ತಮಿಳುನಾಡು ವಿಧಾನಸಭೆ ಚುನಾವಣೆಗೆ ಸಕಲ ತಯಾರಿ ನಡೆದಿದೆ. ತಮಿಳುನಾಡಿ 234 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, 5 ಕೋಟಿ 73 ಲಕ್ಷ 43 ಸಾವಿರ ಮತದಾರರು ಹಕ್ಕು ಚಲಾವಣೆ ಮಾಡಲಿದ್ದಾರೆ. 4023 ಅಭ್ಯರ್ಥಿಗಳು ಕಣದಸಲ್ಲಿದ್ದು, ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದಾರೆ. ನಟ ವಿಜಯ್ ತಿರುಚಿರಾಪಳ್ಳಿ ಪೂರ್ವ ಹಾಗೂ ಪೆರಂಬೂರ್ನಲ್ಲಿ ಸ್ಪರ್ಧೆ ಮಾಡಿದ್ದು, ಗೆಲುವಿನ ಹುಮ್ಮಸ್ಸಿನಲ್ಲಿದ್ದಾರೆ. ಇನ್ನು ಹಾಲಿ ಸಿಎಂ ಎಂ.ಕೆ ಸ್ಟಾಲಿನ್ ಕೊಳತ್ತೂರಿನಿಂದ ಆಯ್ಕೆ ಬಯಸಿದ್ದಾರೆ. AIADMK ಜೊತೆಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ 27 ಸ್ಥಾನಗಳಲ್ಲಿ ಸೆಣೆಸುತ್ತಿದೆ.

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಇಂದು ನಡೆಯಲಿದೆ. 16 ಜಿಲ್ಲೆಗಳ 152 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಶಾಂತಿಯುತ ಮತದಾನ ನಡೆಸಲು ಚುನಾವಣಾ ಆಯೋಗ ಸಕಲ ಸಿದ್ಧತೆ ಕೈಗೊಂಡಿದೆ. ಏಪ್ರಿಲ್ 29ರಂದು ಉಳಿದ 142 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೇ 4ರಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ಮಮತಾ ಬ್ಯಾನರ್ಜಿ ಹಾಗೂ ಸುವೇಂದು ಅಧಿಕಾರಿ ಇಂದೇ ಅದೃಷ್ಟ ಪರೀಕ್ಷೆಗೆ ಗುರಿಯಾಗಲಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಬೆಂಗಳೂರಿನಿಂದ ಜನರು ತಮ್ಮ ತಮ್ಮ ಊರುಗಳತ್ತ ಹೊರಟ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಬೆಂಗಳೂರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮತದಾನಕ್ಕಾಗಿ ಬೆಂಗಳೂರಿಂದ ತಮ್ಮ ಊರುಗಳಿಗೆ ಜನರು ಹೊರಟಿದ್ರಿಂದ ಕಾರ್ಪೋರೇಷನ್ ಸರ್ಕಲ್, ಕಾಳಿಂಗ ರಾವ್ ಬಸ್ ನಿಲ್ದಾಣ, ಮಡಿವಾಳ ಅಂಡರ್ ಪಾಸ್ ಬಳಿ ಜನಸಾಗರವೇ ಸೇರಿತ್ತು. KSRTC ಹಾಗೂ TNSRTC ಬಸ್ ಮೂಲಕ ಜನ ಪ್ರಯಾಣಕ್ಕೆ ಮುಗಿಬಿದ್ದು ತೆರಳಿದ್ದಾರೆ. ಕುಟುಂಬ ಸಮೇತರಾಗಿ ಮತದಾನಕ್ಕೆ ಹೊರಟಿರುವ ತಮಿಳು ಜನರು, ಮತದಾನ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ.

ಕೇಂದ್ರ ಚುನಾವಣಾ ಆಯೋಗ ನೀಡಿರುವ ಮಾಹಿತಿ ಬೆಚ್ಚಿ ಬೀಳಿಸುವಂತಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಿಂದ ಇಲ್ಲೀವರೆಗೂ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಲ್ಲಿ ಜಪ್ತಿ ಮಾಡಲಾಗಿರುವ ಹಣ, ಮದ್ಯ ಹಾಗೂ ಬೆಲೆಬಾಳುವ ಗಿಫ್ಟ್ಗಳ ಮೌಲ್ಯ ಬರೋಬ್ಬರಿ ಒಂದು ಸಾವಿರ ಕೋಟಿ ಎನ್ನಲಾಗಿದೆ. ಚುನಾವಣೆಗೆ ಮುನ್ನ ದಿನ ನಿನ್ನೆ ತಮಿಳುನಾಡಲ್ಲಿ 100 ಕೋಟಿ ನಗದನ್ನ ಸೀಜ್ ಮಾಡಲಾಗಿದೆ. ಈ ಹಣವನ್ನ ಮತದಾರರಿಗೆ ಹಂಚಲು ತರಲಾಗಿತ್ತು ಎನ್ನಲಾಗಿದೆ.

ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಭಾರತೀಯ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ. ಮುಂದಿನ 24 ಗಂಟೆಗಳ ಒಳಗೆ ನಿಮ್ಮ ನಿಲುವನ್ನ ವಿವರಿಸುವಂತೆ ನೋಟಿಸ್ನಲ್ಲಿ ಸೂಚಿಸಲಾಗಿದೆ. ತಮಿಳುನಾಡಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಖರ್ಗೆ, AIADMK-ಬಿಜೆಪಿ ಮೈತ್ರಿಕೂಟವನ್ನು ಟೀಕಿಸೋ ಭರದಲ್ಲಿ ಮೋದಿ ಅವರನ್ನ ಭಯೋತ್ಪಾದಕ ಎಂದು ಕರೆದಿದ್ರು. ಆ ಬಳಿಕ ಭಯ ಸೃಷ್ಟಿಸುತ್ತಾರೆ ಎಂದು ಮರು ಸ್ಪಷ್ಟನೆಯನ್ನೂ ನೀಡಿದ್ದರು. ಇವತ್ತು ಸಂಜೆಯೊಳಗೆ ಉತ್ತರ ಕೊಡಬೇಕಿದೆ.


