ಫೆಬ್ರವರಿ 14 ಬಂದ್ರೆ ಸಾಕು ಪ್ರೀತಿ ಪ್ರೇಮ ನಿವೇದನೆ ಮಾಡಿಕೊಳ್ಳುವುದು ಸರ್ವೇ ಸಾಮಾನ್ಯ. ಆದರೆ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಪ್ರೀತಿ ನಿರಾಕರಿಸಿದ ಹುಡುಗಿಗೆ ಬಿಯರ್ ಬಾಟಲಿಯಲ್ಲಿ ಚುಚ್ಚಿರುವ ಘಟನೆ ನಡೆದಿದೆ. ಪ್ರೇಮಿಗಳ ದಿನಾಚರಣೆಯ ದಿನ ಹುಡುಗ ತನ್ನ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಆದರೆ ಯುವಕನ ಪ್ರೀತಿಯನ್ನು ಯುವತಿ ಸೋಮವಾರ ನಿರಾಕರಿಸಿದ್ದಳು. ಇದರಿಂದ ರೊಚ್ಚಿಗೆದ್ದ ಯುವಕ ಯುವತಿಗೆ ಬಿಯರ್ ಬಾಟಲ್ನಲ್ಲಿ ಚುಚ್ಚಿದ್ದಾನೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಲ್ಮನೆ ಸಮೀಪ ಈ ಘಟನೆ ಸಂಭವಿಸಿದೆ.

ಯುವಕ ಸ್ವರೂಪ್ ಎಂಬಾತ ಅಪೂರ್ವ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಪ್ರೇಮಿಗಳ ದಿನದಂದು ಈ ವಿಚಾರವನ್ನು ಅಪೂರ್ವಳಿಗೆ ತಿಳಿಸಿದ್ದನು. ಆದರೆ ಆಗ ಏನನ್ನೂ ಹೇಳದೆ ಮೌನಕ್ಕೆ ಶರಣಾಗಿದ್ದ ಅಪೂರ್ವ, ಸೋಮವಾರ ಸ್ವರೂಪನ ಪ್ರೀತಿಯನ್ನು ನಿರಾಕರಿಸಿದ್ದಳು. ಯುವತಿ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳದ್ದಕ್ಕೆ ಕೋಪಗೊಂಡ ಯುವಕ, ಯುವತಿಯ ಕೈ, ಕುತ್ತಿಗೆ ಭಾಗಕ್ಕೆ ಬಾಟಲ್ನಿಂದ ಇರಿದಿದ್ದು, ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಯುವಕ ಸ್ವರೂಪ್ನನ್ನು ತೀರ್ಥಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನನ ಐಟಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಯುವತಿ ಅಪೂರ್ವ ವರ್ಕ್ ಫ್ರಮ್ ಹೋಮ್ ಸಿಕ್ಕಿದ್ದ ಕಾರಣಕ್ಕೆ ಯುವತಿಮನೆಯಿಂದಲೇ ಕೆಲಸ ನಿರ್ವಹಣೆ ಮಾಡುತ್ತಿದ್ದಳು. ಪ್ರೀತಿ ನಿರಾಕರಿಸಿದಳು ಅನ್ನೋ ಒಂದೇ ಒಂದು ಕಾರಣಕ್ಕೆ ಯುವತಿಯ ಮನೆ ಒಳಗೆ ನುಗ್ಗಿ ಯುವತಿಗೆ ಬಿಯರ್ ಬಾಟಲಿಯಿಂದ ಚುಚ್ಚಿದ್ದಾನೆ. ಯುವಕ ಸ್ವರೂಪ್ ಕೂಡ ತೀರ್ಥಹಳ್ಳಿ ತಾಲೂಕಿನ ತೂದೂರು ಗ್ರಾಮದವನಾಗಿದ್ದಾನೆ. ಕಳೆದ 6 ತಿಂಗಳಿಂದ ಪ್ರೀತಿಸುವಂತೆ ಅಪೂರ್ವಳಿಗೆ ಪೀಡಿಸುತ್ತಿದ್ದ ಎನ್ನಲಾಗಿದ್ದು, ಪ್ರೀತಿ ಮಾಡದಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಸ್ವರೂಪ್ ಪ್ರೀತಿಯನ್ನು ಅಪೂರ್ವ ನಿರಾಕರಿಸಿದ್ದಳು.

ಸೋಮವಾರ ಸಂಜೆ ವೇಳೆ ಕಂಠ ಪೂರ್ತಿ ಕುಡಿದು ಬಂದು ಮನೆಗೆ ನುಗ್ಗಿದ ಸ್ವರೂಪ್, ದಾಂಧಲೇ ನಡೆಸಿದನು. ಸ್ವರೂಪ್ ಮನೆಗೆ ನುಗ್ಗುತ್ತಿದಂತೆ ಅಪೂರ್ವ ತಾಯಿ ಪೂರ್ಣಿಮಾ ವಿರೋಧ ವ್ಯಕ್ತ ಪಡಿಸಿದ್ದರು. ತಾಯಿ ಪೂರ್ಣಿಮಾರನ್ನು ಹೊರಕ್ಕೆ ತಳ್ಳಿ, ಮನೆಯ ಬಾಗಿಲು ಹಾಕಿ, ಯುವತಿ ಅಪೂರ್ವ ಮೇಲೆ ದಾಳಿ ಮಾಡಿದ್ದನು. ಮನೆಯ ಒಳಗೆ ಅಪೂರ್ವಳನ್ನು ಲಾಕ್ ಮಾಡಿಕೊಂಡು ಮೊದಲೇ ತಂದಿದ್ದ ಬಿಯರ್ ಬಾಟಲ್ನಿಂದ ಮನಸೋ ಇಚ್ಛೆ ಚುಚ್ಚಿದ್ದಾನೆ. ಯುವತಿ ಅಪೂರ್ವ ಕತ್ತಿನ ಭಾಗ ಹಾಗೂ ಹೊಟ್ಟೆ, ಬೆನ್ನಿನ ಭಾಗಕ್ಕೆ ಬಾಟಲಿಯಿಂದ ದಾಳಿ ಆಗಿದೆ. ಅಷ್ಟರಲ್ಲಿ ಯುವತಿ ತಂದೆ ಸುಧಾಕರ್ ಬಾಗಿಲು ಒಡೆದು ಯುವತಿಯ ರಕ್ಷಣೆ ಮಾಡಿದ್ದಾರೆ. ಆಗ ಘಟನಾ ಸ್ಥಳದಿಂದ ಓಡಿ ಹೋದ ಸ್ವರೂಪ್ನನ್ನು ಪೊಲೀಸರು ಬಂಧಿಸಿದ್ದಾರೆ.


