ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಈಗಾಗಲೇ ಯುದ್ಧ ಸಾರಿದ್ದು, ಇರಾನ್ನಲ್ಲಿ ಎಲ್ಲವನ್ನೂ ಹೊಡೆದು ಮುಗಿಸಿದ್ದೀವಿ, ಇರಾನ್ನಲ್ಲಿ ಹೊಡೆದು ಹಾಕಲು ಇನ್ನೇನು ಉಳಿದಿಲ್ಲ ಎಂದಿತ್ತು ಅಮೆರಿಕ. ಅಷ್ಟೇ ಅಲ್ಲದೆ ಇರಾನ್ ಶರಣಾಗದೆ ಬೇರೆ ಮಾರ್ಗವಿಲ್ಲ, ಇರಾನ್ ಶರಣಾಗುವುದಕ್ಕೆ ರೆಡಿ ಇದೆ, ಹರ್ಮೂಜ್ ಜಲಸಂಧಿಯನ್ನು ಇರಾನ್ ಒಡೆತನದಿಂದ ನಾವು ಮುಕ್ತ ಮಾಡಿದ್ದು, ಎಲ್ಲ ದೇಶದ ಹಡಗುಗಳು ಮುಕ್ವತವಾಗಿ ಸಂಚಾರ ಮಾಡಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದರು. ಆದರೆ ಇರಾನ್ ತಿರುಗೇಟು ನೀಡಿದ್ದು, ಇರಾನ್ ಶರಣಾಗುವುದಕ್ಕೆ ಯಾವುದೇ ಸೂಕ್ತ ಕಾರಣಗಳಿಲ್ಲ ಎಂದಿದೆ. ಅಷ್ಟೇ ಅಲ್ಲದೆ ದೀರ್ಘಕಾಲದ ಯುದ್ಧಕ್ಕೆ ನಾನು ಸಿದ್ಧ ಎಂದು ಘೋಷಣೆ ಮಾಡಿದೆ.

ಇನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಾವಿನ ವದಂತಿ ಹಬ್ಬಿತ್ತು. ಇರಾನ್ ದಾಳಿಯಲ್ಲಿ ನೆತನ್ಯಾಹು ಹತ್ಯೆ ಆಗಿರಬಹುದು ಅನ್ನೋ ಬಗ್ಗೆ ಭಾರೀ ಚರ್ಚೆ ಹುಟ್ಟುಹಾಕಿತ್ತು. ಆದರೆ ಕಾಫಿ ಕುಡಿಯುತ್ತ ಇಸ್ರೇಲ್ ಪ್ರಧಾನಿ ನೆತನ್ಯಾಹು ಪ್ರತ್ಯಕ್ಷವಾಗುವ ಮೂಲಕ ಸಾವಿನ ವದಂತಿಗೆ ತೆರೆ ಎಳೆದಿದ್ದಾರೆ. ಸೋಷಿಯಲ್ ಮೀಡಿಯಾ ವಿಡಿಯೋ ಪೋಸ್ಟ್ ಮಾಡಿದ್ದು, ಕಾಫಿ ಕುಡಿಯುತ್ತಿರೋ ವಿಡಿಯೋ ಪೋಸ್ಟ್ ಮಾಡುವ ಮೂಲಕ ಬೆಂಜಮಿನ್ ನೆತನ್ಯಾಹು ಹತ್ಯೆ ಅನ್ನೋ ಇರಾನ್ ವಾದಕ್ಕೆ ತಿರುಗೇಟು ಕೊಟ್ಟಿದ್ದಾರೆ. ಆದರೆ ಒಂದು ವೇಳೆ ನೆತನ್ಯಾಹು ಹತ್ಯೆ ಆಗಿರದಿದ್ದರೆ ಹುಡುಕಿ ಕೊಲ್ತೀವಿ ಎಂದಿತ್ತು ಇರಾನ್ ಸೇನೆ. ಈ ನಡುವೆ ಇರಾನ್ ಮೇಲೆ ಭೀಕರ ದಾಳಿ ಮಾಡಿದೆ ಇಸ್ರೇಲ್.
