The Public Spot
ರಾಜ್ಯ

ಸಾವಿರ ದಿನಗಳ ಪೂರೈಕೆ ಸಂಭ್ರಮದಲ್ಲಿರುವ ಸರ್ಕಾರದಿಂದ ಇದೆಂಥಾ ಎಡವಟ್ಟು..?

ರಾಜ್ಯ ಸರ್ಕಾರ ಸಾವಿರ ದಿನಗಳನ್ನು ಪೂರೈಕೆ ಮಾಡಿದ ಸಂತಸದಲ್ಲಿ ಹಾವೇರಿಯಲ್ಲಿ ಬೃಹತ್‌ ಸಮಾವೇಶ ನಡೆಸಿ ಆರ್ಭಟಿಸಿತ್ತು. ಇದರ ನಡುವೆ ಕಾಂಗ್ರೆಸ್ ಸರ್ಕಾರದ ಎಡವಟ್ಟುವೊಂದು ಬಯಲಾಗಿದೆ. ನಿವೃತ್ತ KAS ಅಧಿಕಾರಿ ಒಬ್ಬರಿಗೆ ಬಡ್ತಿ ನೀಡಿ ಆದೇಶ ಮಾಡಿದೆ. ಈ ಬಗ್ಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್, ರಾಜ್ಯ ಸರ್ಕಾರ ಇತ್ತೀಚೆಗೆ 20 KAS ಅಧಿಕಾರಿಗಳಿಗೆ ಬಡ್ತಿ ನೀಡಿ ಅಧಿಕೃತ ಆದೇಶ ಹೊರಡಿಸಿದೆ. ಆ ಪಟ್ಟಿಯಲ್ಲಿ ಹಿರಿಯ ಶ್ರೇಣಿಯ ಅಧಿಕಾರಿಗಳಿಗೆ ಪದೋನ್ನತಿ ನೀಡಲಾಗಿದೆ. ಆದರೆ, ಅಚ್ಚರಿಯ ವಿಷಯವೆಂದರೆ ಬಡ್ತಿ ನೀಡಿರುವ ಪಟ್ಟಿಯಲ್ಲಿ ಈಗಾಗಲೇ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿರುವ ಹೆಚ್.ಎಲ್ ನಾಗರಾಜು ಎಂಬುವರಿಗೆ ಬಡ್ತಿ ನೀಡಲಾಗಿದೆ. ನಾಗರಾಜು ಪ್ರಸ್ತುತ ಸನ್ಯಾಸತ್ವ ಸ್ವೀಕಾರ ಮಾಡಿ ನಿಶ್ಚಲಾನಂದನಾಥ ಸ್ವಾಮೀಜಿ ಎಂದು ವಿಶ್ವ ಒಕ್ಕಲಿಗರ ಮಠವನ್ನು ಮುನ್ನಡೆಸುತ್ತಿದ್ದಾರೆ.

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅದಕ್ಷತೆ, ಅಸಮರ್ಥತೆ ಯಾವ ಮಟ್ಟಕ್ಕೆ ತಲುಪಿದೆ ಗೊತ್ತಾ..? ಎಂದು ಪ್ರಶ್ನಿಸಿದ್ದಾರೆ. ಈಗಾಗಲೆ ಸೇವೆಯಿಂದ ಸ್ವಯಂ ನಿವೃತ್ತರಾಗಿ ಕಾವಿ ಧರಿಸಿ ಪೀಠಾಧಿಪತಿ ಆಗಿರುವವರಿಗೂ ಬಡ್ತಿ ಭಾಗ್ಯ ನೀಡುವ ಮಟ್ಟಕ್ಕೆ ಅದಕ್ಷವಾಗಿದೆ. ಒಬ್ಬ ಅಧಿಕಾರಿ ಸೇವೆಯಿಂದ ನಿವೃತ್ತರಾಗಿ, ಸನ್ಯಾಸತ್ವ ಸ್ವೀಕರಿಸಿ, ಆಧ್ಯಾತ್ಮಿಕ ಜೀವನ ನಡೆಸುತ್ತಿದ್ದರೂ ನಿಮ್ಮ ಸರ್ಕಾರದ ದಾಖಲೆಗಳಲ್ಲಿ ಅವರು ಇನ್ನೂ ಸೇವೆಯಲ್ಲಿರುವ ಅಧಿಕಾರಿ ಆಗಿದ್ದಾರೆ. ನಿಮ್ಮ ಘನಂದಾರಿ ಆಡಳಿತದಲ್ಲಿ ಮುಖ್ಯಮಂತ್ರಿಗಳು, ಸಚಿವರು, ಅಧಿಕಾರಿಗಳು ಸಹಿ ಮಾಡುವ ಮುನ್ನ ಫೈಲುಗಳನ್ನು ಓದುತ್ತಾರೋ..? ಕಣ್ಣು ಮುಚ್ಚಿಕೊಂಡು ಸಹಿ ಹಾಕುತ್ತಾರೋ.? ಎಂದು ರಾಜ್ಯ ಸರ್ಕಾರವನ್ನು ಕುಟುಕಿದ್ದಾರೆ.

