BJP ಶಾಸಕ ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿದೆ. ಸರ್ಕಾರದ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ಮಾಡಿತು. ಬೈರತಿ ಬಸವರಾಜ್ ಪರ ಹಾಜರಾಗಿದ್ದ ವಕೀಲ ಸಂದೇಶ್ ಚೌಟ, ಐದು ತಿಂಗಳ ಬಳಿಕ ಕೇಸ್ ಸಂಬಂಧ 18 ಮಂದಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ. ಬೈರತಿ ಬಸವರಾಜ್, ಅಜಿತ್ ವಿರುದ್ಧ ತನಿಖೆ ಬಾಕಿಯಿದೆ. ಬೈರತಿ ಬಸವರಾಜ್ ಅವರನ್ನು ಸಿಐಡಿ ವಿಚಾರಣೆಗೆ ತಡೆಯಿಲ್ಲದಿದ್ದರೂ, ಇಲ್ಲೀವರೆಗೂ ಬೈರತಿ ವಿರುದ್ದ ತನಿಖೆಯನ್ನೇ ನಡೆಸಿಲ್ಲ ಎಂದು ಆರೋಪಿಸಿದ್ರು.

ಫೆಬ್ರವರಿ 21ಕ್ಕೂ ಮೊದಲ ದೂರಿನಲ್ಲಿ ಬೈರತಿ ಬಸವರಾಜ್ ವಿರುದ್ಧ ಆರೋಪಗಳಿಲ್ಲ. ಈ ದೂರಿಗೆ ಹೈಕೋರ್ಟ್ ಮಧ್ಯಂತರ ತಡೆಯನ್ನೂ ನೀಡಿತ್ತು. ಬಿಕ್ಲು ಶಿವನ ಕೊಲೆ ಬಳಿಕ ಅವರ ತಾಯಿ ಹೇಳಿಕೆಯೂ ದಾಖಲಾಗಿದೆ. ದೂರಿನಲ್ಲಿ ನಾನು ಯಾರ ಹೆಸರನ್ನೂ ಹೇಳಿಲ್ಲ ಎಂದು ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದಾರೆ. ಬಿಕ್ಲು ಶಿವನ ತಾಯಿ ಮಾಧ್ಯಮಗಳಲ್ಲಿ ಬೈರತಿ ಬಸವರಾಜ್ ವಿರುದ್ಧ ದೂರು ನೀಡಿಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆ ಎಲೆಕ್ಟ್ರಾನಿಕ್ ಮಿಡಿಯಾಗಳಲ್ಲಿ ಪ್ರಸಾರ ಆಗಿದೆ. ಪೊಲೀಸರು ಅನುಮಾನದ ಮೇರೆಗೆ ಎಫ್ಐಆರ್ನಲ್ಲಿ ಹೆಸರು ಸೇರಿಸಿದ್ದಾರೆ. BNS 35 ಅಡಿ ನೋಟಿಸ್ ಜಾರಿ ಮಾಡಿದ್ರು. ಆ ಬಳಿಕ ಹೈಕೋರ್ಟ್ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ರು. ನಂತರ ಸಿಐಡಿ ಅಧಿಕಾರಿಗಳು ಈ ಪ್ರಕರಣದಲ್ಲಿ ಕೋಕಾ ಕಾಯ್ದೆಯನ್ನ ಹಾಕಿದರು. ಅ ಬಳಿಕ ಹೈಕೋರ್ಟ್ ಕೋಕಾ ಕಾಯ್ದೆಯನ್ನ ರದ್ದು ಮಾಡಿದೆ ಎಂದು ವಾದಿಸಿದ್ರು.

