ಬೆಂಗಳೂರಿನ ಗಿರಿನಗರದಲ್ಲಿ ಹೈಟೆನ್ಷನ್ ಲೈನ್ ಮೇಲೆ ಕುಳಿತಿದ್ದ ಗಿಳಿಯನ್ನು ರಕ್ಷಿಸಲು ಹೋಗಿ ವಿದ್ಯುತ್ ಶಾಕ್ನಿಂದ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಗಿರಿನಗರದ ಅಪಾರ್ಟ್ಮೆಂಟ್ ಬಳಿ 32 ವರ್ಷದ ಅರುಣ್ ಕುಮಾರ್, ಸ್ಟೀಲ್ ಪೈಪ್ಗೆ ಕಡ್ಡಿ ಕಟ್ಟಿಕೊಂಡು ಗಿಳಿ ಓಡಿಸಲು ಮುಂದಾಗಿದ್ದಾನೆ. ಕಾಪೌಂಡ್ ಮೇಲೆ ನಿಂತು ಗಿಳಿ ಓಡಿಸಲು ಪ್ರಯತ್ನಿಸಿದ್ದಾಗ 66 ಕೆವಿ ವಿದ್ಯುತ್ ಲೈನ್ನಿಂದ ಶಾಕ್ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಗಿಳಿಯನ್ನು ಸಾಕಿದ್ದರು. ಆದರೆ ಆ ಗಿಳಿ ಮನೆಯಿಂದ ಹಾರಿಹೋಗಿ ಹೈಟೆನ್ಷನ್ ಲೈನ್ ಮೇಲೆ ಕುಳಿತಿತ್ತು. ಈ ವೇಳೆ ಅಪಾರ್ಟ್ಮೆಂಟ್ ಒಳಗಿನ ಹೈಟೆನ್ಷನ್ ಲೈನ್ ಕಂಬದ ಮೇಲೆ ಕುಳಿತಿದ್ದ ಗಿಳಿಯನ್ನು ಸಂಬಂಧಿಕ ಅರುಣ್ ಕುಮಾರ್ ರಕ್ಷಣೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಎಲೆಕ್ಟ್ರಿಕ್ ಶಾಕ್ ಹೊಡೆದು ಕೆಳಗೆ ಬಿದ್ದ ಅರುಣ್ನನ್ನು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ರು. ಆದರೆ ಆಸ್ಪತ್ರೆಗೆ ಹೋಗುವಷ್ಟರಲ್ಲೇ ಜೀವ ಹೋಗಿತ್ತು. ಸ್ಥಳಕ್ಕೆ ಬೆಸ್ಕಾಂ ಹಾಗೂ ಕೆಇಬಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಗಿರಿನಗರ ಪೊಲೀಸರು ಕೂಡ ಪ್ರಕರಣ ದಾಖಲಿಸಿಕೊಂಡು ಸ್ಥಳ ಪರಿಶೀಲನೆ ಮಾಡಿದ್ದಾರೆ.

ಮಂಡ್ಯ ಜಿಲ್ಲೆ ನಾಗಮಂಗಲ ಮೂಲದ ಅರುಣ್ ಕುಮಾರ್, ತನ್ನ ಚಿಕ್ಕಮ್ಮನ ಮನೆಗೆ ಆಗಾಗ ಬಂದು ಉಳಿದುಕೊಳ್ತಿದ್ದ ಎನ್ನಲಾಗಿದೆ. ಖಾಸಗಿ ಕೆಲಸ ಮಾಡುತ್ತಿದ್ದ ಅರುಣ್ ಕುಮಾರ್, ಬೆಳಗ್ಗೆ ಗಿಳಿಯನ್ನು ಆಟ ಆಡಿಸುವಾಗ ಹೊರಗಡೆ ಹಾರಿಹೋಗಿತ್ತು. ವಿದ್ಯುತ್ ಕಂಬದ ಮೇಲೆ ಕುಳಿತಾಗ ಗಿಳಿಯನ್ನು ಓಡಿಸಲು ಯತ್ನ ಮಾಡಿದ್ದ. ಹೈಟೆ ನ್ಷನ್ ಲೈನ್ನಲ್ಲಿ ಕರೆಂಟ್ ಇಲ್ಲ ಎಂದುಕೊಂಡ ಅರುಣ್, ಗಿಳಿಯನ್ನು ಲೈನ್ ಮೇಲಿನಿಂದ ಬೇರೆ ಕಡೆಗೆ ಹಾರಿಸಿದ ಬಳಿಕ ಹಿಡಿದುಕೊಳ್ಳುವ ಪ್ರಯತ್ನ ಮಾಡಿದ್ದ. ಈ ಪ್ರಕ್ರಿಯೆಯಲ್ಲಿ ಕರೆಂಟ್ ಶಾಕ್ ಹೊಡೆದು ಅರುಣ್ ಸಾವನ್ನಪ್ಪಿದ್ದಾನೆ.

ಗಂಡನನ್ನು ಕಳೆದುಕೊಂಡು ಒಬ್ಬಂಟಿ ಆಗಿದ್ದ ತಾಯಿಗೆ ಆಸರೆಯಾಗಿದ್ದ ಅರುಣ್ ಕುಮಾರ್ ಸಾವನ್ನಪ್ಪಿರುವುದು ವಿಷಾದನಿಯ. ಕಿಮ್ಸ್ ಆಸ್ಪತ್ರೆಯಲ್ಲಿ ಅರುಣ್ ಕುಮಾರ್ ಮರಣೋತ್ತರ ಪರೀಕ್ಷೆ ನಡೆದಿದ್ದು, ಗಿರಿನಗರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗುದೆ. ಆದರೆ ಗಿಳಿ ಹಾರಿ ಹೋಗಿದ್ದರೆ 2 ಲಕ್ಷ ಹೋಗುತ್ತಿತ್ತು. ಆದರೆ 2 ಲಕ್ಷದ ಗಿಳಿ ಹಾರಿ ಹೋಯಿತಲ್ಲ ಅನ್ನೋ ಕಾರಣಕ್ಕೆ ಗಿಳಿಯನ್ನು ಹಿಡಿದುಕೊಳ್ಳಲು ಮುಂದಾಗಿ ಈ ದುರಂತ ಸಂಭವಿಸಿದೆ. ಈ ಹಿಂದೆ ಪಾರಿವಾಳವನ್ನು ಹಿಡಿಯುವ ಯತ್ನದಲ್ಲಿ ಇಬ್ಬರು ಬಾಲಕರು ಸಾವನ್ನಪ್ಪಿದ್ದರು. ಬೆಂಗಳೂರಿನಲ್ಲಿ ಪಾರಿವಾಳ ಹಿರಿಯುವುದು, ಗಿಳಿಯನ್ನು ಸಾಕುವ ಹುಡುಗರು ಹೆಚ್ಚಾಗಿದ್ದು, ಯಾವುದೇ ರೀತಿಯ ಕೆಲಸ ಮಾಡುವಾಗ ಎಚ್ಚರಿಕೆ ವಹಿಸೋದು ಅತ್ಯಗತ್ಯ ಎನ್ನಬಹುದು.


