ಭಾರತ ದೇಶ 79ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ಮುಳುಗಿದೆ. ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಜನರಿಗೆ ಬಂಪರ್ ಗಿಫ್ಟ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ. 12ನೇ ಬಾರಿಗೆ ಪ್ರಧಾನಿ ಮೋದಿ ಧ್ವಜಾರೋಹಣ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ. ಜೊತೆಗೆ ಭಾರತ ದೇಶದ ಜನತೆಗೆ 2 ವಿಶೇಷ ಘೋಷಣೆ ಮಾಡಿದ್ದಾರೆ.. ಕೆಲಸಕ್ಕೆ ಸೇರುವ ಯುವಕರಿಗೆ 15 ಸಾವಿರ ರೂಪಾಯಿ ಗೌರವಧನ ಹಾಗೂ ದೀಪಾವಳಿ ಹಬ್ಬಕ್ಕೆ GST ಇಳಿಕೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ದೀಪಾವಳಿ ಹಬ್ಬಕ್ಕೆ ದೇಶದ ಜನರಿಗೆ ಇಂದೇ ದೀಪಾವಳಿಗೆ ಉಡುಗೊರೆ ನೀಡಲಿದ್ದೇನೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ, 8 ವರ್ಷಗಳಲ್ಲಿ, GSTಯಲ್ಲಿ ದೊಡ್ಡ ಸುಧಾರಣೆ ಆಗಿದೆ. ಈಗ GST ಪರಿಷ್ಕರಣೆ ಮಾಡುವ ಸಮಯ ಹತ್ತಿರ ಬಂದಿದೆ. ಎಲ್ಲಾ ರಾಜ್ಯಗಳೊಂದಿಗೆ ಮಾತನಾಡಿದ್ದೇವೆ. ಮುಂದಿನ ಪೀಳಿಗೆಗಾಗಿ GST ಸುಧಾರಣೆ ಮಾಡ್ತೇವೆ. ಎಲ್ಲಾ ತೆರಿಗೆಗಳು ಗಮನಾರ್ಹವಾಗಿ ಕಡಿಮೆ ಮಾಡಲಾಗುವುದು ಎಂದಿರುವ ಪ್ರಧಾನಿ ನಮೋ, MSMEಗಳಿಗೂ ಲಾಭ ಆಗಲಿದ್ದು ಆರ್ಥಿಕತೆಗೂ ಸಹಾಯ ಆಗಲಿದೆ ಎಂದಿದ್ದಾರೆ ಪ್ರಧಾನಿ ಮೋದಿ.

ಉದ್ಯೋಗ ಸೃಷ್ಟಿಗೆ 1 ಲಕ್ಷ ಕೋಟಿ ರೂಪಾಯಿ ಯೋಜನೆ ಘೋಷಣೆ ಮಾಡಿರುವ ಪ್ರಧಾನಿ ಮೋದಿ, ಇವತ್ತು 1 ಲಕ್ಷ ಕೋಟಿ ರೂಪಾಯಿ ಯೋಜನೆ ಘೋಷಿಸ್ತಿದ್ದೇವೆ. PM ವಿಕಸಿತ್ ಭಾರತ್ ಉದ್ಯೋಗ ಯೋಜನೆ ಪ್ರಾರಂಭಿಸುತ್ತಿದ್ದೇವೆ. ಖಾಸಗಿ ವಲಯದಲ್ಲಿ ಮೊದಲ ಬಾರಿಗೆ ಉದ್ಯೋಗ ಪಡೆಯುವ ಯುವಕರಿಗೆ ಸರ್ಕಾರ 15,000 ರೂಪಾಯಿ ಗೌರವಧನವನ್ನ ಬೆಂಬಲವಾಗಿ ನೀಡುತ್ತದೆ. 3.5 ಕೋಟಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದಿದ್ದಾರೆ ಪ್ರಧಾನಿ ಮೋದಿ.

ರಾಷ್ಟ್ರೀಯ ಭದ್ರತೆ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ, ಮಿಷನ್ ಸುದರ್ಶನ್ ಚಕ್ರದ ಬಗ್ಗೆ ಮಾತನಾಡುತ್ತ ಶತ್ರು ರಾಷ್ಟ್ರಗಳಿಗೆ ಎಚ್ಚರಿಕೆ ರವಾನಿಸಿದ್ದಾರೆ. ಮುಂದಿನ ಹತ್ತು ವರ್ಷಗಳಲ್ಲಿ ಅಂದರೆ 2035ರ ಒಳಗೆ ರಾಷ್ಟ್ರೀಯ ಭದ್ರತಾ ಗುರಾಣಿಯನ್ನು ವಿಸ್ತರಿಸುತ್ತೇವೆ. ಸೇನೆಯನ್ನು ಬಲಪಡಿಸ್ತೀವಿ. ಆಧುನೀಕರಣ ಮಾಡಿ ತೋರಿಸ್ತೀವಿ ಎಂದಿದ್ದಾರೆ. ಭಾರತ ಸುದರ್ಶನ ಚಕ್ರ ಮಿಷನ್ ಶುರು ಮಾಡುತ್ತಿದೆ. ಮಿಷನ್ ಸುದರ್ಶನ್ ಚಕ್ರ ಶಕ್ತಿಯುತ ಆಯುಧ ಆಗಿರುತ್ತದೆ. ಅಷ್ಟೇ ಅಲ್ಲದೆ ಶತ್ರುಗಳ ದಾಳಿ ತಡೆಯೋದಷ್ಟೇ ಅಲ್ಲ, ಶತ್ರು ಸಂಹಾರವನ್ನೂ ಸುದರ್ಶನ್ ಚಕ್ರ ಮಾಡುತ್ತದೆ ಎಂದಿದ್ದಾರೆ.
ಪಾಕಿಸ್ತಾನಕ್ಕೂ ಕೆಂಪುಕೋಟೆಯಿಂದ ಕಠಿಣ ಸಂದೇಶ ರವಾನೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಭಾರತ ಬಿಡುವುದಿಲ್ಲ. ಸಿಂಧೂ ನದಿ ನೀರು ಒಪ್ಪಂದ ಎಷ್ಟು ಅನ್ಯಾಯವಾಗಿತ್ತು ಅನ್ನೋದು ಈಗ ಅರ್ಥ ಆಗ್ತಿದೆ. ಆ ಒಪ್ಪಂದ ಏಕಪಕ್ಷೀಯ ಅನ್ನೋದು ದೇಶದ ಜನರಿಗೆ ಗೊತ್ತಾಗಿದೆ. ದೇಶದ ರೈತರು ಮತ್ತು ರಾಷ್ಟ್ರದ ಹಿತದೃಷ್ಟಿ ಅಷ್ಟೇ ನಮಗೆ ಮುಖ್ಯ. ಹೀಗಾಗಿ ಮತ್ತೆ ಸಿಂಧೂ ಒಪ್ಪಂದ ಸ್ವೀಕರಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ.


