ಮೈಸೂರಿನ ಕೆಂಪಯ್ಯನ ಹುಂಡಿ ಗ್ರಾಮದಲ್ಲಿ ಘನಘೋರ ಘಟನೆಯೊಂದು ನಡೆದು ಹೋಗಿದೆ. ಹಸೆಮಣೆ ಏರಲು ಸಜ್ಜಾಗಿದ್ದ ಯುವತಿ ರಕ್ಷಿತಾ, ತನ್ನ ಹೆತ್ತವರ ಜೊತೆಯಲ್ಲಿ ಮಸಣ ಸೇರಿದ್ದಾಳೆ. ಅಪ್ಪ-ಅಮ್ಮನ ಮುದ್ದಿನ ಮಗಳು.. ಒಬ್ಬಳೇ ಮಗಳು ಅನ್ನೋ ಕಾರಣಕ್ಕೆ ಪ್ರೀತಿಯಿಂದ ಸಾಕಿದ್ರು. ರಕ್ಷಿತಾಗೂ ಹೆತ್ತವರು ಅಂದ್ರೆ ಪಂಚಪ್ರಾಣ. ಒಂದು ದಿನ ಕೂಡ ಹೆತ್ತವರನ್ನು ಬಿಟ್ಟು ಇರ್ತಿರಲಿ. ಯುವತಿ ರಕ್ಷಿತಾ ತಂದೆ ಶಿವಣ್ಣ ಟ್ರ್ಯಾಕ್ಟರ್ ಡ್ರೈವರ್ ಆಗಿ ಕೆಲಸ ಮಾಡ್ಕೊಂಡಿದ್ರೆ, ಅಮ್ಮ ನಾಗರತ್ನ ಹಾಗೂ ರಕ್ಷಿತಾ ಮನೆಯಲ್ಲೇ ಇರ್ತಿದ್ರು. ಈ ಸುಂದರ ಸಂಸಾರಕ್ಕೆ ಎಂಟ್ರಿ ಕೊಟ್ಟಿದ್ದು ಉಲ್ಲಾಸ್ ಗೌಡ.

ಉಲ್ಲಾಸ್ಗೌಡ ಕೂಡ ಟ್ರ್ಯಾಕ್ಟರ್ ಡ್ರೈವರ್ ಆಗಿದ್ರಿಂದ ಯುವತಿ ರಕ್ಷಿತಾ ತಂದೆ ಶಿವಣ್ಣನಿಗೆ ಪರಿಚಯಸ್ಥ. ಅದೇ ಪರಿಚಯದ ಮೇಲೆ ಆಗಾಗ ಮನೆಗೆ ಬಂದು ಹೋಗ್ತಿದ್ನಂತೆ. ಈ ನಡುವೆ ರಕ್ಷಿತಾಳನ್ನು ಪರಿಚಯ ಮಾಡ್ಕೊಂಡಿದ್ದಾನೆ ಉಲ್ಲಾಸ್ಗೌಡ, ರಕ್ಷಿತಾ ಜೊತೆಗೆ ಶುರುವಾದ ಮಾತುಕತೆಯನ್ನು ಪ್ರೀತಿ ಮಾಡುವ ಹಂತಕ್ಕೆ ತೆಗೆದುಕೊಂಡು ಹೋಗಿದ್ನಹಂತೆ. ರಕ್ಷಿತಾ ಏನು ಹೇಳಿದ್ದಳು ಅನ್ನೋದು ಗೊತ್ತಾಗಿಲ್ಲ. ಆದರೆ ಕಳೆದ 2 ವರ್ಷಗಳ ಹಿಂದೆ ರಕ್ಷಿತಾಳನ್ನೇ ಮದುವೆ ಮಾಡ್ಕೊಳ್ತೀನಿ ಅಂತ ಆಕೆ ತಂದೆ ಶಿವಣ್ಣನ ಕಾಲು ಹಿಡಿದು ಬೇಡಿಕೊಂಡಿದ್ನಂತೆ. ಶಿವಣ್ಣ ಮಾತ್ರ ಈ ಮದುವೆ ಒಪ್ಪಿರಲಿಲ್ಲ. ರಕ್ಷಿತಾ ಕೂಡ ನನಗೆ ಇಷ್ಟ ಇಲ್ಲ ಅಂದಿದ್ದಳು ಎನ್ನಲಾಗಿದೆ.
