ಬೆಂಗಳೂರಿನಲ್ಲಿ ನಿನ್ನೆ ಸಂಜೆ ಜೋರು ಮಳೆ ಆಗಿದ್ದು, ಹೊರಮಾವು ಬಳಿ ಅಪಾರ್ಟ್ಮೆಂಟ್ಗೆ ಮಳೆ ನೀರು ನುಗ್ಗಿದೆ. ಎಸ್ಎಲ್ವಿ ವಜ್ರ ಅಪಾರ್ಟ್ಮೆಂಟ್ಗೆ ಮಳೆ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಪರದಾಡಿದ್ದಾರೆ. ಮೂರು ಅಡಿಗೂ ಹೆಚ್ಚು ನೀರು ಜಲಾವೃತ ಆಗಿತ್ತು. ಕೆಲವು ಸಮಯದ ಬಳಿಕ ನೀರಿನ ಹರಿವು ಕಡಿಮೆಯಾಗಿದ್ದು, ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ರಾಮಮೂರ್ತಿ ನಗರದಲ್ಲೂ ಮಳೆ ಅವಾಂತರ ಸೃಷ್ಟಿಸಿದೆ. ಅಂಬೇಡ್ಕರ್ ನಗರದಲ್ಲಿ ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ರಾಜಕಾಲುವೆ ಪಕ್ಕದಲ್ಲಿರುವ ಮನೆಗಳಲ್ಲಿ 2 ರಿಂದ 3 ಅಡಿಯಷ್ಟು ಚರಂಡಿ ನೀರು ನುಗ್ಗಿತ್ತು. ಜಿಬಿಎ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳ ಕಾಲ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ.

ಬೆಂಗಳೂರಿನ ಸಾಯಿ ಲೇ ಔಟ್ನಲ್ಲಿ ಮಳೆ ನೀರು ಸಂಗ್ರಹ ಆಗಿತ್ತು. ಹೊರಮಾವು ಸಮೀಪ ಇರೋ ಸಾಯಿ ಲೇ ಔಟ್ನಲ್ಲಿ ಮನೆಗಳಿಗೆ ನೀರು ನುಗ್ಗಿದ್ದಲ್ಲದೇ ರಸ್ತೆಯಲ್ಲೂ ನೀರು ಜಲಾವೃತ ಆಗಿತ್ತು. ಚರಂಡಿಗಳು ಮಣ್ಣಿನ ರಾಶಿ ಹಾಗೂ ಕಸದಿಂದ ತುಂಬಿ ಹೋಗಿದ್ದ ಕಾರಣಕ್ಕೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದೆ JCB ಮೂಲಕ ನೀರನ್ನು ಹೊರ ಹಾಕುವ ಪ್ರಯತ್ನ ಮಾಡಿದ್ರು.

ಕಬ್ಬನ್ ಪಾರ್ಕ್ ಠಾಣೆ ವ್ಯಾಪ್ತಿಯ ರಾಜರಾಮ್ ಮೋಹನ್ ರಾಯ್ ರಸ್ತೆಯಲ್ಲಿ ಮಳೆ ಪರಿಣಾಮ ಸರಿಯಾಗಿ ರಸ್ತೆ ಕಾಣದೆ ಡಿವೈಡರ್ಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಏರ್ ಬ್ಯಾಗ್ ಓಪನ್ ಆಗಿದ್ದು, ಕಾರಿನ ಮುಂಭಾಗ ಜಖಂ ಆಗಿದೆ. ಎಂಪ್ಲಾಯ್ನ ಡ್ರಾಪ್ ಮಾಡಿ ಹೆಬ್ಬಾಳದ ಆಫೀಸ್ಗೆ ವಾಪಸ್ ಹೋಗ್ತಿದ್ದಾಗ ಘಟನೆ ಸಂಭವಿಸಿದೆ. ಸರಿಯಾದ ಸೂಚನಾಫಲಕ, ರಿಫ್ಲೆಕ್ಟೆರ್ ಕೂಡ ಕಾಣಿಸಿಲ್ಲ. ಅದೃಷ್ಟವಶಾತ್ ಪ್ರಾಣಪಾಯದಿಂದ ಚಾಲಕ ಪಾರಾಗಿದ್ದಾರೆ.

ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ರು ಘಟನೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕಾರು ಮಾಲೀಕ ವಸಂತ್ ಮಾತನಾಡಿ, ರಾತ್ರಿ ಹನ್ನೊಂದೂವರೆ ಸುಮಾರಿಗೆ ಘಟನೆ ಆಗಿದೆ. ಎಂಪ್ಲಾಯ್ನ ಡ್ರಾಪ್ ಮಾಡಿ ಗಾಡಿ ವಾಪಸ್ ಹೋಗ್ತಿತ್ತು. ಈ ವೇಳೆ ಮಳೆ ಬರ್ತಿತ್ತು. ಮಳೆ ಹಿನ್ನೆಲೆ ಡಿವೈಡರ್ ಕಾಣ್ಸಿಲ್ಲ. ಡಿವೈಡರ್ಗೆ ಡಿಕ್ಕಿಯಾಗಿ ಗಾಡಿ ಡ್ಯಾಮೇಜ್ ಆಗಿದೆ. ಅದೃಷ್ಟವಶಾತ್ ಡ್ರೈವರ್ಗೆ ಏನೂ ಆಗಿಲ್ಲ.


