ಬೆಂಗಳೂರು ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಕಾಂಗ್ರೆಸ್ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದೆ. ಕಸ ಮುಕ್ತ ಸಿಲಿಕಾನ್ ಸಿಟಿ ಮಾಡೋದಕ್ಕೆ ಪಣ ತೊಟ್ಟಿದೆ. ಈ ಸಂಬಂಧ ಸಂಪುಟ ಸಭೆಯಲ್ಲಿ ಜಿಬಿಎ ವ್ಯಾಪ್ತಿಯಲ್ಲಿ ಸ್ವೀಪಿಂಗ್ ಮಷಿನ್ಗೆ ಬಾಡಿಗೆ ಪಡೆಯಲು ಅನುಮೋದನೆ ನೀಡಿದೆ. ಬರೋಬ್ಬರಿ 613 ಕೋಟಿ ಹಣದ ನೆರವೂ ನೀಡಿದೆ. ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದು, ವಿವಾದಕ್ಕೂ ಕಾರಣವಾಗಿದೆ.. ಹೊಸ ಮಷಿನ್ಗಳನ್ನು ಖರೀದಿಸಿದ್ರೂ ಈಗ ನಿಗದಿಯಾಗಿರುವ ಮೊತ್ತದ ಅರ್ಧಕ್ಕರ್ಧ ವೆಚ್ಚ ಉಳಿತಾಯ ಆಗಲಿದೆ. ಆದರೂ ದೆಹಲಿ ಮೂಲದ ಗುತ್ತಿಗೆದಾರರನಿಗೆ ಸಹಾಯ ಮಾಡುವ ಯೋಜನೆ ಎಂದು ಜಿಬಿಎ ಕಸದ ಗುತ್ತಿಗೆದಾರರ ಸಂಘವೇ ಆರೋಪ ಮಾಡಿದೆ. ಇದೀಗ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಕಸ ಗುಡಿಸುವ ಯಂತ್ರ ಖರೀದಿ ಬಗ್ಗೆ ಮಾತನಾಡಿ, ಬಿಬಿಎಂಪಿ ಬಳಿ 26 ಕಸ ಗುಡಿಸುವ ಯಂತ್ರ ಇದೆ. ಅವೆಲ್ಲವೂ ದುರಸ್ಥಿಯಲ್ಲಿದೆ ಎಂದು ಹೇಳಿದ್ದಾರೆ. ಆದರೆ ಈಗ 613 ಕೋಟಿ ರೂಪಾಯಿ ಬಾಡಿಗೆಗೆ 46 ಸ್ವೀಪಿಂಗ್ ಮಷಿನ್ ಬಾಡಿಗೆಗೆ ತರಲು ಮುಂದಾಗಿದ್ದಾರೆ. 13.33 ಕೋಟಿ ಒಂದು ಮಷಿನ್ಗೆ ಟೋಟಲ್ ಬಾಡಿಗೆ ಆಗಲಿದೆ. ಒಂದು ವರ್ಷಕ್ಕೆ ಒಂದು ಮಷಿನ್ಗೆ 1.90 ಕೋಟಿ ಆಗುತ್ತದೆ. 1.45 ಕೋಟಿ ರೂಪಾಯಿಗೆ ಕಸ ಗುಡಿಸುವ ಯಂತ್ರವನ್ನ ಹುಬ್ಬಳ್ಳಿ ಪಾಲಿಕೆಯಲ್ಲಿ ತಂದಿದ್ದಾರೆ. ಟಾಪ್ ಮಾಡೆಲ್ನ ಯಂತ್ರದ ಬೆಲೆಯೇ 3 ಕೋಟಿ ಆದರೂ 46 ಮಷಿನ್ ಖರೀದಿಸಲು 138 ಕೋಟಿ ರೂಪಾಯಿ ಆಗುತ್ತದೆ. ಸರ್ಕಾರ ಸ್ವೀಪಿಂಗ್ ಮಷೀನ್ ಖರೀದಿ ಮಾಡೋದು ಬಿಟ್ಟು 7 ವರ್ಷಕ್ಕೆ 613 ಕೋಟಿ ರೂಪಾಯಿ ಬಾಡಿಗೆಗೆ ಪಡೆಯುವ ಉದ್ದೇಶವೇನು..? ಕಸ ಗುಡಿಸುವ ವಾಹನಗಳ ಖರೀದಿ ಮಾಡಿದರೆ ಸರ್ಕಾರದ ಆಸ್ತಿಯಾಗಿರುತ್ತದೆ ಅಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.

