ಬಿಡದಿ ರೈತರ ಪರವಾಗಿ ಜೆಡಿಎಸ್ ಶಾಸಕರು, ಪರಿಷತ್ ಸದಸ್ಯರು ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪಾದಯಾತ್ರೆ ಅರ್ಧಕ್ಕೆ ಮೊಟಕು ಆಗಿದೆ. ಬೆಂಗಳೂರಿಗೆ ಪಾದಯಾತ್ರೆ ಎಂಟ್ರಿ ಆಗಲು ಪೊಲೀಸರು ಅವಕಾಶ ಕೊಟ್ಟಿಲ್ಲ. ಮೈಸೂರು – ಬೆಂಗಳೂರು ಹೆದ್ದಾರಿಯ ಕಣಮಿಣಕಿ ಟೋಲ್ ಬಳಿ ಬ್ಯಾರಿಕೇಡ್ ಅಳವಡಿಕೆ ಮಾಡಿ ಮೊದಲಿಗೆ ತಡೆಯುವ ಪ್ರಯತ್ನ ಮಾಡಿದ ಪೊಲೀಸರು, ಬಂದೋಬಸ್ತ್ ಬಗ್ಗೆ ಕೊಂಚ ಎಡವಟ್ಟು ಮಾಡಿಕೊಂಡಿದ್ದರು. ಆ ಬಳಿಕ ಕಣಮಿಣಿಕೆ ಟೋಲ್ನಿಂದ 500 ಮೀಟರ್ ಅಂತರದಲ್ಲಿ ನೈಸ್ ಜಂಕ್ಷನ್ ಬಳಿ ಪಾದಯಾತ್ರೆ ಅಂತ್ಯವಾಯ್ತು. ಆದರೆ ಈ ಹೋರಾಟ ನಿಲ್ಲೋದಿಲ್ಲ ಆಗಸ್ಟ್ 18ರಂದು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಬೃಹತ್ ಹೋರಾಟ ಮಾಡುವುದಾಗಿ ಕರೆ ನೀಡಲಾಗಿದೆ.

ಪಾದಯಾತ್ರೆ ತಡೆಯಲು ಮುಂದಾದ ಪೊಲೀಸರ ಜೊತೆಗೆ ನಿಖಿಲ್ ಕುಮಾರಸ್ವಾಮಿ ಮಾತಿನ ಚಕಮಕಿ ನಡೆಸಿದ್ದು, ಪೊಲೀಸರಿಗೆ ಈಗಾಗಲೇ ರೂಟ್ ಮ್ಯಾಪ್ ಕೊಟ್ಟಿದ್ದೇವೆ. ಸರ್ಕಾರಕ್ಕೂ ನಮ್ಮ ಪಾದಯಾತ್ರೆ ಬಗ್ಗೆ ಮಾಹಿತಿ ಇದೆ. ಆದರೂ ನಮ್ಮನ್ನು ತಡೆಯುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಆ ಬಳಿಕ ಕಣಮಿಣಿಕೆ ಟೋಲ್ನಿಂದ ಮುಂದಕ್ಕೆ ಸಂಚರಿಸಿದ ಪಾದಯಾತ್ರೆ. ನೈಸ್ ಜಂಕ್ಷನ್ಗೆ ಬಂದು ಅಂತ್ಯವಾಗಿದೆ. ಕಣಮಿಣಿಕೆ ಟೋಲ್ ಬಳಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರ ಸಂಖ್ಯೆ ಕಡಿಮೆ ಇತ್ತು. ಪಾದಯಾತ್ರಿಗಳು ಬ್ಯಾರಿಕೇಡ್ ತಳ್ಳಿ ಮುಂದಕ್ಕೆ ಬರಲು ಸಿದ್ದರಾಗಿದ್ದರು. ಹೀಗಾಗಿ ಅನಿವಾರ್ಯವಾಗಿ ಪೊಲೀಸರು ನೈಸ್ ರೋಡ್ ಜಂಕ್ಷನ್ ತನಕ ಅವಕಾಶ ಕೊಡಬೇಕಾಯ್ತು.

