ಶುಕ್ರವಾರ ಅಮಾವಾಸ್ಯೆ, ಹೊಸದಾಗಿ ಕೊಂಡುಕೊಂಡ ಕಾರಿಗೆ ಪೂಜೆ ಮಾಡಿಸುವ ಉದ್ದೇಶದಿಂದ ದೇವಸ್ಥಾನಕ್ಕೆ ತೆರಳುತ್ತಿದ್ದ ಒಂದೇ ಕುಟುಂಬದ 9 ಮಂದಿ ಕಾರಿನಲ್ಲೇ ಸುಟ್ಟು ಭಸ್ಮ ಆಗಿರುವ ಘಟನೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಶಾಂತಪುರ ಗೇಟ್ ಬಳಿ ನಡೆದಿದೆ. ಅಮಾವಾಸ್ಯೆಯ ಪೂಜೆಗೆ ಹೊರಟಿದ್ದ ರಾಯಚೂರು ಜಿಲ್ಲೆಯ ಸಿರವಾರದ ಬಿಜೆಪಿ ಮುಖಂಡ ಕೃಷ್ಣಾ ನಾಯಕ್ ಹಾಗೂ ಇಡೀ ಕುಟುಂಬ ಬೆಂಕಿಯ ಕೆನ್ನಾಲಿಗೆ ಸಿಕ್ಕಿ ಪ್ರಾಣ ಬಿಟ್ಟಿದೆ.

ಬೆಳ್ಳಂಬೆಳಗ್ಗೆಯೇ ಮನೆ ಬಿಟ್ಟ ಕೃಷ್ಣಾ ನಾಯಕ್ ಕುಟುಂಬ ಒಂದೇ ಕಾರಿನಲ್ಲಿ 10 ಮಂದಿ ತೆರಳಿದ್ದರು. ಐವರು ದೊಡ್ಡವರು ಹಾಗೂ ಇನ್ನುಳಿದ ಐವರು ಮಕ್ಕಳು. ಎಲ್ಲರೂ ಖುಷಿ ಖುಷಿಯಾಗಿಯೇ ದೇವರ ದರ್ಶನ ಮಾಡಿ, ಮನೆ ಕಡೆಗೆ ಮುಖ ಮಾಡಿದ್ದರು. ಸುರಪುರ ತಾಲೂಕಿನ ಶಾಂತಪುರ ಗ್ರಾಮದ ಬಳಿ ಬರ್ತಿದ್ದಂತೆ ಮುಂದೆ ಹೋಗ್ತಿದ್ದ ವಾಹನವೊಂದನ್ನ ಓವರ್ ಟೇಕ್ ಮಾಡೋದಕ್ಕೆ ಹೋಗಿ, ಎದುರಿನಿಂದ ಬರ್ತಿದ್ದ VRL ಬಸ್ಗೆ ಡಿಕ್ಕಿ ಹೊಡೆದಿದ್ದಾರೆ. ಗುದ್ದಿದ ರಭಸಕ್ಕೆ ಅರ್ಧ ಕಾರೇ ಬಸ್ ಅಡಿಯಲ್ಲಿ ಸಿಲುಕಿ ಅಪ್ಪಚ್ಚಿಯಾಗಿದ್ದು, ಜೊತೆ ಜೊತೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ.

