ಕೂಡಲಸಂಗಮ ಪೀಠದ ಲಿಂಗಾಯತ ಸ್ವಾಮೀಜಿ ಆಗಿದ್ದ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಆರೋಪದ ಅಡಿ ದೂರು ದಾಖಲಾಗಿದೆ. ಸಿಎಂ ಸಿದ್ದರಾಮಯ್ಯ, ಗೃಹಸಚಿವ ಡಾ ಜಿ ಪರಮೇಶ್ವರ್, ಮಹಿಳಾ ಆಯೋಗ, ಬೆಂಗಳೂರು ಪೊಲೀಸ್ ಕಮಿಷನರ್, ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೂ ದೂರು ಸಲ್ಲಿಕೆ ಮಾಡಲಾಗಿದೆ. ಬೆಂಗಳೂರು ಮೂಲದ ಮಹಿಳೆಯಿಂದ ದೂರು ದಾಖಲಾಗಿದ್ದು, ಸತ್ಯಾಸತ್ಯಯೆ ಪರಿಶೀಲನೆಗೂ ಮುನ್ನವೇ ಮಹಿಳೆ ವಿರುದ್ಧ ಪ್ರತಿದೂರು ದಾಖಲಾಗಿದೆ.

ಸ್ವಾಮೀಜಿ ಜೊತೆ ವಿಶ್ವಾಸದಿಂದ ಕಾಣಿಸಿಕೊಂಡಿದ್ದ ಸಂತ್ರಸ್ಥ ಮಹಿಳೆ, ಸ್ವಾಮೀಜಿಯ ಹಲವು ಹೋರಾಟಗಳಲ್ಲಿ ಜೊತೆ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದೇ ಸಲುಗೆಯಿಂದ ಮಹಿಳೆಯ ಮನೆಗೆ ಭೇಟಿ ನೀಡುತ್ತಿದ್ದರು. ಆ ವೇಳೆ ಬೆಂಗಳೂರಿನ ಮನೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಲುಗೆಯಲ್ಲಿದ್ದ ಸಮಯದಲ್ಲಿ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿರುವ ಸ್ವಾಮೀಜಿ, ಆ ವಿಡಿಯೋ ತೋರಿಸಿ ಬ್ಲ್ಯಾಕ್ಮೇಲ್ ಮಾಡ್ತಿದ್ದಾರೆ ಎಂದು ದೂರು ನೀಡಲಾಗಿದೆ.

ಜಯಮೃತ್ಯುಂಜಯ ಸ್ವಾಮೀಜಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬರುತ್ತಿದ್ದಂತೆ ಮಹಿಳೆ ವಿರುದ್ಧ ವಿಜಯಪುರದಲ್ಲಿ ಪ್ರತಿದೂರು ನೀಡಿದ್ದಾರೆ ಸ್ವಾಮೀಜಿ. ದೂರು ಪಡೆದು ಎಫ್ಐಆರ್ ದಾಖಲಿಸಿದ್ದಾರೆ ಪೊಲೀಸರು. ಮಹಿಳೆ ಸೇರಿದಂತೆ ನಾಲ್ವರ ವಿರುದ್ಧ FIR ದಾಖಲು ಮಾಡಲಾಗಿದೆ. ಇಲ್ಲಸಲ್ಲದ ಆರೋಪ ಮಾಡಿ ಬ್ಲಾಕ್ ಮೇಲ್ ಮಾಡಿದ್ದಾರೆ. ರಾಜಕೀಯ ವ್ಯಕ್ತಿಗಳ ಪ್ರಭಾವದಿಂದ ನನ್ನನ್ನು ತೇಜೋವಧೆ ಮಾಡಲಾಗ್ತಿದೆ. ನನಗೆ ಬ್ಲಾಕ್ಮೇಲ್ ಮಾಡಿ 3 ಕೋಟಿ ಹಣ ಕೇಳಿದ್ದಾರೆ. ಹಣ ಕೊಡದಿದ್ದಾಗ ವಾಹನ ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ ಎಂದು ಮಹಿಳೆ ಸೇರಿ ನಾಲ್ವರ ಮೇಲೆ ಸ್ವಾಮೀಜಿ ದೂರಿದ್ದಾರೆ.

ಎರಡ್ಮೂರು ವರ್ಷಗಳ ಹಿಂದೆ ಪರಿಚಯ ಆಗಿದ್ದ ಮಹಿಳೆ, ಬಡ ಹಾಗೂ ಅನಾಥ ಮಕ್ಕಳನ್ನು ಸಾಕುತ್ತಿದ್ದೇನೆ ಎಂದು ಸ್ವಾಮೀಜಿಗೆ ಪರಿಚಯ ಆಗಿದ್ದರು. ಆ ಬಳಿಕ ಲಿಂಗಾಯತ ಮೀಸಲಾತಿ ಹೋರಾಟಕ್ಕೂ ಕೈ ಜೋಡಿಸುತ್ತೇನೆ ಎಂದಿದ್ದರು. ಆ ನಂತರ ಅನಾಥಾಶ್ರಮಕ್ಕೆ ನೆರವು ಕೇಳಿದ್ದ ಮಹಿಳೆಗೆ ದಾನಿಗಳ ಮೂಲಕ ಸಹಾಯ ಮಾಡಿಸುವುದಾಗಿ ಭರವಸೆ ನೀಡಿದ್ದರು. ಆತ್ಮೀಯತೆ ಹೆಚ್ಚಾದ ಬಳಿಕ ಸ್ವಾಮೀಜಿಯಿಂದ ಪದೇ ಪದೇ ಹಣಕ್ಕಾಗಿ ಒತ್ತಾಯ ಮಾಡುತ್ತಿದ್ದರು. ಆ ಬಳಿಕ ಸುಳ್ಳು ಸುದ್ದಿಗಳ ಮೂಲಕ ಅಪಪ್ರಚಾರಕ್ಕೂ ಯತ್ನ ಮಾಡಲಾಗಿತ್ತು. ಯಾವುದಕ್ಕೂ ಬಗ್ಗದಿದ್ದಾಗ ವಿಜಯಪುರದ ಕಗ್ಗೋಡಿನಿಂದ ಬರುವಾಗ ಕಾರು ಅಡ್ಡಗಟ್ಟಿ ಹಲ್ಲೆ ಮಾಡಿದ್ರು ಎಂದು ದೂರು ನೀಡಿದ್ದಾರೆ.