ಶಾಸಕ ಹರೀಶ್ ಗೌಡ ಮಾತನಾಡಿ ಸತ್ಯಾಗ್ರಹ, ಪ್ರತಿಭಟನೆ ಎಲ್ಲವನ್ನ ರೈತರು ಮಾಡ್ತಾ ಇದ್ರು. ನಿಖಿಲ್ ಕುಮಾರ ಸ್ವಾಮಿ ನೇತೃತ್ವದಲ್ಲಿ ಹೋರಾಟ ಮಾಡ್ತಿದ್ದೆವು. ಯಾವ ಗಲಾಟೆ ಏನೂ ಮಾಡಿರಲಿಲ್ಲ. ಟ್ರಾಫಿಕ್ಗೂ ಸಮಸ್ಯೆ ಮಾಡಲಿಲ್ಲ. ಸರ್ಕಾರ ರೈತರ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡ್ತಿದೆ. ಸರ್ಕಾರ ಹೀಗೆ ನಡೆದುಕೊಳ್ಳಬಾರದು ಎಂದು ಕಿಡಿಕಾರಿದ್ರು. ಶಾಸಕ ಶರಣ ಗೌಡ ಕಂದಕೂರು ಮಾತನಾಡಿ, ಈ ಕ್ಷೇತ್ರದ ಶಾಸಕರು ದೇವೆಗೌಡರ ಮನೆಯವರಿಗೆ ಬೈದು ಮಂತ್ರಿ ಆಗಿದ್ದಾರೆ. ಪೊಲೀಸರು ಸರ್ಕಾರದ ಅಣತಿಯಂತೆ ಆಗಮಿಸಿದ್ದಾರೆ. ಯಾರೋ ಹೇಳ್ತಾ ಇದ್ರಂತೆ ರಾಜಕೀಯ ಅಸ್ತಿತ್ವಕ್ಕೆ ನಿಖಿಲ್ಕುಮಾರ್ ಸ್ವಾಮಿ ಪಾದಯಾತ್ರೆ ಮಾಡ್ತಿದ್ದಾರೆ ಅಂತಾ. ಆದರೆ ಮಾಜಿ ಪ್ರಧಾನಿ ಮೊಮ್ಮಗ, ಮಾಜಿ ಸಿಎಂ ಹಾಗೂ ಕೇಂದ್ರ ಸಚಿವರ ಮಗನಿಗೆ ಅಸ್ತಿತ್ವದ ಪ್ರಶ್ನೆ ಇದೆಯಾ..? ಎಂದು ಪ್ರಶ್ನಿಸಿದ್ದಾರೆ.

