ್ನೋ ಬಗ್ಗೆ ಹಾಗೂ ಸಚಿವರು ರಾಜೀನಾಮೆ ಕೊಡಲು ಮಾನಸಿಕವಾಗಿ ಸಿದ್ಧರಾಗ್ತಿದ್ದಾರೆ.


