ರಾಜ್ಯ ಸರ್ಕಾರದಲ್ಲಿ ಬಿರುಸಿನ ಬೆಳವಣಿಗೆ ನಡೆದ ಬಳಿಕ ಮಂತ್ರಿಮಂಡಲದ ಇತರೆ ಸಚಿವರು, ಆಸಕರು ಗಪ್ಚುಪ್ ಆಗಿದ್ದಾರೆ. ಸಹಕಾರ ಸಚಿವರಾಗಿದ್ದ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡುತ್ತಿದ್ದ ಹಾಗೆ ಯಾರೊಬ್ಬರೂ ಮಧ್ಯಮಗಳ ಎದುರು ಬಂದು ಮಾತನಾಡುವ ಧೈರ್ಯ ತೋರಿಸುತ್ತಿಲ್ಲ. ಈ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡಬೇಡಿ ಎಂದು ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಇನ್ನು ಸಿದ್ದರಾಮಯ್ಯ ಮಾತನ್ನು ಮೀರಿ ಮಾತನಾಡಿದರೆ ಮುಂದೇನು..? ಎನ್ನುವ ಆತಂಕದಲ್ಲಿ ನಮಗೆ ಸುದ್ದಿ ಗೊತ್ತಿಲ್ಲ. ಏನಾಗಿದೆ ಎನ್ನುವುದನ್ನು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ರಾಜೀನಾಮೆ ಕೊಟ್ಟಿದ್ದಾರೆ ಅನ್ನೋದಷ್ಟೇ ಗೊತ್ತು ಎಂದೆಲ್ಲಾ ಕಾಗಕ್ಕ ಗೂಬಕ್ಕನ ಕಥೆ ಹೇಳುತ್ತಿದ್ದಾರೆ. ಆದರೆ ರಾಜಣ್ಣ ರಾಜೀನಾಮೆ ಕೊಟ್ಟಿಲ್ಲ. ಸ್ವತಃ ಹೈಕಮಾಂಡ್ ನಾಯಕರ ಆಆಜ್ಞೆಯಂತೆ ಸಿಎಂ ಸಿದ್ದರಾಮಯ್ಯ, ವಜಾ ಮಾಡುವಂತೆ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಹಾಗಾಗಿ ಸಂಪುಟದಿಂದ ತೆಗೆದುಹಾಕಲಾಗಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಇದೀಗ ರಾಜಣ್ಣನನ್ನು ಸಂಪುಟದಿಂದ ವಜಾ ಮಾಡಿದ್ದಕ್ಕೆ ಪರಿಶಿಷ್ಟ ಪಂಗಡದಿಂದ ಭಾರೀ ವಿರೋಧ ವ್ಯಕ್ತವಾಗ್ತಿದೆ.

