ಕಾಂಗ್ರೆಸ್ನಲ್ಲಿ ಎಲ್ಲೋ ಏನೋ ಸರಿಯಾಗಿಲ್ಲ ಅನ್ನೋದು ರಾಜ್ಯದ ಜನರಿಗೆ ಸ್ಪಷ್ಟವಾಗಿ ಕಾಣ್ತಿದೆ. ನಿನ್ನೆ ತಮಿಳುನಾಡಿಗೆ ತೆರಳುವ ಮಾರ್ಗ ಮಧ್ಯೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಸಹಿತ ಕೆಲವು ಸಚಿವರೂ ಕೂಡ ಏರ್ಪೋರ್ಟ್ಗೆ ತೆರಳಿ ರಾಹುಲ್ ಗಾಂಧಿಗೆ ಸ್ವಾಗತ ಕೋರಿದ್ರು. ವಿಶೇಷ ಅಂದ್ರೆ ರಾಹುಲ್ ಗಾಂಧಿ ಹೂವಿನ ಬೊಕ್ಕೆಗಳನ್ನು ಸಮಾಧಾನದಿಂದ ಸ್ವೀಕಾರ ಮಾಡುತ್ತಿರಲಿಲ್ಲ. ಅರಿಬಿರಿಯಲ್ಲಿ ಬೊಕ್ಕೆಗಳನ್ನು ಪಡೆದು ಹೊರಟರೆ ಸಾಕು ಎನ್ನುವಂತಿತ್ತು. ಈ ನಡುವೆ ಸಿಎಂ, ಡಿಸಿಎಂ ಜೊತೆಗೆ ಸಭೆಯೂ ಆಯ್ತು.

ಸಂಕ್ರಾಂತಿ ಬಳಿಕ ಗುಡ್ನ್ಯೂಸ್ ಸಿಗುತ್ತದೆ ಎನ್ನುವ ಮಾತು ಡಿ.ಕೆ ಶಿವಕುಮಾರ್ ಆಪ್ತ ಬಳಗದಿಂದ ಕೇಳಿ ಬರುತ್ತಿದೆ. ಅದೇ ಕಾರಣಕ್ಕೆ ಡಿ.ಕೆ ಶಿವಕುಮಾರ್ ಆಪ್ತ ಶಾಸಕರು ಸಂಕ್ರಾಂತಿ ಬಳಿಕ ಮಾತನಾಡ್ತೇನೆ ಎನ್ನುವ ಮಾತು ಆಡ್ತಿದ್ದಾರೆ. ಈಗಾಗಲೇ ದಿವಂಗತ ದೇವರಾಜ ಅರಸು ಅವರ ದಾಖಲೆಯನ್ನು ಸರಿಗಟ್ಟಿರುವ ಸಿಎಂ ಸಿದ್ದರಾಮಯ್ಯ, ಈ ಬಾರಿಯ ಬಜೆಟ್ ಬಳಿಕ ಡಿ.ಕೆ ಶಿವಕುಮಾರ್ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬಹುದು ಅನ್ನೋ ಮಾತುಗಳ ನಡುವೆ ಅಷ್ಟೊಂದು ಸುಲಭವಾಗಿ ಅಧಿಕಾರ ಹಸ್ತಾಂತ ಆಗಲಾರದು ಅನ್ನೋ ಮುನ್ಸೂಚನೆಯೂ ಡಿ.ಕೆ ಶಿವಕುಮಾರ್ ಆಪ್ತ ವಲಯದಲ್ಲಿದೆ. ಸಿದ್ದರಾಮಯ್ಯ ಅವರನ್ನು ಎದುರು ಹಾಕಿಕೊಂಡು ಅಧಿಕಾರ ಪಡೆಯುವುದು ಅಸಾಧ್ಯ ಅನ್ನೋದನ್ನ ಅರಿತೇ ಒಳ್ಳೇತನದಿಂದ ಅಧಿಕಾರ ಬಿಡಿಸಿಕೊಳ್ಳುವ ಯೋಜನೆ ಮಾಡಿದ್ದಾರೆ ಎನ್ನಲಾಗ್ತಿದೆ.

