ರಾಜ್ಯದಲ್ಲಿ ಸಿಎಂ ಕುರ್ಚಿ ವಿಚಾರ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣ್ತಿಲ್ಲ. ನಾವು ಇಬ್ಬರೂ ಒಂದೇ ಅಂತಾ ಮೇಲ್ನೋಟಕ್ಕೆ ತೇಪೆ ಹಾಕುವ ಕೆಲಸವನ್ನು ಸಿಎಂ ಸಿದ್ದಾರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಮಾಡಿದರೂ ಕೆಲವೇ ದಿನಗಳಲ್ಲಿ ತಮ್ಮ ಆಸೆಯನ್ನು ಚಾಲ್ತಿಗೆ ತರುವ ಕೆಲಸ ಮಾಡುವ ಕೆಲಸ ಮಾಡ್ತಿದ್ದಾರೆ. ಡಿ.ಕೆ ಶಿವಕುಮಾರ್ ಆಪ್ತ ಶಿವಗಂಗಾ ಬಸವರಾಜ್ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗಲಿದೆ ಎಂದಿದ್ದರು. ಶಿವಗಂಗಾ ಬಸವರಾಜ್ ಮಾತಿನ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಪುತ್ರ ಡಾ ಯತೀಂದ್ರ ಸಿದ್ದರಾಮಯ್ಯ, 5 ವರ್ಷಗಳ ಕಾಲ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿ ಇರ್ತಾರೆ ಎನ್ನುವ ಮೂಲಕ ಡಿ.ಕೆ ಶಿವಕುಮಾರ್ ಬಣಕ್ಕೆ ಕಹಿ ಸತ್ಯವನ್ನು ರವಾನಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ ಪಕ್ಷದಲ್ಲಿ ಬದಲಾವಣೆ ಗೊಂದಲ ಇಲ್ಲ. ಹೈ ಕಮಾಂಡ್ ನೇರವಾಗಿ ಹೇಳದೆ ಇರಬಹುದು. ಆದರೆ ಬದಲಾವಣೆ ಇಲ್ಲ ಅನ್ನೋ ಸಂದೇಶ ರವಾನೆ ಮಾಡಿದೆ. ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಿ ಮುಂದುವರಿಯಲಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಸದ್ಯಕ್ಕೆ ಪಕ್ಷದಲ್ಲಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಇಳಿಸಿ ಅಂತ ಯಾರೂ ಕೇಳುತ್ತಿಲ್ಲ ಎಂದಿದ್ದಾರೆ. ಈ ಮಾತಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರತಿಕ್ರಿಯೆ ಕೇಳಿದರೂ ಉತ್ತರ ಕೊಡದೆ ಮೌನಕ್ಕೆ ಶರುಣಾಗಿದ್ದಾರೆ ಸಿಎಂ ಸಿದ್ದರಾಮಯ್ಯ. ಯತೀಂದ್ರ ವಿಚಾರವಾಗಿ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಯತೀಂದ್ರ ಅವರೇ ನಮ್ಮ ಹೈಕಮಾಂಡ್, ಅವರು ಏನು ಹೇಳ್ತಾರೋ ಅದನ್ನು ನಾವು ಗೌರವದಿಂದ ಸ್ವೀಕಾರ ಮಾಡೋಣ. ಯತೀಂದ್ರ ಅವರನ್ನೇ ನಮ್ಮ ಹೈಕಮಾಂಡ್ ಎಂದು ಸ್ವೀಕಾರ ಮಾಡೋಣ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಸ್ಪಷ್ಟಪಡಿಸಲಿ ಅಂತ ಶಾಸಕ ಶಿವಗಂಗಾ ಬಸವರಾಜ್ ಹೇಳಿದ ವಿಚಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಮಾತಲ್ಲೇ ತಿವಿದಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಅಗತ್ಯ ಬಿದ್ದಾಗ ಕರೆಯುತ್ತೇವೆ ಅಂತ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿಯವರೇ ಹೇಳಿದ್ದಾರೆ. ಅವಶ್ಯಕತೆ ಇದ್ದಾಗ ಸಮಯ ಬಂದಾಗ ಕರೆದು ನಿರ್ಧಾರ ಕೈಗೊಳ್ತಾರೆ. ಈ ಬಗ್ಗೆ ಮಾಧ್ಯಮದಲ್ಲಿ ಮಾತನಾಡಿದ್ರೆ ಪ್ರಯೋಜನ ಇಲ್ಲ ಎಂದಿದ್ದಾರೆ. ಯತೀಂದ್ರ ಹೇಳಿಕೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಕಾಂಗ್ರೆಸ್ನಲ್ಲಿ ಮತ್ತೆ ಕುರ್ಚಿ ವಾರ್ ಶುರುವಾಗಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನಡುವೆ ಕುರ್ಚಿ ಕದನ ಏರ್ಪಟ್ಟಿದೆ. ಯತೀಂದ್ರ ಮತ್ತೆ ನಮ್ಮಪ್ಪನೇ ಐದು ವರ್ಷ ಸಿಎಂ ಅಂತ ಹೇಳಿ ಹೊಸ ವಿವಾದ ಹುಟ್ಟು ಹಾಕಿದ್ರೆ, ಯತೀಂದ್ರನೇ ನಮಗೆ ಹೈಕಮಾಂಡ್ ಅಂತ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಅನ್ನೋದು ಸತ್ತು ಹೋಗಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಲೆಕ್ಕಕ್ಕೆ ಇಲ್ಲ. ರಾಜ್ಯದ ಜನರು ಇದನ್ನೆಲ್ಲಾ ನೋಡ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ಗೆ ಸರಿಯಾದ ಪಾಠ ಕಲಿಸ್ತಾರೆ ಎಂದಿದ್ದಾರೆ.