ಮೈಸೂರಿನಲ್ಲಿ ಸಚಿವ ರಾಜಣ್ಣ ರಾಜೀನಾಮೆ ವಿಚಾರ ತಿಳಿಯುತ್ತಿದ್ದ ಹಾಗೆ ರಾಜಣ್ಣ ಅಭಿಮಾನಿಗಳು ಪ್ರತಿಭಟನೆ ಮಾಡಿದ್ದಾರೆ. ಮೈಸೂರಿನ ಹಳೇ ಕೋರ್ಟ್ ಬಳಿ ಪ್ರತಿಭಟನೆ ನಡೆಸಿ, ರಾಜೀನಾಮೆ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ರಾಜಣ್ಣನ ರಾಜೀನಾಮೆ ಪಡೆದುಕೊಂಡಿದ್ದು ವಾಲ್ಮೀಕಿ ಸಮಾಜಕ್ಕೆ ಮಾಡಿದ ಅನ್ಯಾಯ ಎಂದು ಪ್ರತಿಭಟನಾನಿರತರು ಆಕ್ರೋಶ ಹೊರ ಹಾಕಿದ್ದಾರೆ. ಈ ಕೂಡಲೇ ರಾಜೀನಾಮೆ ಹಿಂಪಡೆಯಬೇಕು ಎಂದು ಅಭಿಮಾನಿಗಳು ಆಗ್ರಹ ಮಾಡಿದ್ದಾರೆ. ಆದರೆ ರಾಜಣ್ಣ ರಾಜೀನಾಮೆ ಕೊಟ್ಟಿದ್ದಲ್ಲ, ಬದಲಿಗೆ ಸಂಪುಟದಿಂದ ರಾಜಣ್ಣ ಅವರನ್ನು ಕಿಕ್ಔಟ್ ಮಾಡಲಾಗಿದೆ ಎನ್ನುವ ವಿಚಾರ ರಾಜಣ್ಣ ಅಭಿಮಾನಿಗಳ ಗಮನಕ್ಕೆ ಬಂದರೆ ಕಾಂಗ್ರೆಸ್ ವಿರುದ್ಧ ಮತ್ತಷ್ಟು ಕೆಂಡಾಕ್ರೋಶ ಗ್ಯಾರಂಟಿ ಆಗಿದೆ.
ತುಮಕೂರಿನಲ್ಲಿ ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತಿದ್ದ ಹಾಗೆ ಕೆ.ಎನ್ ರಾಜಣ್ಣ ಮನೆ ಬಳಿ ಖಾಲಿ ಖಾಲಿ ಆಗಿದೆ. ಕಾರ್ಯಕರ್ತರು ಮನೆ ಬಳಿ ಜಮಾಯಿಸುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಮನೆ ಮುಂದೆ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು. ಹೊಯ್ಸಳ 112 ಹಾಗೂ ನಾಲ್ವರು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಇನ್ನೂ ಸಚಿವ ಸ್ಥಾನದಿಂದ ಕೆ.ಎನ್.ರಾಜಣ್ಣಗೆ ಕೊಕ್ ಕೊಟ್ಟಿದ್ರಿಂದ ರಾಜಣ್ಣ ತವರು ಕ್ಷೇತ್ರ ತುಮಕೂರು ಜಿಲ್ಲೆ ಮಧುಗಿರಿಯಲ್ಲಿ ಆಕ್ರೋಶದ ಕಟ್ಟೆ ಹೊಡೆದಿದೆ. ಮಧುಗಿರಿ ಪುರಸಭೆ ಸದಸ್ಯರು ಸಾಮೂಹಿಕ ರಾಜೀನಾಮೆಗೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಪುರಸಭಾಧ್ಯಕ್ಷ ಲಾಲಪೇಟೆ ಮಂಜು ನೇತೃತ್ವದಲ್ಲಿ ಸಭೆ ನಡೆಸಿರುವ ಕಾಂಗ್ರೆಸ್ನ 18 ಮಂದಿ ಸದಸ್ಯರು, ಸಾಮೂಹಿಕ ರಾಜೀನಾಮೆಗೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಇವತ್ತು ತುಮಕೂರು ನಗರದಲ್ಲಿ ಬೃಹತ್ ಹೋರಾಟಕ್ಕೆ ಅಭಿಮಾನಿಗಳು ಸಜ್ಜಾಗಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ತನ್ನದೇ ಆದ ಹಿಡಿತ ಸಾಧಿಸಿರುವ ಕೆ.ಎನ್ ರಾಜಣ್ಣ ಪರವಾಗಿ ಅಭಿಮಾನಿಗಳು ನಿಂತಿದ್ದಾರೆ. ರಾಜಣ್ಣ ವಿರುದ್ದ ಕ್ರಮಕೈಗೊಂಡ ಕಾಂಗ್ರೆಸ್ ಹೈಕಮಾಂಡ್ ವಿರುದ್ದ ಅಸಮಧಾನ ವ್ಯಕ್ತವಾಗಿದೆ.
