ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಜಂಟಿ ದಾಳಿ ಸಾಕಷ್ಟು ಹಾನಿ ಉಂಟು ಮಾಡಿದೆ. ಇರಾನ್ ಮೇಲೆ ನಿಯಂತ್ರಣ ಸಾಧಿಸಬೇಕು ಅನ್ನೋ ಹಂಬಲದಲ್ಲಿರುವ ಅಮೆರಿಕ ನೂತನ ಸರ್ವೋಚ್ಛ ನಾಯಕನಾಗಿ ಮೊಜ್ತಬ ಆಯ್ಕೆಯನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ನಾವು ಒಪ್ಪುವಂತಹ ನೂತನ ನಾಯಕನನ್ನು ಆಯ್ಕೆ ಮಾಡಬೇಕು. ಇಲ್ಲದಿದ್ದರೆ ನಾವು ನೂತನ ನಾಯಕನನ್ನೂ ಟಾರ್ಗೆಟ್ ಮಾಡುತ್ತೇವೆ. ಆಯ್ಕೆ ಮಾಡಿದವರೂ ನಮ್ಮ ಟಾರ್ಗೆಟ್ ಲಿಸ್ಟ್ನಲ್ಲಿ ಇರುತ್ತೀರಿ ಎಂದು ಬೆದರಿಕೆ ಹಾಕಿತ್ತು. ಇಸ್ರೇಲ್ ಕೂಡ ಅಮೆರಿಕ ಹೇಳಿದನ್ನೇ ವೇದವಾಕ್ಯ ಎನ್ನುವಂತೆ ಮಾತನಾಡಿತ್ತು. ಇದೀಗ ಇರಾನ್ ಮುಟ್ಟಿದ್ರೆ ಸರಿಯಿರಲ್ಲ ಅನ್ನೋ ಸಂದೇಶ ರವಾನೆ ಆಗಿದೆ.

ಇರಾನ್ನ ಸರ್ವೋಚ್ಛ ನಾಯಕನಾಗಿ ಮೊಜ್ತಬ ಆಯ್ಕೆಯನ್ನು ಅಮೆರಿಕ ತಿರಸ್ಕರಿಸಿದ ಬೆನ್ನಲ್ಲೇ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಇರಾನ್ಗೆ ಬೆಂಬಲ ಸೂಚಿಸಿದ್ದಾರೆ. ಯಾವುದೇ ರಾಷ್ಟ್ರ ತನ್ನ ನಾಯಕನ ಆಯ್ಕೆ ಮಾಡಿಕೊಳ್ಳಲು ಸರ್ವಸ್ವತಂತ್ರ.. ಅದೇ ರೀತಿ ಇರಾನ್ ಕೂಡ ತನಗೆ ಬೇಕಾದ ನಾಯಕನ್ನು ಆಯ್ಕೆ ಮಾಡಿಕೊಳ್ಳುವುದು ಆ ರಾಷ್ಟ್ರದ ಆಂತರಿಕ ವಿಚಾರ. ಈ ವಿಚಾರದಲ್ಲಿ ಬೇರೆ ದೇಶಗಳು ಮೂಗು ತೂರಿಸುವುದು ಸರಿಯಲ್ಲ ಎಂದು ಟಾಂಗ್ ಕೊಟ್ಟಿದೆ. ಚೀನಾ ಬಳಿಕ ರಷ್ಯಾ ಕೂಡ ಇರಾನ್ಗೆ ಬೆಂಬಲ ಸೂಚಿಸಿದ್ದು, ವ್ಲಾದಿಮಿರ್ ಪುಟಿನ್ ಇರಾನ್ನ ನೂತನ ಸರ್ವೋಚ್ಛ ನಾಯಕನಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ಜ್ವಾಲೆ ಹೆಚ್ಚಾಗುತ್ತಿರುವ ಈ ಹೊತ್ತಿನಲ್ಲಿ, ಈ ಯುದ್ಧದಿಂದ ವಿಶ್ವದಲ್ಲಿ ಜಾಗತಿಕ ಹಣದುಬ್ಬರ ಆಗುವ ಸಾಧ್ಯತೆ ಬಗ್ಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯ MD ಕ್ರಿಸ್ಟಲಿನಾ ಎಚ್ಚರಿಸಿದ್ದಾರೆ. ಜಪಾನ್ ಹಣಕಾಸು ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕ್ರಿಸ್ಟಲಿನಾ, ಇಂಧನ ದರ ಹಣದುಬ್ಬರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ನಡುವೆ ಯುದ್ಧದ ಪರಿಣಾಮ ಭಾರತೀಯ ಷೇರು ಮಾರುಕಟ್ಟೆಯನ್ನು ತಲ್ಲಣಗೊಳಿಸಿದೆ. ಇವತ್ತು ಬೆಳಗ್ಗೆ ಷೇರು ಮಾರುಕಟ್ಟೆ ತೆರೆಯುತ್ತಿದ್ದಂತೆ, ಸೆನ್ಸೆಕ್ಸ್ 2400 ಪಾಯಿಂಟ್ಸ್ ಕುಸಿತವಾಗಿದ್ದು, ನಿಫ್ಟಿ 700 ಅಂಕಗಳ ಕುಸಿತ ಕಂಡಿತ್ತು. ಇದರಿಂದಾಗಿ ಹೂಡಿಕೆದಾರರಿಗೆ 12.39 ಲಕ್ಷ ಕೋಟಿ ರೂಪಾಯಿ ನಷ್ಟ ಆಗಿದೆ.

ಇರಾನ್ ಮೇಲೆ ಅಮೆರಿಕ, ಇಸ್ರೇಲ್ ನಡೆಸುತ್ತಿರುವ ಯುದ್ಧ ಕೊಲ್ಲಿ ರಾಷ್ಟ್ರಗಳನ್ನು ಸಂಕಷ್ಟಕ್ಕೆ ಈಡು ಮಾಡಿದೆ. ದುಬೈನಲ್ಲಿ ತಾಜಾ ಆಹಾರಕ್ಕೆ ಸಂಚಕಾರ ಬಂದಿದೆ ಅನ್ನೋ ವರದಿಗಳು ಬಂದಿವೆ. ಮುಂದಿನ 8 ದಿನಗಳಿಗೆ ಆಗುವಷ್ಟು ಮಾತ್ರ ಆಹಾರ ದಾಸ್ತಾನು ಇದೆ ಎಂದು ಹೇಳಲಾಗಿದೆ. ಯುದ್ಧದಿಂದಾಗಿ ಆಹಾರ ಪದಾರ್ಥಗಳ ಪೂರೈಕೆಯಲ್ಲಿ ವ್ಯತ್ಯಯ ಆಗಿದೆ. ಆದರೆ ಭಾರತದಲ್ಲಿ ಇಂಧನ ಸಂಗ್ರಹ ಹೆಚ್ಚಾಗಿಯೇ ಇದ್ದು, ಯಾವುದೇ ತೊಂದರೆ ಆಗುವುದಿಲ್ಲ ಅನ್ನೋ ಮಾತುಗಳ ನಡುವೆಯೇ ಗ್ಯಾಸ್ ರೀ ಬುಕ್ಕಿಂಗ್ ಅವಧಿ ಏರಿಸಲಾಗಿದೆ. ಈ ಮೊದಲು ಒಮ್ಮೆ ಬುಕ್ ಮಾಡಿ 21 ದಿನಗಳು ಕಳೆದ ಬಳಿಕ ಮತ್ತೊಂದು ಸಿಲಿಂಡರ್ ಬುಕ್ಕಿಂಗ್ ಮಾಡಲು ಅವಕಾಶ ಕೊಡಲಾಗಿತ್ತು. ಆದರೆ ಇದೀಗ 25 ದಿನಗಳು ದಿನಗಳ ನಂತರ ಬುಕ್ಕಿಂಗ್ ಮಾಡಬಹುದಾಗಿದೆ. ಅಂದರೆ ಗ್ಯಾಸ್ ಉಳಿಸಲು ಸರ್ಕಾರ ಕ್ರಮ ಕೈಗೊಂಡಂತಿದೆ ಎನ್ನಬಹುದು.