ಈಗ ಬಿಬಿಎಂಪಿ ಬಳಿ ಇರುವ 26 ಕಸಗುಡಿಸುವ ಯಂತ್ರ ದುರಸ್ಥಿಯಲ್ಲಿವೆ. ಅವುಗಳನ್ನು 4-5 ಕೋಟಿ ರೂಪಾಯಿ ವೆಚ್ಚ ಮಾಡಿದರೂ ದುರಸ್ಥಿ ಮಾಡಲು ಸಾಧ್ಯವಿದೆ. ಯಾಕೆ ಅದನ್ನು ಮಾಡಲ್ಲ..? ಎಂದು ಪ್ರಶ್ನಿಸಿರುವ ನಿಖಿಲ್ ಕುಮಾರಸ್ವಾಮಿ, ಕಸ ಗುಡಿಸುವ ವಾಹನಗಳನ್ನು ಬಾಡಿಗೆಗೆ ಪಡೆಯೋದು ಸೂಕ್ತವಲ್ಲ. ಹೊಸ ಯಂತ್ರ ಖರೀದಿಯೇ ಸೂಕ್ತ ಎಂದು ಅಧಿಕಾರಿಗಳು ವರದಿ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಅದೆಲ್ಲವನ್ನ ಗಾಳಿಗೆ ತೂರಿದೆ. ಜನರ ಮೇಲೆ ಆರ್ಥಿಕ ಹೊರೆ ಬೀಳುವ ಬಗ್ಗೆ ಯಾಕೆ ಯೋಚಿಸಿಲ್ಲ. ಕೇವಲ 150 ಕೋಟಿ ರೂಪಾಯಿ ಒಳಗೆ ವಾಹನಗಳ ಖರೀದಿಗೆ ಅವಕಾಶ ಇದೆ. ಅದೆಲ್ಲವನ್ನ ಬದಿಗೊತ್ತಿ 7 ವರ್ಷದ ಅವಧಿಗೆ ಬಾಡಿಗೆಗೆ ಪಡೆಯುವ ಉದ್ದೇಶವೇನು..? ಎಂದು ನಿಖಿಲ್ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ಮೇಲೆ ಶೇಕಡ 40 ರಷ್ಟು ಕಮಿಷನ್ ಆರೋಪ ಮಾಡಿದ್ದರು. ಬೆಂಗಳೂರು ಉಸ್ತುವಾರಿ ಮಂತ್ರಿಗಳು ಒನ್ ಟೈಂ ಸೆಟ್ಲಮೆಂಟ್ ಮಾಡಿದ್ದಾರೆ. ಸಾಮಾನ್ಯ ಜನರು ಈ ಬಗ್ಗೆ ಪ್ರಶ್ನೆ ಮಾಡ್ತಿದಾರೆ. ಕಂಪನಿ ಸಿಇಓ ರೀತಿ ಯೋಚನೆ ಮಾಡಬೇಕಲ್ವಾ..? ಸಾರ್ವಜನಿಕರ ಹಣಕ್ಕೆ ಬೆಲೆ ಇಲ್ಲವಾ..? ಇದರ ಹಿಂದಿರುವ ಹಿಡನ್ ಅಜೆಂಡಾ ಏನು..? ನಾವು ಹುಡುಕಾಟ ಮಾಡಿದಾಗ ಒಂದಷ್ಟು ಮಾಹಿತಿ ಸಿಕ್ಕಿದೆ. ಜೆಮ್ ಪೋರ್ಟಲ್ನಲ್ಲಿ 2 ಕೋಟಿ ರೂಪಾಯಿಗೆ ಈ ಯಂತ್ರದ ಬೆಲೆ ಇದೆ. ಅದಾಗ್ಯೂ ಬೆಂಗಳೂರಿನ ಉಸ್ತುವಾರಿ ಸಚಿವರು ಕಸದ ಯಂತ್ರ ಬಾಡಿಗೆಗೆ ಪಡೆಯುವ ಮೂಲಕ ಏನ್ ಮಾಡಲು ಹೊರಟಿದ್ದಾರೆ..? ಎಂದು ನಿಖಿಲ್ ಪ್ರಶ್ನಿಸಿದ್ದಾರೆ. ₹613 ಕೋಟಿ ರೂಪಾಯಿ ಯಾರ ಮನೆ ದುಡ್ಡು, ನಮ್ಮ ಹಣವಾಗಿದ್ರೆ ಈಗ ದುಂದುವೆಚ್ಚ ಮಾಡ್ತಿದ್ವಾ..? ಸರ್ಕಾರ ಏನು ಮಾಡಲು ಹೊರಟಿದೆ ಅನ್ನೋದನ್ನು ಸ್ಪಷ್ಟನೆ ನೀಡಬೇಕು ಎಂದು ಆಗ್ರಹ ಮಾಡಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಪ್ರಶ್ನೆ ಮಾಡಿರೋದ್ರಲ್ಲಿ ಯಾವುದೇ ತಪ್ಪಿಲ್ಲ. ಹೊಸ ವಾಹನಗಳ ಖರೀದಿ ಮಾಡಿದ್ರೆ 150 ಕೋಟಿಗೂ ಕಡಿಮೆ ವೆಚ್ಚ ಆಗುತ್ತದೆ. ಆದರೆ 613 ಕೋಟಿ ಹಣ ಕೊಡುವುದು ಯಾವ ನ್ಯಾಯ..? ಸಾರ್ವಜನಿಕರ ತೆರಿಗೆ ಹಣ ಪೋಲಾಗುವುದಿಲ್ಲವೇ..? ಆದರೆ ಈ ಬಗ್ಗೆ ಬಿಜೆಪಿ ನಾಯಕರು ಚಕಾರ ಎತ್ತುತ್ತಿಲ್ಲ ಯಾಕೆ..? ಅನ್ನೋ ಪ್ರಶ್ನೆ ಜನಸಾಮಾನ್ಯರ ಮನಸ್ಸಲ್ಲಿ ಬಂದಿದೆ. ಆದರೆ ಬಿಜೆಪಿ ನಾಯಕರು ಹಾಗೂ ಕಾಂಗ್ರೆಸ್ ನಾಯಕರು ಸಾಕಷ್ಟು ವ್ಯವಹಾರಗಳಲ್ಲಿ ಭಾಗೀದಾರರು ಆಗಿರುವ ಕಾರಣಕ್ಕೆ ಕೆಲವೊಂದು ವಿಚಾರದಲ್ಲಿ ಸರ್ಕಾರದ ವಿರುದ್ಧ ಮಾತನಾಡುವುದಿಲ್ಲ. ಕೇವಲ ಜನರಿಗೆ ತೋರಿಸುವ ಉದ್ದೇಶದಿಂದ ಕೆಲವು ವಿಚಾರಗಳ ಬಗ್ಗೆ ಮಾತ್ರವೇ ಚರ್ಚೆ ಮಾಡ್ತಾರೆ, ಹೋರಾಟ ಮಾಡುತ್ತಾರೆ ಅನ್ನೋ ಬಗ್ಗೆ ವಿಧಾನಸೌಧದ ಅಂಗಳದಲ್ಲೇ ಚರ್ಚೆ ಆಗುತ್ತಿದೆ.