ನಿಮ್ಮ ಸರ್ಕಾರಕ್ಕೆ ಯಾವ ಅಧಿಕಾರಿಗಳು ಸೇವೆಯಲ್ಲಿ ಇದ್ದಾರೆ..? ಯಾರು ನಿವೃತ್ತರಾಗಿದ್ದಾರೆ..? ಅನ್ನುವ ಕನಿಷ್ಠ ಮಾಹಿತಿಯೂ ಗೊತ್ತಿಲ್ಲದಿದ್ದರೆ ರಾಜ್ಯದ ಜನತೆ ಆಡಳಿತ ಮತ್ತು ಅಭಿವೃದ್ಧಿ ವಿಚಾರದಲ್ಲಿ ನಿಮ್ಮ ಸರ್ಕಾರದ ಮೇಲೆ ಹೇಗೆ ವಿಶ್ವಾಸ ಇಡಬೇಕು ಸ್ವಾಮಿ..? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇವತ್ತು ನಿವೃತ್ತರಾಗಿರುವ ಅಧಿಕಾರಿಯೊಬ್ಬರಿಗೆ ಬಡ್ತಿ ನೀಡಿದ್ದೀರಿ. ನಾಳೆ ನಿಧನ ಹೊಂದಿರುವ ಅಧಿಕಾರಿಗೆ ವರ್ಗಾವಣೆ ಆದೇಶ ಹೊರಡಿಸಿದರೂ ಆಶ್ಚರ್ಯವಿಲ್ಲ. ಇದು ಕೇವಲ ಒಂದು ಆಕಸ್ಮಿಕ ಎಡವಟ್ಟು ಅಲ್ಲ. ಇದು ಆಡಳಿತ ವ್ಯವಸ್ಥೆಯ ಸಂಪೂರ್ಣ ಕುಸಿತ ಆಗಿರುವುದರ ಸೂಚನೆ. ದಿನಕ್ಕೊಂದು ಎಡವಟ್ಟು, ಕ್ಷಣಕ್ಕೊಂದು ಮುಖಭಂಗ. ಇನ್ನೆಷ್ಟು ದಿನ ಸ್ವಾಮಿ ಈ ಎಡವಟ್ಟು ಸರ್ಕಾರ..? ಮುಖ್ಯಮಂತ್ರಿ ಆಗಿ ತಮ್ಮ ಗೌರವ ಕಳೆದುಕೊಳ್ಳುತ್ತೀರಿ. ರಾಜೀನಾಮೆ ಕೊಟ್ಟು ಕರ್ನಾಟಕದ ಗೌರವ ಉಳಿಸಿ ಎಂದು ವಾಗ್ದಾಳಿ ಮಾಡಿದ್ದಾರೆ.

ಗುರುವಾರ ಸಿಎಂ ಸಿದ್ದರಾಮಯ್ಯ ಮಂಡ್ಯದ ಆರೋಗ್ಯ ಅಧಿಕಾರಿಯನ್ನು ಅಬಕಾರಿ ಇಲಾಖೆಗೆ ವರ್ಗ ಮಾಡುವ ಬಗ್ಗೆ ಶಿಫಾರಸು ಪತ್ರ ನೀಡಿದ್ದು ಭಾರೀ ವೈರಲ್‌ ಆಗಿತ್ತು. ಆದರೆ ಸಿಎಂ ಸಿದ್ದರಾಮಯ್ಯ, ನಾನು ಯಾವುದೇ ಪತ್ರವನ್ನು ನೀಡಿಲ್ಲ. ನಕಲಿ ಪತ್ರ ಎಂದಿದ್ದರು. ಅಷ್ಟೇ ಅಲ್ಲದೆ ಈ ನಕಲಿ ಪತ್ರ ಸೃಷ್ಟಿ ಮಾಡಿದವರನ್ನು ಪತ್ತೆ ಮಾಡಿ ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸುತ್ತೇವೆ ಅಂತಾನೂ ತಿಳಿಸಿದ್ದರು. ಆದರೆ ಬಿಜೆಪಿ ತಿರುಗೇಟು ನೀಡಿದ್ದು, ಸಿದ್ದರಾಮಯ್ಯ ಸಹಿ ಹಾಕಿದ್ದಾರೆ. ಅದೂ ಕೂಡ ಡೇಟ್‌ ಇಲ್ಲದ ಲೆಟರ್‌ಗೆ ಸಿದ್ದರಾಮಯ್ಯ ಸಹಿ ಬಂದಿದ್ದು ಹೇಗೆ..? ಸಿಎಂ ಕಚೇರಿಯಲ್ಲಿ ಶಿಫಾರಸು ಲೆಟರ್‌ ದಂಧೆ ನಡೆಯುತ್ತಿದ್ಯಾ..? ಈ ಬಗ್ಗೆ ಮೊದಲು ತನಿಖೆ ಆಗ್ಬೇಕು ಎಂದು ಆಗ್ರಹ ಮಾಡಿದ್ದರು. ರಾಜ್ಯ ಸರ್ಕಾರದಲ್ಲಿ ಆಡಳಿತ ಹಳ್ಳ ಹಿಡಿದಿದೆ. ಯಾರು ಬೇಕಾದರೂ ಶಿಫಾರಸು ಪತ್ರ ಪಡೆಯಬಹುದು. ಸಿಎಂ ಸಿದ್ದರಾಮಯ್ಯ ಡೇಟ್‌ ಸಹ ನೋಡದೆ ಸಹಿ ಹಾಕುವ ಮಟ್ಟಕ್ಕೆ ಬಂದಿದ್ದಾರೆ ಎಂದು ಟೀಕಾಸ್ತ್ರ ಪ್ರಯೋಗಿಸಿದ್ದರು. ಇದರ ಬೆನ್ನಲ್ಲೇ ನಿವೃತ್ತಿ ಪಡೆದು ಸ್ವಾಮೀಜಿ ಆದವರಿಗೆ ಬಡ್ತಿ ನೀಡಿರುವುದು ನಾಚಿಕೆಗೇಡು ಎನ್ನಬಹುದು. ಸರ್ಕಾರ ಏನು ಹೇಳುತ್ತದೆ ಎನ್ನುವುದನ್ನು ಕಾದು ನೋಡಬೇಕು.

Related posts

Lingayath not cast: ಜಾತಿಗಣತಿ ವೇಳೆ ಲಿಂಗಾಯತ ಧರ್ಮ ಎಂದೇ ಬರೆಸಿ.. ಬಸವಣ್ಣನಷ್ಟೇ ಪೂಜಿಸಿ..

Publicspot

ಮೊಟ್ಟೆಯಲ್ಲಿ ಕ್ಯಾನ್ಸರ್​ಕಾರಕ.. ಅಧಿವೇಶನದಲ್ಲಿ ಚರ್ಚೆ.. 4 ದಿನದಲ್ಲಿ ವರದಿ..

Publicspot

Cast Censes Karnataka Highcourt Conditions; ಜಾತಿ ಸಮೀಕ್ಷೆ ಅಲ್ಲ.. ಆರ್ಥಿಕ, ಸಾಮಾಜಿಕ ಸಮೀಕ್ಷೆ.. ವಾದ ಒಪ್ಪಿದ ಹೈಕೋರ್ಟ್‌

Publicspot

High Court News: ರಾಜ್ಯದಲ್ಲಿ ಮತ್ತೆ ರಸ್ತೆ ಇಳಿಯುತ್ತವೆ ಬೈಕ್​ ಟ್ಯಾಕ್ಸಿ..!?

Publicspot

ರಾಜ್ಯದಲ್ಲಿ ಬೇಸಿಗೆ ಮಳೆಗೆ ಕಂಗಾಲಾದ ರೈತರು.. ಹಲವು ಬೆಳೆಗಳು ಹಾನಿ..

Publicspot

RAIN DAMAGES IN KARNATAKA: ಕರ್ನಾಟಕದಲ್ಲಿ ಮಳೆ ಅಬ್ಬರದ ಎಫೆಕ್ಟ್‌ ಹೇಗಿದೆ..?

Publicspot