ಕಾಲೇಜು ಮುಗಿಸಿ ಮನೆಯಲ್ಲಿದ್ದ ರಕ್ಷಿತಾಗೆ ಹೆತ್ತವರು ಮದುವೆ ಮಾಡೋದಕ್ಕೆ ಸಿದ್ಧತೆ ಮಾಡಿದ್ರು. ರಕ್ಷಿತಾ ಕೂಡ ಮದುವೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಳು ಎನ್ನಲಾಗಿದೆ. ಹೀಗಾಗಿ ಕಳೆದ 3 ತಿಂಗಳ ಹಿಂದೆ ಸಂತೋಷ್ ಕುಮಾರ್ ಎಂಬಾತನ ಜೊತೆ ಎಂಗೇಜ್ಮೆಂಟ್ ಕೂಡ ಮಾಡಿದ್ರಂತೆ. ಯಾವಾಗ ನಿಶ್ವಿತಾರ್ಥ ಆಯ್ತೋ ಉಲ್ಲಾಸ್ ಟಾರ್ಚರ್ ಕೊಡೋದಕ್ಕೆ ಶುರು ಮಾಡಿದ್ದ ಎನ್ನಲಾಗಿದೆ. ರಕ್ಷಿತಾಳ ಖಾಸಗಿ ಫೋಟೋ, ಮೆಸೇಜ್ ಇಟ್ಕೊಂಡು ಬ್ಲ್ಯಾಕ್ಮೇಲ್ ಮಾಡಿದ್ನಂತೆ. ಅಷ್ಟೇ ಅಲ್ಲದೆ ಎಂಗೇಜ್ಮೆಂಟ್ ಆದ ಹುಡುಗನಿಗೂ ಖಾಸಗಿ ಫೋಟೋಗಳು, ವಿಡಿಯೋಗಳನ್ನು ರವಾನಿಸಿದ್ನಂತೆ. ಆದರೂ ಹುಡುಗ ಇದೆಲ್ಲಾ ಈಗ ಸರ್ವೇ ಸಮಾನ್ಯ ನಾನು ಮದುವೆ ಆಗ್ತೀನಿ ಅಂತಾ ಹೇಳಿದ್ನಂತೆ.

ಬಾವಿ ಅಳಿಯ ಒಪ್ತಿದ್ದಂತೆ ಮದುವೆನೂ ನಿಶ್ವಯ ಮಾಡಿದ್ರು. ನಾಳೆಯೇ ಹಸೆಮಣೆ ಏರೋದಕ್ಕೆ ರಕ್ಷಿತಾ ರೆಡಿಯಾಗಿದ್ದಳು.. ಮದು ಮಗಳಾಗಿ ಜೀವನದ ಹೊಸ ಹೆಜ್ಜೆ ಇಡೋದಕ್ಕೆ ಸಜ್ಜಾಗಿದ್ದಳು. ಆದ್ರೆ ಮೊನ್ನೆ ಮನೆಗೆ ಎಂಟ್ರಿ ಕೊಟ್ಟಿದ್ದ ಉಲ್ಲಾಸ್, ದೊಡ್ಡ ಗಲಾಟೆ ಮಾಡಿದ್ನಂತೆ. ಅವಳನ್ನ ನನಗೆ ಕೊಡದಿದ್ರೆ ಸುಮ್ಮನೆ ಇರಲ್ಲ. ಅಲ್ಲದೆ ಮದುವೆ ಆಗುವ ಹುಡುಗನನ್ನೂ ಬಿಡಲ್ಲ. ಮದುವೆ ಮನೆಗೆ ನುಗ್ಗಿ ಮದುವೆ ನಿಲ್ಲಿಸ್ತೀನಿ ಅಂತ ಅಂತ ಬೆದರಿಕೆ ಹಾಕಿದ್ನಂತೆ. ಇದ್ರಿಂದ ಭಯಬಿದ್ದ ಇಡೀ ಕುಟುಂಬ ನೊಂದು ಹೋಗಿತ್ತು. ಮಗಳ ಮರ್ಯಾದೆ ಹೋಯ್ತು ಅಂತ ಹೆತ್ತವರು ಬೇಸತ್ತು ಹೋಗಿದ್ರು. ಹೀಗಾಗಿ ಈ ಜೀವನವೇ ಬೇಡ ಅಂತ ನಿರ್ಧಾರ ಮಾಡಿ, ಹಸೆಮಣೆ ಏರಬೇಕಿದ್ದ ರಕ್ಷಿತಾ, ಅಪ್ಪ, ಅಮ್ಮನ ಜೊತೆಗೆ ಪ್ರಾಣಬಿಟ್ಟಿದ್ದಾಳೆ. ಬಾಳೆಹಣ್ಣಿನಲ್ಲಿ ವಿಷ ಬೆರೆಸಿ ತಿಂದು ಮನೆಯಲ್ಲೇ ಪ್ರಾಣ ಬಿಟ್ಟಿದ್ದಾರೆ.