ಆದರೆ ಡಿ.ಕೆ ಶಿವಕುಮಾರ್ ಬಣಕ್ಕೆ ಕೌಂಟರ್ ಕೊಡಲು ಸಿದ್ದರಾಮಯ್ಯ ಬಣದಿಂದ ಸಾಕಷ್ಟು ನಾಯಕರಿದ್ದಾರೆ. ಆದರೆ ಅವರು ಮಾತನಾಡಿದರೆ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಡಿ.ಕೆ ಶಿವಕುಮಾರ್ ಹೈಕಮಾಂಡ್ಗೆ ದೂರು ಕೊಡುವುದು ಅಥವಾ ತಾನೇ ನೋಟಿಸ್ ಕೊಟ್ಟು ಸ್ಪಷ್ಟನೆ ಕೇಳುವುದು ಮಾಡ್ತಾರೆ. ಆದರೆ ಯತೀಂದ್ರ ಸಿದ್ದರಾಮಯ್ಯ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಏನನ್ನೂ ಮಾಡದ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಅದೇ ಕಾರಣಕ್ಕೆ ಸಿದ್ದರಾಮಯ್ಯ ಬಣ ಹೊರ ಜಗತ್ತಿಗೆ ಯಾವ ಮಾಹಿತಿಯನ್ನು ತಲುಪಿಸಬೇಕು ಅನ್ನೋದನ್ನು ಸೂಕ್ತ ರೀತಿಯಲ್ಲೇ ಮಾಧ್ಯಮಗಳ ಎದುರು ಪ್ರಕಟ ಮಾಡ್ತಿದ್ದಾರೆ ಎನ್ನಬಹುದು. ಸಿಎಂ ಸಿದ್ದರಾಮಯ್ಯ ಆದರೂ ಹಾಗೆಲ್ಲಾ ಏನಿಲ್ಲ, ಹೈಕಮಾಂಡ್ ನಾಯಕರು ಹೇಳಿದಂತೆ ಕೇಳ್ತೇವೆ ಎಂದಿದ್ದರೆ ಯತೀಂದ್ರ ಮಾತು ತೂಕ ಕಳೆದುಕೊಳ್ತಿತ್ತು. ಆದರೆ ಸಿದ್ದರಾಮಯ್ಯಗೂ ಯತೀಂದ್ರ ಹೇಳಿಕೆ ಸಾಕಷ್ಟು ಸದ್ದು ಮಾಡಬೇಕಿದೆ. ಹೀಗಾಗಿ ಮೌನವಾಗಿ ಇದ್ದಾರೆ. ಡಿ.ಕೆ ಶಿವಕುಮಾರ್ಗೆ ಸಮಯ ಸರಿಯಾಗಿಲ್ಲ. ಹೀಗಾಗಿ ಪ್ರಾಥನೆ ವಿಫಲ ಆಗಲ್ಲ ಅಂದಿದ್ದಾರೆ. ಪುತ್ತೂರು ಕಾರ್ಯಕ್ರದಲ್ಲಿ ಸಿಎಂ ಘೋಷಣೆಯನ್ನೂ ಕೂಗಿಸಿಕೊಂಡಿದ್ದಾರೆ.