ಇರಾನ್ನ ಇಸ್ಫಹಾನ್ ಮೇಲೆ ಭೀಕರ ದಾಳಿ ಮಾಡಲಾಗಿದೆ. ಇಸ್ರೇಲ್ ಮತ್ತು ಅಮೆರಿಕದಿಂದ ದಾಳಿ ನಡೆದಿದ್ದು, ಇಸ್ಫಾಹನ್ ಏರಿಯಾದಲ್ಲಿ ದಟ್ಟ ಹೊಗೆ ಆವರಿಸಿದೆ. ದಾಳಿಯಲ್ಲಿ ಹಲವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇರಾನ್ನಿಂದಲೂ ಮಿಸೈಲ್ಗಳಿಂದ ಪ್ರತಿದಾಳಿ ನಡೆದಿದೆ. ಲೆಬನಾನ್ನ ಬೈರುತ್ ಮೇಲೆ ಇಸ್ರೇಲ್ ಏರ್ಸ್ಟ್ರೈಕ್ ಮಾಡಿದೆ.. ಹಿಜ್ಬುಲ್ಲಾ ಗಣ್ಯರು ತಂಗುವ ಆಜ್ಞಾತ ಕೇಂದ್ರಗಳನ್ನ ಇಸ್ರೇಲ್ ನಾಶ ಪಡಿಸಿದೆ.. ಈವರೆಗೂ ಬೈರುತ್ನಲ್ಲಿ ಇಸ್ರೇಲ್ ದಾಳಿಗೆ ಸತ್ತವರ ಸಂಖ್ಯೆ 826ಕ್ಕೆ ಏರಿಕೆ ಆಗಿದೆ. ಇರಾನ್ನ ಖಾರ್ಗ್ ದ್ವೀಪದ ತೈಲ ರಫ್ತು ಕೇಂದ್ರದ ಮೇಲೆ ಮತ್ತಷ್ಟು ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಇದುವರೆಗಿನ ಖಾರ್ಗ್ ದ್ವೀಪದ ಮೇಲಿನ ದಾಳಿ ಮೋಜಿಗಾಗಿ ನಡೆದಿತ್ತು. ಇನ್ಮುಂದೆ ದಾಳಿ ತೀವ್ರವಾಗಬಹುದು ಅಂತ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಮಧ್ಯಪ್ರಾಚ್ಯ ಯುದ್ಧದ ನಡುವೆಯೂ LPG ಹೊತ್ತು ಭಾರತದ ಕಡೆಗೆ ಹೊರಟಿದ್ದ ಎರಡು ಹಡಗುಗಳು ಇವತ್ತು ಭಾರತವನ್ನು ಸೇರಲಿವೆ. ಹೊರ್ಮುಜ್ ಜಲಸಂಧಿ ಮೂಲಕ ಭಾರತಕ್ಕೆ 86 ಸಾವಿರ ಮೆಟ್ರಿಕ್ ಟನ್ LPG ಹೊತ್ತ ಬರ್ತಿರುವ ಶಿವಾಲಿಕ್ ಹಾಗೂ ನಂದಾದೇವಿ ಹಡಗುಗಳು ಜಲಸಂಧಿಯನ್ನು ದಾಟಿದಾಗ ಸುದ್ದಿಯಾಗಿತ್ತು. ಇದೀಗ ಭಾರತಕ್ಕೆ ತಲುಪುತ್ತಿರುವುದರಿಂದ ಗ್ಯಾಸ್ ಸಿಗದೆ ಸಂಕಷ್ಟ ಎದುರಾಗುವ ಸಂಭವವನ್ನು ತಳ್ಳಿಹಾಕಬಹುದಾಗಿದೆ. ಇದರ ನಡುವೆ ಇಂದಿನಿಂದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳನ್ನು ಶೇಕಡ 20ರಷ್ಟು ಪೂರೈಕೆ ಮಾಡಲಾಗುತ್ತದೆ ಎನ್ನುವ ಭರವಸೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿಕ್ಕಿದ್ದು, ಮುಚ್ಚುತ್ತಿದ್ದ ಹೋಟೆಲ್ ಉದ್ಯಮಕ್ಕೆ ಜೀವದಾನ ಸಿಕ್ಕಂತಾಗಿದೆ.