ವಿಧಾನಸಭಾ ಸ್ಪೀಕರ್ ಹಾಗೂ ಸಿಎಂ ಸಿದ್ದರಾಮಯ್ಯಗೆ ಶಾಸಕ ಬೈರತಿ ಬಸವರಾಜ್ ಪತ್ರ ಬರೆದಿದ್ದಾರೆ. ಈ ಕೊಲೆ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಎಂದು ಪತ್ರ ಬರೆದಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ಕೊಡುವ ಬಗ್ಗೆ ಸರ್ಕಾರ ಇಲ್ಲೀವರೆಗೂ ನಿರ್ಧರಿಸಿಲ್ಲ. ಈ ಪ್ರಕರಣದಲ್ಲಿ ಇದುವರೆಗಿನ 19 ರಿಮ್ಯಾಂಡ್ ಅಪ್ಲಿಕೇಶನ್ನಲ್ಲಿ ಎಲ್ಲೂ ಬೈರತಿ ಬಸವರಾಜ್ ವಿರುದ್ಧ ಆರೋಪಗಳಿಲ್ಲ ಎಂದು ಹಿರಿಯ ವಕೀಲ ಸಂದೇಶ್ ಚೌಟ ವಾದ ಮಂಡಿಸಿದ್ರು.
ಸಂದೇಶ್ ಚೌಟ ವಾದಕ್ಕೆ ಪ್ರತಿವಾದ ಮಾಡಿದ ಎಸ್ಪಿಪಿ ಅಶೋಕ್ ನಾಯ್ಕ್, ಕೊಲೆಗೆ ಒಳಸಂಚು ನಡೆಸಿದಾಗ ಸಾಕ್ಷ್ಯಗಳು ಕಣ್ಣಿಗೆ ಕಾಣುವುದಿಲ್ಲ. ಬೈರತಿ ಬಸವರಾಜ್ A1 ಮತ್ತು A10 ಜೊತೆ ಒಳಸಂಚು ನಡೆಸಿದ್ದರಿಂದ ಕೊಲೆಯಾಗಿದೆ. A1 ಜೊತೆ ಶಾಸಕ ಬೈರತಿ ಬಸವರಾಜ್ ಯಾವಾಗಲೂ ಸಂಪರ್ಕದಲ್ಲಿದ್ರು. ಪ್ರಕರಣದಲ್ಲಿ A1 ರೌಡಿ, A5 ಶಾಸಕ, A20 2023ರ ಬಳಿಕ ವಕೀಲ. ಆದರೆ A20 ಅವರಿಗೆ ಕಚೇರಿಯಿಲ್ಲ. ಒಂದು ಅರ್ಜಿ ಹಾಕಿಲ್ಲ. ಒಂದು ಪೋನ್ ನಂಬರ್ ಕೂಡಾ ಇಲ್ಲ. ಸಿಮ್ ಕೂಡ ಅವರ ಹೆಸರಲ್ಲಿ ಇಲ್ಲ. ಮನೆ ವಿಳಾಸ ಸರಿಯಾದ ರೀತಿಯಲ್ಲಿ ಇಲ್ಲ. ಸುಮಾರು ನೂರು ಕೋಟಿಗೂ ಹೆಚ್ಚು ಆಸ್ತಿ ಇದೆ. ಬಾರ್ ಕೌನ್ಸಿಲ್ನಲ್ಲೂ ರಿಜಿಸ್ಟರ್ ಆಗಿಲ್ಲ. A1, A5, A20 ಎಲ್ಲರೂ ಕುಂಭಮೇಳಕ್ಕೆ ಹೋಗಿದ್ರು. ಬ್ಯಾಂಕ್, ಪಾನ್, ಆಧಾರ್ಗೂ ಅಧಿಕೃತ ನಂಬರ್ ಕೊಟ್ಟಿಲ್ಲ. ಈ ಮೂವರ ರೋಲ್ ಕೊಲೆ ಕೇಸ್ನಲ್ಲಿ ಕಣ್ಣಿಗೆ ಕಾಣಲ್ಲ. ಸ್ಕ್ಯಾನಿಂಗ್ ಮಾಡ್ಬೇಕಿದೆ ಎಂದಿದ್ದಾರೆ.