ಕಾರ್ ಅಪಘಾತ ಆಗ್ತಿದ್ದ ಹಾಗೆ ಕಾರು ಹಾಗೂ ಬಸ್ಗೆ ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟವಶಾತ್ ಬಸ್ನಲ್ಲಿ ಇದ್ದವರು ಕೆಳಗಿಳಿದು ಸಾವಿನಿಂದ ಪಾರಾಗಿದ್ದಾರೆ. ಆದರೆ ಕಾರಿನಲ್ಲಿ ಇದ್ದವರು ಹೊರಕ್ಕೆ ಬರಲಾಗದೆ ಬಂಧಿಯಾಗಿದ್ದರು. ಬಸ್ನಲ್ಲಿ ಜನರು ಹಾಗೂ ಗ್ರಾಮಸ್ಥರು ಹರಸಾಹಸ ಮಾಡಿ ಐವರನ್ನ ಹೊರಗೆಳೆದಿದ್ದಾರೆ. ಆದರೆ ಅದರಲ್ಲೂ ನಾಲ್ರು ಸಾವನ್ನಪ್ಪಿ ಒಬ್ಬನೇ ಒಬ್ಬ ಬಾಲಕ ಮಾತ್ರ ಬದುಕುಳಿದಿದ್ದಾನೆ. ಇನ್ನುಳಿದ ಐವರು ಕಾರ್ನೊಳಗೇ ಸುಟ್ಟು ಕರಕಲಾಗಿದ್ದಾರೆ. ಕುಟುಂಬಸ್ಥರು ಸ್ಥಳಕ್ಕೆ ಭೇಟಿ ನೀಡಿದಾಗ ಸುಟ್ಟ ತಲೆಬುರುಡೆಗಳು ಕಂಡು ಕಣ್ಣೀರು ಹಾಕಿದ್ದಾರೆ.

KSRTC ಯಲ್ಲಿ ಚಾಲಕರಾಗಿದ್ದ ಕೃಷ್ಣಾ ನಾಯಕ್, ಕೆಲವು ವರ್ಷಗಳ ಹಿಂದೆ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಇಳಿದಿದ್ದರು. ಬಿಜೆಪಿ ಪಕ್ಷದಿಂದ ಸತತ ಎರಡು ಬಾರಿ ಪಟ್ಟಣ ಪಂಚಾಯ್ತಿ ಸದಸ್ಯರಾಗಿಯೂ ಆಯ್ಕೆಯಾಗಿ ಜನಸೇವೆ ಮಾಡುತ್ತಿದ್ದರು. ಇತ್ತಿಚಿಗೆ ಒಂದು ಹೊಸ ಕಾರೊಂದನ್ನ ಖರೀದಿಸಿದ್ದ ಕೃಷ್ಣಾ ನಾಯಕ್, ಕುಟುಂಬಸ್ಥರೆಲ್ಲಾ ಒಟ್ಟಾಗಿ ಅಮಾವಾಸ್ಯೆ ದಿನ ಪೂಜೆ ಮಾಡಿಸಿಕೊಂಡು ದೇವರ ದರ್ಶನ ಮಾಡಿ ಬರಲು ಹೊರಟಿದ್ದರು. ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿರುವ ವೇಣುಗೋಪಾಲನ ದರ್ಶನಕ್ಕೆ ಹೋಗಿದ್ದರು.

ಗುರುವಾರ ಅಷ್ಟೇ ಹಾಸನ, ಚಿಕ್ಕಮಗಳೂರಿನಿಂದ 18 ಜನರ ತಂಡ ಮಂತ್ರಾಲಯಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ 8 ಜನರು ಸಾವನ್ನಪ್ಪಿದ್ದರು. ಬೊಲೆರೋ ವಾಹನಕ್ಕೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 8 ಜನರು ಪ್ರಾಣ ಕಳೆದುಕೊಂಡಿದ್ದರು. ಮೃತರನ್ನು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಉಡೆವಾ ಗ್ರಾಮದ ಪುಟ್ಟಮ್ಮ (65), ಮೀನಾಕ್ಷಿ (50) ಹಾಗೂ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಶೆಟ್ಟಿಗೆರೆ ಗ್ರಾಮಸ್ಥರಾದ ಕುಮಾರ್ (51), ಸುನಿಲ್ (27) ಲೋಲಾಕ್ಷಿ (38), ವೀಣಾ (25), ನಿಶಿತ್ (03), ಜಯಮ್ಮ ಎಂಬುವರ ಮೃತದೇಹಗಳನ್ನು ಹುಟ್ಟೂರಿಗೆ ತಂದು ಅಂತ್ಯಕ್ರಿಯೆ ನೆರವೇರಿಸಲಾಯ್ತು.


