ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ನಲ್ಲಿ ಈ ರೀತಿಯ ಅಚ್ಚರಿಯ ವಿಚಾರವೊಂದು ನಡೆದು ಹೋಗಿದೆ. ತನ್ನ ಗಂಡ ಸತ್ತಿದ್ದಾನೆ ಅನ್ನೋದನ್ನೂ ಅರಿಯದ ಹೆಂಡತಿಯೊಬ್ಬರು ಬರೋಬ್ಬರಿ 10 ದಿನಗಳ ಕಾಲ ಜೊತೆಯಲ್ಲೇ ಕಳೆದಿದ್ದಾರೆ. ಆದರೆ ಮಗನ ಕೋರಿಕೆ ಮೇರೆಗೆ ಮನೆಗೆ ಭೇಟಿ ನೀಡಿದ ಸ್ನೇಹಿತ ಸತ್ತು ಕೊಳೆಯುತ್ತಿದ್ದ ದೇಹದ ವಿಚಾರವನ್ನು ಹೊರಜಗತ್ತಿಗೆ ತೋರಿಸಿಕೊಟ್ಟಿದ್ದಾನೆ.

77 ವರ್ಷದ ಸಿರಿಲ್ ಆರೋಗ್ಯದಲ್ಲಿ ಏರುಪೇರು ಆಗಿತ್ತು. ಅವರ ಪತ್ನಿ ಮಾನಸಿಕ ಅಸ್ವಸ್ತೆ ಆಗಿದ್ದರು. ಇಬ್ಬರು ಮಕ್ಕಳಿದ್ದರೂ ಪೋಷಕರ ಪಾಲಿಗೆ ಪ್ರಯೋಜನಕ್ಕೆ ಬಾರದಂತೆ ಆಗಿದ್ದರು. ಗಂಡನೇ ತನ್ನ ಹೆಂಡತಿಯ ಯೋಗಕ್ಷೇಮ ನೋಡಿಕೊಂಡು ಅಂತಿಮ ದಿನಗಳನ್ನು ಕಳೆಯುತ್ತಿದ್ರು. ಮಗ ಬೆಂಗಳೂರಿನಲ್ಲೇ ಕೆಲಸ ಮಾಡುತ್ತಿದ್ರೆ, ಮಗಳು ದುಬೈನಲ್ಲಿ ವಾಸವಾಗಿದ್ದರು. ಹೀಗಾಗಿ ಮಕ್ಕಳನ್ನು ಬೆಳೆಸಿದ ಮುದುಕ ಮುದುಕಿ ಕೊನೆ ದಿನಗಳಲ್ಲಿ ಕಷ್ಟದ ಬದುಕು ಸಾಗಿಸುತ್ತಿದ್ರು.
ಸುಮಾರು 10 ದಿನದ ಹಿಂದೆ ಊರಿಗೆ ಬಂದಿದ್ದ ಮಗನಿಗೆ, ಅಪ್ಪನ ಆರೋಗ್ಯ ಹದಗೆಟ್ಟ ವಿಚಾರ ತಿಳಿದಿತ್ತು. ಹೀಗಾಗಿ ಆಸ್ಪತ್ರೆಗೆ ಕರೆದೊಯ್ದ ಮಗ ವೈದ್ಯರಿಗೆ ತೋರಿಸಿ ಮನೆಗೆ ಕರೆತಂದು ಬಿಟ್ಟು ಹೋಗಿದ್ದ. ಅಂದಿನಿಂದ ಅಪ್ಪನ ಬಗ್ಗೆ ವಿಚಾರ ಮಾಡಲು ಫೋನ್ ಮಾಡಿದರೂ ಅಮ್ಮನೇ ಫೋನ್ ರಿಸೀವ್ ಮಾಡ್ತಿದ್ರಂತೆ. ಮೊದಲೇ ಮಾನಸಿಕ ಅಸ್ವಸ್ಥೆ ಆಗಿದ್ದ ಅಮ್ಮ, ಅಪ್ಪನ ಬಗ್ಗೆ ಕೇಲಿದಾಗಲೆಲ್ಲಾ ಚೆನ್ನಾಗಿದ್ದಾರೆ. ಮಲಗಿದ್ದಾರೆ ಎಂದೇ ಹೇಳುತ್ತಿದ್ದರಂತೆ. ಅನುಮಾನಗೊಂಡ ಮಗ ಮನೆಗೆ ತೆರಳಿ ಅಪನನ್ನು ಒಮ್ಮೆ ನೋಡಿ ಬರಲು ಸ್ನೇಹಿತನಿಗೆ ತಿಳಿಸಿದ್ರಂತೆ.

ಆಸ್ಪತ್ರೆಯಿಂದ ಮನೆಗೆ ಬಂದಿದ್ದ ಸಿರಿಲ್ ಮೊನಿಸ್ ಅಂದೇ ಪ್ರಾಣ ಬಿಟ್ಟಿದ್ದಾರೆ. ಆದರೆ ಸಿರಿಲ್ ಪ್ರಾಣ ಬಿಟ್ಟಿದ್ದ ವಿಚಾರ ಆ ಮಹಿಳೆಗೆ ಗೊತ್ತೇ ಆಗಿಲ್ಲ. ನಿನ್ನೆ ಮನೆಯ ಗ್ಯಾಸ್ ಕನೆಕ್ಷನ್ ಸರಿ ಇಲ್ಲ ಅನ್ನೋ ವಿಚಾರವನ್ನು ಅಮ್ಮನೇ ಮಗನಿಗೆ ಹೇಳಿದ್ರಂತೆ. ಹೀಗಾಗಿ ಸ್ನೇಹಿತನಿಗೆ ಮನೆಗೆ ಹೋಗಿ ಬಾ ಎಂದು ಮಗ ಮೆಲ್ವಿನ್ ಹೇಳಿ ಕಳಿಸಿದ್ರಂತೆ. ಆಗ ಅಸಲಿ ವಿಷಯ ಬೆಳಕಿಗೆ ಬಂದಿದ್ದು, ಮಂಚದ ಮೇಲಿದ್ದ ಸಿರಿಲ್ ಶವ ಕೊಳತು ಹೋಗಿತ್ತಂತೆ. ಪೊಲೀಸ್ರಿಗೆ ಮಾಹಿತಿ ತಿಳಿಸಿ ಮೃತದೇಹವನ್ನ ಶಿಫ್ಟ್ ಮಾಡುವಾಗ, ನನ್ನ ಗಂಡ ನನಗೆ ಬೇಕು. ಎಲ್ಲಿಗೂ ಕರ್ಕೊಂಡು ಹೋಗ್ಬೇಡಿ ಅಂತಾ ಗೋಳಾಡಿದ್ದಾರೆ.


