ಧಾರವಾಡ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಯೋಗೇಶ್ಗೌಡರ್ ಕೊಲೆ ಕೇಸ್ನಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದ ವಿನಯ್ ಕುಲಕರ್ಣಿ ದೋಷಿ ಎಂದು ಸಾಬೀತಾಗಿತ್ತು. ಬುಧವಾರ ದೋಷಿಗಳು ಎಂದು ಆದೇಶ ಮಾಡಿದ್ದ ಜನಪ್ರತಿನಿಧಿಗಳ ನ್ಯಾಯಾಲಯ ಗುರುವಾರ ಶಿಕ್ಷೆ ಪ್ರಮಾಣ ಪ್ರಕಟ ಮಾಡುವುದಾಗಿ ತಿಳಿಸಿತ್ತು. ಆ ಬಳಿಕ ಅಪರಾಧಿಗಳ ಪರ-ವಿರೋಧ ವಾದ ಪ್ರತಿವಾದ ಆಲಿಸಿದ ಕೋರ್ಟ್, ಶುಕ್ರವಾರ ಶಿಕ್ಷೆ ಪ್ರಮಾಣ ಪ್ರಕಟ ಮಾಡಿದ್ದು, 17 ಅಪರಾಧಿಗಳ ಪೈಕಿ 16 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಉಳಿದ ಓರ್ವ ಅಂದಿನ ತನಿಖಾಧಿಕಾರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಜೀವಾವಧಿ ಶಿಕ್ಷೆ ಎಂದರೆ 14 ವರ್ಷದ ಶಿಕ್ಷೆಯಲ್ಲಿ ಜೀವ ಇರುವ ತನಕವೂ ಕಾಂಗ್ರೆಸ್ ಶಶಾಸಕರಾಗಿದ್ದ ವಿನಯ್ ಕುಲಕರ್ಣಿ ಜೈಲಿನಲ್ಲೇ ಕಳೆಯಬೇಕಿದೆ. ಆದರೆ 14 ವರ್ಷ ಜೈಲು ಶಿಕ್ಷೆ ಕಳೆದ ಬಳಿಕ ಸರ್ಕಾರ ಸನ್ನಡತೆ ಆಧಾರದಲ್ಲಿ ಜೈಲಿನಿಂದ ಹೊರಕ್ಕೆ ತರುವುದಕ್ಕೆ ಅವಕಾಶವಿದೆ. ಅಲ್ಲೀವರೆಗೂ ಜೈಲುವಾಸ ವಿನಯ್ ಕುಲಕರ್ಣಿಯ ರಾಜಕೀಯ ಭವಿಷ್ಯವನ್ನೇ ಕತ್ತಲಿಗೆ ದೂಡುವಂತೆ ಆಗಿದೆ. ಇದೀಗ ವಿನಯ್ ಕುಲಕರ್ಣಿ ಮುಂದಿನ ದಿನಗಳಲ್ಲಿ ಸೆಷನ್ಸ್ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ತರುವುದಕ್ಕೆ ವಿಫಲರಾದರೆ ಶಾಸಕ ಸ್ಥಾನವೂ ಅನರ್ಹಗೊಂಡು, ಉಪಚುನಾವಣೆ ನಡೆಸಬೇಕಾದ ಅನಿವಾರ್ಯತೆ ಎದುರಾಗಲಿದೆ.
ಯಾವುದೇ ಜನಪ್ರತಿನಿಧಿ ಕ್ರಿಮಿನಲ್ ಅಪರಾಧ ಪ್ರಕರಣದಲ್ಲಿ 2 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟು ಜೈಲು ಶಿಕ್ಷೆಗೆ ಒಳಪಟ್ಟರೆ ಶಾಸಕತ್ವ ತನ್ನಷ್ಟಕ್ಕೇ ತಾನೇ ಅನರ್ಹಗೊಳ್ಳುತ್ತದೆ. ಜನಪ್ರತಿನಿಧಿ ಒಬ್ಬರು ಜೈಲು ಶಿಕ್ಷೆ ಗುರಿಯಾಗುತ್ತಿದ್ದ ಹಾಗೆ ಕೋರ್ಟ್ ಆದೇಶ ಪ್ರತಿ ವಿಧಾನಸಭಾ ಸ್ಪೀಕರ್ಗೆ ತಲುಪುತ್ತದೆ. ಶಾಸಕ ಸ್ಥಾನದಿಂದ ಸ್ಪೀಕರ್ ಅನರ್ಹ ಮಾಡುತ್ತಾರೆ. ಆ ಬಳಿಕ ಕೋರ್ಟ್ನಿಂದ ಆದೇಶಕ್ಕೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾದರೆ ಶಾಸಕ ಸ್ಥಾನ ಉಳಿಯಲಿದೆ. ಅನರ್ಹಗೊಂಡಿದ್ದ ಶಾಸಕ ಸ್ಥಾನವನ್ನು ಮರು ಸ್ಥಾಪಿಸಲಾಗುತ್ತದೆ. ಇದೀಗ ಮೇಲ್ಮನವಿ ಹೋಗುವದಕ್ಕೆ ವಿನಯ್ ಕುಲಕರ್ಣಿ ಮುಂದೆ 30 ದಿನಗಳ ಕಾಲಾವಕಾಶವಿದೆ.

ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ಮೊರೆ ಹೋಗುವದಕ್ಕೆ ಅವಕಾಶವಿದ್ದು, ಸಾಮಾನ್ಯವಾಗಿ ಮೊದಲು ಹೈಹೋರ್ಟ್ನಲ್ಲಿ ಈ ಸೆಷನ್ಸ್ ಕೋರ್ಟ್ ಆದೇಶವನ್ನು ಪ್ರಶ್ನೆ ಮಾಡಲಿದ್ದಾರೆ. ಜನಪ್ರತಿನಿಧಿಗಳ ನ್ಯಾಯಾಲಯ ತಪ್ಪು ಗ್ರಹಿಕೆಯಿಂದ ಈ ಆದೇಶ ನೀಡಿದ್ದು, ಅಪರಾಧಿ ಅನ್ನೋದೇ ತಪ್ಪು, ಅವರ ಪಾತ್ರ ಏನೂ ಇಲ್ಲ ಎಂದು ಹೈಕೋರ್ಟ್ಗೆ ಮನವರಿಕೆ ಮಾಡಿಕೊಡಬೇಕಾಗುತ್ತದೆ. ಒಂದು ವೇಳೆ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದರೂ ನಾವು ಕಾನೂನು ಹೋರಾಟ ನಡೆಸಲು ಸಿದ್ಧರಿದ್ದೇವೆ ಎಂದು ಸಿಬಿಐ ಪರ ವಕೀಲರು ಈಗಾಗಲೇ ತಿಳಿಸಿದ್ದಾರೆ. ಆದರೂ ಜೀವಿತಾವಧಿ ಜೈಲು ಶಿಕ್ಷೆ ಎನ್ನುವುದು ಗಲ್ಲು ಶಿಕ್ಷೆಗೆ ಸಮ ಎನ್ನಬಹುದು.