ದೇವಸ್ಥಾನದ ಪ್ರಾಪರ್ಟಿ ವಿಚಾರದಲ್ಲಿ ಕೊಲೆಯಾದ ಬಿಕ್ಲು ಶಿವನಿಗೂ ಆರೋಪಿಗಳ ನಡುವೆ ಮನಸ್ತಾಪವಿತ್ತು ಎಂದಿರುವ ವಕೀಲ ಅಶೋಕ್ ನಾಯ್ಕ್, A1, A5, A20 ಮೂವರು ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ. A1 ಖಾತೆಯಲ್ಲಿ 80 ಲಕ್ಷ ರೂಪಾಯಿ ಹಣ ಸಿಕ್ಕಿದೆ. ಕೊಲೆ ಮಾಡಿದವರು ಬೈರತಿ ಬಸವರಾಜ್ ಹುಟ್ಟುಹಬ್ಬದಲ್ಲಿ ಕೇಕ್ ತಿಂದು ಹೋದವರೇ ಆಗಿದ್ದಾರೆ. ಮೊಬೈಲ್ ಟವರ್ ಲೊಕೇಷನ್ ಸಿಕ್ಕಿದೆ. ಕೊಲೆಯಾದ ದಿನವೇ A1 ಆರೋಪಿ ವಿದೇಶಕ್ಕೆ ಓಡಿ ಹೋಗ್ತಾನೆ. ಬೈರತಿ ಬಸವರಾಜ್ಗೆ ತಿಳಿಸಿಯೇ ಈ ಕೊಲೆ ನಡೆದಿದೆ. ಹೀಗಾಗಿ ಬಂಧನ ಮಾಡಿಯೇ ವಿಚಾರಣೆ ಮಾಡಬೇಕು ಎಂದು ಎಸ್ಪಿಪಿ ಅಶೋಕ್ ನಾಯ್ಕ್ ವಾದ ಮಂಡಿಸಿದ್ದರು. ಬೈರತಿ ಬಸವರಾಜ್ಗೆ ನೇರವಾಗಿ ಲಿಂಕ್ ಇರುವ ಸಾಕ್ಷ್ಯ ಸಲ್ಲಿಸಿ ಎಂದ ಕೋರ್ಟ್ ಸಂಜೆ ಜಾಮೀನು ಅರ್ಜಿಯನ್ನು ವಜಾ ಮಾಡಿದೆ.
ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿದೆ. ಬೈರತಿ ಬಸವರಾಜು ಬಂಧನ ಮಾಡಲು ಸಿಐಡಿ ಅಧಿಕಾರಿಗಳು ಭಾರೀ ಕಸರತ್ತು ನಡೆಸಿದ್ದಾರೆ. ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಗೋವಾ, ಮಹಾರಾಷ್ಟ್ರ ಭಾಗದಲ್ಲಿ ಬೈರತಿ ಬಸವರಾಜ್ಗಾಗಿ ಹುಡುಕಾಟ ನಡೆಸಲಾಗ್ತಿದೆ. ಪುಣೆಯಲ್ಲಿ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಅಲ್ಲಿಂದ ಗೋವಾಗೆ ಹೋಗಿ ತಲೆ ಮರೆಸಿಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸ್ರು ಹುಡುಕಾಟ ನಡೆಸಿದ್ದಾರೆ. ಅಜ್ಞಾತಸ್ಥಳದಿಂದಲೇ ವಕೀಲರ ಮೂಲಕ ಸುಪ್ರೀಂಕೋರ್ಟ್ಗೆ ಅರ್ಜಿ ಹಾಕುವ ಸಿದ್ಧತೆಯಲ್ಲಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಹೈಕೋರ್ಟ್ನಲ್ಲಿ ಅರ್ಜಿ ವಜಾ ಆಗಿದ್ದು, ಸುಪ್ರೀಂಕೋರ್ಟ್ನಲ್ಲಿ ಬಂಧನದಿಂದ ರಕ್ಷಣೆ ಪಡೆಯುವ ಯತ್ನದಲ್ಲಿದ್ದಾರೆ ಎನ್ನಲಾಗ್ತಿದೆ. ಇಲ್ಲದಿದ್ದರೆ ಬಂಧನ ಅನಿವಾರ್ಯ ಆಗಲಿದೆ.