ಸಂಪುಟದಿಂದ ಕಿಕ್ಔಟ್ ಮಾಡಿದ ಬಗ್ಗೆ ಕೆ.ಎನ್ ರಾಜಣ್ಣ ಮಾತನಾಡಿ, ನಾನು ಈ ದಿನ ನಿಮ್ಮ ಮುಂದೆ ಮಾಜಿ ಸಚಿವನಾಗಿ ಮಾತನಾಡೋದಕ್ಕೆ ಬಂದಿದ್ದೀನಿ. ಮಾಜಿ ಸಚಿವ ಎಂದು ಕರೆಸಿಕೊಳ್ಳೋದಕ್ಕೆ ಸಂತೋಷ ಆಗಿದೆ. ನನಗೆ ಸಿಎಂ ಸಿದ್ದರಾಮಯ್ಯ ಅವಕಾಶ ಕೊಟ್ಟಿದ್ರು. ನಾನು ಎಲ್ಲಾ ಸಚಿವರ ಜೊತೆಗೆ ಸೇರಿ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸಿದ್ದೇನೆ. ರಾಜ್ಯಪಾಲರ ಆಫೀಸ್ನಿಂದ ಬಂದಿರುವ ಡ್ರಾಫ್ಟ್ ಬಗ್ಗೆ ನಿಮ್ಗೆ ಮಾಹಿತಿ ಇದೆ. ಡ್ರಾಪ್ಡ್ (DROPED) ಅನ್ನೋದಾಗಿ ಬಂದಿದೆ. ಇದು ಹೈ ಕಮಾಂಡ್ ನಿರ್ಧಾರ, ಇದು ಪಕ್ಷದ ತೀರ್ಮಾನ. ಇದರ ಹಿಂದೆ ದೊಡ್ಡ ಪಿತೂರಿ, ಷಡ್ಯಂತ್ರ ಇದೆ. ಈ ಪಿತೂರಿ ಹಾಗೂ ಷಡ್ಯಂತ್ರದ ಹಿಂದೆ ಯಾರೆಲ್ಲ ಇದ್ದಾರೆ, ಏನೇನು ಆಗಿದೆ ಎಲ್ಲ ನನಗೆ ಗೊತ್ತಿದೆ. ನನ್ನ ಬಗ್ಗೆ ರಾಹುಲ್ ಗಾಂಧಿ ಅವರಿಗೆ ತಪ್ಪು ಗ್ರಹಿಕೆಯಾಗಿದೆ. ಆ ತಪ್ಪು ಗ್ರಹಿಕೆಯನ್ನು ನಿವಾರಿಸುವ ಪ್ರಯತ್ನ ಮಾಡುತ್ತೇನೆ. ದೆಹಲಿಗೆ ನಾನೇ ಹೋಗಿ ತಪ್ಪು ಗ್ರಹಿಕೆ ಸರಿಪಡಿಸುವ ಕಾರ್ಯ ಮಾಡ್ತೇನೆ. ನಾವು ಎಲ್ಲಿ ಏನೇ ಮಾತನಾಡಿದ್ರು ನಾವು ಈ ಪಕ್ಷಕ್ಕೆ ಬದ್ದವಾಗಿದ್ದೇವೆ. ರಾಹುಲ್ ಗಾಂಧಿ ನಮ್ಮ ನಾಯಕರು. ಏನೆಲ್ಲ ವಿವರಗಳು ಇದ್ದಾವೆ ಅವುಗಳನ್ನು ನಾನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದಿದ್ದಾರೆ. ಅಲ್ಲಿಗೆ ರಾಜೀನಾಮೆ ಕೊಟ್ಟಿದ್ದಕ್ಕೆ ಕಿಕ್ಔಟ್ ಮಾಡಿದ್ದು ಅನ್ನೋದನ್ನು ಸ್ವತಃ ಒಪ್ಪಿಕೊಂಡಿದ್ದಾರೆ.


