ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟ ಪ್ರಕರಣವನ್ನು ಅಧಿಕೃತವಾಗಿ NIA ತನಿಖೆಗೆ ಹಸ್ತಾಂತರ ಮಾಡಲಾಗಿದೆ. ಈ ಬಗ್ಗೆ ಕೇಂದ್ರ ಗೃಹ ಇಲಾಖೆ ಅಧಿಕೃತ ಆದೇಶ ಹೊರಡಿಸಿದ್ದು, ಕಾರು ಸ್ಫೋಟ ಹಾಗೂ ಸ್ಫೋಟದ ಹಿಂದಿರುವ ಸಂಚಿನ ಬಗ್ಗೆ ತನಿಖೆ ಮಾಡಲು ಆದೇಶದಲ್ಲಿ ತಿಳಿಸಲಾಗಿದೆ. ಈ ಸ್ಫೋಟದ ಹಿಂದೆ ಯಾವ ಸಂಘಟನೆಗಳ ಕೈವಾಡವಿದೆ..? ಅನ್ನೋ ಬಗ್ಗೆ ಶೀಘ್ರವೇ ತನಿಖಾ ವರದಿ ಕೊಡಲು ಸೂಚನೆ ಕೊಡಲಾಗಿದೆ. ಘಟನೆಯಲ್ಲಿ 13 ಜನರು ಸಾವನ್ನಪ್ಪಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಘಟನೆ ಹಿಂದೆ ಯಾವ ಉಗ್ರ ಸಂಘಟನೆ ಇದೆ ಅನ್ನೋ ಬಗ್ಗೆ ತಿಳಿಯುವ ಅಗತ್ಯವಿದೆ.
ದೆಹಲಿಯ ಕೆಂಪು ಕೋಟೆ ಬಳಿ ಕಾರು ಸ್ಫೋಟದಲ್ಲಿ 13 ಜನ ಸಾವನ್ನಪ್ಪಿದ್ದು, 30 ಜನರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಕಾರು ಸ್ಫೋಟದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ದೆಹಲಿ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಸಾವನ್ನಪ್ಪಿದ 13 ಮಂದಿ ಕುಟುಂಬಸ್ಥರಿಗೆ 10 ಲಕ್ಷ ರೂಪಾಯಿ, ಶಾಶ್ವತ ಅಂಗವೈಕಲ್ಯ ಆದವರಿಗೆ 5 ಲಕ್ಷ ರುಪಾಯಿ ಹಾಗೂ ಗಾಯಾಳುಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ. ದೆಹಲಿ ಸಿಎಂ ರೇಖಾ ಗುಪ್ತಾ ಪರಿಹಾರ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ದೆಹಲಿಯ ರೆಡ್ಪೋರ್ಟ್ ದುರಂತಕ್ಕೂ ಜಮ್ಮು ಕಾಶ್ಮೀರದ ಪುಲ್ವಾಮಾಕ್ಕೂ ಲಿಂಕ್ ಸಿಕ್ಕಿದೆ. ಪುಲ್ವಾಮಾದ ಡಾ. ಉಮರ್ ಮನೆಗೂ ಲಿಂಕ್ ಸಿಕ್ಕಿದೆ. ಈಗಾಗಲೇ ಎನ್ಐಎ ಅಧಿಕಾರಿಗಳ ತಂಡ ಕಣಿವೆ ರಾಜ್ಯದಲ್ಲಿ ಶೋಧ ಮಾಡುತ್ತಿದ್ದು, ಡಾ ಉಮರ್ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಪೊಲೀಸರೊಂದಿಗೆ ಭೇಟಿ ನೀಡಿದ ಎನ್ಐಎ ಟೀಂ, ಡಾ. ಉಮರ್ ಕುಟುಂಬದವರನ್ನ ವಿಚಾರಣೆ ನಡೆಸಿದ್ದಾರೆ. ಉಮರ್ ಸಹೋದರ ಅಜಾದ್ ಶಕೀಲ್, ಸಹೋದರಿ ಮುಜಾಮಿಲ್ ಅಖ್ತರ್ನನ್ನು ವಿಚಾರಣೆ ನಡೆಸಿದ್ದಾರೆ. ಉಮರ್ಗೆ ಉಗ್ರ ಸಂಘಟನೆ ಲಿಂಕ್ ಇದ್ಯಾ..? ಅನ್ನೋ ವಿಚಾರ ವಿಚಾರಗಳ ಬಗ್ಗೆ ಎನ್ಐಎ ಟೀಂ ತನಿಖೆ ನಡೆಸ್ತಿದೆ.
ದೇಶದಲ್ಲಿ ಬರೀ ಕಾರು ಸ್ಫೋಟ ಮಾತ್ರ ಉಗ್ರರ ಸ್ಕೆಚ್ ಆಗಿರಲಿಲ್ಲ ಅನ್ನೋದು ಕೂಡ ಬಹಿರಂಗ ಆಗಿದೆ. ದೇಶದ ಪ್ರಮುಖ ದೇವಾಲಯಗಳ ಪ್ರಸಾದವನ್ನೂ ಟಾರ್ಗೆಟ್ ಮಾಡಿದ್ದರು ಅನ್ನೋದು ಬಯಲಾಗಿದೆ. ಭಕ್ತರಿಗೆ ನೀಡುವ ಪ್ರಸಾದದಲ್ಲೂ ವಿಷ ಬೆರೆಸಲು ಉಗ್ರರು ಸ್ಕೆಚ್ ಹಾಕಿದ್ರು ಎನ್ನಲಾಗಿದೆ. ಸೈನೆಡ್ಗಿಂತಲೂ ಮಾರಕವಾದ ರಿಸಿನ್ ವಿಷವನ್ನು ಉಗ್ರರು ಸಂಗ್ರಹಿಸಿದ್ದರು. ಈ ವಿಚಾರವನ್ನು ಬಂಧಿತ ಡಾ. ಮೊಯುದ್ದೀನ್ ಸಯ್ಯದ್ ಬಾಯ್ಬಿಟ್ಟಿದ್ದಾನೆ. ಒಂದು ಚಿಟಿಕೆ ರಿಸಿನ್ ವಿಷ ಹಾಕಿದ್ರೆ ಸಾಕು ಹತ್ತಾರು ಜನ ಸಾಯುವ ಸಂಭವ ಇತ್ತು. ಅಂತಹ 300 ಕೆಜಿ ಕಾರ್ಕೋಟಕ ರಿಸಿನ್ ಕೆಮಿಕಲ್ ಸಂಗ್ರಹಿಸಿದ್ದರು. 300 ಕೆಜಿ ರಿಸಿನ್ ವಿಷ 70 ರಿಂದ 80 ಲಕ್ಷ ಜನರನ್ನ ಬಲಿ ಪಡೆಯುವ ಸಾಧ್ಯತೆಯಿತ್ತು. ಪ್ರಮುಖ ದೇಗುಲಗಳ ಪ್ರಸಾದದಲ್ಲಿ ಮಿಕ್ಸ್ ಮಾಡಲು ಉಗ್ರರು ಸಂಚು ರೂಪಿಸಿದ್ದರು ಎನ್ನಲಾಗಿದೆ.