ಡೆತ್ನೋಟ್ನಲ್ಲಿ ಸಂಪೂರ್ಣ ಮಾಹಿತಿ ಬರೆದಿರುವ ರಕ್ಷಿತಾ. ನನಗೆ ಉಲ್ಲಾಸ್ಗೌಡ ಎಂಬುವವನು ತುಂಬಾ ಮಾನಸಿಕ ಹಿಂಸೆ ಕೊಡುತ್ತಿದ್ದಾನೆ. ನಾನು ಮಾಡಿದ ಮೆಸೇಜ್, ಫೋಟೋಗಳನ್ನ ಇಟ್ಕೊಂಡು ನನಗೆ ಮತ್ತು ನನ್ನ ಕುಟುಂಬಕ್ಕೆ ತುಂಬಾ ಕಿರುಕುಳ ಕೊಡ್ತಿದ್ದಾನೆ. ಈ ಹಿಂಸೆ ತಾಳದೇ ನಾನು ಮತ್ತು ನನ್ನ ಅಪ್ಪ ಅಮ್ಮ ಸಾವಿಗೆ ಶರಣಾಗಲು ನಿರ್ಧರಿಸಿದ್ದೇವೆ. ನನಗೆ ಮದುವೆ ಸೆಟ್ ಆಗಿದೆ. ಆ ಹುಡುಗನಿಗೂ ಸಹ ಎಲ್ಲವನ್ನೂ ತೋರಿಸಿ, ನನಗೆ ಬ್ಲ್ಯಾಕ್ಮೇಲ್ ಮಾಡ್ತಿದ್ದಾನೆ. ತುಂಬಾ ಮಾನಸಿಕ ಹಿಂಸೆ ಕೊಡ್ತಿದ್ದಾನೆ. ನಮ್ಮ ಸಾವಿಗೆ ಉಲ್ಲಾಸ್ಗೌಡ ಕಾರಣ. ಈತನಿಗೆ ಶಿಕ್ಷೆ ಆಗ್ಬೇಕು ಅಂತ ಕೇಳಿಕೊಳ್ತೇನೆ.. ನೀನು ನನ್ನ ಒಡಹುಟ್ಟಿದ ತಮ್ಮ ಅಂದುಕೊಂಡು ನಿನಗೆ ಅನ್ನ ಹಾಕಿದೆ. ಆದ್ರೆ ನೀನು ದ್ರೋಹ ಮಾಡಿದ್ದೀಯಾ. ನಮ್ಮ ಸಾವಿನ ನಂತರ ನೀನು ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ. ನಮ್ಮ ಸಾವಿನ ನಂತರ ನಿನ್ನ ಜೀವನ ಜೈಲಿನಲ್ಲಿ ತಿಳಿದಿಕೋ. ನಮ್ಮ ಮೂವರು ಜನರ ಸಾವಿಗೆ ಕಾರಣ ಉಲ್ಲಾಸ್ಗೌಡ ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.



