ಡಿ.ಕೆ ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಅಸಮಧಾನ ಸ್ಫೋಟಗೊಂಡಿದೆ. ತಮಗೆ ಹಂಚಿರುವ ಖಾತೆಗಳ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದನಲ್ಲಿ ಖಾತೆ ಹಂಚಿಕೆ ಬಿಕ್ಕಟ್ಟು ತೀವ್ರಗೊಂಡಿದೆ. ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ, ಖಾತೆ ವಿಚಾರವಾಗಿ ಚರ್ಚೆ ನಡೆಸಲು ದೆಹಲಿಗೆ ತೆರಳಿದ್ದು, ಹೈಕಮಾಂಡ್ ನಾಯಕರ ಭೇಟಿಗೆ ಸರ್ಕಸ್ ನಡೆಸ್ತಿದ್ದಾರೆ. ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ರಾಹುಲ್ ಗಾಂಧಿ ಅವರನ್ನ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ಸಚಿವ ಸಂಪುಟದಲ್ಲಿ ಸಚಿವರಿಗೆ ಖಾತೆ ಹಂಚಿಕೆ ಕಗ್ಗಂಟು ಹಿನ್ನೆಲೆಯಲ್ಲಿ ಸಿಎಂ ಡಿ.ಕೆ ಶಿವಕುಮಾರ್ ನಾಳೆ ದೆಹಲಿಗೆ ತೆರಳುತ್ತಿದ್ದಾರೆ. ಹಲವಾರು ಸಚಿವರಿಂದ ಖಾತೆ ಕುರಿತು ಅಸಮಾಧಾನ ಹೊರಬೀಳುತ್ತಿರುವ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಸಿಎಂ ಡಿ.ಕೆ ಶಿವಕುಮಾರ್ ಬೆಂಗಳೂರು ನಗರಾಭಿವೃದ್ಧಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಕುರಿತು ಹೈಕಮಾಂಡ್ ಜೊತೆಗೆ ಚರ್ಚೆ ನಡೆಸಲಿದ್ದಾರೆ.

ಸಚಿವ ರಾಮಲಿಂಗಾರೆಡ್ಡಿ ಬೆನ್ನಲ್ಲೇ ಖಾತೆ ವಿಚಾರವಾಗಿ ಕೆ.ಹೆಚ್ ಮುನಿಯಪ್ಪ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಹಾರ ಇಲಾಖೆಯನ್ನು ಬದಲಿಸಿ ಸಮಾಜ ಕಲ್ಯಾಣ ಇಲಾಖೆ ಖಾತೆ ನೀಡುವಂತೆ ರಾಹುಲ್ ಗಾಂಧಿಗೆ ಮನವಿ ಮಾಡಿದ್ದಾರೆ. ರಾಹುಲ್ ಗಾಂಧಿ ಬಳಿ ಸಮಾಜ ಕಲ್ಯಾಣ ಖಾತೆಯೇ ಬೇಕು ಎಂದು ಡಿಮ್ಯಾಂಡ್ ಮಾಡಿದ್ದು, ನಮ್ಮ ಸಮುದಾಯದ ಕೆಲಸ ಮಾಡ್ಬೇಕು ಎಂದು ಸಮಾಜ ಕಲ್ಯಾಣ ಖಾತೆಗೆ ಬೇಡಿಕೆ ಇಟ್ಟಿದ್ದಾರೆ. ಸಂಪುಟ ವಿಸ್ತರಣೆ ವೇಳೆ ನೋಡೋಣ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಅಭಿವೃದ್ಧಿ ಖಾತೆ ವಿಚಾರವಾಗಿ ಕೃಷ್ಣಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿರುವ ವಿಚಾರವಾಗಿ ಮಾಜಿ ಸಚಿವ ಕೆ.ಎನ್ ರಾಜಣ್ಣ ಪ್ರತಿಕ್ರಿಯಿಸಿದ್ದು, ಕೃಷ್ಣ ಬೈರೇಗೌಡರು ಹೇಳಿದ್ದಾರಲ್ಲ. ಬಿಡಿಎ, ಬಿಎಂಆರ್ಡಿಎ ಬಿಟ್ಟು ಖಾತೆ ಕೊಟ್ಟಿದ್ದಾರೆ. ಇದು ಅಪೂರ್ಣ ಅಂದಿದ್ದಾರೆ. ಹೀಗಾಗಿ ಚಾರ್ಜ್ ವಹಿಸಿಕೊಳ್ಳುವುದಕ್ಕೆ ಯೋಚನೆ ಮಾಡ್ತೀನಿ ಅಂತ ಹೇಳಿದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ಕಾಯಿಲೆ ಬರುತ್ತದೆ. ಅದಕ್ಕೆ ಏನೇನು ಔಷಧಿ ಬರುತ್ತೋ ನೋಡೋಣ ಅಂತ ಹೇಳಿದ್ದಾರೆ.
ಖಾತೆ ಕ್ಯಾತೆಗೆ ರಾಜಣ್ಣ ವ್ಯಂಗ್ಯ ಮಾಡಿದ್ದು, 2028ರ ಚುನಾವಣೆ ಮಾಡಬೇಕು ಅಂದ್ರೆ ಒಳ್ಳೆಯ ಆಡಳಿತ ಕೊಡಬೇಕು. ಪಕ್ಷ ಸಂಘಟನೆಯನ್ನೂ ಮಾಡಬೇಕು. ಇವು ಎರಡನ್ನೂ ಮಾಡಿದ್ರೆ ಮಾತ್ರ 2028ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಖಾತೆ ಕ್ಯಾತೆ ಬಗ್ಗೆ ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ನೀಡಿರುವ ಜವಾಬ್ದಾರಿಯನ್ನ ವಹಿಸಿಕೊಂಡು, ಕೆಲಸ ಮಾಡಲಿ. ಈಗ ಇವರಿಗೆಲ್ಲಾ ಸಚಿವ ಸ್ಥಾನ ಸಿಕ್ಕಿರುವುದೇ ಹೆಚ್ಚು. ಉಳಿದ 20 ಸಚಿವ ಸ್ಥಾನ ಹೊಸಬರಿಗೇ ಕೊಡಬೇಕು ಎಂದು ಆಗ್ರಹಿಸಿದ್ದಾರೆ.


