ಬೆಂಗಳೂರಲ್ಲಿ 7 ಕೋಟಿ 11 ಲಕ್ಷ ರೂಪಾಯಿ ರಾಬರಿ ಮಾಡಿದ ಪ್ರಕರಣದಲ್ಲಿ ಪ್ರಮುಖ ಕಿಂಗ್ ಪಿನ್ ರವಿ ಪತ್ನಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ರವಿ ಬಗ್ಗೆ ಪತ್ನಿಯಿಂದ ಮಾಹಿತಿ ಕಲೆ ಹಾಕಲಾಗ್ತಿದೆ. ಎರಡೂವರೆ ವರ್ಷದ ಮಗುವಿನ ಜೊತೆಗೆ ಠಾಣೆಗೆ ಆಗಮಿಸಿದ್ದು, ಗುರುವಾರ ರಾತ್ರಿ ಕಮ್ಮನಹಳ್ಳಿ, ಹೆಣ್ಣೂರು ಸುತ್ತಮುತ್ತ ಹುಡುಕಾಟ ನಡೆಸಿದ್ದ ಪೊಲೀಸರು, ಸುಮಾರು 80 ಮನೆಗಳ ಶೋಧ ಮಾಡಿದ್ದರು. ಈ ವೇಳೆ ರವಿ ಪತ್ನಿ ಮನೆಯಲ್ಲಿರೋದು ಪತ್ತೆಯಾಗಿದ್ದು, ರಾತ್ರಿಯೇ ಕರೆತಂದು ವಿಚಾರಣೆ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಗಂಡ ಕೃತ್ಯದಲ್ಲಿ ಭಾಗಿಯಾಗಿರೋದನ್ನ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ನಾನೇ ಠಾಣೆಗೆ ಬರಬೇಕು ಎಂದುಕೊಂಡಿದ್ದೆ, ನೀವೇ ಬಂದಿದ್ದೀರಿ ಎಂದು ಪೊಲೀಸರ ಜೊತೆಗೆ ಬಂದ ರವಿ ಪತ್ನಿ ಎಲ್ಲಾ ಮಾಹಿತಿ ನೀಡಿದ್ದಾರೆ. ಬೆಂಗಳೂರಲ್ಲಿ ಟ್ರಾವೆಲ್ಸ್ ನಡೆಸುತ್ತಿದ್ದ ರವಿ, ಆರ್ಥಿಕ ನಷ್ಟವಾಗಿ ಕೆಲಸ ಇಲ್ಲದೇ ಮನೆಯಲ್ಲೇ ಕುಳಿತಿದ್ದ. ಹಾಗಾಗಿ ಏರಿಯಾ ಹುಡುಗರನ್ನ ಸೇರಿಸಿಕೊಂಡು ರಾಬರಿ ಪ್ಲಾನ್ ರೂಪಿಸಿದ್ದ ಅನ್ನೋದು ಬಯಲಾಗಿದೆ. ಈ ನಡುವೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಹೈ-ವೋಲ್ಟೇಜ್ ಮೀಟಿಂಗ್ ಮಾಡಿದ್ದು, ತನಿಖೆಯ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ದಕ್ಷಿಣ ವಿಭಾಗದ ಡಿಸಿಪಿ ಕಚೇರಿಯಲ್ಲಿ ಸಭೆ ಮಾಡಿದ್ದು, ಸಿಸಿಬಿ ಜಂಟಿ ಆಯುಕ್ತ ಅಜಯ್ ಹಿಲೋರಿ, ಹೆಚ್ಚು ವರಿ ಪೊಲೀಸ್ ಆಯುಕ್ತರಾದ ವಂಶಿ ಕೃಷ್ಣ, ರಮೇಶ್ ಬಾನೂತ್, ಡಿಸಿಪಿ ಲೋಕೇಶ್ ಜಗಲಾರ್ ಸೇರಿ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

ಏಳು ಕೋಟಿ ಹಣ ದರೋಡೆ ಪ್ರಕರಣದ ಮುಂದಿನ ತನಿಖೆ ಬಗ್ಗೆ ಚರ್ಚೆ ಮಾಡಿರುವ ಅಧಿಕಾರಿಗಳು, ಈಗಾಗಲೇ ಪೊಲೀಸರ ವಶದಲ್ಲಿರುವ ಪೇದೆ ಅಣ್ಣಪ್ಪ ನಾಯಕ್ ಮತ್ತು ಎಕ್ಸೇವಿಯರ್ ತೀವ್ರ ವಿಚಾರಣೆ ಮಾಡಲಾಗ್ತಿದೆ. ಆರೋಪಿಗಳ ಪತ್ತೆಗಾಗಿ ಬರೋಬ್ಬರಿ ಹದಿನೈದು ತಂಡಗಳನ್ನು ರಚನೆ ಮಾಡಿ ಕಾರ್ಯಾಚರಣೆ ನಡೆಸಲಾಗ್ತಿದೆ. ಇಲ್ಲಿವರೆಗೂ ಯಾವುದೇ ಆರೋಪಿ ಬಂಧನವಾಗಿಲ್ಲ, ಹಣ ಕೂಡ ರಿಕವರಿ ಆಗಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಕಾರ್ಯಾಚರಣೆ ಬಗ್ಗೆ ಮಹತ್ವದ ಸಭೆ ನಡೆಸಿ ಸಲಹೆ ಸೂಚನೆ ನೀಡಿದ್ದಾರೆ. ಸಭೆ ಬಳಿಕ ಮಾತನಾಡಿದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ತನಿಖೆಯ ಪ್ರಗತಿ ಕುರಿತು ಚರ್ಚೆ ನಡೆಸಲಾಗಿದೆ. ಇದುವರೆಗೆ ಸಾಕಷ್ಟು ಲೀಡ್ ಸಿಕ್ಕಿದೆ. ಆದರೆ ಆರೋಪಿಗಳು ಪತ್ತೆ ಆಗ್ತಿಲ್ಲ. ಎಲ್ಲಾ ಕಡೆ ನಮ್ಮ ತಂಡ ಅಲರ್ಟ್ ಆಗಿದೆ. ಪ್ರಕರಣ ಬೇಗ ಇತ್ಯರ್ಥ ಆಗುತ್ತೆ ಎಂದಿದ್ದಾರೆ.