ಸಿದ್ದರಾಮಯ್ಯ ಈಗಾಗಲೇ ಎರಡೂ ಮುಕ್ಕಾಲು ವರ್ಷ ಅಧಿಕಾರ ನಡೆಸಿ, ಇನ್ನೇನು ಕೆಲವೇ ತಿಂಗಳಲ್ಲಿ ಮೂರು ವರ್ಷ ಪೂರೈಸಲಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಸಂಬಂಧ ಮಾತುಕತೆ ಆಗಿದ್ದರೂ ಈಗ ಮುಖ್ಯಮಂತ್ರಿ ಸ್ಥಾನಕ್ಕಾಗಿ ರಂಪಾಟ ಮಾಡಿಕೊಂಡರೇ ಸರ್ಕಾರವೇ ಅಸ್ತಿತ್ವ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಿ ನಾವು ಹೈಕಮಾಂಡ್ ಹೇಳಿದಂತೆ ಎನ್ನುತ್ತ, ಸಿದ್ದರಾಮಯ್ಯಗೆ ಉಘೇ ಎಂದುಕೊಂಡು ಅಧಿಕಾರಕ್ಕಾಗಿ ಗೋಗರೆಯುವುದು ಬಿಟ್ಟು ಬೇರೆ ಮಾರ್ಗಗಳು ಉಳಿದಿಲ್ಲ. ಸಿದ್ದರಾಮಯ್ಯಗೆ ಅಧಿಕಾರ ಬಿಟ್ಟುಕೊಡಿ ಎಂದು ಹೇಳುವ ಧೈರ್ಯ ಕಾಂಗ್ರೆಸ್ ಹೈಕಮಾಂಡ್ಗೂ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ ಎಷ್ಟು ದಿನಗಳ ಕಾಲ ಸಾಧ್ಯವೋ ಅಷ್ಟು ದಿನ ದಿನದೂಡುವುದೇ ಒಳಿತು ಎನ್ನುವಂತಾಗಿದೆ.

ಮೈಸೂರು ಏರ್ಪೋರ್ಟ್ನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ನಾನೊಂದು ತೀರ, ನೀನೊಂದು ತೀರ ಎನ್ನುವಂತೆ ಅಂತರ ಕಾಯ್ದುಕೊಂಡಿದ್ದರು. ರಾಹುಲ್ ಭೇಟಿ ವೇಳೆ ಒಟ್ಟಿಗೆ ಕಾಣಿಸಿಕೊಂಡವರು ಆ ಬಳಿಕ ಪ್ರತ್ಯೇಕವಾಗಿ ಮಾತನಾಡಿದರು. ಅಲ್ಲಿಂದ ಹೊರಡುವಾಗ ಡಿಸಿಎಂ ಒಂದು ಕಡೆ ಹೋದ್ರೆ ಸಿಎಂ ಮತ್ತೊಂದು ಕಡೆಗೆ ನಡೆದು ಹೋಗಿದ್ದು, ಕಾಂಗ್ರೆಸ್ನಲ್ಲಿ ಅಧಿಕಾರ ಅಸಮಾಧಾನ ಇದೆ ಎನ್ನುವುದು ಎಲ್ಲರಿಗೂ ತಿಳಿಯುವಂತಿತ್ತು. ಅದೇನೇ ಇರಲಿ ಮೈಸೂರು ಏರ್ಪೋರ್ಟ್ನಲ್ಲಿ ಕಾಂಗ್ರೆಸ್ ಅಧಿನಾಯಕ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸ್ಟ್ಯಾಂಡಿಂಗ್ ಮೀಟಿಂಗ್ ಮಾಡಿದ್ದು ಮಾತ್ರ ವಿಶೇಷವೇ ಸರಿ. ಸಂಪೂರ್ಣ ಅಧಿಕಾರ ಪೂರೈಸಬೇಕು ಅನ್ನೋದು ಸಿದ್ದರಾಮಯ್ಯ ಮನಸ್ಥಿತಿ. ಹೇಗಾದರೂ ಮಾಡಿ ಸಿಎಂ ಆಗಿಬಿಡಬೇಕು ಎನ್ನುವುದು ಡಿ.ಕೆ ಶಿವಕುಮಾರ್ ಕನಸು. ಸಾಧ್ಯ ಆಗುತ್ತಾ..? ಅನ್ನೋದೇ ಈಗ ಇರುವ ಕುತೂಹಲ.








