ಭಗವಂತ ಆಟ ಬಲ್ಲೋಱರು ಅನ್ನೋ ಮಾತು ಈ ಕೇಸ್ನಲ್ಲಿ ಅಕ್ಷರಶಃ ಸತ್ಯ ಆಗಿದೆ. ಖುಷಿ ಕೊಡುವ ದೇವರು ದುಃಖವನ್ನೂ ಹಿಂದೆಯೇ ಕೊಟ್ಟುಬಿಡ್ತಾನೆ. ಈ ದಂಪತಿ ಸಂತೋಷದಲ್ಲಿ ಮುಳುಗಿದ್ರು. ಮದುವೆಯಾಗಿ ಏಳು ವರ್ಷದ ನಂತರ ಈ ಹೆಣ್ಮಗಳ ಒಡಲಲ್ಲಿ ಕರುಳ ಕುಡಿ ಚಿಗುರೊಡೆದಿತ್ತು. ಅಷ್ಟೂ ದಿನ ಮಾಡಿದ ಪೂಜೆ ಪುನಸ್ಕಾರಕ್ಕೆ ಕೊನೆಗೂ ಭಗವಂತ ಕಣ್ಬಿಟ್ಟ ಅಂತಾ ಬೆಟ್ಟದಷ್ಟು ಆಸೆ ಇಟ್ಕೊಂಡಿದ್ರು. ಆದರೆ ಆ ದೇವರು ಸಂತೋಷ ಕೊಟ್ಟ ಕೆಲವೇ ದಿನಗಳಲ್ಲಿ ಮಗು ಕೊಟ್ಟಂತೆ ಮಾಡಿ ಕಿತ್ಕೊಂಡು ಬಿಟ್ಟಿದ್ದಾನೆ.

ವೈದ್ಯೋ ನಾರಾಯಣ ಹರಿ ಅಂತೀವಿ. ಜೀವ ಉಳಿಸೋ ಶಕ್ತಿ ಇರೋದು ವೈದ್ಯರಿಗೆ ಮಾತ್ರ ಅಂತೀವಿ. ಆದರೆ, ಕೆಲವೊಬ್ಬರ ವಿಚಾರದಲ್ಲಿ ವೈದ್ಯರೇ ಕಂಟಕವಾಗಿ ಬಿಡ್ತಾರೆ. ಈ ದಂಪತಿ ವಿಚಾರದಲ್ಲೂ ವೈದ್ಯರೇ ವಿಲನ್ಗಳಾಗಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ಹೊಟ್ಟೆಯಲ್ಲೇ ಅವಳಿ ಮಕ್ಕಳು ಕಣ್ಮುಚ್ಚಿವೆ ಅಂತಾ ಆರೋಪಿಸಲಾಗ್ತಿದೆ..
ಹಗರಿಬೊಮ್ಮನಹಳ್ಳಿಯ ಫರ್ವೀನ್ ದಂಪತಿ ಮದ್ವೆಯಾಗಿ 7 ವರ್ಷವಾಗಿತ್ತು. ಆದ್ರೆ, ಮಕ್ಕಳ ಭಾಗ್ಯ ಮಾತ್ರ ಇರಲಿಲ್ಲ. ಇತ್ತೀಚಿಗೆ ಫರ್ವೀನ್ ಗರ್ಭಿಣಿಯಾಗಿದ್ದಳು ಅನ್ನೋದನ್ನ ಕೇಳಿದ ಇಡೀ ಕುಟುಂಬ ಸಂಭ್ರಮಪಟ್ಟಿತ್ತು. ಕೊನೆಗೆ ನಮ್ಮ ಮಡಿಲಿಗೊಂದು ಮಗು ಬರುತ್ತದೆ ಅಂತಾ ಕನಸು ಕಟ್ಕೊಂಡಿದ್ರು. 9 ತಿಂಗಳವರೆಗೂ ತಾಯಿ ಮತ್ತು ಮಗು ಚೆನ್ನಾಗಿಯೇ ಇದ್ದರು. ಗುರುವಾರ ಮಧ್ಯಾಹ್ನ ಹೆರಿಗೆ ನೋವು ಕಾಣಿಸಿಕೊಳ್ತಿದ್ದಂತೆ 1.30ಕ್ಕೆ ಆಸ್ಪತ್ರೆಗೆ ಕರ್ಕೊಂಡು ಬಂದಿದ್ದರು.

ಆಸ್ಪತ್ರೆಗೆ ಬಂದ ವೇಳೆ ಅಲ್ಲಿದ್ದ ಯಾವ ವೈದ್ಯರೂ ಕೂಡ ರಾತ್ರಿ 8.30ರ ವೆರಗೂ ಗರ್ಭಿಣಿ ಮಹಿಳೆಯನ್ನು ಚೆಕ್ ಮಾಡಿರಲಿಲ್ವಂತೆ. ಕೇವಲ ಸ್ಟಾಪ್ ನರ್ಸ್ಗಳೇ ಆರೋಗ್ಯ ತಪಾಸಣೆ ಮಾಡಿದ್ರಂತೆ. ಹೀಗಾಗಿ ನಮ್ಮ ಮಕ್ಕಳು ಸಾವನ್ನಪ್ಪಿವೆ ಅಂತಾ ಅಂತಾ ಕುಟುಂಬಸ್ಥರು ಆರೋಪ ಮಾಡ್ತಿದ್ದಾರೆ.ಆದರೆ ಕುಟುಂಬಸ್ಥರ ಆರೋಪವನ್ನ ಇಲ್ಲಿನ ವೈದ್ಯರು ತಳ್ಳಿ ಹಾಕಿದ್ದಾರೆ. ಹೆರಿಗೆ ಆಗೋದಕ್ಕೆ 36 ವಾರ ಆಗಬೇಕಿತ್ತು. ಆದರೆ 34 ವಾರದಲ್ಲೇ ಹೆರಿಗೆಯಾಗಿದೆ. ಬಿಪಿ ಹೆಚ್ಚಾಗಿದ್ದರಿಂದ ಮಕ್ಕಳು ಸಾವನ್ನಪ್ಪಿವೆ ಅಂತಾ ವೈದ್ಯರು ಸಬೂಬು ನೀಡ್ತಿದ್ದಾರೆ. ವೈದ್ಯರ ನಿರ್ಲಕ್ಷ್ಯವೋ ಅಥವಾ ಬೇರೆಯದ್ದೇ ಕಾರಣವೋ ಗೊತ್ತಿಲ್ಲ. ಆದರೆ ಜಗತ್ತು ನೋಡುವ ಮೊದಲೇ ಇಬ್ಬರು ಕಂದಮ್ಮಗಳು ಜೀವ ಚೆಲ್ಲಿದ್ದು ಮಾತ್ರ ದುರಂತ.