ಕೋಟಿ ಕೋಟಿ ಹಣ ಕಳವು ಮಾಡಿ ಹೋಗಿರುವ ಪ್ರಕರಣದ ಹಿಂದೆ ಯಾರ್ಯಾರಿದ್ದಾರೆ..? ಯಾರ್ಯಾರು ಶಾಮೀಲಾಗಿದ್ದಾರೆ ಎಲ್ಲರನ್ನು ಬಂಧಿಸುತ್ತೇವೆ. ಮಾಹಿತಿ ಆಧಾರದ ಮೇಲೆ ತನಿಖೆ ನಡೆಸಲಾಗ್ತಿದೆ ಎಂದು ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ. ಈ ನಡುವೆ 7.11ಕೋಟಿ ಹಣ ತೆಗೆದೊಂಡು ಖಾಲಿ ಬಾಕ್ಸ್ಗಳನ್ನು ಎಸೆದು ಹೋಗಿರುವ ಗೊತ್ತಾಗಿದೆ. ಆಂಧ್ರದ ಚಿತ್ತೂರು ಬಳಿಯ ನಿರ್ಜನ ಪ್ರದೇಶದ ರಸ್ತೆ ಬದಿ ಬಾಕ್ಸ್ ಎಸೆದು ಹೋಗಿದ್ದಾರೆ. ಚಿತ್ತೂರು ಪೊಲೀಸರು ಖಾಲಿ ಬಾಗ್ಸ್ಗಳ ಪರಿಶೀಲನೆ ನಡೆಸಿದ್ದು, ಮೊನ್ನೆಯಷ್ಟೇ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕಾರು ಪತ್ತೆಯಾಗಿತ್ತು. ಕಾರನ್ನು ಬಿಟ್ಟು ಬೇರೊಂದು ವಾಹನದಲ್ಲಿ ಹಣದ ಸಮೇತ ಎಸ್ಕೇಪ್ ಆಗಿದ್ದು, ಆರೋಪಿಗಳ ಪತ್ತೆಗೆ ಚಿತ್ತೂರು ಪೊಲೀಸರ ಜೊತೆಗೂಡಿ ಕಾರ್ಯಾಚರಣೆ ನಡೆಸಲಾಗ್ತಿದೆ.
ಎಟಿಎಂ ವಾಹನ ದರೋಡೆ ಪ್ರಕರಣ ಸಂಬಂಧ ಮಾಜಿ CMS ಸಿಬ್ಬಂದಿ ಎಕ್ಸೇವಿಯರ್ ಎಂಬಾತನನ್ನು ತೀವ್ರ ವಿಚಾರಣೆ ಮಾಡಲಾಗ್ತಿದೆ. ತನಿಖೆ ವೇಳೆ ಮತ್ತೊಂದು ವಿಚಾರ ಬಯಲಾಗಿದ್ದು, ಕೇವಲ ನಾಲ್ಕೇ ನಾಲ್ಕು ದಿನ CMS ನಲ್ಲಿ ಕೆಲಸ ಮಾಡಿದ್ದ ಅನ್ನೋದು ಗೊತ್ತಾಗಿದೆ. ಇದೇ ವರ್ಷ ಜುಲೈ 31 ರಂದು ಕಲಸಕ್ಕೆ ಸೇರಿದ್ದ ಜೆ. ಎಕ್ಸೇವಿಯರ್, ಆಗಸ್ಟ್ 4 ರಂದು ಕೆಲಸ ಬಿಟ್ಟಿದ್ದನು. ಆಡಳಿತ ಮಂಡಳಿಗೆ ಯಾವುದೇ ಮಾಹಿತಿ ನೀಡದೆ ಕೆಲಸ ಬಿಟ್ಟಿದ್ದನು ಎನ್ನುವುದು ಗೊತ್ತಾಗಿದೆ. SSLC ತನಕ ಓದಿದ್ದ ಜೆ ಎಕ್ಸೇವಿಯರ್, ಅಶೋಕ್ ನಗರದ ಶಾಂಪುರದಲ್ಲಿ ವಾಸವಾಗಿದ್ದ. ಆ ಬಳಿಕ ಕಾನ್ಸ್ಟೇಬಲ್ ಜೊತೆ ಪ್ಲಾನ್ ಮಾಡಿ ರಾಬರಿ ಮಾಡಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ..ಇದೇ ಕಾರಣಕ್ಕೆ ಎಕ್ಸೇವಿಯರ್ ಹಾಗೂ ಕಾನ್ಸ್ಟೇಬಲ್ ಅಣ್ಣಪ್ಪ ನಾಯಕನ್ನ ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ.