ಎಂಎಲ್ಸಿ ಭೋಜೆಗೌಡ ಮಾತನಾಡಿ, ಬಾಲಣ್ಣ ಯಾಕೆ ರೈತ ಮಹಿಳೆಯರ ಸಮಸ್ಯೆ ಆಲಿಸಿಲ್ಲ. ಸತ್ಯಶೋಧನಾ ಸಮಿತಿ ವರದಿಯಲ್ಲಿ ಏನಿದೆ..? ನೀವು ಸಹಿ ಮಾಡಿರುವ ಪುಟದಲ್ಲಿ ಏನಿದೆ ಹೇಳಿ..? ನೀರಾವರಿ, ಕೃಷಿ ಭೂಮಿ ಅಂತಾ ಇದೆ. ನಾವು ಅಧಿವೇಶನದಲ್ಲಿ ಎಲ್ಲವನ್ನ ಬಿಚ್ಚಿಡುತ್ತೇವೆ. ನೀವು ರೈತ ಮಹಿಳೆಯರ ಕ್ಷಮೆ ಕೇಳಿ. ನಿಮಗೆ ಆ ಸ್ಥಳಕ್ಕೆ ಹೋಗಲು ಧೈರ್ಯ ಇಲ್ಲ ಎಂದು ಕಿಡಿಕಾರಿದ್ದಾರೆ. ನಿಖಿಲ್ ಕುಮಾರ ಸ್ವಾಮಿ ಮಾತನಾಡಿ, ಹಲವಾರು ವರ್ಷದ ಕನಸು ಒಬ್ಬರು ಸಿಎಂ ಆಗಿದ್ದಾರೆ. ಮತ್ತೊಬ್ಬರು ಮಂತ್ರಿ ಆಗಿದ್ದಾರೆ. ಆದರೆ ಅಪ್ಪಿ ತಪ್ಪಿಯೂ ಇಲ್ಲಿ ತಲೆ ಹಾಕಿಲ್ಲ. ನಿಮ್ಮ ಉದ್ದಟತನ ಮುರಿಯಲು ಜಿಲ್ಲೆಯ ಜನ ಸಿದ್ದರಾಗಿದ್ದಾರೆ. ಮನಮೋಹನ್ ಸಿಂಗ್ ಸರ್ಕಾರದಲ್ಲಿ ತಂದಿದ್ದ ಭೂಸ್ವಾಧೀನ ಆ್ಯಕ್ಟ್ ಅಡಿಯಲ್ಲಿ ಸ್ವಾಧೀನ ಮಾಡಿಲ್ಲ ಯಾಕೆ..? ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಇಲ್ಲಿ ಬಹಳ ಜನ ಪೊಲೀಸರು ನಿಂತಿದ್ದಾರೆ. ನಿಮ್ಮಲ್ಲೂ ರೈತ ಕುಟುಂಬದ ಜನರಿದ್ದೀರಿ. ನೀವು ಸಂದಿಗ್ದ ಪರಿಸ್ಥಿತಿಯಲ್ಲಿ ಇದ್ದೀರಿ. ನಿಮ್ಮನ್ನ ನಾನು ದೂಷಣೆ ಮಾಡಲ್ಲ. ನೀವು ಸರ್ಕಾರದ ಆದೇಶ ಪಾಲಿಸಬೇಕಾಗುತ್ತದೆ. ನಾಲ್ಕು ವಾರದ ಹಿಂದೆ ಸಮಿತಿ ಮಾಡೋದಾಗಿ ಹೇಳಿದ್ರು. ಆ ಬಳಿಕ ನಾಲ್ಕು ಹಳ್ಳಿಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಿದ್ದಾರೆ. 117 ಕೋಟಿ ಪರಿಹಾರ ಕೊಟ್ಟಿದ್ದೇವೆ ಎಂದಿದ್ದಾರೆ. ಅದು 50 ಜನರಿಗೆ ಕೊಟ್ಟಂತಾಗಿದೆ. 4500 ರೈತ ಕುಟುಂಬಗಳು ಇಲ್ಲಿವೆ. ಎಷ್ಟು ಪರ್ಸೆಂಟೇಜ್ ರೈತರಿಗೆ ಕೊಟ್ಟಂತಾಯ್ತು..? ಒಕ್ಕಲುತನ ಮಾಡುವ ಪ್ರತಿಯೊಬ್ಬ ರೈತನು ಒಕ್ಕಲಿಗ. ಪ್ರತಿ ರೈತನ ಜೊತೆ ನಾವು ನಿಲ್ಲಬೇಕಾ..? ಬೇಡ್ವಾ..? ಅಗಸ್ಟ್ 18ರಂದು ಫ್ರೀಡಂ ಪಾರ್ಕ್ನಲ್ಲಿ ಹೋರಾಟ ಮಾಡೊಣ. ಪೊಲೀಸರು ನಮಗೆ ಅವಕಾಶ ಕೊಟ್ಟು ವಾಪಸ್ ತೆಗೆದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು.


